ಮಂಟೇಸ್ವಾಮಿ


ತಳಸಮುದಾಯಗಳ ಸಾಂಸ್ಕೃತಿಕ-ಆಧ್ಯಾತ್ಮಿಕ ನಾಯಕನಾದ ಮಂಟೇಸ್ವಾಮಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವ. ಬಸವಣ್ಣನವರ ಸಮಕಾಲೀನನೆಂದು ನಂಬಲಾಗುವ ಈತ ತನ್ನದೇ ಒಂದು ಆಧ್ಯಾತ್ಮಿಕ ಪರಂಪರೆಯನ್ನು ನಿರ್ಮಿಸಿದ. ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪಗೌಡನಪುರಗಳು ಮಂಟೇಸ್ವಾಮಿ ಪರಂಪರೆಯ ಮುಖ್ಯ ಯಾತ್ರಾಸ್ಥಳಗಳು. ಇಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಈತ ಕರ್ನಾಟಕದ ನೀಲಗಾರ ಸಮುದಾಯದ ಆರಾಧ್ಯ ದೈವ. ಈತ ಸಾಕ್ಷಾತ್ ಶಿವನ ಸ್ವರೂಪವೆಂದೇ ಅವರು ಭಾವಿಸುತ್ತಾರಲ್ಲದೆ ಅವರನ್ನು ಜಗಜ್ಯೋತಿ, ಪರಂಜ್ಯೋತಿ, ಮಂಟೇದ, ಮಂಟೇದಯ್ಯ ಎಂಬ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ.


ಮಂಟೇಸ್ವಾಮಿ ಪುರಾಣ: ಮಂಟೇಸ್ವಾಮಿ ತಳಜಾತಿಗಳ ಮತ್ತೊಬ್ಬ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಎಲ್ಲಿಟ್ಟರೂ ಏಕವಾಗಿ ಉರಿಯುವ ಜ್ಯೋತಿಯನ್ನು ಭೂಮಿಗೆ ತಂದವರು, ಭೂಮಿಯನ್ನು ಸೃಷ್ಟಿಸಿದವರು ಮಂಟೇಸ್ವಾಮಿಯವÀರು ಎಂಬ ನಂಬಿಕೆ ಇದೆ. ಎಲ್ಲವೂ ಹುಟ್ಟಲಿಕ್ಕೆ ಮೊದಲು ಅವರು ಬಂದರು. ಹುಟ್ಟಿ ಹೊನ್ನ ಹುತ್ತದಲ್ಲಿ ಉದ್ಭವವಾಗಿ ೭೭ ಮಾರುದ್ದ ಜಡೆ ಬಿಟ್ಟುಕೊಂಡು, ಲೋಕ ಕಟ್ಟಬೇಕು ಎಂದು ತನ್ನ ಮಾಯಾಜೋಳಿಗೆಯಲ್ಲಿದ್ದ ವಿಭೂತಿ ಗಟ್ಟಿಯನ್ನು ಒಡೆದು ಎರಡು ಹೋಳು ಮಾಡಿ ಒಂದು ಹೋಳಿನಲ್ಲಿ ಭೂಮಿ ಮತ್ತೊಂದು ಹೋಳಿನಲ್ಲಿ ಆಕಾಶ ಮಾಡಿದರಂತೆ. ಅವರ ಪಾದ ಭೂಮಿಗೆ ತಾಗಿದಾಗÀ ಮುತ್ತು ರತ್ನಗಳು ಹುಟ್ಟಿದವಂತೆ. ಮಕ್ಕಳಿಗೆ ಆಹಾರವಾಗಲಿ ಎಂದು ರುದ್ರಾಕ್ಷಿಯನ್ನು ತಾಕಿಸಿ ಗಿಡಮರಗಳನ್ನು ಸೃಷ್ಟಿ ಮಾಡಿದರಂತೆ. ಖಂಡುಗ ಜ್ಞಾನ ಪುಸ್ತಕವನ್ನು, ಕಾಲಜ್ಞಾನದ ಪುಸ್ತಕವನ್ನು ಹಿಡಿದು ಆದಿಶಕ್ತಿಯನ್ನು ಸೃಷ್ಟಿ ಮಾಡಿದರಂತೆ. ಆದಿಶಕ್ತಿ ತನ್ನನ್ನೇ ಮದುವೆಯಾಗಬೇಕೆಂದು ಬಯಸಿದಾಗ ಬೇಸತ್ತ ಮಂಟೆಸ್ವಾಮಿ, ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಮದುವೆಯಾಗು ಎಂದು ವರ ಕೊಡುತ್ತಾರೆ. ಆದಿಶಕ್ತಿಯ ಮಕ್ಕಳಾಗಿ ಬ್ರಹ್ಮ ವಿಷ್ಣು ಮಹೇಶ್ವರರು ಹುಟ್ಟುತ್ತಾರೆ. ಆದರೆ ಅವರು ತಾಯಿಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ವಿಷ್ಣು ಆದಿಶಕ್ತಿಯ ವಿಶೇಷ ಶಕ್ತಿಯಾದ ಉರಿ ಹಸ್ತದಿಂದ ಅವಳೇ ಉರಿದು ಬೂದಿಯಾಗುವಂತೆ ಮಾಡುತ್ತಾನೆ. ಆ ಬೂದಿಯಿಂದ ಮಂಟೆಸ್ವಾಮಿ ಪಾರ್ವತಿ ಲಕ್ಷ್ಮಿ ಸರಸ್ವತಿಯರನ್ನು ಸೃಷ್ಟಿಮಾಡಿ ಶಿವ ವಿಷ್ಣು ಬ್ರಹ್ಮರು ಮದುವೆಯಾಗುವಂತೆ ಹೇಳಿದರಂತೆ. ಸರಸ್ವತಿಗೆ ಮಣ್ಣಿನಿಂದ ಹೆಣ್ಣು-ಗಂಡು ಬೊಂಬೆಗಳನ್ನು ಕ್ರಿಮಿಕೀಟ ಹಾವು ಚೇಳುಗಳನ್ನು ಮಣ್ಣಿನಿಂದ ಮಾಡಿಸಿದರಂತೆ. ಈ ಪ್ರಾಣಿಗಳಲ್ಲಿ ಯಾವುದು ಹೆಚ್ಚು, ಯಾವುದು ಕೀಳು ಯಾವುದು ಮೇಲು ಎಂದು ಸರಸ್ವತಿ ಕೇಳಿದಾಗ, ಮಂಟೆಸ್ವಾಮಿ ಎಲ್ಲಾ ಪ್ರಾಣಿಗಳು ನನಗೆ ಒಂದೇ, ಪ್ರಾಣಿಗಳಲ್ಲಿಯೇ ಅತಿಚಿಕ್ಕ ಪ್ರಾಣಿಯಲ್ಲೂ ಉರಿಯುವ ಜ್ಯೋತಿ ರೂಪವೇ ನಾನು ಎಂದು ಹೇಳಿ ಅದಕ್ಕೆ ಮಿಣುಕು ಹುಳ ಎಂದು ನಾಮಕರಣ ಮಾಡಿದರಂತೆ.


ನೀಲಗಾರರನ್ನು ಮಂಟೇಸ್ವಾಮಿಯ ಶಿಷ್ಯರೆಂದು ಭಾವಿಸಲಾಗುತ್ತದೆ. ಇವರು ಮಂಟೇಸ್ವಾಮಿ ಕಥೆಯನ್ನು, ಕಾವ್ಯವನ್ನು ಅದ್ಭುತವಾಗಿ ಹಾಡುತ್ತಾರೆ. ಜಗತ್ತನ್ನು, ಬ್ರಹ್ಮ, ವಿಷ್ಣು ಮತ್ತು ಅವರ ಹೆಂಡತಿಯರಾದ ಸರಸ್ವತಿ ಮತ್ತು ಲಕ್ಷ್ಮಿಯರನ್ನು, ಜಗದ ಚರಾಚರಗಳನ್ನು ಸೃಷ್ಟಿಮಾಡಿದ್ದು ಮಂಟೇಸ್ವಾಮಿ ಎಂಬುದು ನೀಲಗಾರರ ನಂಬಿಕೆ. ಅವರು ಹಾಡುವ ಹಾಡಿನಲ್ಲಿ ಬರುವ ಪ್ರಮುಖ ಕಥಾ ಪ್ರಸಂಗ ಒಂದು ಹೀಗಿದೆ ಮಂಟೇಸ್ವಾಮಿ ಉತ್ತರದ ಕಲ್ಯಾಣದಿಂದ ದಕ್ಷಿಣಕ್ಕೆ ಬಂದು ಬೊಪ್ಪೇಗೌಡನಪುರದಲ್ಲಿ ನೆಲೆಸಿ ಜನರ ಕಷ್ಟಸುಖಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಒಮ್ಮೆ ಕಲ್ಯಾಣದ ನೆನಪಾಗಿ ಬಸವಣ್ಣ ಮತ್ತು ನೀಲಮ್ಮನವರ ಸತ್ಯವನ್ನು ಕಣ್ಣಾರೆ ನೋಡಬೇಕೆಂದು ಕಲ್ಯಾಣಕ್ಕೆ ಹೊರಡುತ್ತಾರೆ. ಅಲ್ಲಿ ಬಸವಣ್ಣನವರು ನಿತ್ಯ ಅನ್ನದಾಸೋಹವನ್ನು ಶರಣರಿಗಾಗಿ ಏರ್ಪಡಿಸಿರುತ್ತಾರೆ. ಕಷ್ಟ ಕಾಯಿಲೆಯವರನ್ನು ನೋಡಿ ಜಂಗಮರು ಊಟಮಾಡುವುದಿಲ್ಲವಾದ್ದರಿಂದ ಅಂತಹವರನ್ನು ತಡೆಯಲು ಪ್ರವೇಶದ್ವಾರದಲ್ಲಿ ಕಟುಕರ ಸಂಗಯ್ಯನನ್ನು ಕಾವಲಿಗೆ ನೇಮಿಸಿರುತ್ತಾರೆ. ತಮಗಿಂತಲೂ ಹೆಚ್ಚಿನ ಭಕ್ತಿ ಇರುವ ಶರಣ ಮಹಾತ್ಮರು ಬಂದರೆ ತಮಗೆ ತಿಳಿಯಲೆಂದು ದ್ವಾರದಲ್ಲಿ ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಯನ್ನು ಕಟ್ಟುತ್ತಾರೆ. ಅವು ಶಬ್ದ ಮಾಡಿದಾಗ ಬಂದಿರುವವರು ಮಹಾತ್ಮರು ಎಂದು ತಿಳಿಯುತ್ತದೆ.


ಇವನ್ನೆಲ್ಲ ತಿಳಿದುಕೊಂಡ ಮಂಟೇಸ್ವಾಮಿ ಮೂರು ಕಂಡುಗ ತುರಗಜ್ಜಿ, ಏಳು ಕಂಡುಗ ಉಳಿವು ಕೆಟ್ಟವಾಸನೆಯ ದೇಹವನ್ನಿಟ್ಟುಕೊಂಡು, ಸತ್ತೆಮ್ಮೆ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು ಕಲ್ಯಾಣ ಪಟ್ಟಣಕ್ಕೆ ಬರುತ್ತಾರೆ. ಸಂಗಯ್ಯ ತಡೆದು ಬಾಗಿಲಲ್ಲೇ ಕುಳಿತುಕೊಳ್ಳಲು ಹೇಳುತ್ತಾನೆ. ಬಸವಣ್ಣ ಮತ್ತು ನೀಲಮ್ಮನವರು ಮಂಟೇಸ್ವಾಮಿಯನ್ನು ಗುರುತಿಸದೇ ಅವನ ಮುಂದೆಯೇ ಲಿಂಗಾರ್ಚನೆಗೆಂದು ನದಿಯತ್ತ ಸಾಗುತ್ತಾರೆ. ಕಳ್ಳತನದಲ್ಲಿ ಒಳಹೋಗಲು ಪ್ರಯತ್ನಿಸಿದ ಮಂಟೇಸ್ವಾಮಿಗೆ ಸಂಗಯ್ಯ ಎರಡೇಟು ಹಾಕುತ್ತಾನೆ. ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಗಳು ಶಬ್ದಮಾಡುತ್ತವೆ. ಆಗ ಬಸವಣ್ಣನವರು ತಮಗಿಂತ ಮಿಗಿಲಾದ ಶರಣರು ಬಂದಿದ್ದಾರೆಂದು ತಿಳಿದು ಅಲ್ಲಿಗೆ ಬರುತ್ತಾರೆ. ತನ್ನನ್ನು ಕಂಡುಹಿಡಿದುಬಿಡುತ್ತಾರೆಂದು ಮಂಟೇಸ್ವಾಮಿ ಹರಳಯ್ಯನ ಕೇರಿಯಲ್ಲಿರುವ ಕೊಳಚೆ ಗುಂಡಿಗೆ ಬೀಳುತ್ತಾರೆ. ಅಲ್ಲೂ ಅವರನ್ನು ಕಂಡುಹಿಡಿದ ಬಸವಣ್ಣ ಮತ್ತು ನೀಲಮ್ಮನವರು ಗುಂಡಿಯಿಂದ ಮಂಟೇಸ್ವಾಮಿಯನ್ನು ಎಳೆಯುವಾಗ ಅವರ ಕೈಕಾಲುಗಳು ಕಿತ್ತು ಬಂದು ತಲೆ ಬೇರ್ಪಡುತ್ತದೆ. ಬಸವಣ್ಣನವರು ಕೈಕಾಲುಗಳನ್ನು, ನೀಲಮ್ಮನವರು ತಲೆಯನ್ನು ಎತ್ತಿಕೊಂಡು ಪ್ರವೇಶಮಾಡುವಾಗ ಶರಣರು ಅದನ್ನು ನೋಡಿ ‘ಹೆಂಡ ಮಾಂಸಗಳನ್ನು ಬಸವಣ್ಣ ಮತ್ತು ನೀಲಮ್ಮನವರು ತರುತ್ತಿದ್ದಾರೆ, ಅವರು ಕೆಟ್ಟಿದ್ದಾರೆ, ಕಲ್ಯಾಣವನ್ನು ಕೆಡಿಸುತ್ತಾರೆ, ನಾವು ಶುದ್ಧರಾಗಬೇಕು’ ಎಂದು ಮಡಿಯಾಗಲು ನದಿಯತ್ತ ಹೋಗತೊಡಗುತ್ತಾರೆ. ಇತ್ತ ಬಸವಣ್ಣನವರು ಮಂಟೇಸ್ವಾಮಿಯ ರುಂಡ-ಮುಂಡಗಳನ್ನು ಉರಿಗದ್ದುಗೆಯಲ್ಲಿ ಇರಿಸಿ ತಮ್ಮ ತಪ್ಪುಗಳನ್ನು ಮನ್ನಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಅವರು ತಮ್ಮ ನಿಜರೂಪ ತೋರಿಸಿ ಅವರ ಸತ್ಯವನ್ನು ಮೆಚ್ಚಿ ಹರಸುತ್ತಾರೆ.
ಶುದ್ಧವಾಗಲು ಹೋಗಿದ್ದ ಜಂಗಮರ ಲಿಂಗಗಳನ್ನು ಮಾಯಮಾಡಿ ಲಿಂಗವೆಂದರೆ ಅದೊಂದು ತತ್ವವೆಂದು ಮನಗಾಣಿಸಿ ಅವರೆಲ್ಲರನ್ನು ಪರೀಕ್ಷೆಗೆ ಒಡ್ಡಿದಾಗ ಗೆಲ್ಲುವ ಹೊಲೆಯರ ಹೊನ್ನಪ್ಪ ಮತ್ತು ಮಾದಿಗರ ಚನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಈಡಿಗರ ಕ್ಯಾತಪ್ಪ ಅವರನ್ನು ತಮ್ಮ ಶಿಶುಮಕ್ಕಳಾಗಿ ಮಾಡಿಕೊಳ್ಳುತ್ತಾರೆ. ಮುಂದೆಯೂ ಹೀಗೆ ಹಲವೆಡೆ ತಿರುಗುತ್ತ ಶಿಶುಮಕ್ಕಳನ್ನು ಸಂಪಾದಿಸಿಕೊಳ್ಳುತ್ತಾ ಹೋಗುತ್ತಾರೆ. ರಾಚಾಪ್ಪಾಜಿ, ತೋಪಿನ ದೊಡ್ಡಮ್ಮ, ಚೆನ್ನಾಜಮ್ಮ, ಪಲಾರದಯ್ಯ, ಸಿದ್ದಪ್ಪಾಜಿ ಇವರೆಲ್ಲರು ಮಂಟೇಸ್ವಾಮಿಯ ಮುಖ್ಯ ಅನುಯಾಯಿಗಳು. ಹಲವು ಪವಾಡಗಳನ್ನು ಮಂಟೇಸ್ವಾಮಿ ಮಾಡುತ್ತಾರೆ. ಈ ಪವಾಡಗಳೆಲ್ಲವೂ ಜರುಗುವುದು ನಿಜಭಕ್ತಿಯನ್ನು ಪರೀಕ್ಷಿಸಿ ಅಹಂಕಾರವನ್ನು ಮುರಿಯುವುದಕ್ಕಾಗಿಯೇ ಎಂಬುದು ಮುಖ್ಯ. ಹೊಲಸು ತೊಳೆಯುವವರನ್ನು ಕೀಳಾಗಿಸುವ ಜಾತಿ ವ್ಯವಸ್ಥೆಯಲ್ಲಿ ಹೊಲಸಿನ ಮೂಲಕವೇ ನಿಜಭಕ್ತಿಯನ್ನು ಮನಗಾಣಿಸುವುದನ್ನ ಕೀಳೆನಿಸಿಕೊಂಡ ಜಾತಿಯ ಸಂತರೆಲ್ಲರೂ ಮಾಡಿದ್ದಾರೆ. ಭಕ್ತಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಅಲ್ಲಾಡಿಸಿ ಪರೀಕ್ಷೆಗೆ ಒಡ್ಡಲು ಸಹ ಅಸಹ್ಯ ಹುಟ್ಟಿಸುವ ಗಲೀಜನ್ನೇ ಪರೀಕ್ಷೆಯ ಮಾನದಂಡವಾಗಿ ಮಂಟೇಸ್ವಾಮಿ ಬಳಸುತ್ತಾರೆ. ತುರಿಗಜ್ಜಿ, ಕೀವು ತುಂಬಿಕೊಂಡ ದೇಹ, ಹೆಗಲ ಮೇಲೆ ಸತ್ತ ಎಮ್ಮೆ ಕರುವಿನ ಹೆಣ ಹೊತ್ತು ಹೋಗುತ್ತಾರೆ. ಪರೀಕ್ಷೆಯ ಅಂತಿಮ ಹಂತದಲ್ಲಿ ಕೊಳಚೆ ಗುಂಡಿಗೆ ಬೀಳುತ್ತಾರೆ. ಅತಿ ಹೀನಾಯವಾದುದೆಂದು ಪರಿಗಣಿಸಿರುವುದನ್ನೇ ಮಾನದಂಡವಾಗಿ ಮಾಡಿಕೊಂಡು ಶುದ್ಧ-ಅಶುದ್ಧ, ಮೇಲು-ಕೀಳಿನ ಗೋಡೆಗಳನ್ನು ಒಡೆಯಲು ಅಸ್ತ್ರವಾಗಿ ಬಳಸುತ್ತಾರೆ.

ನುಡಿದಂತೆ ನಡೆದ ಸಂತಪರಂಪರೆ

ನಾಯಕನಹಟ್ಟಿ ತಿಪ್ಪೆಸ್ವಾಮಿ

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನೆಲೆಸಿದ್ದ ಶರಣ ತಿಪ್ಪೇರುದ್ರಸ್ವಾಮಿಯವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಹದಿನೈದು ದಿನಗಳವರೆಗೂ ನಡೆಯುತ್ತದೆ. ಇಲ್ಲಿನ ಮೂಲ ದೇವರು ಮಾರಮ್ಮ ಎಂಬ ನಂಬಿಕೆಯೂ ಇದೆ. ಆ ಮೂಲದೇವರು ಈಗಿರುವುದು ಚಿತ್ರದುರ್ಗದ ಪಾಪೇನಹಳ್ಳಿ (ವಡ್ಡನಹಳ್ಳಿ)ಯಲ್ಲಿದೆ. ಹಿಂದೆ ದೇವಸ್ಥಾನದ ಕಾಂಪೌಂಡ್‌ನಲ್ಲಿಯೇ ಜಾತ್ರೆಯ ದಿನ ದನವನ್ನು ಬಲಿಕೊಟ್ಟು ಅಡುಗೆ ಮಾಡಿ ನೈವೇದ್ಯ ಮಾಡುತ್ತಿದ್ದುದು. ಈಗಲೂ ದನವನ್ನು ಹೊರಗೆ ಕೊಯ್ದು ಅಡುಗೆಯನ್ನು ಮಾತ್ರ ಒಳಗೆ ನೈವೇದ್ಯ ಮಾಡಲಾಗುವುದು.ಇದು ಬಹುಶಃ ಮಾರಮ್ಮನಿಗೆ ಮಾಡುತ್ತಿದ್ದ ಆಚರಣೆಯನ್ನು ಸಂಕೇತಿಸುತ್ತಿರಬಹುದು.ದನ ಕೊಯ್ಯಲು ಸಹಾಯ ಮಾಡುವ ಮುಸ್ಲಿಮರು ಸಹ ಜಾತ್ರೆಯಲ್ಲೂ ಭಾಗವಹಿಸುತ್ತಾರೆ.

ತಿಪ್ಪೇಸ್ವಾಮಿಯವರು ಶರಣರು ಮತ್ತು ಸಮಾಜ ಸುಧಾರಕರೂ ಆಗಿದ್ದರು. ಅಸ್ಪೃಶ್ಯರ ಏಳಿಗೆಗಾಗಿ ಕೆಲಸ ಮಾಡಿದವರು. ದಲಿತರ ಮನೆಗೆ ಹೋಗಿ ಊಟ ಮಾಡುತ್ತಿದ್ದರು. ಊರಿನಲ್ಲಿ ಕೆರೆ-ಕಟ್ಟೆ ಕಟ್ಟಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟವರು. ನಾಯಕನಹಟ್ಟಿ ತಿಪ್ಪೇಸ್ವಾಮಿಯ ಜಾತ್ರೆಯಂದು ದಲಿತರೇ ಮೊದಲಿಗೆ ತೇರನ್ನು ಎಳೆಯುತ್ತಾರೆ. ಒಮ್ಮೆ ಯಾವುದೋ ಕಾರಣಕ್ಕೆ ದಲಿತರನ್ನು ಕರೆಯದಿದ್ದಾಗ ತೇರು ಮುಂದೆ ಹೋಗದೆ ಹಾಗೆ ನಿಂತುಬಿಟ್ಟಿತಂತೆ. ಮತ್ತೆ ಹೋಗಿ ದಲಿತರನ್ನು ಕರೆತಂದು ಎಳೆಸಿದಾಗಲೇ ತೇರು ಮುಂದೆ ಹೋಯಿತು ಎಂಬ ಪ್ರತೀತಿ ಇದೆ. ತಿಪ್ಪೆಸ್ವಾಮಿಗೆ ಹರಸಿಕೊಂಡು ಅಲ್ಲಿಗೆ ಹೋಗಿ ತಿಪ್ಪೆಮೇಲೆ ಕೂರಿಸಿ ಮೂಗುಚುಚ್ಚಿಸಿ ಹರಕೆ ತೀರಿಸುವ ಸಂಪ್ರದಾಯವಿದೆ.
ಬಲಿಯಂತಹ ವೈದಿಕರ ಆಚರಣೆಗಳನ್ನು ಮತ್ತು ಜಾತಿವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ ಶರಣ ಚಳುವಳಿಯ ಭಾಗವಾಗಿ ಶರಣ ತಿಪ್ಪೇರುದ್ರಸ್ವಾಮಿಯವರ ಸ್ಥಾಪನೆಯನ್ನು ನೋಡಬಹುದು. ಹಾಗೆಯೇ ತಿಪ್ಪೆಯನ್ನು ಅಸಹ್ಯದಿಂದ ನೋಡದೆ ಫಲವತ್ತತೆಯ ಸಂಕೇತವಾಗಿ ನೋಡಿರುವುದು ಶುದ್ಧ-ಅಶುದ್ಧ ಪರಿಕಲ್ಪನೆಗೆ ತದ್ವಿರುದ್ಧವಾಗಿದೆ. ಇಂತಹ ಸಂತರು ತಳಜಾತಿಗಳ ಸ್ವಾಭಿಮಾನದ ದೇವರಾಗಿ ಸ್ಥಾನಪಡೆದಿದ್ದಾರೆ.

ಪೊರಕೆ ಹಿಡಿದು ಅಧ್ಯಾತ್ಮ ತೋರಿದ ಸಂತ ಗಾಡ್ಗೆ ಬಾಬಾ

ಸಂತ ಗಾಡ್ಗೆ ಬಾಬಾ (೨೩ ಫೆಬ್ರವರಿ ೧೮೭೬- ೨೦ ಡಿಸೆಂಬರ್ ೧೯೫೬) ಅವರು ಮಹಾರಾಷ್ಟ್ರದ ಸಂತ ಮತ್ತು ಸಮಾಜ ಸುಧಾರಕರಾಗಿದ್ದರು. ಹಳ್ಳಿ ಹಳ್ಳಿ ತಿರುಗಿಕೊಂಡು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತ, ನೈರ್ಮಲ್ಯದ ಕುರಿತು ಜನರಿಗೆ ಅರಿವು ಮೂಡಿಸುತ್ತ, ಸ್ವತಃ ತಾನೇ ಚರಂಡಿ ಮೋರಿಗಳನ್ನು ಶುಚಿಗೊಳಿಸಿಕೊಂಡು ತಿರುಬೋಕಿಯಂತೆ ಬದುಕಿದ್ದ ಗಾಡ್ಗೆ ಬಾಬಾ ಈಗಲೂ ಹಲವಾರು ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದ್ದಾರೆ.

ಅವರ ಮೂಲ ಹೆಸರು ದೇಬುಜಿ ಜಿ಼ಂಗ್‌ರಾಜಿ ಜನರ‍್ಕರ್. ದೋಬಿ ಕುಟುಂಬಕ್ಕೆ ಸೇರಿದ ಇವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶೆಂಡ್‌ಗಾವ್‌ನವರು. ಊಟದ ಮಡಿಕೆಯನ್ನು ತಲೆಗೆ ಟೊಪ್ಪಿಯಂತೆ ಹಾಕಿಕೊಂಡು, ಪೊರಕೆ ಹಿಡಿದುಕೊಂಡು ಹಳ್ಳಿಹಳ್ಳಿ ತಿರುಗುತ್ತ ಅಲ್ಲಿನ ಚರಂಡಿ ಮತ್ತು ಮೋರಿಗಳನ್ನು ಸ್ವಚ್ಛಮಾಡುತ್ತಿದ್ದರು. ಯಾರಾದರು ನಮಸ್ಕಾರ ಹೇಳಲು ಬಂದರೆ ಪ್ರತಿನಮಸ್ಕಾರ ಹೇಳಲು ಕೆಲಸ ಮುಗಿಯುವವರೆಗೂ ಕಾಯಬೇಕೆಂದು ಹೇಳುತ್ತಿದ್ದರು. ಜನ ಅವರಿಗೆ ಊಟ ಮತ್ತು ಹಣವನ್ನು ನೀಡುತ್ತಿದ್ದರು. ಸಂಗ್ರಹಿಸಿದ ಹಣವನ್ನು ಶಾಲೆಗಳು, ಧರ್ಮಛತ್ರಗಳು, ಆಸ್ಪತ್ರೆಗಳು ಮತ್ತು ಪ್ರಾಣಿಗಳ ಆಶ್ರಯ ತಾಣಗಳನ್ನು ಕಟ್ಟಿಸಲು ಬಳಸುತ್ತಿದ್ದರು. ಆಧ್ಯಾತ್ಮಿಕ ಗುರುಗಳಾಗಿದ್ದ ಮೆಹರ್ ಬಾಬಾರಿಗೆ ಗಾಡ್ಗೆ ಬಾಬಾ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಭಜನೆಗಳನ್ನು, ಕಬೀರರ ದೋಹೆಗಳನ್ನು ಹಾಡುತ್ತ ಸೇವೆ, ಕರುಣೆಯ ಮೌಲ್ಯವನ್ನು ಸಾರುತ್ತಿದ್ದರು. ಕಠಿಣ ದುಡಿಮೆ, ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯನ್ನು ಬೋಧಿಸುತ್ತ ಅಂತೆಯೇ ಬದುಕುತ್ತ ಇದ್ದ ಗಾಡ್ಗೆ ಬಾಬಾ ೧೯೫೬ರಲ್ಲಿ ತೀರಿಕೊಂಡರು. ಅವರ ಗೌರವಾರ್ಥ ಭಾರತ ಸರ್ಕಾರವು ನೈರ್ಮಲ್ಯ ಮತ್ತು ನೀರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅಮರಾವತಿ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇರಿಸಲಾಗಿದೆ. ಗಾಡ್ಗೆ ಬಾಬಾ ಅವರನ್ನು ಅಂಬೇಡ್ಕರ್ ಅವರು ಭೇಟಿಯಾಗಿದ್ದರು.

ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧಿಯವರು ತಾವು ಪ್ರಕಟಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ಭಂಗಿಗಳ ಕುರಿತು ಹೀಗೆ ಬರೆದಿದ್ದಾರೆ. “ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳು ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟ್ಟೆಂಬರ್ ೧೯೩೩) ಸ್ವಚ್ಛತೆಯ ಕೆಲಸ ಮಾಡುವ ಭಂಗಿಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಮತ್ತು ದುಡಿಮೆಯ ಘನತೆಯ ಹಿನ್ನೆಲೆಯಲ್ಲಿ ನೋಡಿದ ಮಹಾತ್ಮ ಗಾಂಧೀಜಿಯವರು ತಮ್ಮ ಆಶ್ರಮದಲ್ಲಿ ಸ್ವತಃ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು ಹಾಗೂ ಎಲ್ಲರಿಂದಲೂ ಶೌಚಾಲಯವನ್ನು ತೊಳೆಸುವ ಕೆಲಸವನ್ನು ಮಾಡಿಸುತ್ತಿದ್ದರು.

“ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳ ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟಂಬರ್ ೧೯೩೩)

ಎಲ್ಲರ ಕಣ್ಣೀರು ಉಪ್ಪೆಂದ ಬುದ್ಧ ಗುರು

ಅರಿವೇ ಗುರು, ನಿರಂತರ ಪರಿವರ್ತನೆಯೇ ಸತ್ಯವೆಂದ ಬುದ್ಧ ತನ್ನ ತತ್ವ ಮತ್ತು ಆಚರಣೆಯ ಮೂಲಕ ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದ ಮೊದಲಿಗ. ಜನರಾಡುವÀ ಮಾತಿನಲ್ಲಿ, ನಿತ್ಯ ಬದುಕಿನ ಉದಾಹರಣೆಗಳ ಮೂಲಕ ಸತ್ಯವನ್ನು ಅರಿವು ಮಾಡಿಸಿದ ಮಹಾನ್ ಗುರು ಆತ. ಎಲ್ಲರೊಳಗೂ ಅರಿವಿನ ಬೆಳಕಿದೆ ಎಂಬ ಸತ್ಯವನ್ನು ಅರಿತಿದ್ದ ಬುದ್ಧ, ಜಾತಿ-ಅಂತಸ್ತುಗಳ ಭೇದವೆಣಿಸದೆ ರಾಜ-ರಾಣಿಯರು, ಪಂಡಿತರಿಂದ ಹಿಡಿದು, ವೇಶ್ಯೆ, ಕ್ಷೌರಿಕ, ಮಗುವನ್ನು ಕಳೆದುಕೊಂಡು ಸಂಕಟದಲ್ಲಿ ಬೆಂದ ತಾಯಿ, ಕುಟುಂಬದವರನ್ನೆಲ್ಲ ಕಳೆದುಕೊಂಡು ಹುಚ್ಚಿಡಿದು ಬತ್ತಲಾಗಿ ತಿರುಗುತ್ತಿದ್ದ ತಾಯಿ, ಕೊಲೆಗಾರ, ಮಲ ಬಾಚುವವ…. ಹೀಗೆ ಸಕಲರಿಗೂ ಅರಿವಿನ ಮಾರ್ಗ ತೋರಿಸಿಕೊಟ್ಟ.
ಸುನೀತನೆಂಬ ಮಲ ಬಾಚುವವನು ಮೊದಲ ಬಾರಿಗೆ ಬುದ್ಧ ಎದುರಿಗೆ ಬರುತ್ತಿರುವುದನ್ನು ಕಂಡು ಮುದುರಿಕೊಂಡು ಹಿಂದೆ ಸರಿಯುತ್ತಾನೆ. ಬುದ್ಧ ಆತನ ಬಳಿಗೇ ಹೋದಾಗ ಆತ ಹೆದರಿ ನದಿಯೊಳಗೆ ಅವಿತುಕೊಂಡು ‘ನನ್ನ ಬಳಿ ಬರಬೇಡಿ ನನ್ನನ್ನು ಮುಟ್ಟಿದರೆ ನೀವು ಗಲೀಜಾಗುವಿರಿ, ನಾನು ಕೀಳು ಜಾತಿಯವನು’ ಎಂದು ಹೇಳುತ್ತಾನೆ. ಆಗ ಬುದ್ಧ ‘ನಮ್ಮನ್ನು ಗಲೀಜು ಮಾಡುವುದು ದುರಾಸೆ, ದ್ವೇಷ, ಮೋಹವಷ್ಟೇ. ನಿನ್ನಂತಹ ವ್ಯಕ್ತಿ ಸಂತೋಷವನ್ನಲ್ಲದೆ ಬೇರೇನನ್ನು ತರಲು ಸಾಧ್ಯವಿಲ್ಲ. ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರ ಕಣ್ಣೀರು ಉಪ್ಪೇ’ ಎಂದು ಹೇಳಿ ಅವನ ಬಳಿ ಹೋಗಿ ಪ್ರೀತಿಯಿಂದ ಅವನ ಮೈದಡವಿ ಶಿಷ್ಯರ ಸಹಾಯದಿಂದ ಆತನ ತಲೆ ಬೋಳಿಸಿ, ಸ್ನಾನಮಾಡಿಸಿ, ಕಾಷಾಯ ವಸ್ತ್ರ ನೀಡಿ ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಕರೆದುಕೊಂಡು ಹೋಗುತ್ತಾನೆ. ಮುಂದೆ ಆತ ಬಹುದೊಡ್ಡ ಗುರುವಾಗುತ್ತಾನೆ. ಮಲಬಾಚುವವನನ್ನು ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಸೇರಿಸಿಕೊಂಡದ್ದನ್ನು ವಿರೋಧಿಸಿದ ಹಲವರು ರಾಜನಿಗೆ ದೂರು ನೀಡುತ್ತಾರೆ. ರಾಜ ಪಸೇನದಿ ವಿಚಾರಿಸುವ ಸಲುವಾಗಿ ಬುದ್ಧನ ಆಶ್ರಮಕ್ಕೆ ಹೋಗುತ್ತಾನೆ. ಆಶ್ರಮದಲ್ಲಿ ಭಿಕ್ಕುವೊಬ್ಬ ಉಪದೇಶ ಮಾಡುವುದನ್ನು ಕೇಳಿ ಆಕರ್ಷಿತನಾಗಿ ಅಲ್ಲೇ ನಿಲ್ಲುತ್ತಾನೆ. ಆತನ ಮುಖ ಶಾಂತವಾಗಿದ್ದು, ಕಣ್ಣುಗಳು ದೀಪದಂತೆ ಬೆಳಗುತ್ತಿರುತ್ತವೆ. ನಂತರ ರಾಜ ಬುದ್ಧನಲ್ಲಿಗೆ ಹೋಗಿ ಯಾರು ಆ ಭಿಕ್ಕು ಎಂದು ಕೇಳುತ್ತಾನೆ. ಬುದ್ಧ ‘ಅವನೇ ಸುನೀತ, ಅವನ ಸಾಧನೆ ದೊಡ್ಡದು. ಬಂದ ಕೆಲವೇ ತಿಂಗಳಲ್ಲಿ ಗುರುವಾದ. ಎಲ್ಲರೊಳಗೂ ಅರಿವಿನ ಬೆಳಕು ಇರುತ್ತದೆ. ಅರಿವಿಗೆ ಜಾತಿ ಭೇದಗಳಿಲ್ಲ ಎಲ್ಲರ ರಕ್ತವೂ ಕೆಂಪೇ’ ಎಂದು ಹೇಳುತ್ತಾನೆ. ರಾಜ ಏನೂ ಮಾತನಾಡದೆ ಹಿಂತಿರುಗುತ್ತಾನೆ. (Thich Nhat Hanh: 279:2014)

ರವಿದಾಸ

ರವಿದಾಸರು (೧೫ ಅಥವಾ ೧೬ನೆಯ ಶತಮಾನ) ಉತ್ತರ ಭಾರತದ ಭಕ್ತಿಚಳುವಳಿಯ ಪ್ರಮುಖ ಸಂತ ಕವಿ. ವಾರಣಾಸಿಯ ಅಸ್ಪೃಶ್ಯ ಚಮ್ಮಾರ ಜಾತಿಗೆ ಸೇರಿದವರು. ಇವರ ತಾಯಿ ಕಲ್ಸಾದೇವಿ, ತಂದೆ ಸಂಟೋಕ್ ದಾಸ್. ತನ್ನ ಆಧ್ಯಾತ್ಮಿಕ ಹುಡುಕಾಟವನ್ನು ನಡೆಸುತ್ತ ಹಲವಾರು ವರ್ಷಗಳ ಕಾಲ ಗಂಗಾ ತೀರದಲ್ಲಿ, ಸಾಧು-ಸಂತರು ಹಾಗೂ ಸನ್ಯಾಸಿಗಳ ಸಂಘದಲ್ಲಿ ಕಳೆದರು. ತಮ್ಮದೆ ಒಂದು ಪಂಥವನ್ನು ಹುಟ್ಟುಹಾಕಿದರು. ಅದನ್ನು ರವಿದಾಸೀಯ ಪಂಥವೆಂದು ಕರೆಯಲಾಗುತ್ತದೆ. ತನ್ನ ಹಾಡು/ಕಾವ್ಯ/ತತ್ವಗಳ ಮೂಲಕ ರಾಜಾಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಇನ್ನು ಹಲವೆಡೆ ವ್ಯಾಪಕವಾಗಿ ಸಂಚರಿಸಿದರು. ಹಲವು ಜಾತಿ ಸಮುದಾಯಗಳಿಗೆ ಸೇರಿದ ಜನರು ಇವರ ಮಾರ್ಗದರ್ಶನ ಪಡೆದು ಅನುಯಾಯಿಗಳಾದರು. ಬ್ರಾಹ್ಮಣರೂ ಇವರ ತತ್ವದರ್ಶನ ಮತ್ತು ವ್ಯಕ್ತಿತ್ವಕ್ಕೆ ತಲೆಬಾಗಿದರು, ತಲೆ ದೂಗಿದರು. ಇವರ ೪೧ ಪದ್ಯಗಳನ್ನು ಸಿಖ್ ಧರ್ಮದ ಧರ್ಮಗ್ರಂಥ ‘ಗ್ರಂಥಸಾಹಿಬ್’ನಲ್ಲಿ ಸೇರಿಸಲಾಗಿದೆ. ರವಿದಾಸರು ಸಿಖ್ ಧರ್ಮ ಸ್ಥಾಪಕ ಗುರುನಾನಕ್ ಅವರನ್ನು ಭೇಟಿಯಾಗಿದ್ದರೆಂದು ಹೇಳಲಾಗುತ್ತದೆ.

ರವಿದಾಸರ ಊರಿನಲ್ಲಿ ಅವರ ದೇವಾಲಯವಿದೆ. ಅಲ್ಲಿ ಪ್ರತಿದಿನವೂ ಪೂಜೆ ನಡೆಯುತ್ತದೆ. ಅವರ ಹಾಡುಗಳನ್ನು ಹಾಡಲಾಗುತ್ತದೆ. ಪ್ರತಿ ವರ್ಷ ಅವರ ಜನ್ಮದಿನಾಚರಣೆಯನ್ನು ಉತ್ಸವದಂತೆ ಆಚರಿಸಲಾಗುತ್ತದೆ.

ಜಾತಿಯಿಂದ ಅಸ್ಪೃಶ್ಯನಾದ ರವಿದಾಸರು ತಮ್ಮ ಜಾತೀಯ ಕೀಳು ಸ್ಥಾನವನ್ನೇ ದೈವಿಕವಾಗಿಸಿದವರು. ತನ್ನ ಮತ್ತು ದೇವರೊಂದಿಗಿನ ಸಂಬಂಧವನ್ನು ಅವರು ಹೋಲಿಸುವುದು ರೇಷ್ಮೆಹುಳು ಮತ್ತು ರೇಷ್ಮೆಗೂಡಿನ ಎಳೆಗೆ. ತಾನೊಂದು ಹುಳು ತನ್ನ ಸುತ್ತಿರುವ ರೇಷಿಮೆ ಎಳೆ ದೇವರು ಎನ್ನುವಾಗ ಹುಳುವಿನ ಎಂಜಲಿನಲ್ಲಿ ದೇವರೂಪುಗೊಳ್ಳುತ್ತಾನೆ. ಮತ್ತೊಂದೆಡೆ ತಾನು ನಾರುವ ಅರಳು ಬೀಜವಾದರೆ ದೇವ ಸುಗಂಧ ಸೂಸುವ ಗಂಧವೆನ್ನುತ್ತಾರೆ.

ಇವರ ಹಾಡು ಮತ್ತು ಕಾವ್ಯದಲ್ಲಿ ತಾರತಮ್ಯಗಳಿಗೆ ಪ್ರತಿರೋಧವನ್ನು ಜಾತಿ, ಧರ್ಮ, ಸಮುದಾಯಗಳ ನಡುವಿನ ಬೇಧವನ್ನು ಮೀರಿದ ಸಾಮಾಜಿಕ ಒಗ್ಗಟ್ಟನ್ನು ಸಾಧಿಸುವ ಹುಡುಕಾಟವನ್ನು, ತನ್ನೊಳಗೆ ತನ್ನೊಂದಿಗೆ ನಡೆಸುವ ಹೋರಾಟವನ್ನು ಕಾಣಬಹುದೆಂದು ಪೀಟರ್ ಪ್ರೈಡ್‌ಲ್ಯಾಂಡ್ ಎಂಬ ವಿದ್ವಾಂಸರು ಹೇಳುತ್ತಾರೆ.
(https://www.britannica.com › https://en.wikipedia.org › ).
ದಮನಿತ ಜಾತಿಗೆ ಸೇರಿದವನಾದರೂ ಎಲ್ಲರೂ ಸಮಾನರಾದ ದುಃಖವಿಲ್ಲದೂರಿನ ಕನಸು ಕಂಡ ಸಂತ ಕವಿ ಈತ. ಆತನ ಕನಸು ಇಂದಿನ ಕನಸೂ ಆಗಿದೆ.


೧.ನಗರದ ಓ ನನ್ನ ಜನರೇ, ಎಲ್ಲರಿಗೂ ತಿಳಿದಿದೆ
ನಾನು ಕಸುಬಿನಿಂದ ಚಮ್ಮಾರ, ಜಾತಿಯಿಂದ ಸಮಗಾರ
ಕೀಳು ಜಾತಿಯವ ಆದರೇನು ಎದೆಯೊಳಗೆ ಭಗವಂತನ ಧೇನಿಸುವೆ

೨. ಐಸಿರಿಯ ಲೋಕದಲಿ ವ್ಯಥೆಯ ಹೆಸರಿಲ್ಲ
ಆನಂದಪುರವದು ನೋವಿನ ವಿಳಾಸವಿಲ್ಲ
ಕರವಿಲ್ಲ, ಚಿಂತೆಯಿಲ್ಲ, ಆಸ್ತಿ ಒಡೆತನವಿಲ್ಲ
ತಪ್ಪುಗಳಿಲ್ಲ, ಚಿಂತೆಗಳಿಲ್ಲ, ಭೀತಿ ಕಿರುಕುಳವಿಲ್ಲ
ಓ ನನ್ನ ಬಂಧು ಆ ಲೋಕ ನನ್ನದು
ಆ ದೂರದ ನನ್ನ ಮನೆಯೊಳಗೆ ತಪ್ಪಿನ ಸುಳಿವಿಲ್ಲ
ಸಮೃದ್ಧ, ಸುಭದ್ರ ಸಾಮ್ರಾಜ್ಯದಲಿ
ಎಲ್ಲರೊಂದೆ ಮೂರನೆಯವರಿಲ್ಲ, ಎರಡನೆಯವರಿಲ್ಲ ಎಲ್ಲರೊಂದೇ
ಅಲ್ಲಿನ ಅನ್ನಪಾನಾದಿ ಬಲು ಪ್ರಸಿದ್ಧ, ಅಲ್ಲಿ ನೆಲೆಸಿರುವರೆಲ್ಲರಿಹರು
ಸಂತೃಪ್ತಿ, ಸುಭಿಕ್ಷೆಯಲಿ
ಏನೋ ಮಾಡಿಕೊಂಡು, ಇಷ್ಟಬಂದಲ್ಲಿಗೆ ಹೋಗುತ್ತಾ
ಸವಾಲಿಲ್ಲದ ಅಲೌಕಿಕ ಅರಮನೆಯಲ್ಲಿ ಹೊರಳಾಡುತ್ತಾರೆ
ಹೇಳುತ್ತಾನೆ ರವಿದಾಸ, ಬಿಡುಗಡೆ ಹೊಂದಿದ ಚಮ್ಮಾರ
ನನ್ನ ಆಜು-ಬಾಜಿನಲಿ ತಿರುಗಾಡುವವರೆಲ್ಲ ನನ್ನ ಗೆಳೆಯರು (Gail Omvedt: 104 & 106-107:2008)

ಮುತ್ಯಾಲಮ್ಮ : ಆಚರಣೆ-ಪುರಾಣ

ಮುತ್ಯಾಲಮ್ಮನಿಗೆ ಸಫಾಯಿ ಕರ್ಮಚಾರಿಗಳು ವಿಶೇಷವಾಗಿ ಆಂಧ್ರದಿಂದ ವಲಸೆ ಬಂದಿರುವ ಮಾದಿಗ ಸಮುದಾಯದವರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮುತ್ಯಾಲು, ಮುತ್ಯಾಲಮ್ಮ ಎಂದು ಗಂಡು ಮತ್ತು ಹೆಣ್ಣುಮಕ್ಕಳಿಗೆ ಹೆಸರನ್ನು ಇಡುವುದು ಅವರಲ್ಲಿ ಜಾರಿಯಲ್ಲಿದೆ. ಹರಕೆ ಹೊತ್ತವರು, ಪೂಜೆ ಮಾಡಿಸಬೇಕೆಂದುಕೊಂಡವರು ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನವು ತೆಲಂಗಾಣ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಕುರಿ, ಮೇಕೆ ಅಥವಾ ಕೋಳಿಯನ್ನು ದೇವಿಗೆ ಬಲಿ ನೀಡಿ ದೇವಸ್ಥಾನದ ಸುತ್ತ ಇರುವ ಬಯಲಿನಲ್ಲಿ ಒಲೆ ಹೂಡಿ ಬಲಿ ನೀಡಿದ ಪ್ರಾಣಿಯ ಮಾಂಸದಲ್ಲಿ ಅಡುಗೆ ಮಾಡಿ ಉಂಡು ಬರುತ್ತಾರೆ. ತಾವಷ್ಟೇ ಉಣ್ಣದೆ ಕೇಳಿದವರಿಗೆಲ್ಲ ಉಣ್ಣಲು ನೀಡುತ್ತಾರೆ. ಎಲ್ಲ ಖಾಲಿ ಮಾಡಿಯೇ ಬರಬೇಕೆಂಬ ನಂಬಿಕೆ ಇದೆ. ಬೆಲ್ಲ, ಹೆಸರುಬೇಳೆ ಮತ್ತು ಅಕ್ಕಿ ಸೇರಿಸಿ ಮಾಡಿದ ಖಾದ್ಯ ಬಾನವನ್ನು ತಲೆಯ ಮೇಲೆ ಹೊತ್ತು ತಂದು ದೇವಿಗೆ ನೈವೇದ್ಯ ಮಾಡಿಸಿ ಪ್ರಸಾದವಾಗಿ ನೀಡುವುದು ವಾಡಿಕೆಯಲ್ಲಿದೆ. ಯಾವ ಪಾತ್ರೆಯಲ್ಲಿ ಬೇಯಿಸಿರುತ್ತಾರೋ ಅದೇ ಪಾತ್ರೆಗೆ ಅರಿಶಿಣದ ದಾರವನ್ನು ಕಟ್ಟಿ, ಬೇವಿನ ಸೊಪ್ಪನ್ನು ಸಿಕ್ಕಿಸಿಕೊಂಡು ಬರುತ್ತಾರೆ. ಪಾತ್ರೆಗೆ ಅರಿಶಿಣ ಬಳಿದಿರುತ್ತಾರೆ. ಮಕ್ಕಳಿಗಾಗಿ ಹರಸಿಕೊಂಡವರು ಉಪವಾಸವಿದ್ದು ಅರಿಶಿಣ ಲೇಪಿಸಿಕೊಂಡು ಎರಡೂ ಕೈಗಳನ್ನು ಮೇಲೆತ್ತಿ ಹಾವಿನ ಹೆಡೆಯಂತೆ ಆಡಿಸುತ್ತ ನಿಧಾನವಾಗಿ ಕುಣಿಯುತ್ತ ದೇವಿಯ ಗುಡಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಪ್ರಾಣಿಗಳನ್ನು ಬಲಿ ನೀಡುವುದು ಗುಡಿಯ ಹೊರಗಿನ ಮುಂಭಾಗದಲ್ಲಿ. ಮಾಂಸದ ಅಡುಗೆಯನ್ನು ಗುಡಿಯ ಒಳಗೆ ನೈವೇದ್ಯಕ್ಕೆ ತರುವುದಿಲ್ಲ. ನೈವೇದ್ಯಕ್ಕೆಂದು ಬಾನವನ್ನು ಮಾತ್ರ ಗುಡಿಯ ಒಳಗೆ ತರುತ್ತಾರೆ. ಹುತ್ತಕ್ಕೆ ದೇವಿಯ ಕಣ್ಣು ಹಾಗೂ ಬಾಯಿಗಳನ್ನು ಅಂಟಿಸಿ ಅದನ್ನು ದೇವಿ ಎಂದು ಪೂಜಿಸುತ್ತಾರೆ. ಪಕ್ಕದಲ್ಲಿಯೇ ದೊಡ್ಡದೊಂದು ಗುಂಡುಕಲ್ಲಿದೆ.


ಪುರಾಣ

ದೇವಿಗೆ ಪೂಜೆ ಮಾಡುವ ಮುತ್ಯಾಲಪ್ಪನವರು ಹೇಳಿದ ದೇವಿಯ ಕತೆ ಹೀಗಿದೆ,
ಭೂಮಿಯ ಹುಟ್ಟಿಗೂ ಮೊದಲು ಓಂಕಾರ ಬಿಟ್ಟರೆ ಭೂಮಿ, ಗಾಳಿ, ನೀರು ಏನೂ ಇರಲಿಲ್ಲ. ಓಂಕಾರವು ಪಕ್ಷಿಯ ಸ್ವರೂಪ ಪಡೆದುಕೊಂಡು ಮುಕ್ಕರಿಸಿ ಮೂರು ಮೊಟ್ಟೆಯನ್ನಿಟ್ಟಿತು. ಮೊದಲನೇ ಮೊಟ್ಟೆಯಲ್ಲಿ ಬ್ರಹ್ಮ, ವಿಷ್ಣು, ಈಶ್ವರರು ಹುಟ್ಟಿದರು. ಎರಡನೆಯ ಮೊಟ್ಟೆಯನ್ನು ಒಡೆದಾಗ ಮೇಲಿನ ಚಿಪ್ಪು ಆಕಾಶವಾಗಿ ಕೆಳಗಿನ ಚಿಪ್ಪು ಭೂಮಿಯಾಯಿತು. ಮೂರನೆಯ ಮೊಟ್ಟೆಯಲ್ಲಿ ಮೂರು ಬ್ರಾಹ್ಮಣರು ಜನಿಸಿದರು. ಅವರೆಂದರೆ ನಾಗಲೋಕ/ಪಾತಾಳಲೋಕವನ್ನು ನೋಡಿಕೊಳ್ಳುವ ನಾಗಋಷಿ ಬ್ರಾಹ್ಮಣ, ದೇವಲೋಕವನ್ನುನೋಡಿಕೊಳ್ಳುವ ದೇವಋಷಿ ಬ್ರಾಹ್ಮಣ ಮತ್ತು ಕಲಿಯುಗವನ್ನು ನೋಡಿಕೊಳ್ಳುವ ಕಲಿಋಷಿ ಬ್ರಾಹ್ಮಣ ಅಂದರೆ ಕಮ್ಮಗಿರಿ ಸ್ವಾಮಿ. ಈ ಕಮ್ಮಗಿರಿ ಸ್ವಾಮಿಯು ಮೂರು ವರ್ಷ ಪೂರ್ವದಿಕ್ಕು, ಮೂರು ವರ್ಷ ಪಶ್ಚಿಮ ದಿಕ್ಕು ಹಾಗೂ ಮೂರು ವರ್ಷ ಉತ್ತರ ದಿಕ್ಕನ್ನು ಸಂಚರಿಸಿಕೊಂಡು ದಕ್ಷಿಣ ದಿಕ್ಕಿನ ಸಂಚಾರಕ್ಕೆ ಬರುತ್ತಾರೆ. ಹಾಗೆ ಬರುವಾಗ ನರಸಿಂಹ ಕೋಟೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಆ ಊರಿನವರು ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟಿಸುವುದರಲ್ಲಿರುತ್ತಾರೆ. ಎಂಟು ದಿನಗಳ ಪೂಜೆಯನ್ನು ಮುಗಿಸಿ ಒಂಭತ್ತನೆಯ ದಿನದ ಪೂಜೆ ಮಾಡುವ ಹೊತ್ತಿಗೆ ಋಷಿಗಳು ಅಲ್ಲಿಗೆ ಬರುತ್ತಾರೆ. ಪ್ರಾಣ ಪ್ರತಿಷ್ಠಾಪನೆ ನಡೆಯುವಾಗ ‘ಸ್ವಲ್ಪ ನಿಲ್ಲಿ, ನಾನು ಕಾಶಿಗೆ ಹೋಗಿ ಪವಿತ್ರ ನೀರನ್ನು ತರುತ್ತೇನೆ. ಅಲ್ಲಿಯವರೆಗೂ ನೀವೆಲ್ಲರೂ ಉಪವಾಸವಿದ್ದು ಕಾಯುತ್ತಿರಿ’ ಎಂದು ಹೇಳಿ ಅದೃಶ್ಯರಾಗುತ್ತಾರೆ. ಜನರೆಲ್ಲ ‘ಕಾಶಿ ಎಷ್ಟು ದೂರವಿದೆ ಈತ ಅಲ್ಲಿಗೆ ಹೋಗಿ ನೀರು ತರುವುದು ಯಾವಾಗ? ಅಲ್ಲಿಯವರೆಗೂ ಉಪವಾಸವಿರಲು ಸಾಧ್ಯವೇ?’ ಎಂದುಕೊಂಡು ಊಟ ಮಾಡಲಾರಂಭಿಸುತ್ತಾರೆ. ತಮ್ಮ ದಿವ್ಯ ಶಕ್ತಿಯಿಂದ ಕಾಶಿಗೆ ಹೋಗಿ ಪವಿತ್ರ ಜಲವನ್ನು ತಂದ ಋಷಿ ತನ್ನ ಮಾತನ್ನು ಮೀರಿ ಜನ ಊಟಮಾಡುತ್ತಿರುವುದನ್ನು ನೋಡಿ ಕೋಪಗೊಂಡು ಅನ್ನ ಸುಣ್ಣವಾಗಲಿ, ಹಪ್ಪಳ ಕಪ್ಪೆಯಾಗಲಿ, ಎಲೆ ಕಾಗೆಯಾಗಿ ಹಾರಿ ಹೋಗಲಿ ಎಂದು ಶಪಿಸುತ್ತಾರೆ. ಜನ ಹೋಗಿ ತಪ್ಪಾಯಿತೆಂದು ಬೇಡಿಕೊಂಡಾಗ ‘ಅರ್ಧ ಬರುತ್ತೆ; ಅರ್ಧ ಹೋಗುತ್ತೆ’ ಎಂದು ಮುಂದೆ ಹೋಗುತ್ತಾರೆ.
ಅದೇ ಊರಲ್ಲಿ ಆದಿಶಕ್ತಿ ಹುತ್ತ ಮುತ್ತಿರುವ ಗುಂಡುಕಲ್ಲಿನಲ್ಲಿ ನೆಲೆಸಿರುತ್ತಾಳೆ. ಆ ಕಲ್ಲನ್ನು ದನಕಾಯುವ ಹುಡುಗರು ಪೂಜೆ ಮಾಡುತ್ತಿರುತ್ತಾರೆ. ಅತ್ತ ಬರುತ್ತಿದ್ದ ಬ್ರಾಹ್ಮಣನನ್ನು ಕಂಡ ಹುಡುಗರು ಪೂಜೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ಋಷಿಯು ಕಾಶಿಯಿಂದ ತಂದಿದ್ದ ಪವಿತ್ರ ಜಲವನ್ನು ಕಲ್ಲು ಗುಂಡಿನ ಮೇಲೆ ಪ್ರೋಕ್ಷಣೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ನಿನ್ನ ಹಣೆಗೆ ರಕ್ತತಿಲಕ ತಪ್ಪಿದ ದಿನ ಸಿಡಿದು ಚೂರಾಗುತ್ತೀಯ ಎಂದು ಶಾಪ ನೀಡಿ ಹೋಗುತ್ತಾರೆ.
ಆ ಊರಿನಲ್ಲಿ ಮುಸಲನ್ನ ಮತ್ತು ಗಿಡ್ಡಣ್ಣ ಎಂಬ ಅಣ್ಣ ತಮ್ಮಂದಿರು ಇರುತ್ತಾರೆ. ಅವರು ಏಳು ಜೊತೆ ಎತ್ತು, ಏಳು ಜೊತೆ ಜೀತಗಾರರನ್ನಿಟ್ಟುಕೊಂಡು ವ್ಯವಸಾಯ ಮಾಡುತ್ತಿರುತ್ತಾರೆ. ಕಡ್ಲೆಕಾಯಿಯನ್ನು ಬಿತ್ತಿರುತ್ತಾರೆ. ಬಲಿತ ಕಾಯಿಗಳನ್ನು ಕೀಳುತ್ತಿರುವ ಸಂದರ್ಭದಲ್ಲಿ ಒಂದು ಗಿಡವನ್ನು ಕೀಳಲು ತುಂಬಾ ಕಷ್ಟವಾಗುತ್ತದೆ. ಆಗ ಕಲ್ಲುಗುಂಡಿನ ಸ್ವರೂಪದಲ್ಲಿದ್ದ ಆದಿಶಕ್ತಿಯು ನೆಟ್ಟ ನೋಟದಿಂದ ಅತ್ತ ನೋಡಿದಾಗ ಕಾಯಿಗಳು ಸುಲಭವಾಗಿ ಹೊರಬರುತ್ತವೆ. ಕೀಳುತ್ತಿದ್ದವರಿಗೆ ಕಲ್ಲು ಕಾಣಿಸುತ್ತದೆ. ಆಗ ಅವರು ಕಲ್ಲು ಚೆನ್ನಾಗಿದೆ ಎಂದು ಎತ್ತಿ ಪಕ್ಕಕ್ಕೆ ಇಡುತ್ತಾರೆ. ಮರುದಿನ ಕೆಲಸಕ್ಕೆ ಬಂದಾಗ ಇಟ್ಟಿದ್ದ ಜಾಗದಿಂದ ಕಲ್ಲು ಮೂಲ ಸ್ಥಾನಕ್ಕೆ ಹೋಗಿರುತ್ತದೆ. ಮತ್ತೆ ತೆಗೆದಿಡುತ್ತಾರೆ. ಮತ್ತೆ ಸ್ವಸ್ಥಾನಕ್ಕೆ ಕಲ್ಲು ಹೋಗಿರುತ್ತದೆ. ಮೂರನೆಯ ದಿನವೂ ಹಾಗೆ ಆಗುತ್ತದೆ. ಇದು ಯಾರೋ ಎತ್ತಿ ಇಡುತ್ತಿದ್ದಾರೆ ಎಂದು ಏಳೂ ಜನರು ರಾತ್ರಿ ಕಾವಲು ಕಾಯ್ದು ಕಂಡು ಹಿಡಿಯಬೇಕೆಂದು ಅಲ್ಲಿಗೆ ಬರುತ್ತಾರೆ. ಅರ್ಧ ರಾತ್ರಿಯಲ್ಲಿ ಆ ಕಲ್ಲಿನಿಂದ ರಾಕ್ಷಸಾವತಾರ ಭೂಮಿಯಿಂದ ಆಕಾಶದವರೆಗೂ ಎದ್ದು ನಿಂತದ್ದನ್ನು ನೋಡಿ ಏಳೂ ಜನರು ರಕ್ತಕಾರಿಕೊಂಡು ಸಾಯುತ್ತಾರೆ. ಎತ್ತುಗಳೂ ಸಾಯುತ್ತವೆ. ಹೋದರ‍್ಯಾರೂ ಬರಲಿಲ್ಲವೆಂದು ಅಣ್ಣ ಮತ್ತು ತಮ್ಮ ಹೋಗುತ್ತಾರೆ, ಊರಿಗೆ ಊರೇ ಹೋಗುತ್ತದೆ. ಈ ವಿಷಯ ಸರ್ಕಾರಕ್ಕೆ ಗೊತ್ತಾಗುತ್ತದೆ. ಯಾರೋ ಕೊಲೆ ಮಾಡಿದ್ದಾರೆಂದು ಬೇಡಿ ಹಾಕಲು ಬಂದಾಗ ದೇವಿಯು ಮೂರು ವರ್ಷದ ಹುಡುಗಿಯ ರೂಪದಲ್ಲಿ ಕಾಣಿಸಿಕೊಂಡು ಕೇಕೆ ಹಾಕಿ ಕೂಗುತ್ತಾಳೆ. ‘ಯಾರು ನೀನು’ ಎಂದು ಕೇಳಿದಾಗ ‘ನಾನು ನರಸಿಕೋಟೆ ಮುತ್ಯಾಲಮ್ಮ. ನನ್ನ ಪೂಜಿಸಿ’ ಎನ್ನುತ್ತಾಳೆ. ‘ಹೇಗೆ ನಂಬುವುದು ನೀನು ದೇವಿ ಎಂದು? ನೆಲಕ್ಕೆ ತಗುಲದೆ ಗಾಳೀಲಿ ನಿಂತರೆ ನಂಬುತ್ತೇವೆ’ ಎಂದು ಜನ ಹೇಳುತ್ತಾರೆ. ಆಗ, ‘ಪೂಜೆ ಮಾಡಿ ನೋಡಿ ನೀವು ಹೇಳಿದಂತೆ ಆಗುತ್ತದೆ’ ಎಂದು ಹೇಳುತ್ತಾಳೆ. ಪೂಜೆ ಮಾಡಿದಾಗ ಕಲ್ಲು ಗಾಳಿಯಲ್ಲಿ ನಿಲ್ಲುತ್ತದೆ. ಅಂದಿನಿಂದ ಕಲ್ಲನ್ನು ಅದರ ಮೂಲ ಸ್ಥಾನದಲ್ಲಿಡುತ್ತಾರೆ. ನಿತ್ಯವೂ ಪೂಜೆ ಮಾಡಬೇಕೆಂದು ಬೆಟ್ಟದ ಮೇಲಿನ ರಾಮದೇವರನ್ನು ಪೂಜಿಸುತ್ತಿದ್ದ ವಾಲ್ಮೀಕಿ ಸಮುದಾಯದ ಚಿನ್ನಲಿಂಗಪ್ಪನನ್ನೆ ಜನ ನೇಮಿಸುತ್ತಾರೆ. ಅಂದಿನಿಂದಲೂ ಪೂಜೆ ನಡೆದುಕೊಂಡು ಬಂದಿದೆ. ಚಿನ್ನಲಿಂಗಪ್ಪನ ನಂತರ ಅವರ ಮಗ ಪೋತಪ್ಪ ಸುಮಾರು ಎಂಭತ್ತು ವರ್ಷಗಳ ಕಾಲ ಪೂಜೆ ಮಾಡಿದರು. ‘ಆನಂತರ ಅವರ ಮಗನಾದ ನಾನು ಮುತ್ಯಾಲಪ್ಪ ನಲವತ್ತು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದರು. ದೇವಿಯ ಮುಂದೆ ಇರುವ ಮತ್ತೊಂದು ಶಿಲೆ ದೇವಿಯ ತಮ್ಮ ಪೋತಲಯ್ಯನದು ಎಂದು ಹೇಳಿದರು. ‘ಅಲ್ಲಿ ದೀಪ ಆರಬಾರದು, ನಿತ್ಯವೂ ಬೆಳಗಿನ ಜಾವ ನಾಲ್ಕಕ್ಕೆ ಹೋಗಿ ದೀಪ ಹಚ್ಚಿ ಬರುತ್ತೇನೆ’ ಎಂದು ಹೇಳಿದರು. ಶುಕ್ರವಾರ, ಭಾನುವಾರ ಮತ್ತು ಮಂಗಳವಾರ ಜನರು ಪೂಜೆ ಮಾಡಿಸಿಕೊಂಡು ಹೋಗಲು ಅಲ್ಲಿಗೆ ಬರುತ್ತಾರೆ. ಈಗ ದೇವಸ್ಥಾನಕ್ಕೆಂದು ಸಮಿತಿ ಇದೆ. ಎಲ್ಲ ಜಾತಿಗೂ ಸೇರಿದ ಒಟ್ಟು ಹದಿನಾರು ಮಂದಿ ಸದಸ್ಯರುಗಳಿದ್ದಾರೆ. ಎಲ್ಲ ಜಾತಿಯ ಜನರು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಬ್ರಾಹ್ಮಣರೂ ಬರುತ್ತಾರೆ. ಅವರು ಪ್ರಾಣಿಬಲಿ ನೀಡುವುದಿಲ್ಲ. ಮುಸಲ್ಮಾನರೂ ಸಹ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಅವರು ಪ್ರಾಣಿಯನ್ನು ಕಡಿಯುವುದಿಲ್ಲ. ಹಲಾಲ್ ಮಾಡುತ್ತಾರೆ ಎಂದು ಹೇಳಿದರು.
ಈ ದೇವಿಯ ಕತೆಯು ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು, ಭೂಮಿಯ ಹುಟ್ಟಿಗೆ ಕಾರಣಳಾದವಳೆಂದು ಪರಿಗಣಿಸುವ ಪ್ರಾಚೀನ ಮಾತೃಪ್ರಧಾನತೆಯ ಸೂಚಕವೇ ಆಗಿದೆ. ಹೆಣ್ಣನ್ನು ನಿಯಂತ್ರಿಸಿ, ಅವಳ ದುಡಿಮೆಯನ್ನು ಬಳಸಿಕೊಳ್ಳುತ್ತ ಬೆಳೆದ ಪಿತೃಪ್ರಧಾನತೆಯು ಗಟ್ಟಿಗೊಂಡಂತೆ, ಪ್ರಬಲವಾದಂತೆ ಹೆಣ್ಣುಮಕ್ಕಳನ್ನು ಅಬಲೆಯರು, ಶಕ್ತಿಹೀನರು, ಧೈರ್ಯವಿಲ್ಲದವರನ್ನಾಗಿ ಮಾಡಲಾಯಿತು. ಹಾಗೆಯೇ ದೇವಿಯರೂ ಸಹಿತ ಧೈರ್ಯ,ವ್ಯಘ್ರತೆಯನ್ನು ಕಳೆದುಕೊಂಡು ಸೌಮ್ಯಗೊಂಡರು. ಬಲಾಢ್ಯ ದೇವಿಯನ್ನು ಮಣಿಸುವ ಶಿಷ್ಟ ಸಂಪ್ರದಾಯದ ಭಾಗವಾಗಿಯೇ ಬ್ರಾಹ್ಮಣನೊಬ್ಬ ಪ್ರಾಣಪ್ರತಿಷ್ಠಾಪನೆ ಮಾಡುವುದು, ಕಾರಣವಿಲ್ಲದೆ ಶಾಪ ನೀಡುವಂತಹದು ವೈದಿಕಶಾಹಿ ಪಿತೃಪ್ರಧಾನತೆಯು ದೇಸಿ, ಅನಾರ್ಯ ಮಾತೃದೇವತಾ ಆಚರಣೆಯನ್ನು ಹತ್ತಿಕ್ಕುವ ಪ್ರಕ್ರಿಯೆಗಳಾಗಿವೆ.

ಸಂಸ್ಕೃತಿ, ಉಪಸಂಸ್ಕೃತಿ, ಪ್ರತಿಸಂಸ್ಕೃತಿ

ಮೂತ್ರಸೋಂಕು ತಗುಲಿ ಅದು ಔಷಧಿಗೆ ಸ್ಪಂದಿಸದೇ ಹೋದಾಗ ‘ಯೂರಿನ್ ಕಲ್ಚರ್’ ಎಂದು ಮಾಡುತ್ತಾರೆ. ಯೂರಿನ್ ಕಲ್ಚರ್ ಎಂದರೆ ಮೂತ್ರದಲ್ಲಿನ ಸೂಕ್ಷ್ಮಾ ಣುಗಳನ್ನು ಬೆಳೆಸಿ ಅವು ಯಾವ ನಿರ್ದಿಷ್ಟ ಔಷಧಿಗೆ ಸಾಯುತ್ತವೆ ಎಂದು ಕಂಡುಕೊಳ್ಳುವುದು. ಯಾವುದೇ ವೈರಾಣುವಿನಿಂದ ಬರುವ ತೀವ್ರ ತೆರನಾದ ಸೋಂಕಿಗೂ ಕಲ್ಚರ್ ಟೆಸ್ಟ್ ಮಾಡುತ್ತಾರೆ. ಸೂಕ್ಷ್ಮಾ ಣುಗಳ ವಿಚಾರದೊಂದಿಗೆ ವಿಷಯವನ್ನು ಯಾಕೆ ಪ್ರಾರಂಭಿಸಲಾಯಿತೆಂದರೆ ನಮ್ಮ ಕಣ್ಣಿಗೆ ಕಾಣದ ಲಕ್ಷಾಂತರ ಸೂಕ್ಷ್ಮಾ ಣುಗಳು ಮಣ್ಣನ್ನು ಹಸನು ಮಾಡುತ್ತವೆ, ಮಣ್ಣು ಉಸಿರಾಡುವಂತೆ ಮಾಡುತ್ತವೆ. ಆ ಹಸನಾದ ಭೂಮಿಯ ಮೇಲೆ ಹಸಿವು ನೀಗಿಸಿ, ಕಸುವು ತುಂಬುವ ಆಹಾರವನ್ನು ಬೆಳೆದು ಉಂಡು ನಾವು ಬೆಳೆಯುತ್ತೇವೆ. ಬೆಳೆಯುವುದನ್ನು ಬೇಸಾಯವೆನ್ನುತ್ತೇವೆ. ಇಂಗ್ಲಿಷ್‌ನಲ್ಲಿ ಅದು ಅಗ್ರಿಕಲ್ಚರ್. ಸಂಸ್ಕೃತಿ ಎಂಬುದು ಸಹ ಮನುಷ್ಯ ಮನುಷ್ಯರ ಒಡನಾಟವೂ ಸೇರಿದಂತೆ ಸುತ್ತಲಿನ ಒಟ್ಟಾರೆ ದೃಶ್ಯ-ಅದೃಶ್ಯ ಜೀವಲೋಕದ ಪರಿಸರದೊಂದಿಗಿನ ಒಡನಾಟದ ಅನುಭವವು ರೂಪಿಸಿದ ಸೂಕ್ಷ್ಮಾ ನೇಯ್ಗೆಯಾಗಿದೆ. ಸಂಸ್ಕೃತಿಯಲ್ಲಿ ಬೆಳೆದು, ಏಳಿಗೆ ಹೊಂದಿ, ಪಸರಿಸಿ, ನಶಿಸುತ್ತೇವೆ. ಈ ನೇಯ್ಗೆ ಸಮೂಹ ಪ್ರಜ್ಞೆ ಮೂಡಿಸುವುದರ ಜೊತೆಗೆ ಬದುಕನ್ನು ಸಾರ್ಥಕತೆಯೆಡೆಗೆ ಒಯ್ಯುವ ಕೆಲಸ ಮಾಡುತ್ತದೆ.
ಮನುಷ್ಯ ಸಮಾಜವು ಪ್ರಾಣಿ ಸಮಾಜಕ್ಕಿಂತ ಭಿನ್ನವಾಗಿರುವುದಕ್ಕೆ ಸಂಸ್ಕೃತಿಯು ಬಹುಮುಖ್ಯ ಕಾರಣವಾಗಿದೆ. ಮನುಷ್ಯರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಂಸ್ಕೃತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.ಸಂಸ್ಕೃತಿಯು ವಿಸ್ತಾರವಾದ, ಆಳವಾದ, ಮಾಂತ್ರಿಕ ಅರ್ಥಗಳನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ ಗರ್ಭದ ತೊಟ್ಟಿಲಿನಿಂದ ಮಣ್ಣ ಮಡಿಲ ಸೇರುವವರೆಗಿನ ಪದ್ಧತಿ, ಆಚರಣೆಗಳೆಲ್ಲವನ್ನು ಒಳಗೊಂಡ ಜೀವನ ವಿಧಾನವನ್ನು ಸಂಸ್ಕೃತಿ ಎಂದು ಹೇಳಬಹುದು. ಆಚರಣೆಗಳು ಆಯಾ ಸಮುದಾಯದ ಲೋಕದೃಷ್ಟಿ, ಅರಿವು ಮತ್ತು ನೆನಪುಗಳ ಪರಂಪರೆಯ ಸಂಕೇತಗಳಾಗಿರುತ್ತವೆ.
ಸೂಕ್ಷ್ಮಾ ವಾಗಿ ಆಳವಾಗಿ ಗಮನಿಸಿದಾಗ ಸುತ್ತಲಿನ ಜೀವಜಾಲದ ಭೌಗೋಳಿಕ ಪರಿಸರ ಮತ್ತು ಅದರೊಂದಿಗಿನ ಸಹಬಾಳ್ವೆ, ಒಡನಾಟದ ಅನುಭವ ಅರಿವು ಮತ್ತು ಲೋಕದೃಷ್ಟಿಯನ್ನು ರೂಪಿಸಿರುವುದು ತಿಳಿಯುತ್ತದೆ. ಈ ಅರಿವು ಮತ್ತು ಲೋಕದೃಷ್ಟಿಯನ್ನು ಆಧರಿಸಿಯೇ ಪ್ರತಿಯೊಂದು ಸಮುದಾಯವು ತನ್ನದೇ ಸೃಷ್ಟಿ ಪುರಾಣವನ್ನು, ಜ್ಞಾನಪುರಾಣವನ್ನು ಕಟ್ಟಿಕೊಂಡಿರುತ್ತದೆ. ಅರಿವು ಮತ್ತು ಲೋಕದೃಷ್ಟಿಯು ಆಯಾ ಸಮುದಾಯದಲ್ಲಿ ಜಾರಿಯಲ್ಲಿರುವ ಆಚರಣೆಗಳಲ್ಲಿ ಸಾಂಕೇತಿಕವಾಗಿ ಬಿಂಬಿತವಾಗುತ್ತಿರುತ್ತದೆ.
ಬಡವರು-ಶ್ರೀಮಂತರು, ಮೇಲ್ಜಾತಿ-ಕೆಳಜಾತಿಯಂತಹ ಶ್ರೇಣೀಕರಣದ ಹೊರತಾಗಿಯೂ ಅರಿವು ಮತ್ತು ಲೋಕದೃಷ್ಟಿಗಳನ್ನು ಎಲ್ಲ ಸಮುದಾಯಗಳು ಕಟ್ಟಿಕೊಳ್ಳುತ್ತವೆ. ಆದರೂ ಸಮಾಜದಲ್ಲಿ ಅಂತಸ್ತು, ಆಸ್ತಿ, ಅಧಿಕಾರ ಹೊಂದಿರುವ ಪ್ರಬಲ ವರ್ಗಗಳ ಸಂಸ್ಕೃತಿ ಮಾತ್ರವೇ ಮುಖ್ಯ ಮತ್ತು ಉಚ್ಛ ಸಂಸ್ಕೃತಿಯಾಗಿ ಪರಿಗಣಿಸಲ್ಪಡುತ್ತದೆ. ಜಾತಿವ್ಯವಸ್ಥೆಯನ್ನು ಆಧರಿಸಿ ಶ್ರೇಣೀಕೃತಗೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿಶ್ರೇಣಿಯ ಮೇಲಿರುವ ಸವರ್ಣೀಯರ/ವೈದಿಕರ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ಮತ್ತು ಶ್ರೇಷ್ಠತೆಯ ಮಾನದಂಡವಾಗಿ ಬಿಂಬಿತವಾಗಿದೆ. ಹೀಗೆ ಬಿಂಬಿತವಾಗಿದ್ದರೂ ಸಹ ಮೇಲು-ಕೀಳು, ಪ್ರಬಲ-ದುರ್ಬಲವೆಂಬ ವಿಂಗಡಣೆಯೊಂದಿಗೇ ಪರಸ್ಪರ ಸಂಸ್ಕೃತಿಗಳ ನಡುವೆ ಅಪಾರವಾದ ತಿಕ್ಕಾಟ, ಪ್ರಭಾವಿಸುವಿಕೆ, ಅನುಸಂಧಾನ ಮತ್ತು ಕೊಡುಕೊಳ್ಳುವಿಕೆಯ ಸಂಕೀರ್ಣವಾದ, ಜಟಿಲವಾದ ಸಂಬಂಧಗಳ ಹೆಣಿಗೆ ಇರುತ್ತದೆ.
ಶ್ರೇಣೀಕರಣದ ಪ್ರಾಬಲ್ಯತೆಯಿಂದಾಗಿ ಶ್ರೇಣಿಯ ಕೆಳಗಿರುವವರು ಮೇಲಿನವರ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುವುದು ಅನುಕರಣೆ ಮತ್ತು ಸಂಸ್ಕೃತೀಕರಣ ಎನಿಸಿಕೊಳ್ಳುತ್ತದೆ. ಶ್ರೇಣಿಯ ಕೆಳಗಿರುವವರ ಸಂಸ್ಕೃತಿಯ ಪ್ರಭಾವವನ್ನು ಮೇಲಿನವರು ಮಾನ್ಯಮಾಡದೆ/ಅಂಗೀಕರಿಸದೆ ಅದು ತಮ್ಮದೇ ಎಂಬಂತೆ ಹೊಂದಿಸಿಕೊಳ್ಳುವುದನ್ನು ಕಾಣಬಹುದು. ಉದಾ: ಹಲವೆಡೆ ಮಾದಿಗ ಜಾತಿಯವರು ಮಣ್ಣಿನ ಮಡಕೆಯನ್ನು ಜಗಲಿಕಟ್ಟೆಯ ಮೇಲೆ ಹೂತಿಟ್ಟು ಅದರಲ್ಲಿ ನೀರು ತುಂಬಿಸಿ ಮೇಲೊಂದು ಸಣ್ಣಗುಡಿ ಕಟ್ಟಿ ಗಂಗೆ ಎಂದು ಪೂಜಿಸುತ್ತಾರೆ. ಈ ನೀರನ್ನು ಪವಿತ್ರವೆಂದು ಬ್ರಾಹ್ಮಣರೂ ಸೇರಿದಂತೆ ಇತರ ಮೇಲ್ಜಾತಿಯವರು ಶುಭಕಾರ್ಯಗಳ ಸಂದರ್ಭದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಇದನ್ನೆಲ್ಲೂ ಉಲ್ಲೇಖಿಸುವುದಿಲ್ಲ. ಹೀಗೆ ಕೆಳಜಾತಿಯ ದೇವಿಯರಿಗೆ ಸಲ್ಲಿಸುವ ಮೊದಲ ಪೂಜೆಯಲ್ಲದೆ ಜಾತ್ರೆ ಮತ್ತು ಉತ್ಸವಗಳ ಸಂದರ್ಭಗಳಲ್ಲಿ ಕೆಳಜಾತಿಯವರ ಕೈಲಿ ದೇವರ ಮುಂದೆ ದೀಪ/ಗರುಡಗಂಬ ಹಿಡಿಸುವುದು, ದೇವರ ಮುಂದೆ ಶಹನಾಯಿ ಊದಿಸುವುದು, ಮೊದಲಿಗೆ ರಥ ಎಳೆಸುವಂತಹ ಆಚರಣೆಗಳು ತಳಜಾತಿಯವರ ಹಕ್ಕಿನ ಸ್ಥಾನವನ್ನು ಕಿತ್ತುಕೊಂಡಿರುವುದರ ಅಥವಾ ಅವರ ದೇವರು ಮತ್ತು ಆಚರಣೆಗಳನ್ನು ತಮ್ಮದಾಗಿಸಿಕೊಂಡ ಚರಿತ್ರೆಯ ಗಾಯಗಳನ್ನು ಎಲ್ಲೆಲ್ಲೂ ಕಾಣಬಹುದಾಗಿದೆ.
ಸಂಸ್ಕೃತಿಯನ್ನು ಪ್ರಕೃತಿಯಿಂದ ಪ್ರತ್ಯೇಕವಾಗಿಯೋ ಅಥವಾ ಮಿಗಿಲಾಗಿಯೋ ನೋಡುವ ಕ್ರಮವೂ ಇದೆ. ಪ್ರತ್ಯೇಕಿಸಿ ನೋಡುವ ಅಥವಾ ಮಿಗಿಲೆಂದು ನೋಡುವಾಗ ಶ್ರೇಷ್ಠವೆಂದು ಸಾಬೀತುಗೊಳಿಸುವ ಅಪಾಯವಿರುತ್ತದೆ. ಎಲ್ಲರ ಮತ್ತು ಎಲ್ಲದರಲ್ಲೊಂದಾಗಿರುವುದಕ್ಕಿಂತ, ಎಷ್ಟೆಷ್ಟು ಪ್ರತ್ಯೇಕವಾಗಿ, ‘ಮುಟ್ಟಿಗೆ’ ದೂರವಾಗಿ ಉಳಿಯುವುದೇ ಶ್ರೇಷ್ಠತೆಗೆ ಆಧಾರವಾಗಿಬಿಡುವ ಅಪಾಯವದು. ಈ ಅಪಾಯವು ಸಮಗ್ರ ದೇಹದೊಳಗೆಯೇ ತಲೆ ಮತ್ತು ಇತರ ಅವಯವಗಳನ್ನು ಬೇರ್ಪಡಿಸಿ, ಪ್ರತ್ಯೇಕ ವಸಾಹತುಗಳಂತೆ ಮಾಡಿದೆ. ಇಲ್ಲಿ ಶ್ರೇಷ್ಠತೆಯ ವ್ಯಸನಕ್ಕಿಂತ ಜೀವಪರ ಕಾಳಜಿಯನ್ನು ಕೇಂದ್ರವಾಗಿಟ್ಟುಕೊಂಡು ಚಲನಶೀಲ ಜ್ಞಾನ ಪರಂಪರೆಯಾಗಿ ಸಂಸ್ಕೃತಿಯನ್ನು ಅರಿಯುವ ಪ್ರಯತ್ನಮಾಡಲಾಗಿದೆ. ತಲತಲಾಂತರಗಳಿಂದ ಪಡೆದುಕೊಂಡ ಜ್ಞಾನವೇ ಆಗಿರುವ ಸಂಸ್ಕೃತಿಯು ರಾಜಕೀಯ ಪ್ರಜ್ಞೆಯೇ ಆಗಿದೆ. ಸಾಯಿಲ್ ಎಂಬ ಇಂಗ್ಲಿಷ್ ಪದಕ್ಕೆ ಮಣ್ಣು ಮತ್ತು ಕೊಳೆ ಎಂಬ ಎರಡೂ ಅರ್ಥವಿದೆ. ಮಣ್ಣು ಮತ್ತು ಕೊಳೆಯೊಂದಿಗೆ ಕೆಲಸದ ಮೂಲಕ ಒಡನಾಡುತ್ತ ಪಡೆದುಕೊಳ್ಳುವ ಜ್ಞಾನ ನಿಜವಾದ ಜ್ಞಾನವಾದ್ದರಿಂದಲೇ ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಹುಟ್ಟಿಕೊಂಡಿದೆ.
ಸಫಾಯಿ ಕರ್ಮಚಾರಿಗಳಿಗೂ ಲೋಕದೃಷ್ಟಿ, ತಿಳಿವು ಮತ್ತು ನೆನಪಿನ ಪರಂಪರೆ ಇದೆ. ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾರೆ.ಪರಸ್ಪರರ ಸಾವು-ನೋವಿಗೆ ಮಿಡಿಯುವ ಮತ್ತು ಹಂಚಿ ಉಣ್ಣುವ, ಅನ್ಯ ದೇವರು, ಧರ್ಮ ಇತ್ಯಾದಿಗಳನ್ನು ಬೇಧವೆಣಿಸದೆ ಒಳಗೊಳ್ಳುವ, ಸ್ಪರ್ಶಕ್ಕೆ, ಭಾವಕ್ಕೆ ಎಟುಕುವ ದೇವರು ಮತ್ತು ಸಂತರು ಅವರ ಸಾಂಸ್ಕೃತಿಕ ಲೋಕದ ಭಾಗವಾಗಿದ್ದಾರೆ. ಮುಟ್ಟುವುದಕ್ಕೆ ಅನರ್ಹವಾದುದು, ಅಶುದ್ಧವಾದುದು ಮತ್ತು ಅಪವಿತ್ರವಾದುದು ಯಾವುದೂ ಈ ಲೋಕದಲ್ಲಿ ಇಲ್ಲ. ಶ್ರಮವೇ ಅವರ ಬದುಕಿನ ಅಧಾರ. ಶ್ರಮದ ಮೂಲಕ ಪಡೆದುಕೊಳ್ಳುವ ಅನುಭವ ಮತ್ತು ಅರಿವೇ ಅವರ ಸಂಸ್ಕೃತಿಯ ಮೂಲಧಾರವಾದ್ದರಿಂದ ಅವರದು ಶ್ರಮ ಸಂಸ್ಕೃತಿಯಾಗಿದೆ. ‘ನಾನು’ ‘ನನ್ನದು’ ಎಂಬುದಕ್ಕಿಂತ ‘ನಾವು’, ‘ನಮ್ಮ’ ಎಂಬ ಪರಸ್ಪರಾವಲಂಬನೆಯ ಸಾಮೂಹಿಕ ಸಂಸ್ಕೃತಿಯಾಗಿದೆ. ತಿಕ್ಕಾಟ, ದಮನಗಳನ್ನು ಎದುರಿಸುತ್ತಲೇ ಅನುಸಂಧಾನದ ದಾರಿಗಳನ್ನು ಹುಡುಕಿಕೊಳ್ಳುವ ಭಾರತೀಯ ಬಹು ಸಂಸ್ಕೃತಿಯ ದರ್ಶನವೂ ಆಗಿದೆ.
ಕಡೆಗಣಿಸಲಾದ ತಳಸಮುದಾಯದವರ ಜ್ಞಾನ, ಅರಿವು, ದರ್ಶನ, ಕಾಣ್ಕೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಕರ್ನಾಟಕದ ಸಾಂಸ್ಕೃತಿಕ ಚಿಂತನೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಂತಹ ಸಮುದಾಯಗಳ ಸಂಸ್ಕೃತಿಯನ್ನು ಉಪಸಂಸ್ಕೃತಿಯಾಗಿ, ಪ್ರತಿಸಂಸ್ಕೃತಿಯಾಗಿ ಚರ್ಚಿಸಲಾಗಿದೆ. ಸಿಂದ್ ಮಾದಿಗರು, ದಕ್ಕಲರು, ಮಾಷ್ಟಿಕರು ಇತ್ಯಾದಿ ಕಡೆಗಣಿಸಲಾದ ಸಮುದಾಯಗಳ ಸಾಂಸ್ಕೃತಿಕ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಉಪಸಂಸ್ಕೃತಿಯ ಮಾಲಿಕೆಯಡಿ ದಾಖಲಿಸಲಾಗಿದ್ದು ಪ್ರಧಾನ ಸಂಪಾದಕರಾದ ಬರಗೂರು ರಾಮಚಂದ್ರಪ್ಪನವರು ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ-
“ಸಂಸ್ಕೃತಿ ಎನ್ನುವುದು ಒಂದೇ ಅಲ್ಲ; ಧರ್ಮ ಎಂಬುದು ಒಂದೇ ಅಲ್ಲ. ಏಕ ಸಂಸ್ಕೃತಿ-ಧರ್ಮಗಳ ಯಜಮಾನ್ಯದಲ್ಲಿ ನಿರ್ಲಕ್ಷಿಸುತ್ತಲೇ ಬಂದ ನೂರೆಂಟು ಸಂಸ್ಕೃತಿಗಳು ನಮ್ಮ ಕಣ್ಣೆದುರಿಗೇ ಇವೆ. ಊರಾಚೆಯ ಅಂಚಿನಲ್ಲಿ ಕಾಡಿನ ಒಡಲಲ್ಲಿ ಜೀವ ಹಿಡಿದುಕೊಂಡಿವೆ. ಅವುಗಳ ಜೀವನ ವಿಧಾನ ಗೊತ್ತೆ? ಕಲೆ ಸಾಹಿತ್ಯಗಳು ಗೊತ್ತೆ?ಇವು ಗೊತ್ತಾಗುತ್ತಾ ಹೋದಂತೆ ಏಕ ಸಂಸ್ಕೃತಿ ಯಜಮಾನಿಕೆಯ ಭ್ರಮೆ ಕರಗತೊಡಗುತ್ತದೆ. ನಮ್ಮೊಂದಿಗೆ ಕರೆದು ಕೂಡಿಸಿಕೊಂಡು ಮುನ್ನಡೆಯಬೇಕಾದ ಬಹು ಸಂಸ್ಕೃತಿಗಳ ಬಹುದೊಡ್ಡ ಲೋಕವೇ ನಮ್ಮೊಳಗೆ ಕಾಣುತ್ತದೆ. ನಾವು ಎಲ್ಲಿಂದ ಎಷ್ಟು ದೂರ ಬಂದಿದ್ದೇವೆ?ನಮ್ಮ ಮೂಲ ನೆಲೆಯಲ್ಲಿ ಎಷ್ಟೊಂದು ಜನರನ್ನು ಎಷ್ಟೊಂದು ದೂರ ನಿಲ್ಲಿಸಿದ್ದೇವೆ ಎಂಬ ಅರಿವು ಆವರಿಸಿಕೊಳ್ಳುತ್ತದೆ. ಈ ‘ದೂರ’ ಸಮೀಪವಾಗುವುದು ಯಾವಾಗ? ಹೇಗೆ ಎಂಬ ಪ್ರಶ್ನೆಗಳಲ್ಲಿ ಉತ್ತರದ ಹುಡುಕಾಟ ಆರಂಭವಾಗುತ್ತದೆ. ಈ ಹುಡುಕಾಟ ದೂರವನ್ನು ಸಮೀಪವಾಗಿಸುವ ಸಂಸ್ಕೃತಿಯಾಗಿ ರೂಪುಗೊಳ್ಳುತ್ತದೆ”(BarguruRamachandrappa: 32&33:1993)
ತಳಸಮುದಾಯ ಮತ್ತು ಅಲಕ್ಷಿತ ಸಮುದಾಯದ ಸಂಸ್ಕೃತಿಯನ್ನು ಪ್ರತಿಸಂಸ್ಕೃತಿಯಾಗಿ ಚರ್ಚಿಸುವ ಸಾಂಸ್ಕೃತಿಕ ಚಿಂತಕ ರಹಮತ್ ತರಿಕೆರೆಯವರು ನೀಡಿರುವ ವಿವರಣೆ ಹೀಗಿದೆ. “ಸಾಮಾಜಿಕವಾಗಿ, ಆರ್ಥಿಕವಾಗಿ ‘ತಳ’ಸ್ತರಕ್ಕೆ ಸೇರಿದ ಸಮುದಾಯಗಳಿಗೆ ಬದುಕಲೇಬೇಕೆಂಬ ಅದಮ್ಯ ಆಸೆಗಳಿರುತ್ತವೆ; ತಮ್ಮಾಸೆ ಕನಸುಗಳ ಈಡೇರಿಕೆಗೆ ವಾಸ್ತವದ ಹೊಳೆ ಅಡ್ಡ ಬಂದರೆ, ಅವು ಈಸುಬಿದ್ದು ಸೆಣಸುವ ಹಠ ತೋರುತ್ತವೆ; ತಮ್ಮನ್ನು ಆವರಿಸಿರುವ ಎಲ್ಲ ತಲ್ಲಣಗಳ ನಡುವೆ ಕೂಡ ಅವು ಪ್ರತಿರೋಧದ ವಿಚಿತ್ರ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ಪ್ರತಿಸಂಸ್ಕೃತಿಯ ಸಾಧ್ಯತೆಗಳು ಸಾಮಾನ್ಯವಾಗಿ ರೂಪು ತಳೆಯುವುದೇ ಇಕ್ಕಟ್ಟುಗಳಲ್ಲಿ. ಹಾಗೆಂದು, ವ್ಯವಸ್ಥೆಯೊಡ್ಡಿದ ಇಕ್ಕಟ್ಟುಗಳಲ್ಲಿ ಪಾರಾಗಿ ತಪ್ಪಿಸಿಕೊಳ್ಳುವ ಜಾಣತನಗಳೇ ಪ್ರತಿಸಂಸ್ಕೃತಿಯಲ್ಲ. ಪ್ರತಿಸಂಸ್ಕೃತಿಯು ಸಂಕಟಗಳಲ್ಲಿರುವ ಸಮುದಾಯಕ್ಕೆ ಪ್ರತಿರೋಧಿಸಿ ಚೈತನ್ಯವನ್ನು ತುಂಬಿ, ಪರ್ಯಾಯಗಳ ಶೋಧನೆಗೆ ಪ್ರೇರೇಪಿಸಬಲ್ಲ ಸಾಮುದಾಯಿಕ ಪ್ರತಿಭೆ ಕೂಡ. ಆದರೆ ‘ಪರ್ಯಾಯ’ವೊಂದು ಒಮ್ಮೆ ರೂಪುಗೊಂಡ ಮೇಲೆ, ಅದು ಸಮುದಾಯಗಳೆಂಬ ಕೆಳಗದ್ದೆಗಳಿಗೆ ಯಾವತ್ತೂ ನೀರುಣಿಸಬಲ್ಲ ಬತ್ತದ ತೊರೆಯಾಗಿ ಉಳಿಯುವುದಿಲ್ಲ. ಒಂದು ಕಾಲಕ್ಕೆ ‘ಪ್ರತಿಸಂಸ್ಕೃತಿ’ ಎಂಬಂತೆ ಮೈತಳೆದ ವಚನ ಚಳುವಳಿಯು ಈಗ ಏನಾಗಿ ನಿಂತಿದೆ ಎಂಬುದು ಇದಕ್ಕೆ ಸಾಕ್ಷಿ. ಈ ಅರ್ಥದಲ್ಲಿ ಬದಲಾಗುವ ಚಾರಿತ್ರಿಕ ಸನ್ನಿವೇಶಗಳಲ್ಲಿ ‘ಪ್ರತಿಸಂಸ್ಕೃತಿ’ಗಳು ಮತ್ತೆ ಮತ್ತೆ ಮೂಡುತ್ತಲೇ ಇರುತ್ತವೆ. ಇದೊಂದು ನಿಲ್ಲದ ಪ್ರಕ್ರಿಯೆ. (ರಹಮತ್ ತರೀಕೆರೆ:ಪೀಠಿಕೆ:೨೦೦೨).
ಸಫಾಯಿ ಕರ್ಮಚಾರಿಗಳನ್ನು ನೈರ್ಮಲ್ಯದ ಕೆಲಸಕ್ಕೆ ಕಟ್ಟಿಹಾಕಲು ಅವರ ಅಸ್ಮಿತೆ ಮತ್ತು ಅಸ್ತಿತ್ವವನ್ನು ರೂಪಿಸಿರುವ ಅವರ ಸಂಸ್ಕೃತಿಯನ್ನೇ ಕೀಳಾಗಿಸಿ ಅನ್ಯರನ್ನಾಗಿಸಲಾಗಿದೆ. ಆ ಮೂಲಕ ಅವರ ಸಂಸ್ಕೃತಿಯ ಮೂಲಾಧಾರವಾಗಿರುವ ಅವರ ತಿಳಿವು ಮತ್ತು ಲೋಕದೃಷ್ಟಿಯನ್ನೇ ಕಡೆಗಣಿಸಲಾಗಿದೆ, ಹತ್ತಿಕ್ಕಲಾಗಿದೆ. ಹೀಗೆ ಅಂಚಿಗೆ ತಳ್ಳಲಾದ ಜನರ ಅನನ್ಯತೆಯೇ ಅವರ ಸಂಸ್ಕೃತಿಯಿಂದ ರೂಪುಗೊಂಡಿರುತ್ತದೆ. ಅವರ ಪೋಷಣೆ ಮತ್ತು ಅವರ ಸಂಸ್ಕೃತಿಯ ಪೋಷಣೆ ಒಂದಕ್ಕೊಂದು ಪೂರಕ ಮತ್ತು ಪ್ರಚೋದಕ. ಇಂಥ ಜೀವನ ಕ್ರಮವೇ ಅಮಾನವೀಯ ವಾಸ್ತವದ ವಿರುದ್ಧ ಸೆಣೆಸಾಡುವ ಸಾಮರ್ಥ್ಯವನ್ನು ನೀಡಿದೆ. ಹಾಗೂ ಅವರನ್ನು ಮಾನವೀಯರನ್ನಾಗಿ ಉಳಿಸಿದೆ. ಪ್ರಭಾವ, ಪ್ರಾಬಲ್ಯ, ದಮನವನ್ನು ಎದುರಿಸುತ್ತಲೇ ತಮ್ಮ ಹೊಲಸನ್ನು ಬಾಚಿಸಿಕೊಂಡು ತುಚ್ಛವಾಗಿ ಕಾಣುವವರ ವಿರುದ್ಧ ಮಾನವೀಯ ಅಂತಃಕರಣವನ್ನು ಕಾಪಾಡಿಕೊಳ್ಳಲು ಗುರಾಣಿಯಂತೆ ಕೆಲಸ ಮಾಡಿದೆ. ಇಂತಹ ಸಂಸ್ಕೃತಿಯನ್ನು ಅರಿಯುವುದು ಅವರ ಪರಿಸ್ಥಿತಿಯ ಸುಧಾರಣೆಗಷ್ಟೇ ಅಲ್ಲದೆ ಒಟ್ಟಾರೆ ಸಮಾಜದ ಒಳಿತಿಗಾಗಿ ಅವಶ್ಯಕ.
ಅಪಾಯಕಾರಿ ಕೆಲಸದ ವಾತಾವರಣದಲ್ಲಿ ಆರೋಗ್ಯವನ್ನು ಕಾಪಾಡುವಂತಹ ಅವಶ್ಯಕ ಕೆಲಸವನ್ನು ಮಾಡುವ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ಸಲ್ಲಿಸಬೇಕಾದುದು ಪ್ರಭುತ್ವದ ಮತ್ತು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಸಫಾಯಿ ಕರ್ಮಚಾರಿಗಳನ್ನು ಮನುಷ್ಯರಾಗಿ, ಪ್ರಜೆಗಳಾಗಿ ಒಪ್ಪಿಕೊಳ್ಳಲು ಅವರ ದುಡಿಮೆಗೆ ನ್ಯಾಯಬದ್ಧವಾಗಿ ಪ್ರತಿಫಲವನ್ನು ಸಲ್ಲಿಸಬೇಕು. ಹಾಗೆಯೇ ಮುಖ್ಯವಾಹಿನಿಯ ಸಂಸ್ಕೃತಿಯು ಅವರ ಮಾನವೀಯ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಪಡೆದುಕೊಳ್ಳುವುದು ಸಾಕಷ್ಟಿದೆ. ಇಲ್ಲಿ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಪ್ರಸ್ತುತ. “ಪ್ರಧಾನ ಸಂಸ್ಕೃತಿಯ ಪ್ರಾಬಲ್ಯದಡಿ ತನ್ನತನ ಕಾಪಾಡಿಕೊಳ್ಳಲು ಶತಾಯ ಗತಾಯ ಹೆಣಗುತ್ತಿರುವ ಮೂಲ ಸಂಸ್ಕೃತಿಗಳ ಅಧ್ಯಯನವು ಮನುಕುಲದ ಒಟ್ಟಾರೆ ಉಳಿವಿಗೆ ಅಗತ್ಯವಾದ ಒಳನೋಟಗಳನ್ನು ಒದಗಿಸಬಲ್ಲದು. ಪ್ರಧಾನ ಸಂಸ್ಕೃತಿಯ ಪ್ರವಾಹಕ್ಕೆ ವಿರುದ್ಧವಾದ ಹಾಗೂ ಭಿನ್ನವಾದ ನಾನಾಮೂಲಾಧಾರೆಗಳು ಆಶ್ಚರ್ಯಕರ ರೀತಿಯಲ್ಲಿ ಇನ್ನೂ ಉಳಿಸಿಕೊಂಡಿರುವ ‘ದೇಸೀ ಜೀವಜನ’ ‘ಜೀವಹೀನ’ ಸಂಸ್ಕೃತಿಯ ಏಕತಾನತೆಯನ್ನು ಮೀರಿ ‘ಜೀವಪರ’ ಸಾಂಸ್ಕೃತಿಕ ಪರ್ಯಾಯವೊಂದಕ್ಕೆ ದಾರಿ ಮಾಡಿಕೊಡಬಲ್ಲದು.
ನೆನಪಿನ ಶಕ್ತಿ, ಚಿಂತಿಸುವ ಶಕ್ತಿ, ಕಲ್ಪನೆ ಮಾಡಿಕೊಳ್ಳುವ ಶಕ್ತಿ ಮತ್ತು ತನ್ನ ಸುತ್ತಲಿನ ಪರಿಸರ ಕುರಿತ ಕುತೂಹಲದಿಂದಾಗಿ ಮನುಷ್ಯ ಸಮುದಾಯಗಳು ಭೂಮಿಯ ಹುಟ್ಟಿನ ಕುರಿತು ಸೃಷ್ಟಿ ಪುರಾಣಗಳನ್ನು ಹಾಗೂ ಸುತ್ತಲಿನ ಪರಿಸರದೊಂದಿಗಿನ ಸಂಬಂಧ, ಸಹಬಾಳ್ವೆ, ಒಡನಾಟದ ಅನುಭವ ಆಧರಿಸಿದ ಜ್ಞಾನ ಪುರಾಣಗಳನ್ನು ಕಟ್ಟಿಕೊಂಡಿವೆ.
ಇಲ್ಲಿ ಸಫಾಯಿ ಕರ್ಮಚಾರಿಗಳ ಸಾಂಸ್ಕೃತಿಕ ಬದುಕನ್ನು ಅವರಲ್ಲಿ ಜಾರಿ ಇರುವ ಸೃಷ್ಟಿ ಪುರಾಣಗಳು, ಜ್ಞಾನ ಪುರಾಣಗಳು ಹಾಗೂ ಅವರು ಜೀವನಾವರ್ತನ, ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಆಚರಿಸುವ ವಿವಿಧ ಆಚರಣೆಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಈ ಪುರಾಣಗಳು ಮತ್ತು ಆಚರಣೆಗಳನ್ನು ಅವಲೋಕಿಸುವಾಗ ಅವು ಪರಿಸರದೊಂದಿಗೆ ನಿಕಟವಾದ ಸಹಬಾಳ್ವೆಯಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ದೇಹವನ್ನು ಮಲಿನವೆಂದು ಭಾವಿಸದೆ, ಮೇಲು-ಕೀಳಿನ ಹೊರತಾದ ಜೀವಪರ ಪ್ರಜ್ಞೆ, ಸರ್ವರ ಹಿತ ಬಯಸುವ ಸಮಷ್ಟಿ ಪ್ರಜ್ಞೆಯ ಪರಂಪರೆ ಒಳಸೆಲೆಯಾಗಿ ಮುಂದುವರೆದುಕೊಂಡುಬಂದಿರುವುದನ್ನು ಕಾಣಬಹುದು. ಅಂತಹ ಪ್ರಜ್ಞೆಯನ್ನು ಸಂಕೇತಿಸುವ ಪ್ರಮುಖ ಪುರಾಣ ಮತ್ತು ಆಚರಣೆಗಳನ್ನು ಇಲ್ಲಿ ನೀಡಲಾಗಿದೆ.
ಸಫಾಯಿಕರ್ಮಚಾರಿಗಳಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸೇರಿರುವ ಜನರಲ್ಲಿ ಜಾರಿ ಇರುವ ಸೃಷ್ಟಿಪುರಾಣಗಳಲ್ಲಿ ಮುಖ್ಯವಾದವುಗಳು ಹೀಗಿವೆ.