ಹಿಮಾಲಯ ಪರ್ವತ ಪ್ರದೇಶವು ಅತ್ಯಂತ ಸೂಕ್ಷö್ಮಭೂವಿಜ್ಞಾನ ಮತ್ತು ಪರಿಸರ ಪ್ರದೇಶವಾಗಿರುವ ಕಾರಣಕ್ಕಾಗಿಯೇ ಅದನ್ನು ಭೂಮಿಯ ನಾಭಿ ಎನ್ನುತ್ತಾರೆ. ಅಂತಹ ಪ್ರದೇಶದಲ್ಲಿ ಅಭಿವೃದ್ದಿ ಹೆಸರಿನಲ್ಲಿ ರಸ್ತೆ, ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ.
೨೦೨೨-೨೦೨೩ರಲ್ಲಿ ಜಗದ ದೊಡ್ಡಣ್ಣನೆನಿಸಿಕೊಂಡಿರುವ ಅಮೆರಿಕಾದ ಒಂದು ಭಾಗ ಕಾಳ್ಗಿಚ್ಚಿನಲ್ಲಿ ಬೆಂದರೆ, ಮತ್ತೊಂದು ಭಾಗ ಪ್ರವಾಹದಲ್ಲಿ ಮುಳುಗಿತು. ಇಂತಹ ಪ್ರಕೃತಿಯ ಪಾಠಗಳಿಂದ ನಾವು ಪಾಠ ಕಲಿಯದಿದ್ದರೆ ನಮ್ಮ ಮುಂದಿನ ಪೀಳಿಗೆಗಳುನೆಮ್ಮದಿಯಿಂದ ಬದುಕಲು ಸಾಧ್ಯವೇ? ನಾವು ಬದುಕಿರುವ ಭೂಮಿಯನ್ನೇ ನಾಶ ಮಾಡಹೊರಟಿರುವ ಜಗತ್ತಿನ ಹಿರಿಯ ಗಣ್ಯಾತಿಗಣ್ಯರಿಗೆ ಭೂಮಿಯ, ಪ್ರಕೃತಿಯ ನಾಡಿಮಿಡಿತ ಅರಿತಿರುವ ಎಳೆಯರು ತಿದ್ದಿ ಬುದ್ಧಿ ಹೇಳುವಗುರುಗಳಾಗಬೇಕೆ?
ಅಭಿವೃದ್ಧಿ ಎಂಬ ಹೆಸರಿನಲ್ಲಿ ಸರ್ವರನ್ನೂ ನಾಶಪಡಿಸಲು ಪರಿಸರವನ್ನು ಹಾಳುಗೆಡವುತ್ತಿರುವುದನ್ನು ಪಣತೊಟ್ಟಂತೆ ತಡೆಯದಿದ್ದರೆ ಇನ್ನು ೪೦-೫೦ವರ್ಷಗಳಲ್ಲಿ ನಾಶವಾಗುವುದು ಖಂಡಿತ. ನಾಶದ ಬಗ್ಗೆ ಪದೇ ಪದೇ ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ತಡೆಯುವುದಾದರೂ ಹೇಗೆ? ಎಂಬ ದಾರಿಗಳನ್ನು ಹುಡುಕುವಾಗ ನಾವು ಕಟ್ಟಿಕೊಂಡ ಸಮಾಜ, ನಾವು ಬದುಕುವ ಶೈಲಿಯನ್ನು ಹಿಂತಿರುಗಿ ನೋಡಿಕೊಳ್ಳುವ ಅಗತ್ಯವಿದೆ. ಎಲ್ಲರೂ ಹೊಟ್ಟೆತುಂಬಾ ಉಂಡು, ಕಣ್ತುಂಬ ನಿದ್ದೆ ಮಾಡಿ ಕೈ ತುಂಬಾ ದುಡಿದು, ನೆಮ್ಮದಿಯ ಆಸರೆಗಳು ಕಂಡುಕೊಂಡಿರುವ ಸ್ಥಿತಿ ಇದೆಯಾ? ಖಂಡಿತವಾಗಿಯೂ ಇಲ್ಲ. ಹಲವರು ದುಡಿದು, ಕೆಲವರು ಶ್ರೀಮಂತವಾಗಿರುವ ಮಾರ್ಗಗಳನ್ನೇ ನಾವು ಎಷ್ಟೋ ಕಾಲದಿಂದ ಅನುಸರಿಸುತ್ತಿದ್ದೆವೆ. ಇಂಥ ಅಸಮಾನತೆಗೂ ಪರಿಸರ ನಾಶಕ್ಕೂ ಸಂಬಂಧವಿದೆಯೇ? ಖಂಡಿತವಾಗಿಯೂ ಇದೆ. ಅಭಿವೃದ್ಧಿ ಕನ್ನಡಕ ತೊಟ್ಟರೆ ಅದು ಕಾಣುವುದಿಲ್ಲ. ಕೂಡಿ ದುಡಿಯುವ, ಹಂಚಿ ಉಣ್ಣುವ ಸಹಬಾಳ್ವೆಯ ಒಳಗಣ್ಣಿಗೆ ಅದು ಕಾಣುತ್ತದೆ, ಕೇಳುತ್ತದೆ. ಹಾಗೆ ಬದುಕುತ್ತ್ತಿದ್ದ, ಈಗಲೂ ಬದುಕುತ್ತಿರುವ ಸಮುದಾಯಗಳು ಇವೆ. ಆದರೆ ಅಂತಹ ಸಮುದಾಯಗಳನ್ನು ಶುದ್ಧ ಅನಾಗರಿಕವೆಂದು ಅಂಚಿಗೆ ತಳ್ಳಿದ್ದೇವೆ, ಅಮಾನ್ಯ ಮಾಡಿದ್ದೇವೆ. ಅವು ತಮ್ಮ ಶ್ರಮಶಕ್ತಿಯಿಂದ ಮಣ್ಣಿಗೆ ಮತ್ತು ಪರಿಸರದೊಂದಿಗಿನ ನಿಕಟವಾದ ಒಡನಾಟದೊಂದಿಗೆ ಪಡೆದುಕೊಂಡ ಅರಿವು, ಲೋಕದೃಷ್ಟಿಗಳನ್ನು ಜ್ಞಾನಲೋಕದಿಂದ ಹೊರಗಟ್ಟಿದ್ದೇವೆ. ‘ಕೈ ಕೆಸರಾದರೆ ಬಾಯಿ ತುಂಬಾ ಮೊಸರು’ ಎಂಬ ದುಡಿಯುವುದರ ಪ್ರಯೋಜನ ಹೇಳುವ ಗಾದೆಮಾತು ಜನಪ್ರಿಯ. ಈ ಗಾದೆಯ ಅರ್ಥವೆಂದರೆ ದುಡಿದು ಸುಖಪಡು ಎಂದು. ಆದರೆ ಮಣ್ಣಿಗೆ ಕೈ ಇಡದೇ ಸುಖಪಡುವ ವಿಧಾನ ಕಂಡುಕೊಳ್ಳುವುದು ಈಗ ಜಾಣತನವಾಗಿದೆ. ಇಂತಹ ಜಾಣತನಗಳು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ಜ್ಞಾನಿಗಳು ಹೇಳುತ್ತಲೇ ಇದ್ದಾರೆ. ವಿವೇಕವಂತರು ಪರಿಹಾರದ ಮಾರ್ಗಗಳ ಜಾಡು ಹಿಡಿಯುತ್ತಿದ್ದಾರೆ. ಪರಿಹಾರದ ಮಾರ್ಗವೆಂದರೆ ‘ಶುದ್ಧ’ವಾಗಿರುವ ಕೈಗಳನ್ನು ಮಣ್ಣು ಮಾಡಿಕೊಳ್ಳುವ ಮಾರ್ಗ, ಮಣ್ಣಿನೊಂದಿಗೆ ದುಡಿಯುತ್ತಿರುವವರ ಮಾರ್ಗ. ಕಸವನ್ನು ಗೊಬ್ಬರವಾಗಿಸಿ ಮಣ್ಣಿಗೆ ಸತ್ವ ನೀಡುವ ಸಫಾಯಿ ಕರ್ಮಚಾರಿಗಳ ಬದುಕು ಮತ್ತು ಅರಿವು ಸಹ ಪರಿಹಾರ ಮಾರ್ಗವಾಗಿದೆ. ಅಂತಹವರಿಂದ ದೂರ ಬಂದು ಹಾದಿ ತಪ್ಪಿರುವುದರಿಂದ ಜಾಡುಗಳನ್ನು ಕಂಡುಕೊಂಡು ಪಯಣಿಸಬೇಕಾಗಿದೆ. ಅಸಮಾನತೆ, ತಾರತಮ್ಯದ ಕಸವನ್ನು ಗೊಬ್ಬರವಾಗಿಸಿ ಸರ್ವರಿಗೂ ಸಮಬಾಳು, ಸಮಪಾಲಿನ ಬದುಕಿನ ಬೆಳೆ ಬೆಳೆಯುವ ಸಲುವಾಗಿ. ಅಂತಹ ಬೆಳೆಯಿಂದ ಸತ್ವ ಪಡೆದುಕೊಂಡು ಜಗತ್ತನ್ನು ವಿನಾಶದಿಂದ ಬಿಡುಗಡೆಗೊಳಿಸುವ ಸಲುವಾಗಿ.
ಕೃಪೆ:ದು.ಸರಸ್ವತಿಯವರ ಮಹಾಪ್ರಬಂಧ “ಕಮ್ಯುನಿಟಿ ಅಂಡರ್ ಸೀಜ್: ಸೋಷಿಯೋ ಕಲ್ಚರಲ್ ಸ್ಟಡಿ ಆಫ್ ಸಫಾಯಿ ಕರ್ಮಚಾರೀಸ್ ಇನ್ ಕರ್ನಾಟಕ ಫ್ರಂ ಫೆಮಿನಿಸ್ಟ್ ಪರಸ್ಪೆಕ್ಟಿವ್”.
ಡಾ. ಕೆ.ವಿ.ನೇತ್ರಾವತಿಯವರ “ಕೋಲಾರದ ಸಾಂಸ್ಕೃತಿಕ ಅಧ್ಯಯನ”ದ ಟಿಪ್ಪಣಿಗಳು.
ಸಾವು ಮತ್ತು ತಿಥಿಗೆ ಸಂಬಂಧಿಸಿದ ಆಚರಣೆಗಳು
ಮೃತರಾದವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವುದರ ಜೊತೆಗೆ ಮರಣಾನಂತರವೂ ಅವರಿಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹಲವಾರು ಆಚರಣೆಗಳನ್ನು ತೀರಿಕೊಂಡಾಗ ಮತ್ತು ತೀರಿಕೊಂಡ ನಂತರದ ದಿನಗಳಲ್ಲಿ ಆಚರಿಸಲಾಗುತ್ತದೆ. ಮಾದಿಗರಲ್ಲಿ ಹೆಣವನ್ನು ಸುಡುವುದಿಲ್ಲ; ಮಣ್ಣುಮಾಡುವ ಸಂಪ್ರದಾಯವಿದೆ. ಯಾರಾದರೂ ತೀರಿಕೊಂಡಾಗ ಗಳಿಗೆ ನೋಡುತ್ತಾರೆ. ಹೆಣದ ಹಿಂದೆ ಸೇರಿನ ಮೇಲೆ ದೀಪವಿಡುತ್ತಾರೆ. ಮನೆಯ ಮುಂದೆ ಸೌದೆಯ ಸಣ್ಣದ ಚೂರುಗಳನ್ನಿಟ್ಟು ಬೆಂಕಿ ಹಾಕುತ್ತಾರೆ. ಮನೆಯ ಮುಂದೆ ಹಾಕಿದ ಬೆಂಕಿಯಲ್ಲಿ ಹೊಸಮಡಕೆಯಲ್ಲಿ ನೀರು, ಅಕ್ಕಿ ಹಾಕಿ ಬೇಯಿಸುವುದನ್ನು ಕೂಳು ಎನ್ನುತ್ತಾರೆ.
ಮಣ್ಣು ಮಾಡಲು ಹೆಣವನ್ನು (ಪುರುಷನಾಗಿರಲಿ, ಸ್ತ್ರೀಯಾಗಿರಲಿ)ಒಯ್ಯುವ ಮೊದಲು ಚೆನ್ನಾಗಿ ಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆ ಹಾಕಿ, ಅರಶಿಣ-ಕುಂಕುಮ, ವಿಭೂತಿ ಹಚ್ಚುತ್ತಾರೆ. ದೊಡ್ಡವರು ಸೇರಿ ಒಟ್ಟು ಹತ್ತು ಜನ ಹೋಗಿ ಚಟ್ಟಕ್ಕೆ ಬೇಕಾದ ಬೊಂಬು, ಹೊಸ ಬಟ್ಟೆ, ಎಲೆ ಅಡಿಕೆ, ಕಳ್ಳೆಪುರಿ, ಕೂಳು ಬೇಯಿಸುವ ಮಡಕೆ ಮತ್ತು ಅಕ್ಕಿಯನ್ನು ತರುತ್ತಾರೆ.ಬೊಂಬಿನಲ್ಲಿ ಬಹಳ ಸುಂದರವಾಗಿ ಚಟ್ಟಕಟ್ಟಿ ಹೂವಿನ ಅಲಂಕಾರ ಮಾಡುತ್ತಾರೆ.ಭತ್ತದ ಹುಲ್ಲು, ಬಿದಿರು ಬೊಂಬುಗಳನ್ನು ಚಟ್ಟ ಕಟ್ಟಲು ಬಳಸುತ್ತಾರೆ.
ಚಟ್ಟದಲ್ಲಿ ಸತ್ತ ವ್ಯಕ್ತಿಯನ್ನು ಮಲಗಿಸುತ್ತಾರೆ. ತೀರಿಹೋದ ವ್ಯಕ್ತಿಯ ಸಂಬಂಧಿಕರಲ್ಲೇ ನಾಲ್ವರು ಚಟ್ಟವನ್ನು ಹೊತ್ತುಕೊಂಡು ಸ್ಮಶಾನಕ್ಕೆ ಒಯ್ಯುತ್ತಾರೆ. ಸ್ಮಶಾನಕ್ಕೆ ಒಯ್ಯುವಾಗ ಹೆಣದ ಮುಂದೆ ಸತ್ತ ವ್ಯಕ್ತಿಯ ಹಿರಿಯ ಮಗನು ಕೂಳಿನ ಮಡಕೆಯನ್ನು ಹಿಡಿದುಕೊಂಡು ಹೋಗಬೇಕು.ಅರ್ಧದಾರಿಯಲ್ಲಿ ಹೆಣವನ್ನು ಇಳಿಸಿ, ಪೂಜೆ ಮಾಡಿ ಕೂಳಿನ ಮಡಕೆಯನ್ನು ಒಡೆದು ಹೆಣವನ್ನು ಸ್ಮಶಾನಕ್ಕೆ ಒಯ್ಯುತ್ತಾರೆ.
ಅಲ್ಲಿ ತೋಡಿದ ಗುಂಡಿಯೊಳಗೆ ಗಳಿಗೆ ನೋಡಿ ಮಣ್ಣುಮಾಡುತ್ತಾರೆ. ಮಣ್ಣು ತೋಡಿ ಗುಂಡಿ ಅಗೆಯುವ ಕೆಲಸವನ್ನು ಸತ್ತವರ ಮನೆಯವರಲ್ಲದೆ ಅವರದೇ ಜಾತಿಯ ಬೇರೆಯವರು ಮಾಡುತ್ತಾರೆ. ಗುಂಡಿ ತೊಡುವವರಿಗೆ ಹಣ ನೀಡಬೇಕು. ತೀರಿಹೋದ ವ್ಯಕ್ತಿ ಇಷ್ಟಪಡುತ್ತಿದ್ದರೆ ಎಲೆ-ಅಡಿಕೆ-ಸುಣ್ಣವನ್ನು ಕುಟ್ಟಿ ಹೆಣದ ಬಾಯಿಗೆ ಇಡುತ್ತಾರೆ. ಹೂತು ಬರುವಾಗ ಹಸು ಸಗಣಿ ತುಳಿದುಕೊಂಡು ಬಂದು ದೀಪ ನೋಡುತ್ತಾರೆ.
ಮಣ್ಣು ಮಾಡಿದ ಗುಂಡಿಯ ಹತ್ತಿರ ಮೂರನೇ ದಿವಸ ಹಾಲು-ತುಪ್ಪ ಹಾಕಿ ಎಡೆ ಇಟ್ಟು ಸ್ಮಶಾನದಲ್ಲಿ ಪೂಜೆ ಮಾಡುತ್ತಾರೆ. ತೀರಿಹೋದ ವ್ಯಕ್ತಿಯ ಹಿರಿಯ ಮಗನು ತಲೆ ಬೋಳಿಸಿಕೊಳ್ಳಬೇಕು. ಹದಿನಾರನೆಯ ದಿವಸ ಸುಣ್ಣಬಣ್ಣ ಮಾಡಿ, ಗಂಗೆಯನ್ನು ತಂದು ಪೂಜೆಮಾಡಿ, ದಾಸಯ್ಯನನ್ನು ಕರೆಸಿ ಸೂತಕ ತೆಗೆಸುತ್ತಾರೆ. ಮಾಂಸದ ಅಡುಗೆ ಮಾಡಿಸಿ ಊಟಹಾಕಿಸುತ್ತಾರೆ. ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ. ತಿಥಿಯಲ್ಲಿ ಸತ್ತ ವ್ಯಕ್ತಿಯು ಇಷ್ಟಪಡುತ್ತಿದ್ದ ತಿನಿಸುಗಳ ಜೊತೆಗೆ ಬೀಡಿ, ಬೆಂಕಿಪೊಟ್ಟಣ, ತಂಬಾಕು, ಹೆಂಡವನ್ನು ಎಡೆ ಇರಿಸುತ್ತಾರೆ. ಕೆಲವರು ಹನ್ನೊಂದನೆಯ ದಿನ ಸೂತಕ ತೆಗೆದು ತಿಥಿ ಮಾಡುತ್ತಾರೆ.
ತೀರಿಕೊಂಡ ವ್ಯಕ್ತಿ ಗಂಡಸಾಗಿದ್ದರೆ ಆತನ ಹೆಂಡತಿಗೆ ತವರು ಮನೆಯವರು ಬಳೆ, ಅರಶಿಣ-ಕುಂಕುಮ, ಹೂ ಮತ್ತು ಸೀರೆಯನ್ನು ತಂದುಕೊಡುತ್ತಾರೆ. ಹೊಸ ಸೀರೆ ಉಡಿಸಿ, ಕುಂಕುಮ-ಅರಿಶಣವಿಟ್ಟು, ಮಡಿಲಕ್ಕಿಕಟ್ಟಿ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಶವವನ್ನು ಗುಂಡಿಗೆ ಹಾಕಿದಮೇಲೆ ಹೆಂಡತಿಯ ಐದು ಬಳೆ ಮತ್ತು ಮಡಿಲಕ್ಕಿಯನ್ನು ಗುಂಡಿಗೆ ಹಾಕುತ್ತಾರೆ. ಹದಿನಾರನೆಯ ದಿನದವರೆಗೂ ಹೆಂಡತಿಯು ಬಳೆಯನ್ನು ತೊಡುತ್ತಾಳೆ. ಹದಿನಾರನೆಯ ದಿನ ಹೊಸ ಸೀರೆ ಉಡಿಸಿ, ಕೈಯಲ್ಲಿರುವ ಬಳೆಗಳನ್ನು ಗಂಗೆಗೆ (ನೀರಿಗೆ) ಹಾಕಿಸುತ್ತಾರೆ; ಒಡೆಸುವುದಿಲ್ಲ. ಮಾಂಗಲ್ಯ ಮತ್ತು ಕುಂಕುಮ ತೆಗೆಸುತ್ತಾರೆ. ವಿಧವೆಯರನ್ನು ಅಮಂಗಳವೆಂದು ಭಾವಿಸುವುದಿಲ್ಲ. ಮದುವೆಯ ಕೆಲವು ಆಚರಣೆಯನ್ನು ಆಕೆಯ ಕೈಲೇ ಮಾಡಿಸುತ್ತಾರೆ.
ಕ್ರೆöÊಸ್ತ ಧರ್ಮಕ್ಕೆ ಮತಾಂತರವಾಗಿರುವವರು ಸಹ ಸತ್ತ ಮೂರನೇ ದಿನ ಹಾಲು-ತುಪ್ಪ ಮಾಡಿದರೆ, ಹನ್ನೊಂದನೆಯ ದಿನ ಪಾದ್ರಿಯನ್ನು ಮನೆಗೆ ಕರೆಸಿ ಪ್ರಾರ್ಥನೆ ಮಾಡಿ ಮಣ್ಣು ಮಾಡುತ್ತಾರೆ. ಗಂಡ ತೀರಿಕೊಂಡರೆ ಹೆಂಡತಿಯ ತೌರು ಮನೆಯವರು ಬಳೆ, ಅರಿಶಿಣ-ಕುಂಕುಮ, ಹೂ ತರುವ ಆಚರಣೆಯನ್ನೂ ಮಾಡುತ್ತಾರೆ. ಹೆಣಕ್ಕೆ ಸ್ನಾನ ಮಾಡಿಸಿದ ಮೇಲೆ ಆತ ಎಲೆ-ಅಡಿಕೆ ತಿನ್ನುತ್ತಿದ್ದರೆ, ಎಲೆ-ಅಡಿಕೆಯನ್ನು ಕುಟ್ಟಿ ಅವರ ಬಾಯಿಗೆ ಇರಿಸುತ್ತಾರೆ. ಬಿಳಿಯ ಬಟ್ಟೆಯನ್ನು ಬಾಕ್ಸ್ನ ಸುತ್ತ ಇರಿಸುತ್ತಾರೆ. ಹೆಣವನ್ನು ಬಾಕ್ಸಿನಲ್ಲಿಟ್ಟು ಬಾಕ್ಸಿನ ಸಮೇತ ಗುಂಡಿಯಲ್ಲಿಟ್ಟು ಮುಚ್ಚುತ್ತಾರೆ. ನಲವತ್ತೆರಡನೇ ದಿನ ತೀರಿಕೊಂಡ ವ್ಯಕ್ತಿಯ ಪೋಟೋ ಇಟ್ಟು ಪಾದ್ರಿಯನ್ನು ಕರೆಯಿಸಿ ಪ್ರೇಯರ್ ಮಾಡಿಸಿ, ಬಂದ ನೆಂಟರಿಗೆಲ್ಲಾ ಸಿಹಿ ಮತ್ತು ಖಾರದ ಊಟ ಹಾಕಿಸುತ್ತಾರೆ.
ಬಳ್ಳಾರಿಯಲ್ಲಿ ನಾಮಧಾರಿ ಸಮುದಾಯದಲ್ಲಿ ಸಾವಾಗಿರುವ ಮನೆಯಲ್ಲಿ ಅಡುಗೆ ಮಾಡಿ, ಸತ್ತ ವ್ಯಕ್ತಿಯ ಕೈಯನ್ನು ಮುಟ್ಟಿಸಿ, ಉಂಡ ಮೇಲೆ ಹೆಣವನ್ನು ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಾರೆ. ಸಾವಾದ ಐದನೆಯ ದಿನದಲ್ಲಿ ಕುರಿ ಕಡಿದು ಮಾಂಸದ ಅಡುಗೆ ಮಾಡಿ ರಕ್ತ ಸಂಬಂಧಿಗಳನ್ನು ಮಾತ್ರ ಕರೆದು ಊಟಹಾಕಿಸುತ್ತಾರೆ. ಹನ್ನೊಂದನೇ ದಿನದಲ್ಲಿ ಸತ್ತುಹೋದ ವ್ಯಕ್ತಿಗೆ ಇಷ್ಟವಾದ ಅಡುಗೆಯನ್ನು ಮಾಡಿ, ಕುರಿ ಕಡಿದು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಆ ದಿವಸ ಸ್ಮಶಾನದಲ್ಲಿ ರಕ್ತಸಂಬಂಧಿಕರೆಲ್ಲಾ ಸೇರಿ ಅಯ್ನೋರು ಗುಡ್ಡೆ ಮಾಡಿ ಅದಕ್ಕೆ ಪೂಜೆ ಮಾಡಿ ಅದರ ಮೇಲೆ ಕೂತು ಊಟಮಾಡುತ್ತಾರೆ.ಈ ಆಚರಣೆಯನ್ನು ಕಡ್ಡಾಯವಾಗಿ ರಕ್ತ ಸಂಬಂಧಿಗಳು ಮಾತ್ರ ಮಾಡುತ್ತಾರೆ.
ಕೆಲವು ಕಡೆ ತಿಥಿಯ ದಿನ ಮೇಕೆ ಕಡಿಯುತ್ತಾರೆ. ಕಡಿದಾಗ ಹೊರಬಂದು ಹೆಪ್ಪುಗಟ್ಟುವ ರಕ್ತವನ್ನು ಹುರಿದು ಮನೆಯವರೆಲ್ಲಾ ತಿನ್ನುತ್ತಾರೆ. ನೆಂಟರಿಗೆಲ್ಲಾ ಮೊದಲನೆ ದಿನ ಸಿಹಿ ಊಟವನ್ನು ಎರಡನೇ ದಿನ ಖಾರದ ಊಟ ಹಾಕಿಸುತ್ತಾರೆ. ಸಾವಾಗಿ ಒಂದು ತಿಂಗಳವರೆಗೂ ಯಾವ ದೇವರಿಗೂ ಪೂಜೆ ಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗ ಜಾತಿಯವರು ಸಾವಾದ ಐದನೇ ದಿನ ‘ದಿನ’ ಮಾಡಿ ಸತ್ತವರ ವಯಸ್ಸಿನಷ್ಟೇ ಇರುವವರನ್ನು ಕರೆದು ಅವರಿಗೆ ಊಟ ಹಾಕಿಸುತ್ತಾರೆ.
ಸಾವಿನ ಆಚರಣೆಯು ವ್ಯಕ್ತಿಯನ್ನು ಘನತೆಯಿಂದ ಬೀಳ್ಕೊಡುವುದಾಗಿದೆ. ಹೆಣಕ್ಕೆ ಅಚ್ಚುಕಟ್ಟಾಗಿ ಸ್ನಾನಮಾಡಿಸುತ್ತಾರೆ. ಬಿದಿರು ಬೊಂಬುಗಳಿಂದ ಚಟ್ಟವನ್ನು ಕಟ್ಟಿ ಹೂಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸಾವಿನ ಸಂದರ್ಭವನ್ನು ಸೂತಕವಾಗಿ ಪರಿಗಣಿಸುತ್ತಾರಾದರೂ ಸ್ಪರ್ಶವನ್ನು ಮೈಲಿಗೆ ಎಂದು ಪರಿಗಣಿಸುವುದಿಲ್ಲ. ವೈದಿಕರಂತೆ ತಿಥಿಯ ಆಚರಣೆಗೆಂದೇ ನಿರ್ದಿಷ್ಟವಾದ ಅಡುಗೆಗಳನ್ನು ಮಾಡದೆ ತೀರಿಹೋದ ವ್ಯಕ್ತಿಯು ಇಷ್ಟಪಡುವ ಅಡುಗೆಗಳನ್ನು ಇಷ್ಟಪಡುತ್ತಿದ್ದ ವಸ್ತುಗಳನ್ನು(ಹೆಂಡ, ಬೀಡಿಯೂ ಸೇರಿ) ಎಡೆಗೆ ಇಡುತ್ತಾರೆ. ವೈದಿಕರಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುವುದು ನಿಷಿದ್ಧ. ಮಾದಿಗ ಜಾತಿಯವರೂ ಸೇರಿದಂತೆ ಅನೇಕ ಅವೈದಿಕ ಜಾತಿಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುತ್ತಾರೆ; ಹೆಣವನ್ನು ಮಣ್ಣುಮಾಡುವ ಎಲ್ಲ ಕ್ರಿಯೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಆದರೆ ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ.
ಹಬ್ಬಗಳು – ಜಾತ್ರೆಗಳು
ಆಚರಿಸುವ ಹಬ್ಬಗಳು
ಸಂಕ್ರಾಂತಿ, ದಸರಾ, ಅಮವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ,ನಾಗರಪಂಚಮಿ, ಎಳ್ಳಮವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಗುಡ್ ಫ್ರೆöÊಡೆ, ಕ್ರಿಸ್ಮಸ್, ಹೊಸವರ್ಷವನ್ನು, ಮುಸ್ಲಿಮರ ಪರ್ಲ ಹಬ್ಬ ಮತ್ತು ಮೊಹರಂ ಹಬ್ಬ ಆಚರಿಸುತ್ತಾರೆ. ಮೊಹರಂನಂದು ಗೂಗುಡುಗೆ ಹೋಗಿ ಅಲ್ಲಿನ ದೇವರು ಕುಳ್ಳಾಯಿಸ್ವಾಮಿಯನ್ನು ಹೊತ್ತುಕೊಂಡು ಬೆಂಕಿ ತುಳಿಯುತ್ತಾರೆ.
ತೀರಿಹೋಗಿರುವ ಹಿರಿಯರಿಗೆ ಮತ್ತು ಪೂರ್ವಿಕರಿಗೆ ಇಷ್ಟವಾದ ಅಡುಗೆ ಮಾಡಿ ಎಡೆ ಹಾಕಿ ಪೂಜಿಸುವುದನ್ನು ಹಿರಿಯರ ಹಬ್ಬ ಅಥವಾ ಪಿತೃಪಕ್ಷ ಎಂದು ಆಚರಿಸುತ್ತಾರೆ. ಇಟ್ಟ ಎಡೆಯನ್ನು ಬಂದು ಮುಟ್ಟಿವ ಕಾಗೆಗಳನ್ನು ಸತ್ತ ಹಿರಿಯರು ಎಂದು ನಂಬುತ್ತಾರೆ. ಕೆಲವೆಡೆ ದಸರಾದಲ್ಲಿ ಮಾಡುವ ಆಯುಧ ಪೂಜೆಯಲ್ಲಿ ಹಿರೀಕರಿಗೆ ಉಡುದಾರ, ಪುಟುಗೂಸಿ, ಬೀಡಿ, ಸಿಗರೇಟು, ಸಾರಾಯಿ, ಕಾಫಿ, ಬನ್ನು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಕೆಲವರು ಮಹಾಲಯ ಅಮಾವಾಸ್ಯೆಯಂದು ತೀರಿಕೊಂಡವರಿಗೆ ಎಡೆ ಇಟ್ಟು ಪೂಜಿಸಿದರೆ, ಕೆಲವರು ಸಂಕಾಂ್ರತಿ ಹಬ್ಬದಲ್ಲಿ ತೀರಿಹೋದವರಿಗೆ ಎಡೆ ಇಡುತ್ತಾರೆ.
ಕೆಲವರ ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಮಾಡಲು ಬೇವು ತರಲು ಹೋದವರು ಬರಲಿಲ್ಲ ಎಂಬ ಕಾರಣಕ್ಕೆ ಇವತ್ತಿಗೂ ಹಬ್ಬಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗರು ಸಂಕ್ರಾಂತಿ, ದೀಪಾವಳಿ, ದಸರಾ ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ನಾಗ ಪಂಚಮಿ, ಯುಗಾದಿ, ಎಳ್ಳಮಾವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆಗಳನ್ನು ಆಚರಿಸುತ್ತಾರೆ. ಅಲ್ಲದೆ ದಲಿತ ಚಳುವಳಿಯ ಪ್ರಭಾವದಿಂದಾಗಿ ಅಂಬೇಡ್ಕರ್ ದಿನಾಚರಣೆಯನ್ನು ವಿಜೃಂಭಣೆಯಿಂದ ಜಾತ್ರೆ/ಪರಿಷೆಯಷ್ಟೇ ಸಂಭ್ರಮದಿಂದ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುತ್ತಾರೆ. ಹೊಸಬಟ್ಟೆ ತೊಟ್ಟು, ಸಿಹಿ ಅಡುಗೆ ಮಾಡಿ ಉಣ್ಣುತ್ತಾರೆ. ಮತ್ತು ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರಿನಲ್ಲಿ ಮಾಮೂಲಿ ದೊಡ್ಡ ಹಬ್ಬಗಳಲ್ಲದೆ ಸಂಕಷ್ಟಿ, ರಾಮನವಮಿ, ಕಾಮನ ಹಬ್ಬಗಳನ್ನು ಆಚರಿಸುತ್ತಾರೆ. ಚಿತ್ರದುರ್ಗದಲ್ಲಿ ಕಾರ್ತೀಕದಲ್ಲಿ ನೆಂಟರನ್ನು ಕರೆದು ಸಂಭ್ರಮದಿಂದ ಆಚರಿಸಲಾಗುತ್ತದೆ. ಮತ್ತು ಬಸವ ಜಯಂತಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ದಸರಾ ಹಬ್ಬದಲ್ಲಿ ಬನ್ನಿಪೂಜೆ ಮಾಡುತ್ತಾರೆ. ಹೋಳಿಗೆಮ್ಮನ ಹಬ್ಬ (ಅಜ್ಜಿ ಹಬ್ಬ) ಇಲ್ಲಿನ ವಿಶೇಷವಾಗಿದೆ. ಅಜ್ಜಿಹಬ್ಬವೆಂದೂ ಕರೆಯುವ ಹೋಳಿಗೆಮ್ಮನ ಹಬ್ಬವನ್ನು ಮಾಡಿದರೆ ಮಳೆ ಬರುತ್ತೆ ಎಂಬ ನಂಬಿಕೆಯಿದೆ. ಈ ದೇವತೆಯು ಒಂದು ರೀತಿ ಮಾರಮ್ಮನ ಥÀರವೆಂದು ಹೇಳಿದರು. ಎಲ್ಲರ ಮನೆಯಲ್ಲಿ ಹೋಳಿಗೆ ಮಾಡಿ, ಎಲ್ಲರ ಮನೆಯಿಂದ ಎಡೆತೆಗೆದುಕೊಂಡು ಊರಾಚೆಯ ಮರದ ಬಳಿಗೆ ಹೋಗಿ ಇಟ್ಟುಬರುತ್ತಾರೆ.
ಮೈಲಾರಲಿಂಗನ ಜಾತ್ರೆಗೆ ಹೋಳಿಗೆ, ಕಡುಬು, ಅನ್ನ ಸಾರು, ಪಲ್ಯೆ, ಕೋಸಂಬರಿ, ವಡೆ, ಹಪ್ಪಳಮಾಡಿ ದೇವರಿಗೆ ಎಡೆ ಹಾಕುತ್ತಾರೆ.ಇನ್ನೊಂದು ಕಂಚಿನ ದೋಣಿಲಿ ಬಾಳೆಹಣ್ಣು, ಸಕ್ಕರೆ, ತುಪ್ಪ, ಹಾಲು, ಮೊಸರು, ಇಟ್ಟು ಪೂಜೆ ಮಾಡುತ್ತಾರೆ. ಮುದ್ರೆ ಮಾಡಿಸಿಕೊಂಡ ಗ್ವಾರಪ್ಪಗಳು ತ್ರಿಶೂಲ ತೆಗೆದುಕೊಂಡು ಮೂಸಿ ಮುಕ್ಕಾಗಿದೆಯೇ(ಎಂಜಲು)ಅಂತ ನೋಡಿ, ಊಟ ಮಾಡುತ್ತಾರೆ. ಅವರು ಹೋದ ನಂತರ ಮನೆಯವರು ಊಟ ಮಾಡುತ್ತಾರೆ.
ಹೊಸ ವರ್ಷವಾಗಿ ಆಚರಿಸುವ ಯುಗಾದಿ ಹಬ್ಬ ಎಲ್ಲೆಡೆ ಆಚರಿಸುವ ದೊಡ್ಡ ಹಬ್ಬವಾಗಿದೆ. ಅರಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಪೂಜೆ ಮಾಡಿದ ಮೇಲೆ ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸುತ್ತಾರೆ. ನಿಸರ್ಗದಂತೆ ನಮ್ಮ ಬದುಕುಗಳು ಕೂಡ ಹಳೆಯದನ್ನೆಲ್ಲ ಕಳೆದು ಹೊಸವರ್ಷಕ್ಕೆಸಿಹಿ-ಕಹಿಗಳನ್ನು ಸಮವಾಗಿ ಸ್ವೀಕರಿಸಿಕಾಲಿಡುವುದಾಗಿದೆ. ಹೊಸವರ್ಷ ಆರಂಭವಾದ ಮರುದಿನ ಮುಂದೆ ಯಾವ ತೊಡಕು ಬಾರದಂತೆ ಮಾಡುವ ಆಚರಣೆಯೇ ಹೊಸ ತಡುಕು. ಆ ದಿನ ಮಾಂಸದಡುಗೆ ಮಾಡಿ ನೆಂಟರನ್ನು ಕರೆದು ಉಣಬಡಿಸುತ್ತಾರೆ.
ಸಫಾಯಿ ಕರ್ಮಚಾರಿಗಳ ಸಂಸ್ಕöÈತಿಯಲ್ಲಿ ಅನ್ಯಧರ್ಮದ ದೇವರು, ಸಂತರುಗಳಿಗೆ ಶ್ರದ್ಧೆಯಿಂದ ನಡೆದುಕೊಳ್ಳುವುದು ಒಳಗೊಳ್ಳುವ ಪರಂಪರೆಯ ಮತ್ತು ಬಹುತ್ವದ ಸಂಕೇತವೇ ಆಗಿದೆಯಲ್ಲದೇ ಭಾರತದ ಸಂವಿಧಾನದ ಧರ್ಮ ಸಹಿಷ್ಣುತೆಯೇ ಆಗಿದೆ.
ಹಲವೆಡೆ ಸಫಾಯಿ ಕರ್ಮಚಾರಿಗಳು ಮೊಹರಂನಂತಹ ಮುಸ್ಲಿಂ ಹಬ್ಬಗಳನ್ನು ಆಚರಿಸುತ್ತಾರಲ್ಲದೆ ಮುಸ್ಲಿಂ ಸಂತರುಗಳಿಗೆ ನಡೆದುಕೊಳ್ಳುವುದು ವಿಶೇಷವಾದುದು. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮಾಂಸ ದಾನ ಮಾಡುವುದರಲ್ಲಿ ಅಡುಗೆ ಮಾಡಿ ಉಣ್ಣುತ್ತಾರೆ. ಅದು ಯಮನೂರಿನ ಮುಸ್ಲಿಂ ಸಂತನೊಬ್ಬನ ಹೆಸರು. ವಿಜಯಪುರದ ತೊರವಿಯಲ್ಲಿ ಲಾಲ್ ಸಾಬ್ ಎಂಬ ಮುಸ್ಲಿಂ ಸಂತನೊಬ್ಬನ ಜಾತ್ರೆಯನ್ನು ನಡೆಸುವವರು ಅಲ್ಲಿನ ಪರಿಶಿಷ್ಟ ಜಾತಿಯವರಾದ ಮಾದಿಗರು.
ಬಳ್ಳಾರಿಯಲ್ಲಿ ಮಾದಿಗರ ಹಲವಾರು ಮನೆಗಳಲ್ಲಿ, ಮನೆಯ ಆವರಣದಲ್ಲಿ ಮುಸ್ಲಿಂ ದೇವರಾದ ಪೀರ್ಲ ದೇವರನ್ನು ಪೂಜಿಸುತ್ತಾರೆ. ಅವರ ದೇವರುಗಳು ವಾಸ್ತವ ಲೋಕದಲ್ಲಿ ಅವರ ಕಷ್ಟ ಸುಖ ಕೇಳಿಸಿಕೊಳ್ಳುವಷ್ಟು ಹತ್ತಿರದವರಾಗಿದ್ದಾರೆ.
ಒಟ್ಟೊಟ್ಟಿಗೆ ಕ್ರಿಸ್ತನಿಗೂ, ಮೇರಿಯಮ್ಮನಿಗೂ, ಪೀರ್ಲನಿಗೂ, ಗಂಗಮ್ಮನಿಗೂ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.ಗಂಗಾವತಿ, ಬಳ್ಳಾರಿ ಇನ್ನೂ ಹಲವೆಡೆ ಇರುವ ಸಫಾಯಿ ಕರ್ಮಚಾರಿಗಳು ಇಟ್ಟುಕೊಳ್ಳುವ ಹೆಸರುಗಳು ಧಾರ್ಮಿಕ ಭಾವೈಕ್ಯತೆಯೇ ಆಗಿದೆ.ಪೀರ್ಲಪ್ಪ-ಪೀರ್ಲಮ್ಮ, ಹುಸೇನಪ್ಪ-ಹುಸೇನಮ್ಮ, ಸಾಬಪ್ಪ-ಸಾಬಮ್ಮ,ಸಾರಮ್ಮ- ಸಾರಪ್ಪ, ಮೇರಿಯಮ್ಮ-ಮೇರಿಯಪ್ಪ, ಹುಚ್ಚಮ್ಮ-ಹುಚ್ಚಪ್ಪ, ಸಂಕ್ಲಮ್ಮ-ಸಂಕ್ಲಪ್ಪ, ಯಮನೂರಪ್ಪ-ಯಮನೂರಮ್ಮ (ಯಮನೂರಿನಲ್ಲೆ ನೆಲೆಸಿದ್ದ ಮುಸ್ಲಿಂ ಸಂತ) ಹುಸೇನ್ ಬಸವ, ಅಲೈಕ್ಯ, ಮೆರೂನಾ ಹೀಗೆ…
ಕಾಯಿಲೆ ಬಂದಾಗ ಕಣಿಕೇಳಿ ಮುನೇಶ್ವರನಿಗೆ ಪಚ್ಚೆ ಇಡುವಷ್ಟೇ ಶಿಸ್ತಿನಿಂದ, ದರ್ಗಾಗೂ ಹೋಗಿ ಸಕ್ಕರೆ ಮಂತ್ರಿಸಿಕೊಂಡು ಬಂದು ತಿನ್ನುತ್ತಾರೆ. ದರ್ಗಾದ ಸಾಬರಿಂದ ತಾಯತವನ್ನು ಕಟ್ಟಿಸಿಕೊಳ್ಳುತ್ತಾರೆ.
ಹಬ್ಬಗಳು ಭಕ್ತಿ, ಶ್ರದ್ಧೆಗೆ ಕಾರಣವಾಗಿರುವಂತೆಯೇ ನಿತ್ಯದ ಜಂಜಾಟವನ್ನು ಮೀರಿಕೊಂಡು ಸಂಭ್ರಮಿಸುವುದಕ್ಕೂ ಕಾರಣವಾಗಿವೆ. ಕೆಲವರು ನೆಂಟರಿಷ್ಟರನ್ನು ಕರೆಸಿ ವಿಶೇಷ ಅಡುಗೆಗಳನ್ನು ಮಾಡಿ ಉಂಡು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರೆ, ಇನ್ನು ಕೆಲವರ ಮನೆಯಲ್ಲಿ ದೇವರಿಗೊಂದು ಕಡ್ಡಿ ಹಚ್ಚಿ ಇರುವುದನ್ನೇ ಮಾಡಿ ಉಣ್ಣುವುದರೊಂದಿಗೆ ಸಂಭ್ರಮ ಮುಗಿಯುತ್ತದೆ. ಬಡತನವು ಹಬ್ಬವೆಂಬ ಸಂಭ್ರಮಕ್ಕೆ ಧಕ್ಕೆ ತರದು ಎಂಬುದಕ್ಕೆ ಈ ಪ್ರತೀತಿ ಸಾಕ್ಷಿಯಾಗಿದೆ.
ಒಮ್ಮೆ ಬಡವರಾದ ಗಂಗೆ-ಗೌರಿಯರು ದೀವಳಿಗೆ (ಶಿಷ್ಟ ಭಾಷೆಯಲ್ಲಿ ದೀಪಾವಳಿ) ಮಾಡಲು ಸಾಧ್ಯವಾಗದೇ ಇದ್ದುದರಿಂದ ತಿಪ್ಪೆ ಮೇಲಿನ ಬೆರಣಿಯನ್ನು ತಂದು ಅದನ್ನೇ ಕಜ್ಜಾಯದಂತೆ (ಕಜ್ಜಾಯ ದೀಪಾವಳಿಗೆ ಮಾಡುವ ವಿಶೇಷ ತಿನಿಸು)ಇಟ್ಟು, ಆಲದ ಮರದ ಎಲೆಯನ್ನು ವೀಳ್ಯವಾಗಿ, ಆಲದ ಮರದ ಕಾಯಿಯನ್ನು ತೆಂಗಿನಕಾಯಿಯಾಗಿ, ರಾಗಿತೆನೆಯನ್ನು ಊದುಬತ್ತಿಯಾಗಿ, ಅಲದ ಮರದ ತೊಗಟೆಯನ್ನು ನೋಮುದಾರವಾಗಿ (ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಅರಿಶಿನ ಹಚ್ಚಿದ ದಾರ) ಇರಿಸಿ ದೀವಳಿಗೆ ಮಾಡಿದರು ಎಂಬುದು ಕಾಲದಿಂದಲೂ ಬಂದಿರುವ ಕತೆ. ಈ ಕತೆ ಅವರ ಕಡುಬಡತನದ ವಾಸ್ತವವನ್ನು ಮನಗಾಣಿಸುವುದರ ಜೊತೆಯಲ್ಲೇ ಕಷ್ಟದ ಪರಿಸ್ಥಿತಿಯನ್ನು ಮೀರಿಕೊಳ್ಳಲು ದೇವಿಯರಿಗೇ ಬಡತನ ತಪ್ಪಿದ್ದಲ್ಲವೆಂದು ಭಾವಿಸಿಕೊಂಡು ಕಷ್ಟವನ್ನು ಸವಾಲಿನಂತೆ ಸ್ವೀಕರಿಸುವ ಸಂಭ್ರಮಿಸುವ ಚೈತನ್ಯವನ್ನೂ ಮನಗಾಣಿಸುತ್ತದೆ.
ಜಾತ್ರೆಗಳು
ಜಾತ್ರೆಗಳನ್ನು ಊರಬ್ಬಗಳಂತೆ ಆಚರಿಸಲಾಗುತ್ತದೆ. ಊರಿನ ಸಕಲ ಜಾತಿಗಳೂ ಪಾಲ್ಗೊಳ್ಳುವ ಜಾತ್ರೆಯಲ್ಲಿ ಎಲ್ಲ ಜಾತಿಯವರಿಗೂ ಒಂದಲ್ಲ ಒಂದು ಪಾತ್ರವಿರುತ್ತದೆ. ಕೆಲವೆಡೆ ಜಾತ್ರೆಯಲ್ಲಿ ನಡೆಯುವ ದೇವರ ಉತ್ಸವ/ಮೆರವಣಿಗೆಯಲ್ಲಿ ಪರಿಶಿಷ್ಟ ಜಾತಿಯವರು ದೇವರ ಮುಂದೆ ಗರುಡುಗಂಭ ಹಿಡಿದು ನಿಲ್ಲುವುದು, ಶಹನಾಯಿ ಊದುವ ಪರಿಪಾಠವಿದೆ. ಅನಂತಪುರದ ಒಂದು ದೇವರಿಗೆ ಇಲ್ಲಿನ ಪರಿಶಿಷ್ಟ ಜನರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಆ ಊರಿನಲ್ಲಿ ನಡೆಯುವ ಜಾತ್ರೆಯಂದು ಅಲ್ಲಿನ ಮಾದಿಗ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಕೈಲಿ ದೀಪ ಹಿಡಿದು ದೇವರ ಮುಂದೆ ಸಾಗುತ್ತಾನೆ. ಆತ ಸಾಗುವ ದಾರಿಯಲ್ಲಿ ನಡೆಮುಡಿ ಹಾಸಿ ಕರೆದುಕೊಳ್ಳುವುದಲ್ಲದೆ, ಕೈಮುಗಿದು ವಂದಿಸುತ್ತಾರೆ. ಆ ದೀಪವನ್ನು ಮೆರವಣಿಗೆಯ ನಂತರ ದೇವಸ್ಥಾನದ ಮುಂದೆ ಇರುವ ಕಂಭದ ಮೇಲೆ ಇರಿಸಲಾಗುತ್ತದೆ.
ಬೆಂಗಳೂರಿನ ಅಣ್ಣಮ್ಮ ಜಾತ್ರೆ, ಬಳ್ಳಾರಿ ದುರ್ಗಮ್ಮನ ಜಾತ್ರೆ, ಕೋಟೆ ಮಲ್ಲೇಶ್ವರ ಜಾತ್ರೆ, ಸಿಡಿಬಂಡೆ ಜಾತ್ರೆ, ಪೆನ್ನೋಬಳೇಶಸ್ವಾಮಿ ಜಾತ್ರೆ, ವರಬಸಪ್ಪ ಜಾತ್ರೆ, ಗೂಗುಡು ಕುಳ್ಳಾಯಿಸ್ವಾಮಿ ಜಾತ್ರೆ, ಹುಲಿಗೆಮ್ಮ ಜಾತ್ರೆ, ಆಂಧ್ರದ ನರಸಿಂಹಸ್ವಾಮಿ ಜಾತ್ರೆ, ಮುತ್ಯಾಲಮ್ಮನ ಜಾತ್ರೆ, ಹಿಂದೂಪುರ ಚೌಡಮ್ಮನ ಪರಿಷೆ, ಸಿಕೆಪಲ್ಲಿಯಲ್ಲಿಯ ಓಬಳೇಶಸ್ವಾಮಿ ಜಾತ್ರೆ, ಬೆಳಗೊಂಬದ ಮಾರಮ್ಮ, ಪಡಲಮ್ಮ, ನರಸಿಂಹಸ್ವಾಮಿ ಪರಿಷೆ, ನಲ್ಲಮ್ಮ, ವೆಂಕಟರಮಣಸ್ವಾಮಿ ಪರಿಷೆ, ಅನಂತಪುರದ ಚಿತ್ತಲಪಲ್ಲಿಯಲ್ಲಿ ನಡೆಯುವ ಪೆದ್ದಮ್ಮ ಪರಿಷೆ, ದಾದಲೂರು ವಾರದಯ್ಯ ಜಾತ್ರೆ, ಕುಳ್ಳಾಯಿ ಮುತ್ಯಾಲಮ್ಮ ಜಾತ್ರೆ, ಬಂಡ್ಲಪಲ್ಲಿ ದೀಪಾವಳಿ ನಿಡಮಾಡಮ್ಮ, ಆಡುಗೋಡಿ ಜಾತ್ರೆ, ಅನಂತಪುರದ ದಾದಲೂರು ಪೋಪಲಪ್ಪಸ್ವಾಮಿ ಜಾತ್ರೆ, ನಾಗಸಮುದ್ರದ ನಲ್ಲಮ್ಮ, ನರಸಿಂಹಸ್ವಾಮಿ, ರುದ್ದಮಂಡಲ ಗಂಗಮ್ಮ, ಅರೆನ್ ಸೆರುವಿನ ಓಬಳೇಶಸ್ವಾಮಿ ಜಾತ್ರೆ, ಕದ್ರಿ ಜಾತ್ರೆ, ಪೆನುಗೊಂಡದ ಆಂಜನೇಯಸ್ವಾಮಿ ಜಾತ್ರೆ, ಘಾಟಿ ಸುಬ್ಬರಾಯನ ಪರಿಷೆ, ಯುಗಾದಿ ಮುಗಿದು ಒಂಬತ್ತು ದಿನಕ್ಕೆ ನಡೆಯುವ ಸೋಲೂರು ಬಳಿಯ ತಟ್ಟೆಕೆರೆ ಹತ್ತಿರದ ಮಾರಮ್ಮಜಾತ್ರೆ, ಪಾವಗಡದ ಸುಬ್ರಾಯ ಷಷ್ಠಿ, ಪಾವಗಡ ಮದಗಲಮ್ಮ, ಮಾರಮ್ಮನ ಜಾತ್ರೆ, ಹೂಡಿಗಡರೆ ನರಸಿಂಹಸ್ವಾಮಿ, ಕಗ್ಗೆರೆ ಸಿದ್ದಲಿಂಗೇಶ್ವರ, ಮೈಲಾರಲಿಂಗ ಜಾತ್ರೆ, ಬೆಂಗಳೂರು ಕರಗ, ಅಣ್ಣಮ್ಮದೇವಿ, ದೊಡ್ಡಮ್ಮದೇವಿ, ದಾದಲೂರು ಪೋತ್ಲಮ್ಮ, ಹಳವೂರಮ್ಮ ಜಾತ್ರೆ, ದೇವರಸನಹಳ್ಳಿಯ ವೀರಭಧ್ರೇಶ್ವರ, ವನ್ನಾರನಹಳ್ಳಿಯ ಹೊಳೆಚೌಡೇಶ್ವರಿ ಜಾತ್ರೆ, ಕಲಬುರ್ಗಿಯ ಶರಣ ಬಸವ ಜಾತ್ರೆ(ಅಪ್ಪನ ಜಾತ್ರೆ), ಖಾಜಾ ಬಂದೇ ನವಾಜ ದರ್ಗಾ ಜಾತ್ರೆ, ಕೌಟಗಿ ಮರಗಮ್ಮ, ತುಳಜಾಪುರ ಅಂಭಾಭವಾನಿ, ಕಾಳಗಿ ಎಲ್ಲಮ್ಮ ಜಾತ್ರೆ, ಕೋಲಾರದ ವಾನರಾಸಿ ಗಂಗಮ್ಮನಿಗೆ ಮಾಡುವ ದೀಪಗಳ ಜಾತ್ರೆ, ಆವನಿ ಸೀತಮ್ಮ ಜಾತ್ರೆ, ಅಣ್ಣಮ್ಮ ಜಾತ್ರೆ, ಹೊಸಕೋಟೆ ದೀಪೋತ್ಸವ, ಚಿತ್ತೂರಿನ ಗಣೇಶ ಜಾತ್ರೆ, ಮುತ್ಯಾಲಮ್ಮ ಜಾತ್ರೆ, ವೆಂಕಟೇಶ್ವರಲು ಜಾತ್ರೆ, ತಮಿಳುನಾಡಿನ ಸತ್ಯಮಂಗಲದ ಬನ್ನೇರಮ್ಮನ ಜಾತ್ರೆ, ಚಾಮುಂಡಿ ಅಮ್ಮ, ಮಾದೇಶ್ವರ ಜಾತ್ರೆ, ನಂಜನಗೂಡಿನ ಜಾತ್ರೆ, ದೊಡ್ಡಮ್ಮತಾಯಿ ಜಾತ್ರೆ, ಆಂಧÀ್ರದ ನಲ್ಲೂರಿನ ಪೆಂಚಲತಿರುನಾಳ ಜಾತ್ರೆ, ಪಾಂಡುಪುರದ ದೊಡ್ಡಮ್ಮ ಜಾತ್ರೆ. ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೆಸ್ವಾಮಿ ಜಾತ್ರೆ, ಗೌರಸಮುದ್ರ/ಗೌಡಸಂದ್ರ ಮಾರಮ್ಮನ ಜಾತ್ರೆ, ದಾವಣಗೆರೆ ದುರ್ಗಮ್ಮದೇವಿ ಜಾತ್ರೆ, ಗಂಗಮ್ಮ ದೇವರ ಜಾತ್ರೆ, ಗಾನಗಟ್ಟೆ ಮಾಯಮ್ಮ, ಏಕನಾಥೇಶ್ವರಿ, ಸಿಡಿ ಜಾತ್ರೆ, ಕಣಿವೆ ಮಾರಮ್ಮನ ಜಾತ್ರೆ, ಮೈಲಾರ ಲಿಂಗೇಶ್ವರ ಜಾತ್ರೆ/ಹಡಗಲಿ,ರಾಣೆಬೆನ್ನೂರು, ಹರ್ಕೆ ರಂಗಪ್ಪನ ಜಾತ್ರ/ನಂದನ ಹೊಸೂರು, ಹೊಳಲ್ಕೆರೆ, ಗೋಚಂದ್ರ ಮಾರಮ್ಮನ ಜಾತ್ರೆ/ಚಳ್ಳಕೆರೆ, ಗುಡ್ಡದ ಹುಚ್ಛೆಂಗಮ್ಮನ ಜಾತ್ರೆ, ಬಸವಪಟ್ಣ ದುರುಗಮ್ಮ, ಕುಕ್ಕಡದಮ್ಮನ ಜಾತ್ರೆ, ಪರ್ಲಬ್ಬ, ಮಾರಮ್ಮನ ಜಾತ್ರೆ, ದೋನೋರು ತಿಪ್ಪೆಸ್ವಾಮಿ ಜಾತ್ರೆ, ಏಕನಾಥೇಶ್ವರ ಜಾತ್ರೆ, ಸಿಡಿ ಜಾತ್ರೆಗಳಲ್ಲಿ ಸಫಾಯಿಕರ್ಮಚಾರಿಗಳು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.
ಸಫಾಯಿಕರ್ಮಚಾರಿಗಳ ಜೀವನಕ್ರಮವು ಲೋಕದೃಷ್ಟಿ ಸಮಷ್ಟಿಪ್ರಜ್ಞೆಯ ನೆಲೆಯಿಂದ ಕೂಡಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲವನ್ನೂ ಇವರು ಒಳಗೊಳ್ಳುತ್ತಾರೆ. ಯಾವುದನ್ನೂ ಬಿಡಿ ಬಿಡಿಯಾಗಿ ನೋಡುವ ಕ್ರಮ ಇವರಲ್ಲಿ ಇಲ್ಲ.
ಸರ್ವರ ಹಿತ ಕಾಪಾಡುವ, ಕಾಯಿಲೆ, ಕಷ್ಟಗಳಿಂದ ಪಾರುಮಾಡುವ, ಊರು ಕಾಯುವ,ಕೆಟ್ಟ ಶಕ್ತಿಗಳಿಂದ ಕಾಪಾಡುವ, ಮಕ್ಕಳು, ರಾಸುಗಳನ್ನು ರಕ್ಷಿಸುವ, ಮಳೆ ಬೆಳೆ ನೀಡುವ ಶಕ್ತಿ ದೇವತೆಯರಾದÀ ಎಲ್ಲಮ್ಮ, ಹುಲಿಗೆಮ್ಮ, ಸಂಕ್ಲಮ್ಮ, ಗಾಳೆಮ್ಮ, ಮುತ್ಯಾಲಮ್ಮರನ್ನು, ಪಡಸಲಮ್ಮ, ದೊಡ್ಡಮ್ಮ, ಅಣ್ಣಮ್ಮನನ್ನು ಇತ್ಯಾದಿ ದೇವತೆಗಳು ಇವರು ಪೂಜಿಸುವ ಅಮ್ಮಂದಿರು.ಈ ದೇವರುಗಳು ಒಂದು ಸ್ಪಷ್ಟ ರೂಪವಿಲ್ಲದ ಒಂದು ರೀತಿಯಲ್ಲಿ ಲಿಂಗಾತೀತರೇ ಆಗಿದ್ದಾರೆ. ಅವರು ನಡೆದುಕೊಳ್ಳುವ ಸಾಂಸ್ಕöÈತಿಕ ನಾಯಕ ನಾಯಕಿಯರು ಲೌಕಿಕದಲ್ಲಿಜನಪರ ಕೆಲಸವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಂತಹವರು.
ಒಟ್ಟಾರೆಯಾಗಿ ನೋಡುವಾಗ ಯಾವ ಜನಸಮುದಾಯವೇ ಆಗಲಿ ಹೊಂದಿರುವಂತಹ ಜ್ಞಾನ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳನ್ನು ಸಫಾಯಿ ಕರ್ಮಚಾರಿಗಳು ಕಾಲದಿಂದಲೂ ಹೊಂದಿದ್ದಾರೆ. ಅಲ್ಲದೆ ಅವು ಶ್ರಮ ಮತ್ತು ಪ್ರಕೃತಿಯೊಂದಿಗಿನ ನಿಕಟ ಒಡನಾಟದಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ, ಜೀವಪರ ಪ್ರಜ್ಞೆಯ ಸಂಕೇತಗಳಾಗಿವೆ ಎಂಬುದು ಅರಿವಾಗುತ್ತದೆ.
ಮಡಿಲು ತುಂಬುವ ಶಾಸ್ತ್ರ:
ಗರ್ಭಿಣಿ ಹೆಣ್ಣುಮಗಳಿಗೆ ಐದನೇ ತಿಂಗಳಿನಲ್ಲಿಮಾಡುವ ಆಚರಣೆಯನ್ನು ‘ಮಡಿಲು ತುಂಬುವ ಶಾಸ್ತ್ರ’ ಅಥವಾ ‘ಕುಬಸ’ ಎಂದು ಕರೆಯುತ್ತಾರೆ.ಇದು ಫಲವತ್ತತೆಯನ್ನು ಪೂಜಿಸುವ ಸಂಕೇತವಾಗಿದೆ. ಹೆಣ್ಣುಮಗಳು ಐದು ತಿಂಗಳ ಗರ್ಭಿಣಿಯಿರುವಾಗ ತಾಯಿಯ ಮನೆಯವರು ಮಗಳ ಮನೆಗೆ ಬಂದು ಬಸುರಿಗೆ ಅರಿಶಿಣ ಹಚ್ಚಿ ಸ್ನಾನ ಮಾಡಿಸುತ್ತಾರೆ. ಒಸಗೆ ಹಾಕಿ ಬಸುರಿಯನ್ನು ಕೂಡಿಸಿ ಹಸಿರುಬಳೆ ತೊಡಿಸಿ, ಬೆಲ್ಲ, ಬಾಳೆಹಣ್ಣು, ಎಲೆ ಅಡಿಕೆಯ ಮಡಿಲಕ್ಕಿ ನೀಡಿ ಐದು, ಒಂಬತ್ತು ಅಥವಾ ಹನ್ನೊಂದು ತಟ್ಟೆಗಳಲ್ಲಿ ಎಲ್ಲಾ ಥÀರದ ಹಣ್ಣುಗಳು, ಎಲೆ ಅಡಿಕೆ, ವಿವಿಧ ರೀತಿಯ ಉಂಡೆ/ತಿಂಡಿಗಳು, ಹೊಸ ಸೀರೆ, ಜಾಕೀಟು ಇಟ್ಟು ಆರತಿ ಬೆಳಗುತ್ತಾರೆ. ಈ ಆಚರಣೆಯನ್ನು ಕುಬಸ ಎಂದೂ ಕರೆಯುತ್ತಾರೆ. ಗರ್ಭಿಣಿಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಬಡಿಸುತ್ತಾರೆ. ಒಂಬತ್ತು ರೀತಿಯ ಅಡುಗೆ ಮಾಡಿ, ಒಂಬತ್ತು ರೀತಿಯ ಹಣ್ಣು ತಂದು ಆರತಿ ಮಾಡುವ ಆಚರಣೆ ಇದೆ. ನೆಂಟರಿಷ್ಟರನ್ನು ಕರೆಸಿ ಸಿಹಿ ಊಟವನ್ನು ಹಾಕಿಸುತ್ತಾರೆ. ಸೀಮಂತದಲ್ಲಿ ಮುತ್ತೆöÊದೆಯರಿಗೆ ಊಟ ಹಾಕಿಸುವ ಆಚರಣೆಯೂ ಜಾರಿಯಲ್ಲಿದೆ. ಒಂಬತ್ತನೆ ತಿಂಗಳಲ್ಲಿ ಅತ್ತೆಯ ಮನೆಯವರು ಸೀಮಂತ ಮಾಡಿ ಮಡಿಲು ತುಂಬುತ್ತಾರೆ. ಕ್ರೆöÊಸ್ತ ಧರ್ಮಕ್ಕೆ ಮತಾಂತರವಾದವರು ಗರ್ಭಿಣಿಗೆ ಒಂಬತ್ತು ತಿಂಗಳು ಇದ್ದಾಗ ಪಾದ್ರಿಯವರನ್ನು ಕರೆಸಿ ಪ್ರೇಯರ್ ಮಾಡಿಸುತ್ತಾರೆ. ಒಸಗೆ ಹಾಕಿ ಮುತ್ತೆöÊದೆಯರು ಮಡಿಲು ತುಂಬುತ್ತಾರೆ. ಬಂದವರಿಗೆ ಸಿಹಿ ಊಟ ಮಾಡಿ ಬಡಿಸುತ್ತಾರೆ.
ಗರ್ಭಿಣಿ ಹೆಣ್ಣು ಮಗಳಿಂದ ಗುಬ್ಬಿ-ಕಾಗೆಗಳಿಗೆ ಅನ್ನ, ಕಾಳುಗಳನ್ನು ಹಾಗೂ ಇರುವೆ ಗೂಡಿಗೆ ಸಕ್ಕರೆ ಹಾಕಿಸುವ ಪದ್ಧತಿ ಜಾರಿಯಲ್ಲಿದೆ.
ಬಾಣಂತನದ ಆಚರಣೆಗಳು
ಗರ್ಭಿಣಿ ಮಗು ಹೆತ್ತು ಮೂರು/ಐದು/ಒಂಬತ್ತು/ಹದಿನಾರನೇ/ಹತ್ತೊಂಬತ್ತನೇ ದಿನ ಈ ಆಚರಣೆಯನ್ನು ಮಾಡುತ್ತಾರೆ. ತಾಯಿ ಮತ್ತು ಮಗುವಿಗೆ ನೀಲಗಿರಿ, ಬೇವು ಇತ್ಯಾದಿ ಒಂಬತ್ತು ತರಹದ ಸೊಪ್ಪನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಬೇವಿನ ಸೊಪ್ಪಿಗೆ ಅರಿಶಿಣ ಸೇರಿಸಿ ರುಬ್ಬಿ ಮೈಯಿಗೆ ಹಚ್ಚಿ ನಂತರ ಸ್ನಾನ ಮಾಡಿಸುತ್ತಾರೆ.ಇದನ್ನು ಬಳ್ಳಾರಿಯಲ್ಲಿ ‘ನರ್ಲಾ ಕಾರ್ಯ’ ಎನ್ನುತ್ತಾರೆ. ದಾಸಪ್ಪನನ್ನು ಕರೆಸಿ ಗಂಜಲ ಹಾಕಿಸಿ ಸೂತಕ ತೆಗೆಯುತ್ತಾರೆ. ಸೂತಕವನ್ನು ಕಳೆದುಕೊಳ್ಳಲು ಕೆಲವರು ಕೋಳಿ ಕೊಯ್ಯುತ್ತಾರೆ. ನಂತರ ಮಗುವನ್ನು ಮೊರದಲ್ಲಿ ಮಲಗಿಸಿ ಸುಟುಕಿ ಹಾಕುತ್ತಾರೆ. ಮಗುವಿಗೆ ದೆವ್ವ, ಭೂತಗಳು ಕಾಟ ನೀಡದಿರಲೆಂದು ಇದನ್ನು ಮಾಡುತ್ತಾರೆ. ಸೂತಕವನ್ನು ತೆಗೆದ ಮೇಲೆ ತಾಯಿ-ಮಗುವಿಗೆ ಆರತಿ ಮಾಡಿ ಬಂಧುಗಳಿಗೆ ಊಟ ಹಾಕಿಸುತ್ತಾರೆ.
ಕೆಲವು ಕಡೆ ಯುಗಾದಿಗೆ ಮೊದಲು ಮಗುವಿಗೆ ಮುನೇಶ್ವರ ದ್ಯಾವರ ಮಾಡುತ್ತಾರೆ.ಮಗುವಿಗೆ ಮೂರು ತಿಂಗಳು, ಐದು ತಿಂಗಳು, ಒಂಬತ್ತು ತಿಂಗಳು, ಮಗು ಹುಟ್ಟಿದ ಮೂರು ದಿನವಾದರೂ ಸಹ ಯುಗಾದಿಗೆ ಮೊದಲು ಮಗು ಹುಟ್ಟಿದೆ ಎಂದರೆ ದ್ಯಾವರ ಮಾಡಬೇಕು ಎನ್ನುವ ಪದ್ಧತಿ ಇದೆ.ಊರ ಹೊರಗಿನ ತೋಪಿನಲ್ಲಿ ಮಣ್ಣಿನಿಂದ ಮುನೇಶ್ವರನನ್ನು ಮಾಡಿ, ಏಳು ಜನ ಅಕ್ಕ ತಂಗಿಯರನ್ನು ನಿಲ್ಲಿಸಿ ಕೋಳಿ ಕೊಯ್ದು ಪೂಜೆ ಮಾಡಿ, ಮಗುವಿನ ಮುಂದಲೆ ಕೂದಲನ್ನು ಮಾವನಾದವರು ಕತ್ತರಿಸಿ ಮುನೇಶ್ವರನಿಗೆ ಇಡುತ್ತಾರೆ. ಹೆಣ್ಣು, ಗಂಡು ಎರಡೂ ಮಕ್ಕಳಿಗೂ ಈ ದ್ಯಾವರ ಮಾಡುತ್ತಾರೆ. ಇಲ್ಲಿ ಪೂಜೆಗೆ ನೆಕ್ಕಿಲಿ ಸೊಪ್ಪು, ಕಣಗಿಲೆ ಸೊಪ್ಪು ಬೇಕೇ ಬೇಕು. ಇದು ಹೊಸ ಸೃಷ್ಟಿಯನ್ನು ಮಾಡಿರುವುದಕ್ಕೆ ಸೃಷ್ಟಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿದೆ.
ಸಾಂಸ್ಕೃತಿಕ ಆಚರಣೆಗಳು – ಮದುವೆ
ಮಾದಿಗ ಜಾತಿಗಳಲ್ಲಿ ಜಾರಿಯಲ್ಲಿರುವ ಜೀವನಾವರ್ತನಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ ಮತ್ತು ಜೀವಪರ ಪ್ರಜ್ಞೆಯನ್ನು ಕಾಣಬಹುದು.
ಋತುಮತಿ ಆಚರಣೆ:
ಹೆಣ್ಣುಮಕ್ಕಳು ಮೊದಲಸಲ ಮುಟ್ಟಾಗುವ ಸಂದರ್ಭದಲ್ಲಿ ಮಾಡುವ ಆ ಆಚರಣೆಯನ್ನು ಉತ್ಸಾಹ, ಸಂಭ್ರಮಗಳಿಂದ ಮಾಡಲಾಗುತ್ತದೆ. ಹುಡುಗಿ ಋತುಮತಿಯಾದ ಗಳಿಗೆ ಶುಭವೋ ಅಶುಭವೋ ಎಂದು ತಿಳಿದುಕೊಳ್ಳುತ್ತಾರೆ. ಮೂರು, ಐದು, ಒಂಭತ್ತು ಅಥವಾ ಹದಿನಾರು ದಿನಗಳವರೆಗೆ ಋತುಮತಿಯಾದ ಹುಡುಗಿಯನ್ನು ಮನೆಯ ಹೊರಗೆ ಗುಡಿಸಲು ಹಾಕಿ ಕೂರಿಸುತ್ತಾರೆ. ಚಿಕ್ಕಮಕ್ಕಳು ಅವರೊಂದಿಗೆ ಜೊತೆಯಲ್ಲಿ ಇರುತ್ತಾರೆ. ಋತುಮತಿಯಾದ ಹುಡುಗಿಯ ಸೋದರಮಾವ ಅತ್ತಿಸೊಪ್ಪು, ಸಕ್ಲಿಸೊಪ್ಪು, ಅಂಕಲೆಸೊಪ್ಪು, ಆಲದಸೊಪ್ಪು ಹೀಗೆ ಒಂಬತ್ತು ಥರದ ಸೊಪ್ಪುಗಳಿಂದ ಮನೆಯ ಹೊರಗೆ ಗುಡಿಸಲು ಹಾಕಿಕೊಡಬೇಕು. ಕೆಲವು ಕಡೆ ಹೊಂಗೆ ಕೊಂಬೆಗಳಿಂದ ಗುಡಿಸಲು ಹಾಕುವ ಪದ್ಧತಿ ಇದೆ. ಕೆಲವು ಕಡೆ ಹುಡುಗಿಯನ್ನು ಕೂರಿಸಿದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಬ್ಬರಿ ಬಟ್ಟಲುಗಳನ್ನು ಇಡುತ್ತಾರೆ. ಅದರೊಳಗೆ ನಾಟಿ ಮೊಟ್ಟೆ, ಎಣ್ಣೆ, ತುಪ್ಪ ಸೇರಿಸಿ ಹುಡುಗಿಯ ಬಾಯಿಗೆ ವರಸೆಯಲ್ಲಿ ಮಾವನಾದವನು ಹಾಕುತ್ತಾನೆ. ಬೆಲ್ಲವನ್ನೂ ಹಾಕುತ್ತಾನೆ. ಕೊಬ್ಬರಿ ಚಿಪ್ಪನ್ನು ಹುಡುಗಿಯ ತಲೆಗೆ ಒತ್ತಿ ಹೊಡೆಯುತ್ತಾನೆ. ಗುಡಿಸಲು ಹಾಕಿ ಎರಡು ದಿನ ಕಳೆದು ಮೂರನೆ ದಿನ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ಸೋದರಮಾವ ಪೂಜೆ ಮಾಡಿ ಕೋಳಿ ಕೊಯ್ದು ಹುಡುಗಿಯನ್ನು ಕೂರಿಸಿದ ಜಾಗದಲ್ಲಿ ಕೋಳಿ ತಲೆಯನ್ನು ಹೂಳಿ, ಗುಡಿಸಲನ್ನು ಕಿತ್ತಾಕುತ್ತಾನೆ. ಕೆಲವು ಕಡೆ ಮೂರನೆಯ ದಿನ ಗುಡಿಸಲು, ಹುಲ್ಲು, ಹುಡುಗಿ ಹಾಕಿಕೊಂಡ ಬಟ್ಟೆಯನ್ನೆಲ್ಲ ಸುಡುತ್ತಾರೆ.
ಹುಡುಗಿಯ ಅತ್ತೆ ನೀರು ಹಾಕಿ, ಅರಿಶಿಣ ಹಚ್ಚಿ ಮನೆ ಒಳಗೆ ಭತ್ತದ ಹುಲ್ಲನ್ನು ಹಾಸಿ ಅದರ ಮೆಲೆ ಬಿಳಿ ಬಟ್ಟೆ ಹಾಸಿ ಕೂರಿಸುವ ಪದ್ಧತಿಯೂ ಇದೆ.ಕುಸಕ್ಕಿ ಅನ್ನ, ತುಪ್ಪ, ತಂಬಿಟ್ಟು, ಚಿಗಳಿ ಉಂಡೆ ತಿನ್ನಿಸುತ್ತಾರೆ.ದಿನ ಬಿಟ್ಟು ದಿನ ಕೋಳಿಕೊಯ್ದು ಸಾರು ಮಾಡಿ ಹುಡುಗಿಗೆ ಊಟ ಮಾಡಿಸುತ್ತಾರೆ.ದಿನವೂ ಅತ್ತೆ, ಮಾವ, ಚಿಕ್ಕಮ್ಮ ಹೀಗೆ ನೆಂಟರಿಷ್ಟರು ಹುಡುಗಿಗೆ ಹಣ್ಣುಗಳು ಮತ್ತು ಸಿಹಿ ತಿನಿಸುಗಳನ್ನು ತಂದು ಕೊಡುತ್ತಾರೆ; ವಸಗೆ ಹಾಕುತ್ತಾರೆ; ಆರತಿ ಮಾಡಿ ಹಾಡು ಹೇಳುತ್ತಾರೆ.
ತಾಯಿಮನೆಯ ದೊಡ್ಡ ವಸಗೆ ಹಾಕಿ ಹುಡುಗಿಯ ಸೋದರತ್ತೆಯಿಂದ ಹುಡುಗಿಗೆ ಮಡಿಲು ತುಂಬಿಸಿ, ಆರತಿ ಮಾಡಿ ಸ್ನಾನ ಮಾಡಿಸಿ ಹುಡುಗಿಯನ್ನು ಒಳಗೆ ಕರೆದುಕೊಳ್ಳುತ್ತಾರೆ. ಹಬ್ಬದಂತೆ ಮಾಡಿ ಔತಣ ಮಾಡುತ್ತಾರೆ. ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿರುವವರೂ ಸಹ ಹದಿಮೂರು ದಿವಸ ಹೊರಗಡೆ ಇರಿಸಿ, ಸ್ನಾನ ಮಾಡಿಸಿ, ಸೋದರಮಾವನ ಕೈಲಿ ಶಾಸ್ತ್ರ ಮಾಡಿಸುತ್ತಾರೆ.ಗೂಡು ಹಾಕಿ ಕೂರಿಸುವುದು, ಮಡಿಲು ತುಂಬುವುದು, ಮಾವನ ಕೈಲಿ ಹಾರ ಹಾಕಿಸುವ ಆಚರಣೆಗಳನ್ನು ಮಾಡುತ್ತಾರೆ.
ಫಲವಂತಿಕೆ, ಮರುಸೃಷ್ಟಿಯ ಸಂಕೇತವಾಗಿ ಋತುಮತಿಯಾಗುವುದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ಆಚರಣೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾಗಿರುವುದು ಮಾತೃಪ್ರಧಾನ ಕುಟುಂಬದ ಕುರುಹಾಗಿದೆ.
ಗಂಡಸು ಹಾಕುತ್ತಿರುವ ವಿವಿಧ ಸೊಪ್ಪಗಳ ಕೊಂಬೆಗಳ ಗುಡಿಲು. ಬಳಸುವ ಮರದ ಎಲೆ-ಕೊಂಬೆ-ಹೂಗಳು ಕಾಣುವಂತಿರಬೇಕು
ಮದುವೆ:
ಗಂಡು-ಹೆಣ್ಣು ಕೂಡಿ ಬದುಕುವುದನ್ನು ಅಧಿಕೃತಗೊಳಿಸುವ ಮದುವೆಯು ಬಹುಮುಖ್ಯ ಸಾಮಾಜಿಕ ಸಂಸ್ಥೆಯಾಗಿದೆ. ಜಾತಿ ಪ್ರಧಾನವಾದ ಭಾರತೀಯ ಸಮಾಜದಲ್ಲಿ ಜಾತಿಯೊಳಗಡೆ ಮದುವೆಯಾಗುವುದು ಜಾತಿವ್ಯವಸ್ಥೆಯನ್ನು ಉಳಿಸುವ ಬಹುಮುಖ್ಯ ನಿಯಮವಾಗಿದೆ. ಅದನ್ನು ಜಾತಿಶ್ರೇಣಿಯಲ್ಲಿರುವ ಎಲ್ಲ ಜಾತಿಗಳು ಅನುಸರಿಸುತ್ತವೆಯಾದರೂ ತಳಜಾತಿಗಳಲ್ಲಿ ವಿವಾಹದ ಅರ್ಥ ಮತ್ತು ಆಚರಣೆಗಳಲ್ಲಿನ ಭಿನ್ನತೆಯಲ್ಲಿ ಕಾಣಬಹುದಾಗಿದೆ.
ಈ ಭಿನ್ನತೆಯನ್ನು ಗುರುತಿಸುತ್ತಾ ಸ್ತ್ರೀವಾದಿ ವಿಮರ್ಶಕಿ ಆರ್.ಸುನಂದಮ್ಮ ಅವರು ಹೇಳುವ ಮಾತುಗಳಿಲ್ಲಿ ಉಲ್ಲೇಖಾರ್ಹ. “…ವೈದಿಕ ಹಾಗೂ ಅವೈದಿಕರಲ್ಲಿ ವಿವಾಹದಲ್ಲಿನ ಆಚರಣೆಗಳು ಭಿನ್ನವಾಗಿದ್ದವು. ಅವು ಸಂಕೇತಿಸುವ ಅರ್ಥಗಳು ಭಿನ್ನವಾಗಿದ್ದವು. ಅವೈದಿಕರಿಗೆ ವಿವಾಹವು ಜೀವಿಗಳನ್ನು ಮುಂದುವರೆಸಿಕೊಂಡು ಹೋಗುವ ಸಾಧನ ಹಾಗೂ ಪಿತೃತ್ವದ ಅಧಿಕೃತತೆ ಸ್ಥಾಪಿಸಲು ಮಾಡಿಕೊಂಡ ಸಂಸ್ಥೆ ಮಾತ್ರವಾಗಿದೆ. ಆದರೆ ವೈದಿಕರಲ್ಲಿ ಅದಕ್ಕೊಂದು ಧಾರ್ಮಿಕ ಉದ್ದೇಶವಿದೆ. ಒಬ್ಬ ತಂದೆ ಮಗಳನ್ನು ಕನ್ಯಾದಾನ ಮಾಡುವ ಮೂಲಕ ಕನ್ಯಾಸೆರೆ ಬಿಡಿಸಿ ಮೋಕ್ಷ ತಲುಪಿದರೆ, ವರ ತಾನು ವಿವಾಹವಾಗಿ ತನ್ನ ವಂಶವನ್ನು ಮುಂದುವರೆಸಿಕೊಳ್ಳುವುದರ ಜೊತೆಗೆ ಪಿತೃಗಳಿಗೆ ಮೋಕ್ಷವನ್ನು ಪ್ರಾಪ್ತವಾಗಿಸುವ ಧಾರ್ಮಿಕ ಶ್ರದ್ಧೆಯಾಗಿದೆ. ವೈದಿಕರಿಗೆ ಮೋಕ್ಷಹೊಂದುವುದು ಅತ್ಯಂತ ಕಟ್ಟಕಡೆಯ ಉದ್ದೇಶವಾಗಿದೆ. ಅವೈದಿಕರಿಗೆ ಮತ್ತೆಮತ್ತೆ ಉತ್ತಮ ಜನ್ಮ ಪಡೆಯುವ ಉದ್ದೇಶವಾಗಿದೆ”. (ಆರ್.ಸುನಂದಮ್ಮ:೬೮:೨೦೧೭)
ಅಕ್ಷತೆಗೆ ವೈದಿಕರು ಬಳಸುವ ಅಕ್ಕಿ ಮತ್ತು ಅವೈದಿಕರು ಬಳಸುವ ಭತ್ತವನ್ನು ಒಂದು ಉದಾಹರಣೆಯಾಗಿ ನೋಡಬಹುದು. ಅಕ್ಕಿಯನ್ನು ಬಿತ್ತಿ ಬೆಳೆಯಲಾಗದು, ಬಿತ್ತಿ ಬೆಳೆಯುವ ಭತ್ತ ಮರುಹುಟ್ಟಿನ ಸಂಕೇತವಾಗಿದೆ. ಬಹುಮುಖ್ಯವಾದ ಭಿನ್ನತೆಯನ್ನು ಸಾಕ್ಷಿಯಲ್ಲಿ ಕಾಣಬಹುದು. ಉರಿವ ಅಗ್ನಿಸಾಕ್ಷಿಯಾಗಿ ಸಪ್ತಪದಿತುಳಿಯುವುದು ವೈದಿಕರ ಮದುವೆಯ ಬಹುಮುಖ್ಯ ಆಚರಣೆಯಾಗಿದೆ. ಮಾದಿಗರು ಸೇರಿದಂತೆ ಅನೇಕ ತಳಜಾತಿಗಳಲ್ಲಿ ಜೀವಜಲವಾದ ನೀರಿನ ಸಾಕ್ಷಿಯಾಗಿ ಧಾರೆಯನ್ನು ಮಾಡಲಾಗುತ್ತದೆ.
ಮಾದಿಗ ಜಾತಿಯಲ್ಲಿ ಮದುವೆಯು ಬಹುಮುಖ್ಯ ಆಚರಣೆಯಾಗಿದೆ. ಹಿರಿಯರು ಪೂಜಾರಿಯ ಬಳಿ ಹೋಗಿ ಹುಡುಗ ಮತ್ತು ಹುಡುಗಿಯ ಹೆಸರು ಬಲ ಕೂಡಿಬರುತ್ತದೆಯೇ ಎಂಬುದನ್ನು ನೋಡುತ್ತಾರೆ. ನಂತರ ಮದುವೆ ವಿಷಯ ಪಕ್ಕಾ ಮಾಡಿಕೊಳ್ಳಲು ವೀಳ್ಯದ ಶಾಸ್ತ್ರ ಮಾಡುತ್ತಾರೆ. ವೀಳ್ಯವನ್ನು ಪರಸ್ಪರ ಬದಲಾಯಿಸಿಕೊಳ್ಳುವುದೆಂದರೆ ಮುರಿಯಲಾಗದ ಒಪ್ಪಂದ ಮಾಡಿಕೊಂಡಂತೆ. ಪೂಜಾರಪ್ಪನ ಹತ್ತಿರ ಮದುವೆ ದಿನ ನಿಗದಿ ಮಾಡುವುದನ್ನು ಲಗ್ನ ಕಟ್ಟಿಸುವುದು ಎಂದು ಕರೆಯುತ್ತಾರೆ.
ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರ ಮಾಡುತ್ತಾರೆ.ಚಪ್ಪರ ಶಾಸ್ತ್ರದಲ್ಲಿ ಹೆಣ್ಣು ಮತ್ತು ಗಂಡಿನ ಮನೆಯವರಿಬ್ಬರೂ ತಮ್ಮ ಮನೆ ಮುಂದೆ ಚಪ್ಪರ ಹಾಕಿ, ಮಾವು, ನೇರಳೆ, ಏಳೆ ಮರದ ಕೊಂಬೆಗಳನ್ನು ಸೇರಿಸಿದ ಹಸೆ ಕಂಬ ನೆಡುತ್ತಾರೆ. ಅದಕ್ಕೆ ಅರಿಶಿನದ ಕೊಂಬು ಅಥವಾ ಅರಿಶಿನದ ದಾರದಲ್ಲಿ ನವಧಾನ್ಯಗಳನ್ನು ಕಟ್ಟುತ್ತಾರೆ. ಸೋದರಮಾವ ಕೊಂಬೆಗಳನ್ನು ತರುತ್ತಾನೆ. ಚಪ್ಪರಕ್ಕೆ ಬಾಳೆಗೊನೆ ಮತ್ತು ಎಳನೀರನ್ನು ಕಟ್ಟುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿನ ಕಡೆಯಿಂದ, ಗಂಡಿನ ಮನೆಯಲ್ಲಿ ಗಂಡಿನ ಕಡೆಯಿಂದ ಹಸೆ ಕಂಬಕ್ಕೆ ಪೂಜೆ ಮಾಡಿಸುತ್ತಾರೆ. ಮೂರು ಅಥವಾ ಐದು ಜನ ಮಹಿಳೆಯರಿಂದ ಭತ್ತ ಕುಟ್ಟಿಸುತ್ತಾರೆ. ಭತ್ತದಲ್ಲಿ ಹಸೆ ಚಿತ್ರವನ್ನು ಬರೆಯುತ್ತಾರೆ. ಚಿತ್ರದಲ್ಲಿ ಪಕ್ಷಿಗಳು, ಹೂ-ಹಣ್ಣು, ಮರಗಳನ್ನು ಬಿಡಿಸುತ್ತಾರೆ. ಈ ಚಿತ್ರವು ಗಂಡು-ಹೆಣ್ಣಿನ ದಾಂಪತ್ಯವು ಒಟ್ಟಾರೆ ಪರಿಸರದ ಅವಿಬಾಜ್ಯ ಭಾಗವೆಂಬುದನ್ನು ಸೂಚಿಸುತ್ತದೆ. ಹಸೆ ಚಿತ್ರದ ನಡುವೆ ಮಣೆ ಇರಿಸಿ ಮಣೆ ಮೇಲೆ ಗಂಡು-ಹೆಣ್ಣನ್ನು ಕೂರಿಸಿ ಅರಿಶಿಣ ಶಾಸ್ತ್ರ ಮಾಡುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿಗೆ, ಗಂಡಿನ ಮನೆಯಲ್ಲಿ ಗಂಡಿಗೆ ಎಣ್ಣೆ ಬೆರೆಸಿದ ಅರಿಶಿನವನ್ನು ಮುತ್ತೈದೆಯರಿಂದ ಮೂರರಿಂದ ಐದು ಬಾರಿ ಹಚ್ಚಿಸುತ್ತಾರೆ. ನಂತರ ಸ್ನಾನಮಾಡಿಸಿ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿಕೊಂಡು ಬಂದ ಮೇಲೆ ಹೆಣ್ಣಿನ ಸೋದರತ್ತೆ ಹೆಣ್ಣಿಗೆ ಕಾಲುಂಗುರ, ಬಳೆ ಹಾಕುವ ಬಳೆ ಶಾಸ್ತ್ರ ಮಾಡುತ್ತಾಳೆ. ಗಂಡಿಗೂ ಸಹ ಕಾಲುಂಗರ ಹಾಕುತ್ತಾರೆ ಮತ್ತು ಒಂದು ತಿಂಗಳ ಕಾಲ ಅದನ್ನು ಹಾಕಿಕೊಂಡಿರಬೇಕು. ಮದುವೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾದುದು.
ಬಳೆಶಾಸ್ತ್ರ ಮಾಡಿದ ಮೇಲೆ ಗದ್ದಿಗೆಶಾಸ್ತ್ರವನ್ನು ಮಾಡುತ್ತಾರೆ. ಕಂಬಳಿಯನ್ನು ಮಡಿಸಿಟ್ಟು ಅದರ ಮೇಲೆ ಹೊಂಬಾಳೆ ಇರಿಸಿದ ಕಳಶ ಇಡುವುದನ್ನು ಗದ್ದಿಗೆ ಎನ್ನುತ್ತಾರೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಕೆಲವು ಕಡೆ ಕಳಶಕ್ಕೆ ವೀಳ್ಯದೆಲೆ, ತೆಂಗಿನ ಕಾಯಿಯನ್ನು ಇಡುತ್ತಾರೆ. ಈ ಶಾಸ್ತ್ರದಲ್ಲಿ ತಾಯಿ ವಧುವಿಗೆ ತಾಯಿ ಮನೆಯ ಮಾಂಗಲ್ಯವನ್ನು ಕಟ್ಟುತ್ತಾಳೆ. ಹತ್ತಿರದ ಬಾವಿಗೆ ಕರೆದುಕೊಂಡುಹೋಗಿ ಗಂಗೆಪೂಜೆ ಮಾಡಿಸುತ್ತಾರೆ. ಆ ನಂತರ ಹೆಣ್ಣು ಮತ್ತು ಗಂಡಿನ ಕೈಗೆ ಕಂಕಣ (ವೀಳ್ಯದೆಲೆ ಕಟ್ಟಿದ ಅರಿಶಿಣದಾರ) ಕಟ್ಟುತ್ತಾರೆ. ನಂತರ ಅರಣಿ ಪೂಜೆ ಮಾಡುತ್ತಾರೆ. ಚಿತ್ರ ಬರೆದ ಮೂರು ಮಣ್ಣಿನ ರ್ವಿಯಲ್ಲಿ ನೀರುತುಂಬಿ ಮೇಲಿನ ಮುಚ್ಚಳದಲ್ಲಿ ದೀಪವನ್ನು ಹಚ್ಚುತ್ತಾರೆ. ರ್ವಿಯ ಅಡಿಯಲ್ಲಿ ಒಣಗಿದ ಬೆರಣಿಯನ್ನು ಪುಡಿಮಾಡಿ ಅದರಲ್ಲಿ ಮೊಳಕೆ ಬರಿಸಿದ ಮೂರು ಥÀರದ ಧಾನ್ಯಗಳನ್ನು ಹಾಕಿಡುತ್ತಾರೆ. ಈ ದೀಪವನ್ನು ಹಚ್ಚುವುದು ಬಳೆ ಇಲ್ಲದ ಅಂದರೆ ವಿಧವೆ ಮಹಿಳೆ. ದೀಪ ರಾತ್ರಿ ಎಲ್ಲ ಆರದಂತೆ ನೋಡಿಕೊಳ್ಳುತ್ತಾರೆ. ನಂತರ ಮನೆದೇವರ ಪೂಜೆ ಮಾಡಿಸುತ್ತಾರೆ.
ಕೆಲವು ಕಡೆ ಭತ್ತ ಕುಟ್ಟಿ ಕರಿಕಂಬಳಿ ಮೇಲೆ ಸೂರ್ಯ ಚಂದ್ರ ನೇಗಿಲು ತರಹದ ಚಿತ್ರಗಳನ್ನು ಬರೆಯುತ್ತಾರೆ. ಕಳಶ ಪೀಟೆಯನ್ನು (ಪೀಠ) ಇಟ್ಟು ಅದರ ಮೇಲೆ ಕಂಚಿನ ತಟ್ಟೆ ಇಟ್ಟು ಅದರ ತುಂಬ ಒಣಗಿದ ಗೊಬ್ಬರ ಸರಿದು ಅದರ ಮೇಲೆ ಕಳಶವಿಡುತ್ತಾರೆ. ಅರಣಿಪೂಜೆ ಮಾಡಿ ಅದರ ಅಡಿಯಲ್ಲಿ ಮಧುವಿನಿಂದ ಗೊಬ್ಬರ ಹರಡಿಸಿ ನವಧಾನ್ಯಗಳನ್ನು ಮೊಳಕೆ ಹಾಕಿಸುತ್ತಾರೆ.
ಮೂರು ರೀತಿಯ ಮರದ ಕೊಂಬೆಗಳನ್ನು ಸೇರಿಸಿ ಹಸಿ ಕಂಬ ಮಾಡಿ ನೆಡುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಮರಗಳು ಬದಲಾಗುವುದಾದರೂ ಸಾಮಾನ್ಯವಾಗಿ ಬಸರಿ/ಹನಗಳ್ಳಿ/ಹುಣತಿ/ಆಲ/ಅತ್ತಿ ಮರದ ಕೊಂಬೆಗಳನ್ನು ಬಳಸುತ್ತಾರೆ. ಮುಂದೆ ತಾಳಿಶಾಸ್ತ್ರಮಾಡುತ್ತಾರೆ. ಮುಹೂರ್ತದ ದಿನ ವಧು-ವರರ ಕಡೆಯ ಹಿರಿಯ ಗಂಡಸರು ಗದ್ದಿಗೆ ಹಾಕಿ ಕಳಶ ಇಡುತ್ತಾರೆ. ‘ನಿಮ್ಮ ಮಗಳನ್ನು ನಮ್ಮ ಮನೆಗೆ ತರ್ತೀವಿ’ ಅಂತ ಹೆಣ್ಣಿನ ಮನೆಯವರಿಗೆ ಗಂಡಿನ ಮನೆಯವರು ಇಪ್ಪತ್ತೈದು ರೂಪಾಯಿ ಕೊಡುತ್ತಾರೆ. ದೇವರಿಗೆ ಪೂಜೆ ಮಾಡಿ ಮೊದಲು ಯಜಮಾನರುಗಳಿಗೆಲ್ಲ ಕೈಮುಗಿದು, ಎಲ್ಲರ ಕೈ ಮುಟ್ಟಿಸಿ ಆಶೀರ್ವದಿಸಿದ ತಾಳಿಯನ್ನು ಕಟ್ಟಲು ಅನುಮತಿ ಕೇಳಿ ಗಂಡು ಹೆಣ್ಣಿನ ನಡುವಿನ ಅಂತರಪಟ (ಪರದೆ) ತೆಗೆದು ಗಂಡು ಹೆಣ್ಣಿನ ಕೈಲಿ ಪರಸ್ಪರ ಜೀರಿಗೆ ಹಾಕಿಸಿದ ನಂತರ ಗಂಡಿನ ಕೈಲಿ ಹೆಣ್ಣಿನ ಕುತ್ತಿಗೆಗೆ ಕಟ್ಟಿಸುತ್ತಾರೆ. ತಾಳಿ ಕಟ್ಟಿಸಿದ ನಂತರ ಧಾರೆಶಾಸ್ತ್ರಮಾಡುತ್ತಾರೆ. ತಾಳಿ ಶಾಸ್ತ್ರವಾದ ಮೇಲೆ ತಾಯಿ-ತಂದೆ ಮತ್ತು ಹಿರಿಯರು ಮೊದಲು ಹಸೆ ಕಂಬಕ್ಕೆ ಹಾಲಿನ ಧಾರೆ ಎರೆದು ನಂತರ ಗಂಡಿನ ಬೊಗಸೆಯಲ್ಲಿ ಹೆಣ್ಣಿನ ಬೊಗಸೆ ಇರಿಸಿ ಅದರಲ್ಲಿ ತೆಂಗಿನಕಾಯಿ ಮೇಲೊಂದು ವೀಳ್ಯದೆಲೆ ಅದರ ಮೇಲೊಂದು ಕಾಸು ಇರಿಸಿ ಧಾರೆ ಎರೆಯುತ್ತಾರೆ. ನಂತರ ಮದುವೆಗೆ ಬಂದ ನೆಂಟರೆಲ್ಲರೂ ಧಾರೆ ಎರೆಯುತ್ತಾರೆ. ಕೋಲಾರದ ಕಡೆಯಲ್ಲಿ ವೀಳ್ಯದ ಎಲೆಯನ್ನು ಆಲಿಕೆಯಂತೆ ಸುರುಳಿ ಸುತ್ತಿ, ಆ ಸುರುಳಿಯನ್ನು ಬೆರಳುಗಳ ಸಂದಿಯಲ್ಲಿ ಸಿಕ್ಕಿಸಿ ಅದರೊಳಗೆ ಹಾಲನ್ನು ಹಾಕುವ ಆಚರಣೆ ಜಾರಿಯಲ್ಲಿದೆ. ಧಾರೆಶಾಸ್ತ್ರ ಮುಗಿಯುವವರೆಗೂ ಮದುಮಕ್ಕಳು ಉಪವಾಸವಿರಬೇಕು. ಮದುವೆ ಮುಗಿದ ಮೇಲೆ ಅರಣಿ ಪೂಜೆಯಲ್ಲಿಟ್ಟ ಪೈರುಗಳನ್ನು ಹೆಣ್ಣಿನ ತಲೆಯ ಮೇಲೆ ಹೊರಿಸಿ ದಾರಿ ಉದ್ದಕ್ಕೂ ಚೆಲ್ಲಿಸಿಕೊಂಡು ಅತ್ತಿ ಮರಕ್ಕೆ ಹಾಕಿಸುತ್ತಾರೆ. ಮದುವೆಗೆ ಬಂದ ಬಂಧುಗಳಿಗೆ ಸಿಹಿ ಊಟ ಹಾಕುತ್ತಾರೆ. ಮಾರನೆಯ ದಿನ ಮಾಂಸದ ಊಟ ಹಾಕುತ್ತಾರೆ. ಹೆಣ್ಣು ಗಂಡು ಇಬ್ಬರ ಮುಂದೆಯೂ ಐದು ಅಥವಾ ಒಂಬತ್ತು ತಟ್ಟೆಗಳಲ್ಲಿ ವಿವಿಧ ರಿತಿಯ ಹಣ್ಣು, ಹೂ ಮತ್ತು ತಿಂಡಿಗಳನ್ನು ಇಟ್ಟು ಆರತಿ ಮಾಡುವ ಒಸಗೆ ಶಾಸ್ತ್ರ ಮಾಡುತ್ತಾರೆ. ಎರಡನೆ ದಿನ ಮದುಮಕ್ಕಳಿಬ್ಬರೂ ಹುತ್ತಕ್ಕೆ ಪೂಜೆ ಮಾಡಿಕೊಂಡು ಬರುತ್ತಾರೆ. ಹೆಣ್ಣು ಗಂಡಿನ ಮನೆಗೆ ಮೂರುಸಲ ಹೋಗಿಬಂದ ಮೇಲೆ ಸೋಬನವನ್ನು ಮಾಡುತ್ತಾರೆ.
ಗಂಗೆಪೂಜೆ ಮದುವೆಯ ಮುಖ್ಯ ಆಚರಣೆಯಾಗಿದೆ. ವಿಶೇಷವಾಗಿ ಮಾದಿಗ ಸಮುದಾಯದಲ್ಲಿ ಗಂಗೆಯನ್ನು ಮನೆಯ ಮಗಳೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಮಾದಿಗರ ಕೇರಿಯ ಮಧ್ಯದಲ್ಲಿ ಇರುವ ಗಂಗಮ್ಮನನ್ನು ಎಲ್ಲರೂ ಪೂಜಿಸುತ್ತಾರೆ.
ಮದುವೆಯ ಇನ್ನಿತರ ಆಚರಣೆಯಲ್ಲಿರುವ ಮರದ ಕೊಂಬೆಗಳು, ಗಂಗೆಪೂಜೆ, ಹೂ, ಹಣ್ಣು, ಪಕ್ಷಿಗಳನ್ನು ಒಳಗೊಂಡ ಹಸೆ ಚಿತ್ರಗಳೆಲ್ಲವೂ ಗಂಡು-ಹೆಣ್ಣು ಕೂಡಿಬಾಳುವುದು ಪ್ರಕೃತಿಯ ಒಂದು ಕೊಂಡಿಯಾಗಿ ಎಂಬುದನ್ನು ಸೂಚಿಸುತ್ತದೆ. ಮಾತು ಕೊಡುವುದಕ್ಕೆ ವೀಳ್ಯದೆಲೆ ಸಾಕ್ಷಿಯಾಗಿರುವುದು, ಕರಿಕಂಬಳಿಯ ಗದ್ದಿಗೆಯ ಮೇಲಿಡುವ ಹೊಂಬಾಳೆಯ ಕಳಶ, ಮಣ್ಣಿನ ಮಡಕೆ, ಮರುಸೃಷ್ಟಿಯ ಸಂಕೇತವಾದ ಧಾನ್ಯಗಳ ಮೊಳಕೆ ಎಲ್ಲವೂ ಚಲನಶೀಲ ಪ್ರಕೃತಿಯ ಸಂಕೇತಗಳೇ ಆಗಿವೆ. ಮದುವೆಯಲ್ಲಿ ಬಳಸುವ ಕರಿಕಂಬಳಿ ಮತ್ತು ಕರಿಬಳೆಗಳು ಶುಭದ ಸಂಕೇತಗಳಾಗಿವೆ.
ವೈದಿಕರಲ್ಲಿ ಗಂಡ ತೀರಿಕೊಂಡ ಹೆಣ್ಣು ಅಮಂಗಳವಾದರೆ ಇಲ್ಲಿ ಗಂಡ ತೀರಿಹೋದ ಹೆಣ್ಣಿನ ಕೈಯಲ್ಲಿಯೇ ಮದುವೆ ಮುಗಿಯುವವರೆಗೂ ಆರದಂತೆ ಉರಿವ ದೀಪವನ್ನು ಹಚ್ಚಿಸುತ್ತಾರೆ. ವಿಧವೆ ಇಲ್ಲಿ ಅಶುಭಳಲ್ಲ, ಬಹಿಷ್ಕೃತಳಲ್ಲ. ದೀಪ ಬೆಳಕಿನ ಸಂಕೇತ. ಎಲ್ಲರನ್ನು ಬೆಳಕಿನಂತೆ ಶುಭವೆಂದು ಪರಿಭಾವಿಸುವುದು ಮಾನವೀಯ ಮೌಲ್ಯವೇ ಆಗಿದೆ.
ಹಟ್ಟಿಯ ಹಿರಿಯರು ಅಥವಾ ಸಮುದಾಯದ ಹಿರಿಯರು ಮದುವೆ ಮಾಡಿಸುತ್ತಾರೆ. ಮನೆಯಲ್ಲಿಯೇ ಮದುವೆ ಮಾಡುವುದು, ನೆಂಟರು, ಹಟ್ಟಿಯವರೇ ಸೇರಿ ಮದುವೆ ಕಾರ್ಯಗಳನ್ನು ಮಾಡುವುದು ಪರಿಶಿಷ್ಟ ಜಾತಿಗಳಲ್ಲಿ ಈಗಲೂ ಮುಂದುವರೆದುಕೊಂಡು ಬಂದಿದೆ. ಹಿಂದೆ ಇವರಲ್ಲಿ ಹೆಣ್ಣಿಗೆ ತೆರ ಕೊಡುವ ಪದ್ಧತಿ ಇತ್ತು. ಇಂದಿಗೂ ಸಾಂಕೇತಿಕವಾಗಿದೆ. ಮೇಲ್ಜಾತಿಗಳಲ್ಲಿ ಇರುವ ವರದಕ್ಷಿಣೆಯೂ ಇಂದು ಜಾತಿಶ್ರೇಣಿಯಲ್ಲಿನ ಕೆಳಜಾತಿಗಳಲ್ಲಿ ಜಾರಿಗೆ ಬಂದಿದೆ. ಓದಿರುವ ಹುಡುಗ, ಸರ್ಕಾರಿ ನೌಕರಿಯಲ್ಲಿರುವ ಹುಡುಗನೆಂದರೆ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರು ಹೇಳಿದರು. ಪುರೋಹಿತರು ಮದುವೆ ಮಾಡಿಸುವುದು ಸಹ ಜಾರಿಗೆ ಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ, ಬೌದ್ಧಧರ್ಮಕ್ಕೆ ಮತಾಂತರವಾಗಿರುವವರು ಸಹ ಹಿಂದಿನ ಹಲವಾರು ಆಚರಣೆಗಳನ್ನು ಇಟ್ಟುಕೊಂಡಿದ್ದಾರೆ.
ಬಾಡುಚೀಟಿ ಕಟ್ಟುವಾ ಬಾರಾ…
ಹಬ್ಬದ ಸಂಭ್ರಮಕ್ಕೆ ಬಡತನವು ಅಡ್ಡಿಯಾಗುವುದಿಲ್ಲ. ತಮ್ಮ ಕಷ್ಟಗಳು ಮತ್ತು ಜಂಜಾಟಗಳ ನಡುವಿನಲ್ಲೇ ತಮ್ಮದೇ ದಾರಿ ಹುಡುಕಿಕೊಂಡು ಹಬ್ಬದ ಆಚರಣೆಗೆ ನಡೆಸುವ ತಯಾರಿಯನ್ನು ಈ ನಿಜಾಧಾರಿತ ಕಾಲ್ಪನಿಕ ಕಥೆ ನಿರೂಪಿಸುತ್ತದೆ.
ಬಾಡುಚೀಟಿ ಕಟ್ಟುವಾ ಬಾರಾ…
ಎಂಟಮ್ಮನ ದೊಡ್ಡಮಗ ಅಮರಪ್ಪ ಐದಾರು ವರುಷದ ಹಿಂದೆ ಕೆಲಸ ಹುಡುಕಿಕೊಂಡು ಹೋಗಿ ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ ಹೆಂಡತಿಯನ್ನೂ ಅಲ್ಲೇ ಸೇರಿಸಿದ್ದ. ಮಕ್ಕಳನ್ನು ಕರೆದುಕೊಂಡು ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೇ ತನ್ನ ಹುಟ್ಟೂರಾದ ಕುಂಬಾರಹಳ್ಳಿಗೆ ಬಂದಿದ್ದ. ಕುಂಬಾರಹಳ್ಳಿಗೆ ಬರುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು.
ಅಮರಪ್ಪನ ಹೆಂಡತಿ ನೇತ್ರಮ್ಮ ಕೆಲಸ ಮಾಡಿ ಮಾಡಿ ಇತ್ತೀಚೆಗಂತು ತುಂಬಾನೇ ನಿತ್ರಾಣಗೊಂಡಿದ್ದಳು.ನನ್ಕ ನಡುವು ಶಾನ ಅಗೀತಾ ಅದಿ ಮಾರಾಯ' ಅಂತ ಯಾವಾಗಲೂ ತನ್ನ ಗಂಡ ಅಮರಪ್ಪನಿಗೆ ಹೇಳುತ್ತಿದ್ದಳು.ಏನೇ ಈ ನಡ್ವಿ ಯಾವಾಗ ನೋಡಿದ್ರು ನಡುವು ನೋವು ನಡುವು ನೋವು ಅಂತೀಯಾ, ಇರು ಅಂಗೆ ವೋಗಿ ಎರ್ಡು ಎಂಡ್ರಕಾಯಿಗ್ಳವ ಇಡ್ತಂದು ಬಂದು ಬುಡ್ತೀನಿ. ಎಂಡ್ರಕಾಯಿ ನಡುವು ನೋವ್ಕ ಬಲೆ ಒಳ್ಳೇದು ಅಂತ ನಮ್ಮಮ್ಮನು ಅನ್ನೋಳು, ಅಪ್ನವೂನು ಕರ್ದಂದು ಹೋತೀನಿ, ಅಪ್ನು ಮೀನು ಎಂಡ್ರಕಾಯಿಗ್ಳುವ ಇಡೇದ್ರಾಗ ಎಸ್ಪರ್ಟು. ಬಿರ್ನಬರ್ಬೋದು’ ಅಂತ ಏಡಿಕಾಯಿಬೇಟೆಗೆ ಹೋಗಲು ಎದ್ದ. ಅಷ್ಟರಲ್ಲಿ ಅಮರಪ್ಪನ ನಾಲ್ಕು ಜನ ಮಕ್ಕಳು ಅಪ್ಪೋ ನಾವೂನೂ ಬತ್ತೀವಿ, ನಾವುನೂ ಬತ್ತೀವಿ, ಎಂಡ್ರಕಾಯಿ ಇಡೇದ್ನಾ ನಾವು ನೋಡಬೇಕು' ಎಂದರು. ಅದಕ್ಕೆ ಅಮರಪ್ಪಆ ಸರೆ ಬನ್ರಿ, ನಾವ್ ಇಡ್ದಾಕಿದ್ರೆ ಬಕೀಟಾಕ ಇಡ್ದಾಕೆನ್ನೀರಿ’ ಎಂದು ಮಕ್ಕಳಿಗೆ ಹೇಳುತ್ತಾ, ತನ್ನ ತಂದೆಯನ್ನು ಕುರಿತು ಅಪ್ಪೋ ಬಾ ಅಂಗೆ ಹೋಗಿ ಎರ್ಡು ಎಂಡ್ರಕಾಯಿಗ್ಳುವ ಇಡ್ತಂ ಬರೋನಾ, ಎಂಡ್ರಕಾಯ್ಗಳ್ವು ಇಡ್ದು ಶಾನ ದಿನ ಆಯ್ತು' ಅಂದ. ಬಾಯಿ ತುಂಬ ಎಲೆ ಅಡಿಕೆ ಇಟ್ಟುಕೊಂಡು ಆಕರಾಯಿಯಿಂದ ಕುಡುಗೋಲಿಗೆ ಕರ್ಕುಲು ಇಕ್ಕುತ್ತಿದ್ದ ಸೌಡಪ್ಪ ಮಾತನಾಡಲಾಗದೇ ಕೈ ಸನ್ನೆಯಲ್ಲಿ ಹೋಗೋಣ ಎಂದು ತೋರಿಸುತ್ತಾ.. ಉವೂಉನೋಉಉ ಅಂದ. ಅದಕ್ಕೆ ತಾತನನ್ನು ನೋಡಿ ಮಕ್ಕಳು ತಾತ ಮಾಡಿದ ಹಾಗೆ ಉವೂಉನೋಉಉ ಅಂತ ಮಾಡಿ, ಗೊಳ್ ಎಂದು ನಕ್ಕವು. ಎಲೆ ಅಡಿಕೆ ಉಗಿದು ಬಂದ ಸೌಡಪ್ಪಇದು ಹುಚ್ಚಳ್ಳು ಹೂ ಕಾಲ, ಎಂಡ್ರಕಾಯಿಗ್ಳಾಗ ಬರೇ ಕೊಬ್ಬು ಇರುತಾದಿ, ಎಂಡ್ರಕಾಯಿಗ್ಳನ್ನಾ ಇವಾಗೇನೆ ಇಡಿಬೇಕು. ಒಳ್ಳೆ ಕೆಲ್ಸ ಮಾಡ್ದೆ ನಡಿ ಹೋಗಾನಾ’ ಎನ್ನುತ್ತಾ ಚನಿಕೆ, ವರಬಾರಿ, ಮೀನು ಸಿಕ್ಕಿದರೆ ಮೀನು ಇಡಿಯಬಹುದು ಎಂದು ಕೊಡಮೆಯನ್ನು ಎತ್ತಿಕೊಂಡು ಮಕ್ಕಳನ್ನು, ಅಮರಪ್ಪನನ್ನು ಕರೆದುಕೊಂಡು ಚದುಮನಹಳ್ಳಿ ಕೆರೆಗೆ ಹೋದ. ಮಕ್ಕಳು ಮೊದಲ ಸಲ ಏಡಿಕಾಯಿ ಬೇಟೆಗೆ ಹೋಗ್ತಾ ಇರೋದ್ರಿಂದ ತುಂಬಾ ಕುತೂಹಲ ಮತ್ತು ಖುಷಿಯಿಂದ ಇದ್ದರು.
ಚದುಮನಹಳ್ಳಿಯ ಕೆರೆ ತುಂಬಾ ನೀರಿತ್ತು. ಅಮರಪ್ಪನ ಮಗ ಭೀಮ ಇದ್ದುಕೊಂಡು ತನ್ನ ತಂದೆ ಅಮರಪ್ಪನಿಗೆ ಎಂಡ್ರಕಾಯ್ಗಳ್ವ ಇಡೇದು ನಿನ್ಕ ಎಂಗೆ ತಿಳಿತಾದಿ, ಎಂಗಿ ಇಡಿತೀಯಾ ನಮ್ಕು ಕಲ್ಸಪ್ಪೋ' ಅಂದ. ಅದಕ್ಕೆ ಅಮರಪ್ಪನನ್ಕೂ ನಿಮ್ ತಾತನೇ ಕಲಿಸಿದ್ದು. ತಾತ್ನು ಶನ್ನಾಗಿ ಇಡಿತಾನಿ.’ ಅಂದ. ಇದನ್ನು ಕೇಳಿಸಿಕೊಂಡ ಸೌಡಪ್ಪ ಏ ಮರಿಗ್ಳೆ ಇಲ್ಲಿ ನೋಡ್ರ್ಯಾ ಲೇ ಈ ನೀರು ಹಂಚುಗ್ಳಾಗ ಬಕ್ಕಿಗ್ಳು ಮುದ್ರು ಹಾಕೆಂದಿರ್ತಾವಿ. ಇಂಗಿ ಬಕ್ಕಿಗ್ಳುಕ ಮಣ್ಣು ಮುಚ್ಚಿ ಅಂದಿದ್ರೆ ಅದ್ನ ಮುದ್ರು ಅಂತಾರಿ. ಆ ಮುದ್ರು ಒಳ್ಗಿ ಎಂಡ್ರುಕಾಯಿ ಇರ್ತಾದಿ ಅಂತ ಅರ್ಥ. ಮುದ್ರುವ ಶನಿಕ್ಯಾಗ ರಸಿ ಅಗದಂದು ಅದ್ರಾಕ ಕೈ ಇಕ್ಕಿದ್ರೆ, ಎಂಡ್ರ್ಕಾ ಸಿಕ್ಕಿಹೋತಾದಿ. ಒಂದೊಂದು ಮುದ್ರಾಗ ಒಂದು, ಎರಡು, ಮೂರು ಎಂಡ್ರುಕಾಯಿಗ್ಳು ಇರ್ತಾವಿ. ಮುದ್ರು ಇರ್ದೀರ ಇರೋ ಬಕ್ಕಿಗ್ಳಾಗ ನೀರು ತೆಳ್ಳಗ ಇದ್ರೆ ಅಲ್ಲಿನೂ ಎಂಡ್ರಕಾಯಿಗ್ಳು ಇರ್ತಾವಿ. ಅವ್ಗಳ್ವ ಚನಿಕ್ಯಾಗ, ಹೊರಬಾರ್ಯಾಗ ಅಗ್ದು ಹಿಡಿಬೋದು. ಇಲ್ಲ ಅಂದ್ರೆ ಹೂ ಇರೋ ಕಡ್ಡಿ (ಮುಂದಿನ ಭಾಗದಲ್ಲಿ ಕವಲುಗಳು ಇರೋ ಕಡ್ಡಿ)ಎತ್ತಿ ಅಂದು ಆ ಬಕ್ಯಾಕ ಇಕ್ಕಿದ್ರೆ ಎಂಡ್ರುಕಾಯಿ ಕಡ್ಡಿವ್ಯಾ ಕಚ್ಚಿಂತಾದಿ. ಅವಾಗ ಮೆತ್ತುಗ ಎಳತಂದು, ಕೊಂಡಿಗ್ಳುವ ಮಡ್ಸಿ ಇಡ್ತಂದು ಬಕೀಟಾಕ ಹಾಕೆಂಬೇಕು' ಅಂತ ಸೌಡಪ್ಪ ಮಕ್ಕಳಿಗೆ ತಾನು ಏಡಿಕಾಯಿ ಹಿಡಿಯುವುದನ್ನು ತೋರಿಸ್ತಾನೆ ಹೇಳ್ತಾ ಹೋದ. ಮಕ್ಕಳು ಅರಳು ಕಣ್ಣುಗಳಿಂದ ನೋಡ್ತಾ ಕೇಳಿಸಿಕೊಳ್ತಾ ಅಪ್ಪ-ಮಗ ಇಡಿತಾ ಇದ್ದ ಏಡಿಕಾಯಿಗಳನ್ನು ನಾಜೂಕಾಗಿ ಇಡಿದು ಬಕೇಟಲ್ಲಿ ಹಾಕಿಕೊಳ್ಳುತ್ತಿದ್ದರು. ಅಮರಪ್ಪನ ದೊಡ್ಡ ಮಗ ಭೀಮತಾತ ಈ ಬಕ್ಯಾಗ ನಾನು ಕೈ ಹಾಕಿ ಇಡಿತೀನಿ ಇರ್ತಾತೋ’ ಅಂತ ಖುಷಿಯಾಗಿ ಹೋಗಿ ಬೊಕ್ಕೆಯಲ್ಲಿ ಕೈ ಹಾಕ್ದ. ಹಾಕಿದ್ ತಕ್ಷಣ ನೀರುಹಾವು ಇವನ ಕೈ ಮೇಲೆ ಬಂದು ಬಿಡ್ತು. ತುಂಬ ಹೆದರಿಕೊಂಡ ಭೀಮ ಕಿಟಾರ್ ಅಂತ ಕಿರುಚಿ ಓಡಿಹೋದ. ಮಕ್ಕಳೆಲ್ಲಾ ಭಯಕ್ಕೆ ಮುದುರಿಕೊಂಡುವು. ಇದನ್ನು ನೋಡಿಕೊಂಡಿದ್ದ ಸೌಡಪ್ಪ ಲೇ ಭೀಮ ಬಕ್ಯಾಗ ನೀರು ತೆಳ್ಳಗ ಅದೋ ಇಲ್ಲೋ ಅಂತ ನೋಡದೀರ ಕೈ ಕಾಕಿದ್ರೆ ಇಂಗೇ ಹಾಗೋದು. ಹೋದ್ರೆ ಹೋಗ್ಲಿ ಬುಡೋ ದೈರ್ಯ ಬತ್ತಾದಿ. ಎಲ್ಲಾ ಹಾವುಗ್ಳು ವಿಷ ಅಲ್ಲ. ನೀರುಹಾವು ಕಚ್ಚಿದ್ರೆ ಕೆಸ್ರು ನೀರು ಕುಡುದ್ರೆ ಸರ್ವೋತಾದಿ' ಎಂದ. ಇತ್ತ ನೀರಲ್ಲಿ ಮೀನುಗಳು ಎಗರುವುದನ್ನು ನೋಡಿ, ಮಕ್ಕಳುಅಪ್ಪ, ತಾತ ಅಲ್ಲಿ ನೋಡ್ರೆ ಏಸೊಂದು ಮೀನ್ಗಳು ಎಗರ್ತಾವಿ’ ಎಂದರು. ಅಮರಪ್ಪ ಅವುಗಳನ್ನು ನೋಡಿ ಹೌದಲ್ಲೋ ಎಷ್ಟುಂದು ಮೀನುಗ್ಳು ಅವೆ' ಅಂದ. ಸೌಡಪ್ಪರ್ರೆ ನಾನು ಹೋಗಿ ತೂಮತ್ರ ಕೊಡಿಮಿ ಹಾಕಿ ಬತ್ತೀನಿ’ ಎನ್ನುತ್ತಾ ಕೊಡಮೆಯನ್ನು ಎತ್ತಿಕೊಂಡು ತೂಬಿನ ಹತ್ತಿರ ಬಂದು ಮೇಲಿನಿಂದ ನೀರು ಬರುತ್ತಿರುವ ಜಾಗಕ್ಕೆ ಕೊಡಮೆಯ ಬಾಯಿ ಸರಿಹೊಂದುವಂತೆ ಕೊಡಮೆ ಇಟ್ಟು ಕೊಡಮೆ ಕದಲದ ಹಾಗೆ ಅಕ್ಕ ಪಕ್ಕ ಎರಡು ಕಡ್ಡಿಗಳನ್ನು ಮಣ್ಣಿನಲ್ಲಿ ಚುಚ್ಚಿದ. ಮತ್ತೆ ಬಂದು ಇತ್ತ ಏಡಿಕಾಯಿಗಳನ್ನು ಹಿಡಿದ. ಸರಿ ಎಲ್ಲರೂ ಸೇರಿ ಬಕೇಟಿನ ತುಂಬಾ ಏಡಿಕಾಯಿಗಳನ್ನು ಹಿಡಿದು ಎತ್ತಿಕೊಂಡು, ತೂಬಿನ ಹತ್ತಿರ ಬಂದರು. ಕೊಡಮೆಯ ತುಂಬಾ ಮೀನುಗಳು ಬಿದ್ದಿದ್ದವು. ಮಕ್ಕಳೂ ಇವುಗಳನ್ನು ನೋಡಿ ಆ ಮೀನ್ಗಳು ಮೀನ್ಗಳು, ತಾತ ಮೀನ್ಗಳ್ವ ಹೆಂಗೆ ಇಡೇದು ಹೇಳು ತಾತ' ಎಂದು ಕೇಳಿಕೊಂಡವು. ಆಗ ಚೌಡಪ್ಪನುಅರೇ ನನ್ನ ಮಕ್ಳೆ, ಎಲ್ಲಾನೂನು ಒಂದೇ ಸಾರಿ ಕಲ್ತು ಬುಡಬೇಕಾ? ಸರೇ ಬನ್ರೆ ಇಲ್ಲಿ ನೋಡ್ರಿ, ಅರೇ ನೀರ್ಕ ಇಂಗೆ ಕೊಡಿಮಿ ಇಕ್ಕುಬೇಕು. ಕೊಡಿಮಿ ಬಾಯಾಗಿಂದ ಮೀನ್ಗ್ಳು ಅದರೊಳ್ಳಿಕ್ಯಾ ಬೀಳ್ತಾವಿ. ಕೊಡಿಮಿ ಬಾಯಿ ಒಳಿಕ್ಯಾ ಇರೋದ್ಕ ಮೀನ್ಗ್ಳು ಮ್ಯಾಲಿಕಿ ಬರದೀರ ಅದರಾಗೆ ಇದ್ದೋತಾವಿ. ಮೀನ್ಗ್ಳು ಅದರೊಳಿಕ್ಕಿ ಬಿದ್ದ ಮ್ಯಾಲಿ ಅವ್ನ ಇಂಗಿ ಬಗ್ಗಿಸೆಂಬೇಕು’ ಎಂದು ಮಕ್ಕಳಿಗೆ ವಿವರಿಸುತ್ತಾ ಕೊಡಮೆಯಲ್ಲಿದ್ದ ಮೀನುಗಳನ್ನು ಇನ್ನೊಂದು ಬಕೇಟಿಗೆ ಸುರಿದುಕೊಂಡು ಮೊಮ್ಮಗಳಾದ ಚಿನ್ನಮ್ಮನಿಗೆ ಎತ್ತಿಕೊಳ್ಳಲು ಕೊಟ್ಟ. ಎಲ್ಲರೂ ಏಡಿಕಾಯಿಗಳನ್ನು ಮತ್ತು ಮೀನುಗಳನ್ನು ಎತ್ತಿಕೊಂಡು ಮನೆಗೆ ಬಂದರು.
ಏಡಿಕಾಯಿಗಳನ್ನು ಸುಲಿಯಲು ಕಾಯುತ್ತಿದ್ದ ಎಂಟಮ್ಮ. ಪುಳ್ಳೆಗಳನ್ನು ಹಾಕಿ ಸ್ವಲ್ಪ ಬೆಂಕಿಯನ್ನು ಹಾಕಿದಳು. ತನ್ನ ಗಂಡ ಸೌಡಪ್ಪನಿಗೆ ಮಾರಾಯ ಎಂಡ್ರಕಾಯಿಗ್ಳು ಎರ್ಡು ಕಿಚ್ಚಾಕ ಹಾಕು ಮಕ್ಕ್ಳು ತಿಂತಾವೆ. ಇವ್ನ ಸುಲ್ದು ಹೆಸ್ರು ಮಾಡೂ ಪಟ್ಟಿಕ್ಯಾ ಲೇಟು ಆತಾದಿ' ಎಂದಳು. ಚೌಡಪ್ಪ ಸ್ವಲ್ಪ ಏಡಿಕಾಯಿಗಳನ್ನು ಸುಟ್ಟು ಮಕ್ಕಳಿಗೆ ಕೊಟ್ಟ. ಮಕ್ಕಳು ರುಚಿ ರುಚಿ ಎಂದು ತಿಂದವು. ಸೊಸೆಯ ಸೊಂಟ ನೋವಿಗೆ ಏಡಿಕಾಯಿಗಳು ಒಳ್ಳೆಯದು ಎಂದು ಸ್ವಲ್ಪ ಏಡಿಕಾಯಿಗಳನ್ನು ಒರಳಿಗೆ ಹಾಕಿ ಕುಟ್ಟಿ ರಸ ತೆಗೆದು ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಸ್ವಲ್ಪ ಹುಣಸೆ ನೀರನ್ನು ಹಾಕಿ ಕುದಿಸಿ ರಾಮರಸ ಮಾಡಿ ಸೊಸೆಗೆ ಕುಡಿಯಲು ಕೊಟ್ಟಳು ಎಂಟಮ್ಮ. ಆಮೇಲೆ ಅಮರಪ್ಪ, ಸೌಡಪ್ಪ,ಎಂಟಮ್ಮ ಮೂರು ಜನ ಸೇರಿಕೊಂಡು ಎಂಡ್ರಕಾಯಿಗಳ ಓಡುಗ್ಳುವ, ಪೀತ್ರುಗಳ್ವ ಕಿತ್ತು ಹಸನು ಮಾಡಿದ್ರು. ಎಂಟಮ್ಮ ಸುಲಿದ ಏಡಿಕಾಯಿಗಳನ್ನು ಎಣ್ಣೆಯಲ್ಲಿ ಚನ್ನಾಗಿ ಉರಿದು, ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಈರುಳ್ಳಿ ಬೆಳ್ಳುಳ್ಳಿ, ಮೆಣಸು,ಜೀರಿಗೆ ದನಿಯಾ, ಚಕ್ಕೆ ಲವಂಗ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕೊಬರಿಯನ್ನು ಹಾಕಿ ಚನ್ನಾಗಿ ಒರಳಲ್ಲಿ ರುಬ್ಬಿ,ಆ ಕಾರವನ್ನು ಉರಿದ ಏಡಿಕಾಯಿಗೆ ಹಾಕಿ ಕಲಿಸಿ ಕುದಿಯಲು ಒಲೆಮೇಲೆ ಇಟ್ಟಳು. ಅದಕ್ಕೆ ಪ್ರತ್ಯೇಕವಾಗಿ ಬೇಯಿಸಿಕೊಂಡಿದ್ದ ಹಸಿ ಕಳ್ಳೆಬೀಜ, ಎಳೆ ಸೊರೆಕಾಯಿಯನ್ನು ಹಾಕಿ ಸೇರಿಸಿ, ಸಾರನ್ನು ಚನ್ನಾಗಿ ಕುದಿಸಿದಳು. ಏಡಿಕಾಯಿಯ ಗಮಲು ಮನೆ ಬೀದಿಯನ್ನೆಲ್ಲಾ ಆವರಿಸಿಕೊಂಡಿತು. ಈ ವಾಸನೆಯನ್ನು ಹಿಡಿದುಕೊಂಡ ತಿಂಡಿಪೋತ ಭೀಮಅಜ್ಜಿ ಸಾರು ಬಲೇ ಗಮ್ಲು ಬತ್ತಾದಿ, ಹೆಂಗೆ ಮಾಡೋದು ಹೇಳಜ್ಜಿ’ ಅಂದ. ಅದಕ್ಕೆ ಎಂಟಮ್ಮ ‘ಎಂಡ್ರಕಾಯಿ ಹೆಸ್ರು ಮಾಡಿದ್ದ್ ಆಗೇಯ್ತು, ಇರು ಮೀನ್ಗ್ಳು ಸಾರು ಹೆಂಗೆ ಮಾಡೋದು ಹೇಳಿಕೊಡ್ತೀನಿ’ ಎಂದಳು.
ಅಷ್ಟರಲ್ಲಿ ಮತ್ತೊಂದು ಕಡೆ ಅಮರಪ್ಪ ಮತ್ತು ಸೌಡಪ್ಪ ಇಬ್ಬರೂ ಕೂಡಿ ಹುಣಸೆ ಹಣ್ಣು, ರಾಗಿ ಹಸಿಟ್ಟು, ಕೆಂಮಣ್ಣು ಇವುಗಳನ್ನು ಸೇರಿಸಿ ಹುಣಸೆ ಮೀನುಗಳಿಗೆ ಚನ್ನಾಗಿ ಉಜ್ಜಿ ಕವುಸು ತೆಗೆದು ಹಸುನು ಮಾಡಿ ಸಾರು ಮಾಡಲು ಎಂಟಮ್ಮನಿಗೆ ತಂದುಕೊಟ್ಟರು. ಭೀಮನನ್ನು ಉದ್ದೇಶಿಸಿ ಎಂಟಮ್ಮ“ನೋಡೋ ಭೀಮ” ಎನ್ನುತ್ತಾ ಮೊಮ್ಮಗನಿಗೆ ಮೀನುಸಾರು ಮಾಡುವ ವಿಧಾನವನ್ನು ತೋರಿಸುತ್ತಲೇ ಮೀನುಸಾರು ಮಾಡಲು ಶುರುಮಾಡಿದಳು. ಮೊದ್ಲು ಕಾರ ರುಬ್ಬೆಂಬೇಕು. ಕಾರುಕ ಮೆಣ್ಸುಕಾಯಿ, ಬೆಳ್ಳುಳ್ಲಿ, ಸುಟ್ಟಿರೋ ಈರುಳ್ಳಿ, ದಣ್ಯಾಲು, ಚಕ್ಕಿ, ಲವಂಗ, ಕೊಮಿರಿ, ಹುಣಿಸೆಣ್ಣು, ಸೊಂಟಿ ಹಾಕೆಂಬೇಕು. ಟೆಂಕಾಯಿ ಚಿಪ್ಪಿವ್ಯಾ ಕಿಚ್ಚಾಗ ಸುಟ್ಟಂದು, ಅದು ಚನ್ನಾಗಿ ಸುಟ್ಟಮ್ಯಾಲೆ ಅದು ಕೆಂಪ್ಗ ಇದ್ದಂಗೇನೆ ಅದನ್ನಾ ಒರ್ಲಾಕ ತಂದು ಹಾಕಿ, ಅದ್ರ ಮ್ಯಾಗ ಅರಲೆಣ್ಣಿ ಅಟ್ಬೇಕು. ಆವಾಗ ಅದು ಉಸೋ ಅನ್ನಂದು ತಣ್ಣುಗ ಆಗೇತಾದಿ, ಅವಾಗ ಎಲ್ಲಾನೂ ನುಣ್ಣುಗ ಚನ್ನಾಗಿ ರುಬ್ಬೆಂಬೇಕು. ರುಬ್ಬೆಂದಿದ್ದು ಆದಮ್ಯಾಕ, ಈರುಳ್ಳಿ ಕೋಯ್ದಂದು ಕರಿಬೇಸೊಪ್ಪು, ಸಾಸ್ವಿ ಹಾಕೆಂದು ತಿರುಪೋತುಕ ಹಾಕಿ, ಅದರಾಕ ರುಬೆಂದಿರೋ ಕಾರ್ವ ಕಲ್ಸಿ ಉಪ್ಪು ಹಾಕಿ ಶನ್ನಾಗಿ ಕುದಿಸೆಂಬೇಕು. ಹೆಸ್ರು ಗಮ್ ಅಂದ್ ಗಮ್ಲು ಬಂದ ಮ್ಯಾಕ ಮೀನ್ಗ್ಳು ಹಾಕಿ ಒಂದು ಕುದಿ ಕುದ್ಸಿ ಕೆಳಿಕ್ಕಿ ಇಳಿಸೆಂಬೇಕು' ಎಂದು ಒಂದೊಂದನ್ನು ಮೊಮ್ಮಗನಿಗೆ ವಿವರಿಸಿ ಹೇಳುತ್ತಲೇ ಮೀನುಸಾರು ಮಾಡಿದಳು. ಗಮಲನ್ನು ತಡೆದುಕೊಳ್ಳಲಾಗದ ಭೀಮ ಪಾತ್ರೆಗೆ ಕೈ ಹಾಕಿ ಒಂದು ಮೀನನ್ನು ಎತ್ತಿಕೊಂಡು ಬಾಯಿಗೆ ಬಿಟ್ಟುಕೊಂಡ. ಆಗಲೇ ಸಂಜೆ ಏಳು ಗಂಟೆ ಆಗುತ್ತಾ ಬಂದಿತ್ತು. ಮನೆಯವರೆಲ್ಲಾ ಸೇರಿ ಊಟ ಮಾಡಲು ಕೂತರು. ಎಂಟಮ್ಮ ಎಲ್ಲರಿಗೂ ಸಮನಾಗಿ ಏಡಿಕಾಯಿ ಮತ್ತು ಮೀನುಸಾರನ್ನು ಬಡಿಸಿದಳು. ಅಷ್ಟರಲ್ಲಿ ಎಂಟಮ್ಮನ ಮನೆಯಲ್ಲಿ ದೀಪಾವಳಿ ಹಬ್ಬದ ಕೊನೆ ಬಾಡುಚೀಟಿ ಕಟ್ಟೋಕೆ ಅಂತ ಪ್ರತಿ ತಿಂಗಳಿನ ಹಾಗೆ ಅವತ್ತು ಕೇರಿ ಜನ ಎಲ್ಲಾ ಬಂದು ಸೇರಿದರು. ಎಂಟಮ್ಮ ಬಾಡುಚೀಟಿ ಹಾಕಿಸುವುದರಲ್ಲಿ, ಸಂತೆಯಲ್ಲಿ ಕುರಿ ದನ ವ್ಯಾಪಾರವನ್ನು ಮಾಡುವುದರಲ್ಲಿ ಎತ್ತಿದ ಕೈ. ಅಷ್ಟೇ ಚನ್ನಾಗಿ ಪ್ರತಿ ವರುಷ ದೀಪಾವಳಿ ಹಬ್ಬಕ್ಕೆ, ಯುಗಾದಿ ಹಬ್ಬಕ್ಕೆ ಬಾಡುಚೀಟಿ ಕಟ್ಟಿರೋರಿಗೆ ಮೋಸ ಇಲ್ಲದಂಗೆ ಗುಡ್ಡೆ ಬಾಡನ್ನು ತನ್ನ ಗಂಡ ಸೌಡಪ್ಪನಿಂದ ಮಾಡಿಸುತ್ತಿದ್ದಳು. ಕೇರಿ ಜನಾನೂ ಗುಡ್ಡೆ ಬಾಡು ಮಾಡೋವಾಗ ಒಟ್ಟಿಗಿರೋರು. ಎಲ್ಲರೂ ಬಾಡುಚೀಟಿ ಹಾಕಿದ್ರೆ ಎಂಟಮ್ಮನ ಹತ್ರಾನೆ ಹಾಕಬೇಕು ಎನ್ನುತ್ತಿದ್ದರು. ಎಂಟಮ್ಮ ಚೀಟಿಕಟ್ಟಲು ಬಂದವರನ್ನು ನೋಡಿ ‘ಓ ಅವಾಗೆ ಸೀಟಿಕ ಟೇಮ್ ಆಗೇಯ್ತಾ... ಬನ್ರ್ಯಾ ಎಲ್ಲಾ, ಇವತ್ತು ಅಪ್ನು ಮಗ್ನು ಮೊಮ್ಮಕ್ಳು ಎಲ್ಲಾ ಹೋಗಿ ಶಾನ ಎಂಡ್ರುಕಾಯಿಗ್ಳುವ, ಮೀನುಗ್ಳುವ ತಂದ್ರು. ಶಾನ ಹೆಸ್ರು ಆಗೇದಿ. ಎಲ್ಲರೂ ತಿನ್ರ್ಯಾ’ ಅದ್ಲು. ಅವರು ‘ಅಯ್ಯೋ ಬ್ಯಾಡ ಎಂಟಕ್ಕೋ’ ಅಂದ್ರು. ಆದರೆ ಎಂಟಮ್ಮ ಬಿಡದೆ ಬಲವಂತದಿಂದ ಎಲ್ಲರಿಗೂ ಸಾರು ಹಾಕಿದ್ಲು. ಏಡಿಕಾಯಿ ಸಾರನ್ನು ಲೊಟಕ ಹಾಕಿಕೊಂಡು ತಿನ್ನುತಿದ್ದ ಚನ್ನಕಿಷ್ಣ ಇದ್ದುಕಂಡುಹೆಸ್ರು ಬಲೇ ಅದಿ ಎಂಟಕ್ಕೋ. ನಾನೂನು ನೆನ್ನಿ ಎಕ್ಣಗ್ಳು ತಂದಿದ್ನಿ, ನಮ್ಮೋಳು ಕೂಡ ಕೋಳಿ ಬಾಡ್ಕ ಹಾಕೋ ಮಸಾಲ ಹಾಕಿ ಬಲೇ ಶನ್ನಾಗಿ ಎಕ್ಣಸಾರು ಮಾಡಿದ್ಲು’ ಅಂದ. ಅದಕ್ಕೆ ಎಂಟಮ್ಮ ಹೌದೇನೋ ಶನ್ನಕಿಷ್ಣ, ನಮ್ಮಕ್ಕೊಂದು ಕೊಡ್ಕೂಡ್ದಾ ಸುಟ್ಟನ್ನೋಕ. ನನ್ ಸೊಸಿಕಿ ನಡುವು ನೋವಂತಿ. ನಡ್ವು ನೋವ್ಕ ಬಲೇ ಒಳೇದು ಎಕ್ಣ' ಎಂದಳು. ಇದನ್ನ ಕೇಳಿಸಿಕೊಳ್ಳುತ್ತಿದ್ದ ಭೀಮ ಇದ್ದುಕೊಂಡು ``ಈ ಎಕ್ಣುಗ್ಳುವ ಎಂಗಣ್ಣ ಚನ್ನಕಿಷ್ಣಣ್ಣ ಇಡಿಯೋದು ಹೇಳಣ್ಣೋ' ಅಂದ. ಚನ್ನಕಿಷ್ಣ ಎಕ್ಣಗಳನ್ನ ಹಿಡಿಯುವುದರ ಕುರಿತು ಹೇಳಲು ಶುರುಮಾಡಿದಮಳಿ ಬಿದ್ದು ಮಾರ್ನೆ ದಿನ ಹೋದ್ರೆ ಎಕ್ಣಗ್ಳುವ ಇಡೇಕ ಬಲೇ ಈಸಿ. ಮಳಿ ನೀರ್ ಬಕ್ಕಿಗ್ಳಾಕ ಹೋಗಿ ಬಕ್ಕಿಗ್ಳು ಮುಚ್ಚೋಗಿರ್ತಾವಿ. ಅದ್ಕ ಅವು ಸಲ್ಪ ಸಲ್ಪಾನೇ ಬಯ್ಲಾಗ ಬಕ್ಕಿಗ್ಳನ ತೋಡೆಂದಿರ್ತಾವಿ. ಆ ಬಕ್ಕಿಗ್ಳನ ಶನಿಕ್ಯಾಗ ರಸಿ ರಸೇ ಅಗ್ದರೆ ಸಾಕು ಸಿಕ್ಕೋತಾವಿ. ಬ್ಯಾರೆ ಟೇಮ್ಯಾಗ ಇಡಿಬೇಕಂದ್ರೆ ನೆಟ್ ಎಕ್ಣ ಬಕ್ಕಿಗ್ಳುವ ತಡ್ಕಿ, ಅವು ತೋಡೆಂದು ಹೋಗಿರೋ ಬಕ್ಕಿಗ್ಳುಕ ಮಣ್ಣು ಬರ್ರುಗ ತುರ್ಕಬೇಕು. ದೊಡ್ಡ ಬಕ್ಕಿ ಇರೋದ್ನ ನೋಡಿ ಅದ್ಕ ಊದುರು ಮಡಿಕಿಂದ ಊದುರು ಇಕ್ಕಬೇಕು. ಇತ್ತುಗ ಊದುರು ಇಕ್ಕತಾ ಇದ್ರೆ ಮುಚ್ಚಿರೋ ಒಂದೊಂದು ತೋಡಾಗೂನು ೧೦-೧೫ ಎಕ್ಣಗ್ಳು ಈಸಿಕಿ ಗುದ್ದುತಾವಿ, ಅವಾಗ ಅವ್ನ ಹೊಡ್ದು ಹಿಡತಂಬೋದು. ಇಲ್ಲಾ ಬಕ್ಕಿಗ್ಳುಕ ಗೋಣಿ ಹಾಕಿ ಅವ್ನ ಇಡಿಬೋದು. ಸಾರುಕ್ಕಿಂತ ಇವ್ನ ಉಪ್ಪು ಕಾರ ಹಾಕೆಂದು ಸುಟ್ಟಂದು ತಿಂದ್ರೆ ಬಲೇ ರುಚಿ’ ಅಂದ ಚನ್ನಕಿಷ್ಣ. ಇದನ್ನ ಕೇಳಿಸಿಕೊಳ್ಳುತ್ತಾ ಚೀಟಿ ಕಟ್ಟೋಕೆ ಕಾಯುತ್ತಿದ್ದ ದದ್ದೀಮಪ್ಪನ ಬಾಯಿಂದ ನೀರು ಸುರೀತಿತ್ತು.
ಊಟ ಮಾಡುತ್ತಿದ್ದ ಭೀಮ ಚನ್ನಕಿಷ್ಣನನ್ನು ನೋಡ್ತಾ ಅಣ್ಣೋ ನಾವು ಈ ಹಬ್ಬ ಮುಗಿಸೆಂದು ಹೋಗಿ ನಾಲ್ಕು ಐದು ತಿಂಗ್ಳ ಬುಟ್ಟಂದು ಬತ್ತೀರಿ. ಅವಾಗ ಎಕ್ಣಗ್ಳುವ ಇಡಿಯೋಕ ಹೋಗಾನ' ಅಂದ. ಇದನ್ನು ಕೇಳಿಸಿಕಂಡ ಎಂಟಮ್ಮ.ಲೇ ತಲಿಕಿಂದ್ಲು ಮೊಮ್ಮಗನೇ ಯಾವಾಗ ಅಂದ್ರೆ ಅವಾಗ ಎಕ್ಣುಗ್ಳುವ, ಮೀನುಗ್ಳುವ, ಎಂಡ್ರಕಾಯಿಗ್ಳುವ ಇಡೀಕ ಆಗಲ್ಲಪ್ಪ, ಉಬ್ಬಿ ಮಳ್ಯಾಗ, ಮಗ್ಗಿ ಮಳಿ, ಸಣ್ಣಸಿಲಿ ಮಳಿ, ದೊಡ್ಡಸಿಲಿ ಮಳ್ಯಾಗ ಅವು ನಂಮ್ಮಂಗೆ ಮಕ್ಕಳು ಮರೀನಾ ಮಾಡೋಟೇಮು. ಅವಾಗ ಇಡೀಕೂಡದು’ ಅಂದ್ಲು. ಇದನ್ನು ಕೇಳಿಸಿಕೊಂಡ ಚನ್ನಕಿಷ್ಣ ಹೌದೌದು, ಇಡೇದು ಎಲ್ಲಾದ್ರೂ ಉಂಟಾ. ಅದು ಪಾಪ್ದ ಕೆಲ್ಸ. ಭೀಮ, ಒಂದು ಕೆಲ್ಸ ಮಾಡು ಉಗಾದಿ ಹಬ್ಕ ಬಂದುಬುಡು, ಎಕ್ಣಗ್ಳುವ ಇಡೇದು ಹೇಳಿಕೊಡ್ತೀನಿ' ಎಂದ. ಭೀಮ ಸರಿ ಎನ್ನುವಂತೆ ತನ್ನ ಅಜ್ಜಿ ಮುಖಾನ ನೋಡ್ತಾ ತಲೆ ಅಲ್ಲಾಡಿಸಿಅಂಗ್ಯಾದ್ರೆ ನಾವು ಉಬ್ಬಿಮಳಿ ಮಗ್ಗಿಮಳ್ಯಾಗ ಬರೀ ಸೊಪ್ಪು ತಿನ್ನಬೇಕಾ’ ಎಂದ. ಅದಕ್ಕೆ ವೆಂಕಟಮ್ಮ‘ಸೊಪ್ಪು ಹೆಸ್ರು ಅಂದ್ರೆ ತಾಶಾರು ಮಾಡಬ್ಯಾಡಪ್ಪೋ, ನೂರೊಂದು ಬೆರ್ಕಿ ಸೊಪ್ಪು ತಂದು, ಸೊಪ್ಪು ಹೆಸ್ರು ಮಾಡಿದ್ರೆ ಎಂಥಾ ಕಾಯ್ಲಾ ಇದ್ರು ಒಳ್ಟೋತಾದಿ’ ಎಂದಳು. ಅದಕ್ಕೆ ಚನ್ನಕಿಷ್ಣ ಬೆರ್ಕಿ ಸೊಪ್ಪು ಹೆಸ್ರು ಸುಟ್ಟು ಮಾಡು ಇದ್ದು, ನಂಜಂದು ತಿಂದ್ರೆ, ಏನ್ ಹೇಳ್ತೀಯಾ ಎಂಟಕ್ಕ ಸರ್ಗ ಮೂರೇ ಗೇಣು. ನಮ್ ದೊಡ್ಡತ್ತಿ ಏನ್ ಶನ್ನಾಗಿ ಓಣಬಾಡು ಮಾಡ್ತಾಳಿ ತಿಳಿಕ್ಕಾ? ಏಸು ಬಾಡು ಇದ್ರೂನೂ ಇಸ್ಕೇಲು ಮಡಿಗಿ ಕೊಯ್ದಂಗಿ ಕೊಯ್ದು ಕಣ ಕಣ ಅನ್ನೋ ಅಂಗಿ ಓಣಗಾಕಿ ಮಡ್ಕಿಕ್ಯಾ ಹಾಕಿ ಮಡ್ಗತಾಳಿ. ನಾವು ಇಟ್ಟು ತಿನ್ನೋವಾಗೆಲ್ಲಾ ಕೆಂಡ್ಗಳ ಮ್ಯಾಗ ಹಾಕಿ ಸುಟ್ಟಂದು ತಿಂತೀರಿ' ಅಂದ. ಇದನ್ನು ಕೇಳಿಸಿಕೊಳ್ಳುತ್ತಿದ್ದ ತಿಂಡಿಪೋತ ಭೀಮ ಒಣಬಾಡು ಕನಸು ಕಾಣುತ್ತಾ ಬಾಗಿಲಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದ. ಚೀಟಿ ಕಟ್ಟೋಕೆ ಬಂದೋರು ಮನೆತುಂಬಾ ಇದ್ದಿದ್ದರಿಂದ ಮನೆ ಪೂರ್ತಿ ತುಂಬಿತ್ತು. ಎಂಟಮ್ಮ ಭೀಮನನ್ನು ನೋಡಿಲೇ ಭೀಮ ದಾಲಬಂದ್ರ ಮ್ಯಾಲಿ ಕೂತು ತಿನ್ನಬ್ಯಾಡೋ, ಇಲ್ಲಿ ಬಂದು ತಿನ್ನು’ ಅಂದ್ಲು. ಅದಕ್ಕೆ ಭೀಮ ಏನಜ್ಜಿ ಯಾವಾಗ ನೋಡಿದ್ರು ಏನೋ ಒಂದು ಹೇಳ್ತಾ ಇರ್ತೀಯಾ, ಅದು ಅಂಗ ಮಾಡಬ್ಯಾಡ ಇದು ಇಂಗ ಮಾಡಬ್ಯಾಡ ಅಂತೀಯಾ, ದಾಲಬಂದ್ರ ಮ್ಯಾಗ ಕೂತಂದ್ರೆ ಏನು ಆತಾದಿ? ಏನೂ ಆಗಲ್ಲ ಸುಮ್ಮನಿರು. ನಮ್ಮ ಅಮ್ಮನ ಅಂಗ್ಯಾ ನೀನೂ ಗೊಣ ಗೊಣ ಅಂತಾನೇ ಇರ್ತೀಯಾ' ಅಂದ. ಅದಕ್ಕೆ ಎಂಟಮ್ಮನುಅಲ್ಲೋ ಮೊಮ್ಮಗನೆ ನೀನು ಪ್ಯಾಟ್ಯಾಗ ಸೇರೆಂದ್ಯಾ ಅಂತ ದೊಡ್ಡೋರು ಮಾಡಿರೋ ರೀತಿ ರಿವಾಜುನ ಬಿಡೋಕಾತಾದ್ಯಾ? ಎಲ್ಲಕೂ ರೀತಿ ರಿವಾಜು ಪಬ್ಬತಿ ಅನ್ನೋದು ಅದಿ. ಇಂತದ್ಕ ಇಲ್ಲ ಅನ್ನಂಗಿಲ್ಲ. ಹುಟ್ಟೋದ್ರಿಂದ ಸಾಯೋವರ್ಕು ಎಲ್ಲಾನೂನು ಒಂದೇ ಸಮ್ಕ ನಡೆಯೋದು, ಒಂದೇ ಯೇಗದಾಗ ನಡೆಯೋದು. ನೀನು ಇಲ್ಲಿ ತಕದಿಮಿ ಅಂತಾ ಇದ್ಯಾ ಅಂದ್ರೆ ಜಗತ್ತೆಲ್ಲಾ ಅಂಗೇ ಇರಲ್ಲ. ದಾಲಬಂದ್ರ ಅಂದ್ರೆ ಏನು ಅಂತ ಅನ್ನಂದಿದ್ಯಾ, ಮನಿಕ್ಯಾ ತಾಯಿ ಇದ್ದಂಗ್ಯಾ, ತಾಯಿಕ ತಲಿಮಗನು ನೀನು, ದಾಲಬಂದ್ರ ಮ್ಯಾಗ ಕೂತಂದ್ರೆ ಅಮ್ಮನ ಎದಿ ಮ್ಯಾಗ ಕೂತಂದಂಗ್ಯಾ, ಎದಿ ಮ್ಯಾಲಿ ಕೂತಂದ್ರೆ ಆ ತಾಯಿಕ ಏಸು ನೋವಾತಾದಿ… ಹಗಲು ಅಂದೀರಾ, ರಾತ್ರಿ ಅಂದೀರಾ ನಮ್ಮ ಮನಿ ಕಾಯ್ತಾಳೇ. ದಾಲಬಂದ್ರ ಮ್ಯಾಗ ಕೂತಂದ್ರೆ ಮದ್ವಿ ಆಗಲ್ಲನೋ’ ಅಂದ್ಲು.
ಅದಕ್ಕೆ ಭೀಮ ಇದ್ದುಕಂಡು ಓ ಬುಡಜ್ಜೇ... ರೀತಿ ರಿವಾಜು ಮದುವಿಕ್ಯಾ ಏನ್ಕ ಬೇಕು. ನಾನು ಓದೋದು ಮುಗೀಲಿ ಇರು, ಒಬ್ಬ ಹುಡುಗೀ ನನ್ನ ಜತಿ ಬರಾಗ ರಡಿ ಅವ್ಳೆ, ಕರಕಂಬಂದ್ಬುಡುತೀನಿ' ಅಂದ.ನೀನು ಯಾರನಾನ ಕರಕಂಬಾ, ಯಾವ ಜಾತ್ಯಾದ್ರೆ ಏನು? ಯಾವ ಕುಲ ಆದ್ರೆ ಏನು? ಅವ್ಳು ಮನುಸುಳೇ ಅಲ್ಲಾ. ಬ್ಯಾರೆ ಜಾತ್ಯೋಳು ಅಂತ ಮಕ್ಕಳು ಆಗಲ್ಲ ಅಂತಾದೇನು? ಕರಕಂಬಂದ್ರೂ ನೀನು ನಮ್ಮ ಪಬ್ಬತಿ ಪಕಾರ ಮದ್ವಿ ಆಗಬೇಕು ಅಷ್ಟೆ. ಇಲ್ಲ ಅಂದ್ರೆ ಅರ್ಸಿನ್ ನೀರ್ ಕಾಣ್ದಾ ಹೋದೋನು ಅಂತ ಜನ ಆಡೆಂತಾರಿ ಲೇ. ನಮ್ಕ ಅವಮಾನ ಅದು. ಮದ್ವಿ ಅಂದ್ರೆ ಏನು ಅನ್ನಂದಿದ್ಯಾ, ಮದ್ವಿ ಆಗೋಕು ಕೇಳೆಂದು ಬಂದಿರ್ಬೇಕು. ಅದು ಮಕ್ಕಳ ಆಟನಾ?’ ಅಂದ್ಲು ಎಂಟಮ್ಮ.
ಅದಕ್ಕೆ ಭೀಮ ಏನು ಮದ್ವಿ? ಹುಡ್ಗಿ ಕತ್ತಾಕ ದಾರ ಗಂಡಾಕೋದಾ?' ಎಂದ. ಅದಕ್ಕೆ ಎಂಟಮ್ಮಮದ್ವಿ ಅಂದ್ರೆ ಸುಮ್ನೆ ಅಲ್ಲಾ, ಮಾವು ನೇರ್ಳಿ, ಏಳಿ ರೆಂಬೆಗ್ಳುವ ಹಾಕಿ ಸಪ್ಪರ ಹಾಕ್ಬೇಕು. ಜಂಬುನೇರ್ಳಿ ಅಸಿ ಕಂಬ ಊಣಿ ಅದ್ಕ ನವದಾನ್ಯದು ಅರ್ಸಿನ ಬಟ್ಟಿ ಮಾಡಿ ಕಟ್ಬೇಕು. ಸಪ್ಪುರ್ಕ ಬಾಳಿಗೊನಿ, ಎಳ್ನೀರು ಕಟ್ಬೇಕು. ನೆಲ್ಲು ಕುಟ್ಟಿ ಕರಿ ಕಂಬ್ಳಿ ಮ್ಯಾಗ ಅಸಿ ಬಸ್ಬೇðಕು. ಕಳ್ಸ ಪೂಜಿಸ್ಬೇಕು. ಕಂಸ್ಹು ತಟ್ಟಿ ಇಕ್ಕಿ, ಅದ್ರಾಗ ಒಣ ಗೊಬ್ರ ಅರ್ಡಿ, ಅದರ ಮ್ಯಾಲಿ ಕಳಸಶಂಬು ಇಕ್ಬೇಕು. ಮದ್ವಿ ಹೆಣ್ನೀಂದ ಗೊಬ್ರ ಅರ್ಡ್ಸಿ ಅದ್ರ ಮ್ಯಾಲಿ ನವದಾನ್ಯಗ್ಳ ಮಳ್ಕಿ ಹಾಕ್ಸಿ, ಅರಿಣಿ ಪೂಜಿ ಮಾಡ್ಸ್ಬೇಕು. ಮುಂಡಿ ಹೆಂಗ್ಸು ಕೈಯಾಗ ಅರಿಣಿ ಗಡ್ಗಿ ಮ್ಯಾಲಿ ದೀಪ ಅಂಟ್ಸಿ, ಇಡೀ ರಾತ್ರೆಲ್ಲಾ ಅವ್ಳೇ ಆ ದೀಪ ಆರದಂಗಿ ನೋಡೆಂಬೇಕು. ಕೊನೇಕ ಮುತೈದಿ ಕಡಿಂದ ಕಳ್ಸ ತೊಳ್ಸ್ಬೇಕು. ಈಸು ಆದರೆ ಅದೊಂದು ಮದಿವಿ ಅನಿಸೆಂತಾದಿ’ ಅಂದ್ಲು.
ಬಾಡುಚೀಟಿ ಕಟ್ಟೋಕೆ ಬಂದು, ಅಜ್ಜಿ ಮೊಮ್ಮಗನ ಯಾವಾರ ಕತೇನ ಕೇಳಿಸಿಕೊಳ್ಳುತ್ತಿದ್ದ ಮಂಜಮ್ಮ ಎಂಟಕ್ಕ ನಿಮ್ಮ ಕತಿವ್ಯಾ ಅಮ್ಯಾಕಿಕ್ಕೆನ್ರಾ, ಮೊದ್ಲು ನನ್ನ ಸೀಟಿ ಕಾಸುಗ್ಳುವ ತೆಗುದಾ, ಮನ್ಯಾಗ ತುಂಬಿದ ಬಸುರೆಂಗ್ಸುವ ಬುಟ್ಟು ಬಂದಿದ್ನಿ. ನಾಡಿದ್ದು ಎರಿಗಿಸಾಂಗ್ವಿ ನನ್ನ ಸೊಸಿಕಿ. ನಿನ್ಕ ಮನ್ನೇನೇ ಹೇಳಿದ್ನಲ್ಲಾ..ಒಂಬತ್ತು ವಸಿಕಿ ಹಾಕಬೇಕು ಅಂತಾ. ಚಕ್ಕಲಿ, ಸಿಮುಲುಂಟಿ ಮಾಡಿದ್ನಿ. ಉಳಿದಿದ್ದು ನೀವೇ ಯಾರಾನಾ ಬಂದು ಮಾಡಬೇಕಕ್ಕೋ' ಎಂದಳು. ಅದಕ್ಕೆ ಅಲ್ಲಿ ಇದ್ದ ಊರುಕುಂಟೆಮ್ಮಅಯ್ಯೋ ಎಲ್ಲರೂ ಸೇರಿ ಒಂದೊಂದು ಮಾಡಿದ್ರೆ ಆಯ್ತು ಬುಡು ದೋ, ಅದ್ಕ ಯಾಕ ಆಸು ಟೆನ್ಸನ್ನು’ ಅಂದ್ಲು.
ಮಂಜಮ್ಮನು ಊರುಕುಂಟೆಮ್ಮನನ್ನು ಕುರಿತು ಹೌದು ಊರುಕುಂಟೆಮ್ಮ, ಏನು ನಿಮ್ ಮನಿ ಹತ್ರ ಮನ್ನಿ ಜಗ್ಳಾ? ನೆನ್ನೇ ಕೇಳಾನ ಅನ್ನಂದು ಸುಮ್ಮನೇ ಆದ್ನಿ' ಅಂದ್ಲು. ಊರುಕುಂಟೆಮ್ಮಅಯ್ಯೋ ಅಂದೊಂದು ದೊಡ್ಡ ಕಥಿ ಆಗೇಯ್ತು ಮಂಜಮ್ಮ. ಮಂತಿ, ಏನಂತಂದ್ರೆ ನನ್ನ ಮಮ್ಮಗ್ಳು ಮನ್ಯಾ ವಯ್ಸ್ಕ ಬಂದಿದ್ಲಲ್ಲಾ, ಅವರ ಸಣ್ಣ ಸ್ವಾದರ ಮಾಮನು ಕೈಯಾಗ ಗುಡಸ್ಲು ಹಾಕಿಸಿದ್ರಿ. ಒಂಬತ್ತು ದಿನ ವಸಿಕಿಗ್ಳು ಆದ ಮ್ಯಾಲಿ ಅವ್ನ ಕೈಯಾಗೇ ಗುಡುಸುಲ್ವಾ ಕಿಳಿಸಿದ್ರಿ. ಅದ್ಕ ಅವ್ರ ದೊಡ್ ಸ್ವಾದರ ಮಾಮುನು ಬಂದು ನಾನು ದೊಡ್ ಸ್ವಾದರ ಮಾಮನು ಇರೋವಾಗ ನಾನು ಮಾಡಬೇಕಾಗಿರೋ ಶಾಸ್ತ್ರವ ಇನ್ನೊಬ್ಬರ ಕೈಯಾಗ ಎಂಗಿ ಮಾಡಿಸಿದ್ರಿ ಅಂತ ಜಗ್ಳ ಮಾಡಿದ್ನು’ ಅಂದ್ಲು.
ಅದಕ್ಕೆ ಮಂಜಮ್ಮ ಅಯ್ಯೋ ಆ ಕುಡುಕುನ ಮಾತು ಏನು ಬುಡು, ಅವುö್ನ ಯಾವಾಗೂನೂ ಅಂಗೆ. ಅವುö್ನದು ಇದ್ದಿದ್ದೆ.' ಎಂದಳು. ಊರುಕುಂಟೆಮ್ಮನಾಳಿ ಎರಿಗಿಸಾಂಗ್ವಿಕ ನಾನು ಒತೀನೆ ಬಿರ್ನಾ ಬತ್ತೀನಿ ಬುಡು, ಹೆರಿಗಿ ಸಾಂಗ್ವಿಕಿನ್ನಾ ಬಾಳಂತಿ ಸಾಂಗ್ವಿ ಚನ್ನಾಗಿ ಮಾಡ್ಬೇಕು ಮಂಜಕ್ಕ. ತಾಯಿ ಮಗೂಕ ಬೇವು ಸೊಪ್ಪು, ಅರಿಸಿನ ರುಬ್ಬಿ ಮೈಕೆಲ್ಲಾ ಇಕ್ಕಿ, ಈಪ್ಲೀಸು ಸೊಪ್ಪು, ಬೇವು ಸೊಪ್ಪು, ಮಾವು, ಏಳಿ, ನಿಂಬಿ, ಕೂನು ಸೊಪ್ಪು ನೀರಾಕ ಹಾಕಿ ಶನ್ನಾಗಿ ಕಾಸಿ ನೀರಟ್ಟಬೇಕು. ಅದು ಬಲೇ ಒಳ್ಳೇದು ನೋಡು ತಾಯಿ ಮಗೂಕ ಮಂಜಕ್ಕ’ ಅಂದ್ಲು. ಊ ಊರುಕುಂಟೆಮ್ಮೋ ನಾನು ಮಾತ್ರ ಯಾವ ಸಾಂಗ್ವಿಗ್ಳುವೂ ಬುಡಲ್ಲ, ನಮ್ಮ ಪಬ್ಬತಿವ್ಯಾ ನಾವು ಬುಡೋಕಾತಾದ್ಯಾ' ಅಂದ್ಲು ಮಂಜಮ್ಮ. ಇದನ್ನು ಕೇಳಿಸಿಕೊಳ್ಳುತ್ತಿದ್ದ ಎಂಟಮ್ಮಹೌದು ಲೇ ಮಂಜಮ್ಮ ಈ ಸರಿ ಯಾವ ಮಗ್ವಾನಾ ಹುಟ್ಲಿ ಅತ್ಗಾ ಆಪ್ರೀಸುನು ಮಾಡಿಸಾಕು. ಮನ್ಯಾಗ ಯಾವೋನು ಏನಾನ ಅನ್ನನ್ಲಿ, ತಲಿಕೆಡಿಸೆಂಬ್ಯಾಡ. ನಿನ್ನ ಸೊಸಿ ಶಾನ ಯೀಕು ಅವ್ಳಿ ಪಾಪ. ಇಂತ ಕಾಲಬಂದೂ ಮೂರು ನಾಲ್ಕು ಮಕ್ಳು ಆದ್ರೆ ಶನ್ನಾಗಿರಲ್ಲ. ಮೊದ್ಲು ಮಗೂಕ ಎರ್ಗಿಕ್ಯಾ ಆಸ್ಪತ್ರಿಕ್ಯಾ ಹೋದ್ರು ನಿನ್ನ ಸೊಸಿ ಏನು ಬಾದಿ ಬಿದ್ಲು ಪಾಪ. ನಾನೆ ಕಣ್ನಾರೆ ನೋಡಿದ್ನಿ. ಯಾವ ಡಾಕ್ಟರು ಏನು ಮಾಡಕ್ಕಾಗದೀರಾ ತೋಟಿ ಮುನೆಮ್ಮನ್ವ ಕರ್ಸಿ ಕಾನ್ಪು ಮಾಡಿಸಿದ್ರು’ ಎಂದಳು.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮ ತೋಟಿ ಮುನೆಮ್ಮನು ಅಂದ್ರೆ ಬಗ್ಗೆಂದು ಒಡ್ಯಾಡ್ತಾಳಲ್ಲಾ ಆಯಜ್ಜ್ಯಾ? ಆ ಗುಡುಗುಡು ಅಜ್ಜಿ ಏನ್ ಮಾಡ್ತಾಳಿ?' ಅಂದ. ಅದಕ್ಕೆ ಎಂಟಮ್ಮಹೌದು ಅವ್ಳೆ, ಅಯ್ಯೋ! ಅವ್ಳು ಕಾನ್ಪು ಮಾಡುಸೋದ್ರಾಗ ಬಲೇ ಗಟ್ಟೋಳು. ನೀನು ಅಡ್ಡಡ್ಡ ತಿರುಗಿಕಂಡು ಇದ್ದಾಗ, ಎರ್ಡು ದಿನ ಕಾನ್ಪೇ ಆಗಿಲ್ಲಾ. ನೀನು, ನಿಮ್ಮ ಅಮ್ಮನು ಸಾಯ್ತೀರೋ ಬದ್ಕತೀರೋ ಅಂದಂದಿದ್ರಿ. ಸರೀಗ ತಿರ್ಗ್ಸಿ ನಿನ್ನನ್ನಾ ಈಸಿಕಿ ಎಳದಾಕಿದ್ದು. ನೀನು ಅಳ್ಳದೀರಾ ಇದ್ದಾಗ ತಿಕ ಮ್ಯಾಲಿ ಬಿಟ್ಟು ಅಳಿಸಿ ಬದ್ಕಿಸಿದ್ಲು. ನಿಮ್ಮ ಅಪ್ನು ತಲಿ ಇಕ್ಕುದೀರಾ ತಿಕ ಕೆಳಕಿಕ್ಕಿ ಅಂದು ಬಂದಿದ್ನು. ಅವಾಗ ನಾನು ಸತ್ನಿ, ಮಗೂನು ಸತ್ತತು ಅಂದನ್ನಿ. ಆದ್ರೂ ಏನೂ ಮಾಡಿ ಕಾನ್ಪು ಮಾಡಿಸಿದ್ಲು. ನರುಸಮ್ಮನೋರುಕ ಹೇಳಿಕೊಡೋಕ ತೋಟಿ ಮುನಿಮ್ಮನ್ವ ಕರದಂದು ಹೋತಾರಿ. ಆಸು ಏಸ್ಪರ್ಟು ಆಯಮ್ಮನು. ಕಾನ್ಪು ಮಾಡುಸೋದ್ರಾಗ. ಈವಾಗ ಆಯಮ್ಮನು ಸೊಸಿ ಕೂಡ ಅದೇ ಕೆಲ್ಸ ಮಾಡ್ತಾಳಿ’ ಎಂದಳು. ಇದನ್ನು ಕೇಳಿ ಎಲ್ಲರನ್ನೂ ನೋಡ್ತಾ ಭೀಮ ಮಜುಗರದಿಂದ ತಲೆತಗ್ಗಿಸಿ ನಾಚಿಕೊಂಡ.
ಎಂಟಮ್ಮ ಮಂಜಮ್ಮನಿಗೆ ಹುಟ್ಟಿದ್ ಮ್ಯಾಕ ಸ್ವಾದರತ್ತೇನೇ ಮಗ್ವು ಕಿವ್ಯಾಗ ಹೆಸ್ರು ಹೇಳ್ಬೇಕು. ಅದು ಮುಕ್ಕಿವು ನಮ್ಕ, ಅದ್ಕ ಮುಳಬಾಗುಲ್ಕ ಕೊಟ್ಟಿದ್ರಲ್ಲಾ ನಿನ್ನ ಮಗ್ಳು, ಸುಶೀಲಿವ್ಯಾ ಎಂಗಾನಾ ಮಾಡಿ ಕರಕಂಬಾ. ಅವುö್ಳ ಇಲ್ಲಿಕ್ಯಾ ಬಂದು ಒಂದು ವರ್ಸ ಆಯ್ತು. ನೋಡ್ಬೇಕು ಅನ್ಸ್ತಾ ಅದಿ. ಅವುö್ಳಕ ಯಾವಾಗೂನೂ ಕೆಲ್ಸ ಕೆಲ್ಸ..ಮದಿವ್ಯಾಗ ಕೊಡೋಕು ತೆಗಿಯೋಕು ಗಂಡ್ಸ್ರು ಗಂಡ್ಸ್ರು ಏಜ್ವಿ ಆಡಿದ್ರು ಅಂತ ಆ ಹೆಣ್ಣು ಮಗ್ವು ಏನು ಮಾಡ್ತಾದಿ? ಏಸು ನ್ಯಾಯುಗ್ಳುವ ಮಾಡಿಸಿದ್ನಿ ನಾನೆ, ಅವುö್ಳ ಕೈಯಾಗೆ ಈ ಸರಿ ಅವುö್ಳ ಅಳೀನ್ದು/ಸೊಸಿದೋ ಹೆಸ್ರು ಹೇಳ್ಬೇಕು. ಯುಗಾದಿಕ್ಯಾ ಮೊದ್ಲು ಮಗೂಕ ಮುಂದ್ಯಾವ್ರ ಮಾಡ್ಬೇಕು. ಅವಾಗೆ ಹೆಸ್ರು ಇಕ್ರ್ಯಾ. ಮಗ್ವ ಮುಂದಲೆ ಕೂದ್ಲು ಮಾವುನು ಕತ್ತರಿಸಿ ಮುನೇಶ್ವರ್ನ್ಕ ಇಕ್ಕುಬೇಕು ಅಲ್ಲಾ, ಅದ್ಕ ಸುಶೀಲಿ ಗಂಡನ ಕೈಯಾಗ ಅದ್ವ ಮಾಡ್ಸು. ದ್ಯಾವ್ರಕ ನಮ್ಮನು ಕರುದ್ರು, ನಮ್ಮ ಕೈಯಾಗೇನೆ ಎಲ್ಲಾನು ಮಾಡಿಸಿದ್ರು ಅಂತಾನೂ ಅವುö್ರಕ ಅನ್ಸುತಾದಿ ಸಂಬಂಧಗ್ಳು ಸರಿಹೋತಾದಿ' ಅಂದ್ಲು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮಅಜ್ಜಿ ಮುಂದ್ಯಾವ್ರ ಹೆಂಗಿ ಮಾಡೋದು?’ ಅಂದ. ಅದಕ್ಕೆ ಎಂಟಮ್ಮ ಊರು ಆಶಿಕ್ಯಾ ಇರೋ ತೋಪಾಗ ಏಳು ಜನ ಅಕ್ಕ ತಂಗೀರ್ಕ ಗುಡಿ ಕಟ್ಟಿ, ಅದ್ರು ಮುಂದಿ ಮುನೇಶ್ವರ್ನು ನಿಲ್ಲಿಸಿ, ಜೋಡಿ ಕೋಳಿ ಕೋಯ್ದು ಪೂಜಿ ಮಾಡ್ಬೇಕು. ಈ ಪೂಜಿಕ್ಯಾ ಕಣಗಿಲಿ ಸೊಪ್ಪು, ನೆಕ್ಕಿಲಿ ಸೊಪ್ಪು ಬೇಕೇ ಬೇಕು. ಸ್ವಾದರ ಮಾಮುನು ಮಗೂಕ ಮುಂದಲಿ ಕೂದ್ಲು ಕತ್ತರ್ಸಿ ಮುನೇಶ್ವರ್ನಕ ಇಕ್ಕಿ ಪೂಜಿ ಮಾಡ್ತಾನಿ. ಮಕ್ಕಳ್ಕ ಮುಂದ್ಯಾವ್ರ ಮಾಡ್ಸುದೀರಾ ಇದ್ರೆ ತೊಂದಿರಿ ಆತಾದಿ. ಮಗೂಕ ಮೊದಲು ದ್ಯಾವ್ರ ಇದು. ನಿನ್ಕೂ ಈ ದ್ಯಾವ್ರವ ಉಗಾದಿ ಬಂದುಬುಡುತು ಅಂತ ಮೂರು ದಿನ ಮುಗ್ವುಕೇ ಮಾಡಿದ್ರಿ' ಅಂದ್ಲು. ಎಂಟಮ್ಮ ಎಲ್ಲರ ಹತ್ತಿರ ಬಾಡು ಚೀಟಿಯ ಕಾಸುಗಳನ್ನು ತೆಗೆದುಕೊಂಡು ಬರೆದುಕೊಂಡಳು. ಅರುಣಪ್ಪ ಲೇಟಾಗಿ ಬಾಡು ಚೀಟಿ ಕಟ್ಟಲು ಬಂದ. ಎಂಟಮ್ಮ ಅರುಣಪ್ಪನನ್ನು ನೋಡಿಯಾಕೋ ಅರುಣ ಮನೆ ಒಳಕ್ಯಾ ಬರದೀರಾ ಅಟ್ಯಾಗ್ಯಾ ಇದ್ಯಾ? ಒಳಿಕ್ಯಾ ಬಾ’ ಅಂದ್ಲು. ಅದಕ್ಕೆ ಅರುಣಪ್ಪ ಎಂಟಕ್ಕೂ ನಾಚಪಲ್ಲಿನಾಗ ನಮ್ಮ ಮುನೇಶನೋರು ಅಪ್ಪುನು ಕರೋನಾ ಬಂದು ಸತ್ತೋಗಿ ಬುಟ್ನು ಪಾಪ. ಸಾವ್ಕ ಹೋಗಿದ್ನಿ. ಕರೋನಾ ಬಂದು ಸತ್ತೋದ್ನು ಅಂತ ಯಾರೂ ಹತ್ರಾನೇ ಬರಿಲ್ಲ. ನಾನೇ ಚಟ್ಟ ಚನ್ನಾಗಿ ಕಟ್ಟಿದ್ನಿ. ಎಂಟೇಸುನು ಬಿದ್ರು ಬೊಂಬುಗ್ಳು, ನೆಲ್ಲು ಹುಲ್ಲು, ಸಾವು ಸಾಮಾನು ತಂದ. ಇಬ್ಬರೂ ಸೇರಿ ಸಾಂಗ್ವಿ ಮಾಡಿದ್ರಿ. ಈವಾಗೆ ಬಂದ್ವಿ ಎಂಟಕ್ಕೂ, ಇನ್ನೂ ನೀರು ಅಟ್ಟಂದಿಲ್ಲ ಅದ್ಕೆ ಮನ್ಯಾಕ ಬರಲ್ಲ' ಅಂದ. ಎಂಟಮ್ಮಹೋಗಲಿ ಬುಡು ಅರುಣಪ್ಪ ನಿನ್ಕ ಪುಣ್ಯ ಬತ್ತಾದಿ. ಕರೋನಾ ಬಂದು ಸತ್ತೋದ್ರೆ ಜನ ಬಲೇ ಕೆಟ್ಟುದಾಗಿ ನೋಡ್ತಾರಿ. ನೀನು ಹೋಗಿ ಸಾಂಗ್ವಿ ಮಾಡಿದ್ಯಾ, ತಣ್ಣುಗ ಕಳಿಸಿಕೊಟ್ಟ್ಯಾ, ಹೋಗ್ಲಿ ಬುಡಪ್ಪ ನೀನು ತಣ್ಣಗಿರು’ ಅಂತ ಹೇಳಿ ಅರುಣಪ್ಪನಿಂದ ಬಾಡು ಚೀಟಿಕಾಸು ತೆಗೆದುಕೊಂಡಳು.
ಮಂಜಮ್ಮನು ಸರಿ ಎಂಟಕ್ಕೂ ನಾನು ಬತ್ತೀನಿ. ನಾಳಿ ಎರ್ಗಿ ಸಾಂಗ್ವಿಕ್ಯಾ ಎಲ್ರೂ ಬನ್ರೆ' ಎಂದು ಹೇಳಿ ಹೊರಟಳು. ಭೀಮ ಇದ್ದುಕಂಡುಆ ರ್ರೆ ರ್ರೆ ಅಕ್ಕೋ.. ನಾನೂ ಬತ್ತೀನಿ’ ಅಂತ ಜೋರಾಗಿ ಕೂಗಿದ. ಎಲ್ಲಿ ಏನು ಸಿಗುತ್ತೆ ಅಂತ ಕಾಯುವ ತಿಂಡಿಪೋತ ಜಾಣ ಭೀಮನ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಹೀಗೆ ಎಂಟಮ್ಮನ ಮನೆಗೆ ಚೀಟಿ ಕಟ್ಟೋಕೋ, ಎಲೆ ಅಡಿಕೆ ಹಾಕೋಕೋ, ಊಟ ಆದಮ್ಯಾಲೆ ಮಾತುಗಳು ಹೇಳೋಕೋ, ಏನಾದರೂ ಸಮಸ್ಯೆ ಆದರೆ ಅದರ ಕುರಿತು ಮಾತಾಡೋಕೋ ಕೇರಿಜನ ಸೇರುತ್ತಲೇ ಇರುತ್ತಾರೆ. ಹರಟೆ, ಮಾತು ಕಥೆಗಳು ಇಲ್ಲಿ ಮಾಮೂಲು.
ಎಂಟಮ್ಮನ ಮನೆಯ ಮಾತುಕಥೆಗಳಲ್ಲಿ ಹೊಡೆದು ಹೋದ ಅದೆಷ್ಟೋ ಸಂಬಂಧಗಳು ಒಂದಾಗ್ತಾ ಇದ್ದುವು. ಹರಿದ ಅದೆಷ್ಟೋ ಮನಸ್ಸುಗಳು ಕೂಡುತ್ತಿದ್ದುವು.
ಅಲಿಖಿತ ಜ್ಞಾನ ಪುರಾಣಗಳು
ಸಫಾಯಿ ಕರ್ಮಚಾರಿಗಳಿಗೆ ಮಾಂಸದಡುಗೆ ಇಷ್ಟದ ಅಡುಗೆ. ಈ ಇಷ್ಟವು ಮಾಡಿ ಉಣ್ಣುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರ ಜಾಡು ಹಿಡಿದು ನೋಡಿದಾಗ ಅವರೊಳಗೆ ಜೀವಂತವಾಗಿ ಹರಿದಾಡುತ್ತಿರುವ ಜ್ಞಾನಪರಂಪರೆಯ ಪರಿಚಯವಾಗುತ್ತದೆ.
ಯಾವ ಪ್ರಾಣಿಯನ್ನೂ ಗಬ್ಬಾದಾಗ, ಎಳೆಯದಿರುವಾಗ ಕೊಲ್ಲುವುದಿಲ್ಲ. ಏಡಿ, ಮೀನುಗಳನ್ನು ಸಹಿತ ಅವು ಸಂತತಿ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಹಿಡಿಯುವುದಿಲ್ಲ. ಪಶು, ಪಕ್ಷಿಗಳ ಜೀವನ ಚಕ್ರವನ್ನು ಇವರು ಚೆನ್ನಾಗಿ ಬಲ್ಲರು. ಹಕ್ಕಿ ಗೂಡುಗಳು, ಅವು ಮೊಟ್ಟೆ ಇಡುವ ಕಾಲ, ಮರಿಮಾಡುವ ಕಾಲ, ಏಡಿಗಳ ಮತ್ತು ಇಲಿಗಳ ಬಿಲಗಳ ರಚನೆ, ಅವುಗಳ ಚಲನವಲನ, ಅವುಗಳನ್ನು ಚಾಕಚಕ್ಯತೆಯಿಂದ ಹಿಡಿಯುವ ಕೌಶಲ, ಪ್ರಾಣಿಗಳನ್ನು ಕೊಯ್ಯಲು ಇರಬೇಕಾದ ಕರಾರುವಾಕ್ಕಾದ ಅಂಗರಚನಾ ಶಾಸ್ತ್ರದ ಅರಿವು, ಸಸ್ಯಶಾಸ್ತ್ರದ ಅರಿವನ್ನು ತಿಳಿಸುವ ಹಲವಾರು ರೀತಿಯ ಸಸ್ಯ/ಕಾಯಿ/ಹಣ್ಣುಗಳ ಗುರುತಿಸುವಿಕೆ ಮತ್ತು ಬಳಸುವಿಕೆ ಇವೆಲ್ಲವೂ ಅವರಿಗೆ ಪರಿಸರ ಮತ್ತು ಋತುಮಾನವನ್ನು ಕುರಿತ ಅರಿವನ್ನು ತಿಳಿಸುತ್ತವೆ.
ದನದ ಚರ್ಮವನ್ನು ನಾಜೂಕಾಗಿ ಸುಲಿದು, ಮಾಂಸದ ತುಣುಕುಗಳು, ಕೂದಲನ್ನು ಅಚ್ಚುಕಟ್ಟಾಗಿ ತೆಗೆದು ಸ್ವಚ್ಛಮಾಡಿ, ಸುಣ್ಣ ಸವರಿ, ತಂಗಡಿ ಗಿಡದ ಚಕ್ಕೆಯನ್ನು ಹಾಕಿದ ನೀರಿನಲ್ಲಿ ನೆನಸಿಟ್ಟು ಹದಮಾಡಿ ಬೇಕಾದ ಆಕಾರಕ್ಕೆ ಕೊಯ್ಯುವಂತೆ ಮಾಡಿ ಅದರಲ್ಲಿ ಮೆಟ್ಟು, ಚಾವಟಿ, ಮಿಣಿಗಳಂತಹ ಕೃಷಿ ಉಪಕರಣಗಳನ್ನೂ, ಅದ್ಭುತ ನಾದ ಹೊಮ್ಮಿಸುವ ತಮಟೆ, ಮೃದಂಗ, ತಬಲಾಗಳಂತಹ ವಾದ್ಯಗಳನ್ನೂ ತಯಾರಿಸುವುದರ ಹಿಂದೆ ಜೀವಶಾಸ್ತ್ರ, ನಾದಜ್ಞಾನದ ಜೀವಂತ ಪರಂಪರೆ ಇದೆ.ಖ್ಯಾತ ಕರ್ನಾಟಕ ಸಂಗೀತ ವಿದುಷಿ ಟಿ.ಎಂ.ಕೃಷ್ಣ ಅವರು ಇತ್ತೀಚೆಗೆ ಅಧ್ಯಯನ ನಡೆಸಿ ಪ್ರಕಟಿಸಿರುವ ‘ಸೆಬಾಸ್ಟಿಯನ್ ಅಂಡ್ ಸನ್ಸ್’ ಪುಸ್ತಕವು ಮೃದಂಗ ಮಾಡುವ ಪರಿಶಿಷ್ಟ ಜಾತಿಯವರಿಗಿರುವ ನಾದ ಭಂಡಾರವನ್ನೇ ತೆರೆದಿಡುತ್ತದೆ. ಈ ಪುಸ್ತಕ ಇದೇ ಹೆಸರಿನಲ್ಲಿ ಕನ್ನಡಕ್ಕೂ ಸುಮಂಗಲಾ ಅವರಿಂದ ಅನುವಾದಗೊಂಡಿದೆ.
ಹಾಡು, ಕಥನ ಕಲೆ, ಕುಣಿತಗಳು ಸಹ ಅವರ ಸೃಜನಶೀಲ ಪರಂಪರೆಯ ಧ್ಯೋತಕಗಳಾಗಿವೆ.
ಜ್ಞಾನ ಪುರಾಣಗಳು
ಈ ಪುರಾಣಗಳು ಸೃಷ್ಟಿ ಕುರಿತು ಕಟ್ಟಿಕೊಂಡ ಸಮುದಾಯದ ನಂಬಿಕೆ ಮತ್ತು ಕಲ್ಪನೆಯ ಬಗ್ಗೆ ಹೇಳುತ್ತವೆ. ನೀರಿನಿಂದ ಆರಂಭವಾಗಿ ಜಲಚರಗಳು, ಸಸ್ಯಲೋಕ, ಪ್ರಾಣಿಲೋಕ, ಕೀಟಲೋಕ ಮನುಷ್ಯ ಕುಲದವರೆಗಿನ ವಿಕಾಸದ ಅರಿವನ್ನೂ ಹೇಳುತ್ತವೆ. ಈ ಪುರಾಣಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಸೃಷ್ಟಿಸುವ ಸಲುವಾಗಿ ತನ್ನನ್ನೇ ತೆತ್ತುಕೊಳ್ಳುವುದು ಮತ್ತು ಬದುಕುಳಿಯಲು ಬೇಕಾದ ದುಡಿಮೆಗೆ ಅಗತ್ಯವಾದ ಉಪಕರಣಗಳಿಗೆ ತಾನು ಕಚ್ಚಾವಸ್ತುವಾಗುವುದರ ಶ್ರದ್ಧೆಯನ್ನು, ಸಾಂಸಾರಿಕ ಲೋಕದ ರೋಗ, ರುಜಿನ, ಕಷ್ಟ-ಕಾರ್ಪಣ್ಯಗಳ ಎದುರಿಸಲು ಬೇಕಾದ ಚೈತನ್ಯವನ್ನು ಹಾಗೂ ಶುದ್ಧ-ಅಶುದ್ಧದ ದ್ವಿತ್ವವನ್ನು ಮೀರಿದ ಬದುಕಿನ ಲಯವನ್ನು.
ಜ್ಞಾನ ಪುರಾಣಗಳು :
ಮತಂಗ ಮುನಿಯ “ಬೃಹದ್ದೇಶಿ” ಪುರಾಣ: ಭಾರತೀಯ ಸಂಗೀತ ಶಾಸ್ತ್ರದಲ್ಲಿ ಉಪಲಬ್ಧವಾಗಿರುವ ಪ್ರಪ್ರಥಮ ಗ್ರಂಥ ಇದಾಗಿದೆ. ಅತ್ಯಂತ ಪಾಂಡಿತ್ಯಪೂರ್ಣವಾದ, ನಮ್ಮ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನಿರ್ಮಿಸಿದ ಗ್ರಂಥ ಇದಾಗಿದೆ. ಹದಿನಾರು ಶಾಸ್ತ್ರಗಳಲ್ಲಿ ವಿದ್ವಾಂಸನಾದ ಮತಂಗ ಮುನಿ ೧೫೦೦ ವರ್ಷಗಳಷ್ಟು ಹಿಂದೆಯೇ ಬರೆದ ಈ ಗ್ರಂಥವು ನಮ್ಮ ಸಂಗೀತ ಕಲೆ-ಜ್ಞಾನದ ಬುನಾದಿಯಾಗಿದೆ.
ಮುನಿ ಪರಂಪರೆಗೆ ಸೇರಿದ ಮತಂಗ ಮನಿಯು ಚಂಡಾಲನಾಗಿ ಹುಟ್ಟಿ, ತಪಸ್ಸು ಮಾಡಿ ಇಂದ್ರನ ಆಶೀರ್ವಾದದಿಂದ ಜ್ಞಾನಿಯಾಗಿ ಆಶ್ರಮವನ್ನು ಕಟ್ಟಿ ಕಷ್ಟದಲ್ಲಿ ಇರುವವರಿಗೆ ಸಹಾಯಮಾಡುತ್ತಿದ್ದುದರ ಕುರಿತು ರಾಮಾಯಣ ಮಹಾಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ. ಮತಂಗ ಮುನಿಯು ತನ್ನ ಸ್ವಪ್ರಯತ್ನದಿಂದ, ಸತ್ಕರ್ಮದಿಂದ ಜ್ಞಾನಿಯಾಗುತ್ತಾನೆ ಎಂದು ಬೌದ್ಧ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಬೃಹದ್ದೇಶಿ ಎಂದರೆ ಬೃಹತ್ ದೇಶಿ ಎಂದರೆ ದೊಡ್ಡದಾದ ಅಥವಾ ಹಿರಿದಾದ ದೇಸಿ ಎಂದು. ಬೃಹದ್ದೇಶಿ ಪುರಾಣದಲ್ಲಿ ಮತಂಗನು ಸಂಗೀತದ ಮೂಲಕ ದೇಶಿ ಎಂಬುದು ಬೃಹತ್ತಾದುದು, ದೇಶೀ ಎಂಬುದು ಎಲ್ಲಕ್ಕಿಂತ ಹಿರಿದಾದುದು ಎಂಬುದನ್ನು ಮನನ ಮಾಡಿಸುತ್ತಾನೆ. ಧ್ವನಿ ಅಂದರೆ ಶಬ್ದವು ಎಲ್ಲಾ ದೇಶಗಳಲ್ಲಿರುವ ಜಂತುಗಳಿಗೂ, ಸಾಮಾನ್ಯ ಜನರಿಗೂ, ದೊರೆಗಳಿಗೂ ಅವರವರ ಇಷ್ಟದಂತೆ ಇಚ್ಛಿಸಿದ ಸುಖವನ್ನು ಕೊಡುತ್ತದೆ. ಇಂತಹ ಸುಖ ಕೊಡುವ ಕಾರ್ಯದಲ್ಲಿ ತೊಡಗಿರುವ ಈ ಧ್ವನಿಯು ದೇಶೀ ಎಂಬ ಹೆಸರನ್ನು ಹೊಂದಿದೆ. ಧ್ವನಿಯು ವಾಸ್ತವ ಅನುಭವವನ್ನು ನೀಡುವುದರಿಂದ ಅದಕ್ಕೆ ದೇಶಿತ್ವ ಉಂಟಾಗುತ್ತದೆ. ಧ್ವನಿಯಿಂದ-ಬಿಂದು, ಬಿಂದುವಿನಿಂದ-ನಾದ, ನಾದದಿಂದ-ಮಾತೃಕೆ, ಮಾತೃಕೆಯಿಂದ ಅಕ್ಷರ, ಅಕ್ಷರದಿಂದ ಜಗತ್ತಿನ ಜ್ಯೋತಿ ಅಂದರೆ ದೇಶೀ ಹುಟ್ಟುತ್ತದೆ. ಧ್ವನಿಯ ಉತ್ಪತ್ತಿ ಸ್ಥಾನ ಯೋನಿ. ಧ್ವನಿ ಎಲ್ಲದರ ಕಾರಣ. ಚಲಿಸುವ ಮತ್ತು ಚಲಿಸದ ಸಕಲ ಜಗತ್ತೂ ಧ್ವನಿಗೆ ಅಧೀನವಾಗಿದೆ. ಧ್ವನಿಯು ವ್ಯಕ್ತವೂ ಅವ್ಯಕ್ತವೂ ಆಗಿದೆ. ಹೆಂಗಸರು, ಮಕ್ಕಳು, ದನ ಕಾಯುವವರು, ದೊರೆಗಳು ಸ್ವ-ಇಚ್ಛೆಯಿಂದ ತಮಗೆ ಇಷ್ಟ ಬಂದಂತೆ ಪ್ರೀತಿಯಿಂದ ತಮ್ಮ ಬದುಕುಗಳಲ್ಲಿ ಯಾವುದನ್ನು ಹಾಡಿಕೊಳ್ಳುತ್ತಾರೋ ಅದನ್ನು ಮತಂಗಮುನಿ ದೇಶೀ ಎಂದು ಹೇಳುತ್ತಾನೆ. ದೇಶಿಯನ್ನು ಇಷ್ಟಬಂದಂತೆ ಹಾಡಿಕೊಳ್ಳಬಹುದು ಎಂದು ಹೇಳುತ್ತಾ ಅದರ ಉತ್ಪತ್ತಿ ಮತ್ತು ಲಕ್ಷಣಗಳನ್ನು ಹೇಳುತ್ತಾನೆ. ನಾದದಿಂದ ಭಾಷೆ ಹುಟ್ಟುತ್ತದೆ. ಹೊಕ್ಕುಳಲ್ಲಿ ಪ್ರಾಣವಾಯು ಹುಟ್ಟಿ, ಕೆಳಗೂ ಮೇಲೂ ಚಲಿಸಿ ಸಮಸ್ತವಾದ ಭವ್ಯವಾದ ನಾದ ಪದ್ಧತಿಯನ್ನು ಉಂಟುಮಾಡುತ್ತದೆ. ನಾದದಲ್ಲಿ ಐದು ವಿಧ. ಗುಹಾದಿಂದ ಸೂಕ್ಷö್ಮ ನಾದ, ಹೃದಯದಿಂದ ಅತಿಸೂಕ್ಷö್ಮ ನಾದ, ಕಂಠದಿಂದ ವ್ಯಕ್ತ ನಾದ, ಅಂಗಳದಿಂದ ಅವ್ಯಕ್ತ ನಾದ, ಬಾಯಿಯಲ್ಲಿ ಕೃತ್ರಿಮ ನಾದ ನೆಲೆಸಿರುತ್ತದೆ ಎಂದು ಹೇಳುತ್ತಾನೆ. ಮತಂಗ ಮುನಿಯು ಪ್ರಕೃತಿಯಿಂದಲೇ ಧ್ವನಿ ಹುಟ್ಟಿದೆ- ಧ್ವನಿಯಿಂದ ಜ್ಞಾನ ಹುಟ್ಟಿದೆ ಎನ್ನುವ ಬೃಹತ್ ದೇಶಿತ್ವದ ಸತ್ಯವನ್ನು ಈ ಕೃತಿಯ ಮೂಲಕ ಹೇಳಿದ್ದಾನೆ. ಆ ಮೂಲಕ ಜ್ಞಾನ ಎಂಬುದು ಮೌಖಿಕ ನೆಲೆಯ ಮೂಲಕ ಹರಡಿ ಅಕ್ಷರವಾಗಿದೆಯೇ ಹೊರತು ಅಕ್ಷರದಿಂದ ಮಾತ್ರ ಜ್ಞಾನ ಹರಡಿಲ್ಲ ಎಂಬುದನ್ನು ಹೇಳುತ್ತಾನೆ. ಇದರ ಮೂಲ ಸ್ಥಾನ ಯೋನಿಯಾಗಿರುವುದರಿಂದ ಹುಟ್ಟುತ್ತಲೇ ಪ್ರತಿಯೊಬ್ಬರೂ ಸಮತೆಯನ್ನು ಎದೆಗಿರಿಸಿಕೊಂಡ ಜ್ಞಾನಿಗಳಾಗಿಯೇ ಹುಟ್ಟುತ್ತಾರೆ ಎನ್ನುವ ಜೀವಸತ್ಯವನ್ನು ಮನಗಾಣಿಸಿದ್ದಾರೆ.
ಸೃಷ್ಟಿಪುರಾಣಗಳು
ಗಂಗ ಭಾರತ: ಭಾರತ ಗಂಗೆಯ ಭಾರತವೆನ್ನುವ ಪುರಾಣ ಹುಟ್ಟಿರುವುದು ನೀರೇ ಎಲ್ಲದರ ಮೂಲವೆಂಬ ನಂಬಿಕೆಯಲ್ಲಿ. ಮಾದಿಗರ ಮೂಲ ದೇವತೆ ಗಂಗಮ್ಮ. ಮಾದಿಗರ ಉಪಪಂಗಡವಾದ ಮಾಸ್ಟೀಕರು ಗಂಗಭಾರತವನ್ನು ಹೆಚ್ಚಾಗಿ ಹಾಡುತ್ತಾರೆ. ಈ ಪುರಾಣದ ಪ್ರಕಾರ ಜೀವಸಂಕುಲದ ಆದಿಶಕ್ತಿ ಗಂಗಮ್ಮ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿ ಈ ಭೂಮಿಯನ್ನು ನೋಡಿಕೊಳ್ಳುವಂತೆ ಆದೇಶಿಸುತ್ತಾಳೆ. ಈ ಮೂವರೂ ಗಂಗೆಯನ್ನು ಮೂರು ಭಾಗ ಮಾಡಿಕೊಂಡು ಹಂಚಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಗಂಗೆ ಅವರ ಮೇಲೆ ರೇಗಿ, ತರಾಟೆಗೆ ತೆಗೆದುಕೊಂಡು ಅವರನ್ನು ಸರಿದಾರಿಗೆ ತರುತ್ತಾಳೆ. ಇಷ್ಟಾದ ಮೇಲೂ ಮಾದಿಗರು ಗಂಗಮ್ಮನನ್ನು ಬಿಟ್ಟು ಶಿವನ ಆರಾಧನೆ ಮಾಡಲು ಶುರು ಮಾಡಿದಾಗ ಅವಳಿಗೆ ಸಿಟ್ಟು ಬಂದು ಇಡೀ ಸಮುದಾಯ ಕಾಯಿಲೆ ಬೀಳಲೆಂದು ಶಾಪ ಕೊಡುತ್ತಾಳೆ. ದೊಡ್ಡಮ್ಮ ಕಾಯಿಲೆ ರೂಪದಲ್ಲಿ ಸಮುದಾಯದ ಮೇಲೆ ದಾಳಿಮಾಡಲು ಹೊರಡುತ್ತಾಳೆ. ಜನ ಕಾಪಾಡು ಎಂದು ಗಂಗಮ್ಮನನ್ನು ಬೇಡಿಕೊಂಡಾಗ ಚರ್ಮದ ತುಂಡನ್ನು ಅವರ ಕುತ್ತಿಗೆಗೆ ಕಟ್ಟಿ ‘ನಾನು ಚರ್ಮದ ತುಂಡಿನ ರೂಪದಲ್ಲಿ ಎಲ್ಲಿ ಇರುವೆನೋ ಅಲ್ಲಿಗೆ ಬರಬೇಡ’ ಎಂದು ದೊಡ್ಡಮ್ಮನ ಹತ್ತಿರ ಭಾಷೆ ತೆಗೆದುಕೊಳ್ಳುತ್ತಾಳೆ. ಆಗ ಗಂಗಮ್ಮ ನಮ್ಮ ಕಾಯಿಲೆ ವಾಸಿಮಾಡಿದಳು ಎಂದು ಜನ ಆರಾಧಿಸುತ್ತಾರೆ. ತನ್ನ ಸಮುದಾಯದ ಜನರನ್ನು ಒಮ್ಮೆ ಪರೀಕ್ಷೆ ಮಾಡಲು ರೋಗ ಬಂದ ಮುದುಕಿಯ ವೇಷಹಾಕಿಕೊಂಡು ಗಂಗಮ್ಮ ಜನರ ಬಳಿಗೆ ಹೋಗುತ್ತಾಳೆ. ಅವರ ಹತ್ತಿರ ಇರುವ ಗೋವುಗಳನ್ನು ನಾಶ ಮಾಡುತ್ತಾಳೆ. ಮುಟ್ಟಿದರೆ ಸಾಕು ಚರ್ಮ ಉದುರಿ ಬೀಳುವಂಥ ಪರಿಸ್ಥಿತಿಯಲ್ಲಿ ಗಂಗೆ ಇರುತ್ತಾಳೆ. ಅವಳನ್ನು ನಾಶಮಾಡಲು ಹಸು/ಕೋಣದ ವೇಷ ಹಾಕಿಕೊಂಡು ಬರುವ ಶಕ್ತಿಯಿಂದ ತಪ್ಪಿಸಿಕೊಳ್ಳಲು ಗಂಗೆ ಹುತ್ತದಲ್ಲಿ ಸೇರಿಕೊಳ್ಳುತ್ತಾಳೆ. ಕೋಣ ಹುತ್ತವನ್ನು ಗುದ್ದುವಾಗ ಹೊರಗೆ ಬಂದು ಕೋಣವನ್ನೇ ಹುತ್ತಕ್ಕೆ ಸೇರಿಸುತ್ತಾಳೆ. ನಾನು ಊರಿಗೆ ಬಂದಾಗ ಪೂಜೆ ಮಾಡಬೇಕೆಂದು ಹೇಳುವ ಗಂಗಮ್ಮನಿಗೆ ಕೋಣನ ಬಲಿಕೊಟ್ಟು ಪೂಜೆ ಮಾಡುತ್ತಾರೆ. ಗಂಗಮ್ಮನ ಈ ಸಾಹಸಗಳನ್ನು, ಪವಾಡಗಳನ್ನು, ಕತೆ, ಹಾಡಿನ ಮೂಲಕ ಮಾದಿಗರು ಹೇಳುತ್ತಾರೆ. ಆಚರಣೆ ಯಾವುದೇ ಇರಲಿ ಗಂಗಮ್ಮನ ಪೂಜೆ ಈಗಲೂ ಮಾದಿಗ ಸಮುದಾಯದಲ್ಲಿ ಪ್ರಮುಖವಾಗಿದೆ.

ಆದಿ ಜಾಂಬವಪುರಾಣ:
ಸಫಾಯಿ ಕರ್ಮಚಾರಿಗಳ ಪುರಾಣಗಳಲ್ಲಿ ಜಾಂಬವಂತ ಮೂಲ ಪುರುಷನಾಗಿದ್ದಾನೆ. ಭೂಮಿ ಹುಟ್ಟುವ ಆರು ತಿಂಗಳಿಗೆ ಮೊದಲು ಹುಟ್ಟಿದ ಆತನೇ ಸೃಷ್ಟಿಕರ್ತ ಎಂಬುವುದು ಮಾದಿಗ ಕುಲದ ನಂಬಿಕೆಯಾಗಿದೆ. ಆತನನ್ನು ಜಾಂಬವಂತ ತಾತ, ಜಾಂಬವಂತ ಮುನಿ ಎಂದು ಕರೆಯುತ್ತಾರೆ. ಸಮಸ್ತ ಸೃಷ್ಟಿಗೆ ಮೂಲಪುರುಷನಾಗಿ ಜಾಂಬವಂತನೇ ಆದಿಶಕ್ತಿಯೊಂದಿಗೆ ಕೂಡಿ ತ್ರಿಮೂರ್ತಿಗಳಿಗೆ ಜನ್ಮಕೊಟ್ಟಿದ್ದು, ಜಲಮಯವಾಗಿದ್ದಂತಹ ಜಗತ್ತಿನಲ್ಲಿ ಭೂಭಾಗವನ್ನು ರೂಪಿಸಿದ್ದು, ಆಕಾಶÀ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಸೃಷ್ಟಿಸಿದ್ದು ಎಂಬ ನಂಬಿಕೆ ಇದೆ. ತನ್ನ ಮಗ ಬೆಪ್ಪು ಮುನಿಯನ್ನು ಕತ್ತರಿಸಿ ಹರಿದ ನೆತ್ತರಿನಿಂದ ಭೂಮಿಯನ್ನು ಸೃಷ್ಟಿಸಿ ಅವನ ಮೂಳೆಗಳಿಂದ ಆಯುಧ, ಉಪಕರಣಗಳನ್ನು ಮಾಡಿ ವಿವಿಧ ಜಾತಿಗಳಿಗೆ ನೀಡಿದನೆಂದು ಹಾಗೂ ಆದಿಜಾಂಬವ ಮುನಿಯ ಮಗಳಾದ ಮತಂಗಕನ್ಯೆಯ ಬೆನ್ನು ಚರ್ಮವನ್ನು ಸಿಗಿದು ತುಂಡುತುಂಡಾಗಿ ಕತ್ತರಿಸಿ, ಹೊಲೆಯರ ತುಂಡು, ಮಾದಿಗರ ತುಂಡು, ಒಕ್ಕಲಿಗರ ತುಂಡು, ಗಾಣಿಗರ ತುಂಡು, ಬಲಿಜಿಗರ ತುಂಡು, ಬ್ರಾಹ್ಮಣನ ತುಂಡು ಎಂದು ಒಂದೊಂದು ಗುಂಪಿಗೂ ಹಂಚಿ ಕೊನೆಯಲ್ಲಿ ಉಳಿದ ತುಂಡನ್ನು ಮಂಡರ ತುಂಡು ಎಂದು ಹೇಳಿದನಂತೆ. ಮಂಡರು ಎಂಬ ಗುಂಪು ಈಗಲೂ ಇದೆ. ಹೀಗೆ ಜಾಂಬವಂತನು ಬಿಡಿಯನ್ನು ಮತ್ತು ವಿವಿಧತೆಯನ್ನು ವ್ಯಕ್ತಪಡಿಸುವುದರ ಜೊತೆಯಲ್ಲೇ ಮಾತಂಗಿಯ ಚರ್ಮದೊಂದಿಗೆ ಅವರಿಗಿರುವ ಬೆಸುಗೆಯ ಕೊಂಡಿಯ ಮೂಲಕ ದೇಹದ ಪೂರ್ಣತೆಯನ್ನು ಮನುಷ್ಯರಿಗೆ ನೆನಪಿಸುತ್ತದೆ.ಜಗತ್ತಿನ ಸೃಷ್ಟಿಕಾರ್ಯ ನಡೆದದ್ದು ಜಂಬು ನೇರಳೆ ಮರದ ಕೆಳಗೆ ಎಂಬುದನ್ನು ಅವರ ಜನಪದ ಹಾಡುಗಳಲ್ಲಿ ನೋಡಬಹುದು. ಭಾರತವನ್ನು ಜಂಬೂದ್ವೀಪವೆಂದು ಕರೆಯುವುದರ ಹಿಂದೆಯೂ ಈ ನಂಬಿಕೆಯೇ ಕೆಲಸಮಾಡಿದೆ.
ಜಂಬೂನಲ್ಲೆ ಹುಟ್ಟಿ ಜಂಬೂನಲ್ಲೆ ಬೆಳೆದು
ಜಂಬುನೇರಳೆ ಕೆಳಗೆ ಜಗವ ನಿಲ್ಲಿಸಿ
ಅಂಗೈಯಲ್ಲಿ ಹಸು ತುಪ್ಪ ಬತ್ತಿ ಹೊಸೆದು
ಆಕಾಶ ಧರಣಮ್ಮ ನಿನಗೆ ಆರತಿ
ಇಲ್ಲಿಯೂ ಸಹ ತನ್ನ ಅಂಗೈಯನ್ನೇ ದೀಪವಾಗಿಸಿ ಬೆಳಗುವುದು ತನ್ನನ್ನೇ ಪೂಜೆಯ ಸಾಧನವಾಗಿಸಿಕೊಳ್ಳುವ ಮೂಲಕ ನಿಷ್ಠೆ, ಗೌರವ ಸಲ್ಲಿಸುವುದಾಗಿದೆ. ಅವರು ಸೃಷ್ಟಿಗೆ ನೀಡಿರುವ ಪ್ರೀತಿ, ಗೌರವವನ್ನು ತೋರುತ್ತದೆ. ನಂಬಿಕೆ ಬರಿ ಇಷ್ಟಕ್ಕೆ ನಿಲ್ಲದೆ ಇಂದಿಗೂ ಮಾದಿಗರ ಜಂಬು ನೇರಳೆ ಕೊಂಬೆಯನ್ನು ಕಡಿದು ತಂದುಧಾರೆಯ ಮಂಟಪದಲ್ಲಿ ನೆಟ್ಟು ಪೂಜಿಸುವ ಕಂಬಳ ದ್ಯಾವರ ಆಚರಣೆಯ ಮೂಲಕ ಮುಂದುವರೆಯುತ್ತಿದೆ. ಸೃಷ್ಟಿಗೆ ನೆರಳಾದ ನೇರಳೆ ಸಂತಾನಕ್ಕೂ ಮೂಲವಿರುವುದು ಮಾತ್ರವಲ್ಲದೆ ತಮ್ಮ ಜಾಂಬವ ಕುಲಕ್ಕೂ, ಜಂಬೂ ದ್ವೀಪಕ್ಕೂ, ಜಂಬೂ ಮರಕ್ಕೂಇರುವ ಪ್ರಾಚೀನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಆದಿಮ ಸಂಸ್ಕೃತಿಯ ಜೀವಂತ ಲಕ್ಷಣಇದಾಗಿದೆ.ಅಲ್ಲದೆ ಜಾಂಬವಂತನು ಮಾನವ ಕುಲದ ಅನುಭವ ಅಥವಾ ಸ್ಮೃತಿಗು ಮತ್ತು ವಿಕಾಸದ ಕೊಂಡಿಯಾಗಿರುವುದರಿಂದ ಜಾಂಬವಂತನ ಕಲ್ಪನೆಯನ್ನು ಆದಿಕಾಲದ ವಿಕಾಸವಾದ ವಿಜ್ಞಾನವಾಗಿಯೂ ವ್ಯಾಖ್ಯಾನಿಸಬಹುದು.
