ನುಡಿದಂತೆ ನಡೆದ ಸಂತಪರಂಪರೆ

ನಾಯಕನಹಟ್ಟಿ ತಿಪ್ಪೆಸ್ವಾಮಿ

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನೆಲೆಸಿದ್ದ ಶರಣ ತಿಪ್ಪೇರುದ್ರಸ್ವಾಮಿಯವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಹದಿನೈದು ದಿನಗಳವರೆಗೂ ನಡೆಯುತ್ತದೆ. ಇಲ್ಲಿನ ಮೂಲ ದೇವರು ಮಾರಮ್ಮ ಎಂಬ ನಂಬಿಕೆಯೂ ಇದೆ. ಆ ಮೂಲದೇವರು ಈಗಿರುವುದು ಚಿತ್ರದುರ್ಗದ ಪಾಪೇನಹಳ್ಳಿ (ವಡ್ಡನಹಳ್ಳಿ)ಯಲ್ಲಿದೆ. ಹಿಂದೆ ದೇವಸ್ಥಾನದ ಕಾಂಪೌಂಡ್‌ನಲ್ಲಿಯೇ ಜಾತ್ರೆಯ ದಿನ ದನವನ್ನು ಬಲಿಕೊಟ್ಟು ಅಡುಗೆ ಮಾಡಿ ನೈವೇದ್ಯ ಮಾಡುತ್ತಿದ್ದುದು. ಈಗಲೂ ದನವನ್ನು ಹೊರಗೆ ಕೊಯ್ದು ಅಡುಗೆಯನ್ನು ಮಾತ್ರ ಒಳಗೆ ನೈವೇದ್ಯ ಮಾಡಲಾಗುವುದು.ಇದು ಬಹುಶಃ ಮಾರಮ್ಮನಿಗೆ ಮಾಡುತ್ತಿದ್ದ ಆಚರಣೆಯನ್ನು ಸಂಕೇತಿಸುತ್ತಿರಬಹುದು.ದನ ಕೊಯ್ಯಲು ಸಹಾಯ ಮಾಡುವ ಮುಸ್ಲಿಮರು ಸಹ ಜಾತ್ರೆಯಲ್ಲೂ ಭಾಗವಹಿಸುತ್ತಾರೆ.

ತಿಪ್ಪೇಸ್ವಾಮಿಯವರು ಶರಣರು ಮತ್ತು ಸಮಾಜ ಸುಧಾರಕರೂ ಆಗಿದ್ದರು. ಅಸ್ಪೃಶ್ಯರ ಏಳಿಗೆಗಾಗಿ ಕೆಲಸ ಮಾಡಿದವರು. ದಲಿತರ ಮನೆಗೆ ಹೋಗಿ ಊಟ ಮಾಡುತ್ತಿದ್ದರು. ಊರಿನಲ್ಲಿ ಕೆರೆ-ಕಟ್ಟೆ ಕಟ್ಟಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟವರು. ನಾಯಕನಹಟ್ಟಿ ತಿಪ್ಪೇಸ್ವಾಮಿಯ ಜಾತ್ರೆಯಂದು ದಲಿತರೇ ಮೊದಲಿಗೆ ತೇರನ್ನು ಎಳೆಯುತ್ತಾರೆ. ಒಮ್ಮೆ ಯಾವುದೋ ಕಾರಣಕ್ಕೆ ದಲಿತರನ್ನು ಕರೆಯದಿದ್ದಾಗ ತೇರು ಮುಂದೆ ಹೋಗದೆ ಹಾಗೆ ನಿಂತುಬಿಟ್ಟಿತಂತೆ. ಮತ್ತೆ ಹೋಗಿ ದಲಿತರನ್ನು ಕರೆತಂದು ಎಳೆಸಿದಾಗಲೇ ತೇರು ಮುಂದೆ ಹೋಯಿತು ಎಂಬ ಪ್ರತೀತಿ ಇದೆ. ತಿಪ್ಪೆಸ್ವಾಮಿಗೆ ಹರಸಿಕೊಂಡು ಅಲ್ಲಿಗೆ ಹೋಗಿ ತಿಪ್ಪೆಮೇಲೆ ಕೂರಿಸಿ ಮೂಗುಚುಚ್ಚಿಸಿ ಹರಕೆ ತೀರಿಸುವ ಸಂಪ್ರದಾಯವಿದೆ.
ಬಲಿಯಂತಹ ವೈದಿಕರ ಆಚರಣೆಗಳನ್ನು ಮತ್ತು ಜಾತಿವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ ಶರಣ ಚಳುವಳಿಯ ಭಾಗವಾಗಿ ಶರಣ ತಿಪ್ಪೇರುದ್ರಸ್ವಾಮಿಯವರ ಸ್ಥಾಪನೆಯನ್ನು ನೋಡಬಹುದು. ಹಾಗೆಯೇ ತಿಪ್ಪೆಯನ್ನು ಅಸಹ್ಯದಿಂದ ನೋಡದೆ ಫಲವತ್ತತೆಯ ಸಂಕೇತವಾಗಿ ನೋಡಿರುವುದು ಶುದ್ಧ-ಅಶುದ್ಧ ಪರಿಕಲ್ಪನೆಗೆ ತದ್ವಿರುದ್ಧವಾಗಿದೆ. ಇಂತಹ ಸಂತರು ತಳಜಾತಿಗಳ ಸ್ವಾಭಿಮಾನದ ದೇವರಾಗಿ ಸ್ಥಾನಪಡೆದಿದ್ದಾರೆ.

ಪೊರಕೆ ಹಿಡಿದು ಅಧ್ಯಾತ್ಮ ತೋರಿದ ಸಂತ ಗಾಡ್ಗೆ ಬಾಬಾ

ಸಂತ ಗಾಡ್ಗೆ ಬಾಬಾ (೨೩ ಫೆಬ್ರವರಿ ೧೮೭೬- ೨೦ ಡಿಸೆಂಬರ್ ೧೯೫೬) ಅವರು ಮಹಾರಾಷ್ಟ್ರದ ಸಂತ ಮತ್ತು ಸಮಾಜ ಸುಧಾರಕರಾಗಿದ್ದರು. ಹಳ್ಳಿ ಹಳ್ಳಿ ತಿರುಗಿಕೊಂಡು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತ, ನೈರ್ಮಲ್ಯದ ಕುರಿತು ಜನರಿಗೆ ಅರಿವು ಮೂಡಿಸುತ್ತ, ಸ್ವತಃ ತಾನೇ ಚರಂಡಿ ಮೋರಿಗಳನ್ನು ಶುಚಿಗೊಳಿಸಿಕೊಂಡು ತಿರುಬೋಕಿಯಂತೆ ಬದುಕಿದ್ದ ಗಾಡ್ಗೆ ಬಾಬಾ ಈಗಲೂ ಹಲವಾರು ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದ್ದಾರೆ.

ಅವರ ಮೂಲ ಹೆಸರು ದೇಬುಜಿ ಜಿ಼ಂಗ್‌ರಾಜಿ ಜನರ‍್ಕರ್. ದೋಬಿ ಕುಟುಂಬಕ್ಕೆ ಸೇರಿದ ಇವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶೆಂಡ್‌ಗಾವ್‌ನವರು. ಊಟದ ಮಡಿಕೆಯನ್ನು ತಲೆಗೆ ಟೊಪ್ಪಿಯಂತೆ ಹಾಕಿಕೊಂಡು, ಪೊರಕೆ ಹಿಡಿದುಕೊಂಡು ಹಳ್ಳಿಹಳ್ಳಿ ತಿರುಗುತ್ತ ಅಲ್ಲಿನ ಚರಂಡಿ ಮತ್ತು ಮೋರಿಗಳನ್ನು ಸ್ವಚ್ಛಮಾಡುತ್ತಿದ್ದರು. ಯಾರಾದರು ನಮಸ್ಕಾರ ಹೇಳಲು ಬಂದರೆ ಪ್ರತಿನಮಸ್ಕಾರ ಹೇಳಲು ಕೆಲಸ ಮುಗಿಯುವವರೆಗೂ ಕಾಯಬೇಕೆಂದು ಹೇಳುತ್ತಿದ್ದರು. ಜನ ಅವರಿಗೆ ಊಟ ಮತ್ತು ಹಣವನ್ನು ನೀಡುತ್ತಿದ್ದರು. ಸಂಗ್ರಹಿಸಿದ ಹಣವನ್ನು ಶಾಲೆಗಳು, ಧರ್ಮಛತ್ರಗಳು, ಆಸ್ಪತ್ರೆಗಳು ಮತ್ತು ಪ್ರಾಣಿಗಳ ಆಶ್ರಯ ತಾಣಗಳನ್ನು ಕಟ್ಟಿಸಲು ಬಳಸುತ್ತಿದ್ದರು. ಆಧ್ಯಾತ್ಮಿಕ ಗುರುಗಳಾಗಿದ್ದ ಮೆಹರ್ ಬಾಬಾರಿಗೆ ಗಾಡ್ಗೆ ಬಾಬಾ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಭಜನೆಗಳನ್ನು, ಕಬೀರರ ದೋಹೆಗಳನ್ನು ಹಾಡುತ್ತ ಸೇವೆ, ಕರುಣೆಯ ಮೌಲ್ಯವನ್ನು ಸಾರುತ್ತಿದ್ದರು. ಕಠಿಣ ದುಡಿಮೆ, ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯನ್ನು ಬೋಧಿಸುತ್ತ ಅಂತೆಯೇ ಬದುಕುತ್ತ ಇದ್ದ ಗಾಡ್ಗೆ ಬಾಬಾ ೧೯೫೬ರಲ್ಲಿ ತೀರಿಕೊಂಡರು. ಅವರ ಗೌರವಾರ್ಥ ಭಾರತ ಸರ್ಕಾರವು ನೈರ್ಮಲ್ಯ ಮತ್ತು ನೀರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅಮರಾವತಿ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇರಿಸಲಾಗಿದೆ. ಗಾಡ್ಗೆ ಬಾಬಾ ಅವರನ್ನು ಅಂಬೇಡ್ಕರ್ ಅವರು ಭೇಟಿಯಾಗಿದ್ದರು.

ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧಿಯವರು ತಾವು ಪ್ರಕಟಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ಭಂಗಿಗಳ ಕುರಿತು ಹೀಗೆ ಬರೆದಿದ್ದಾರೆ. “ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳು ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟ್ಟೆಂಬರ್ ೧೯೩೩) ಸ್ವಚ್ಛತೆಯ ಕೆಲಸ ಮಾಡುವ ಭಂಗಿಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಮತ್ತು ದುಡಿಮೆಯ ಘನತೆಯ ಹಿನ್ನೆಲೆಯಲ್ಲಿ ನೋಡಿದ ಮಹಾತ್ಮ ಗಾಂಧೀಜಿಯವರು ತಮ್ಮ ಆಶ್ರಮದಲ್ಲಿ ಸ್ವತಃ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು ಹಾಗೂ ಎಲ್ಲರಿಂದಲೂ ಶೌಚಾಲಯವನ್ನು ತೊಳೆಸುವ ಕೆಲಸವನ್ನು ಮಾಡಿಸುತ್ತಿದ್ದರು.

“ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳ ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟಂಬರ್ ೧೯೩೩)

ಎಲ್ಲರ ಕಣ್ಣೀರು ಉಪ್ಪೆಂದ ಬುದ್ಧ ಗುರು

ಅರಿವೇ ಗುರು, ನಿರಂತರ ಪರಿವರ್ತನೆಯೇ ಸತ್ಯವೆಂದ ಬುದ್ಧ ತನ್ನ ತತ್ವ ಮತ್ತು ಆಚರಣೆಯ ಮೂಲಕ ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದ ಮೊದಲಿಗ. ಜನರಾಡುವÀ ಮಾತಿನಲ್ಲಿ, ನಿತ್ಯ ಬದುಕಿನ ಉದಾಹರಣೆಗಳ ಮೂಲಕ ಸತ್ಯವನ್ನು ಅರಿವು ಮಾಡಿಸಿದ ಮಹಾನ್ ಗುರು ಆತ. ಎಲ್ಲರೊಳಗೂ ಅರಿವಿನ ಬೆಳಕಿದೆ ಎಂಬ ಸತ್ಯವನ್ನು ಅರಿತಿದ್ದ ಬುದ್ಧ, ಜಾತಿ-ಅಂತಸ್ತುಗಳ ಭೇದವೆಣಿಸದೆ ರಾಜ-ರಾಣಿಯರು, ಪಂಡಿತರಿಂದ ಹಿಡಿದು, ವೇಶ್ಯೆ, ಕ್ಷೌರಿಕ, ಮಗುವನ್ನು ಕಳೆದುಕೊಂಡು ಸಂಕಟದಲ್ಲಿ ಬೆಂದ ತಾಯಿ, ಕುಟುಂಬದವರನ್ನೆಲ್ಲ ಕಳೆದುಕೊಂಡು ಹುಚ್ಚಿಡಿದು ಬತ್ತಲಾಗಿ ತಿರುಗುತ್ತಿದ್ದ ತಾಯಿ, ಕೊಲೆಗಾರ, ಮಲ ಬಾಚುವವ…. ಹೀಗೆ ಸಕಲರಿಗೂ ಅರಿವಿನ ಮಾರ್ಗ ತೋರಿಸಿಕೊಟ್ಟ.
ಸುನೀತನೆಂಬ ಮಲ ಬಾಚುವವನು ಮೊದಲ ಬಾರಿಗೆ ಬುದ್ಧ ಎದುರಿಗೆ ಬರುತ್ತಿರುವುದನ್ನು ಕಂಡು ಮುದುರಿಕೊಂಡು ಹಿಂದೆ ಸರಿಯುತ್ತಾನೆ. ಬುದ್ಧ ಆತನ ಬಳಿಗೇ ಹೋದಾಗ ಆತ ಹೆದರಿ ನದಿಯೊಳಗೆ ಅವಿತುಕೊಂಡು ‘ನನ್ನ ಬಳಿ ಬರಬೇಡಿ ನನ್ನನ್ನು ಮುಟ್ಟಿದರೆ ನೀವು ಗಲೀಜಾಗುವಿರಿ, ನಾನು ಕೀಳು ಜಾತಿಯವನು’ ಎಂದು ಹೇಳುತ್ತಾನೆ. ಆಗ ಬುದ್ಧ ‘ನಮ್ಮನ್ನು ಗಲೀಜು ಮಾಡುವುದು ದುರಾಸೆ, ದ್ವೇಷ, ಮೋಹವಷ್ಟೇ. ನಿನ್ನಂತಹ ವ್ಯಕ್ತಿ ಸಂತೋಷವನ್ನಲ್ಲದೆ ಬೇರೇನನ್ನು ತರಲು ಸಾಧ್ಯವಿಲ್ಲ. ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರ ಕಣ್ಣೀರು ಉಪ್ಪೇ’ ಎಂದು ಹೇಳಿ ಅವನ ಬಳಿ ಹೋಗಿ ಪ್ರೀತಿಯಿಂದ ಅವನ ಮೈದಡವಿ ಶಿಷ್ಯರ ಸಹಾಯದಿಂದ ಆತನ ತಲೆ ಬೋಳಿಸಿ, ಸ್ನಾನಮಾಡಿಸಿ, ಕಾಷಾಯ ವಸ್ತ್ರ ನೀಡಿ ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಕರೆದುಕೊಂಡು ಹೋಗುತ್ತಾನೆ. ಮುಂದೆ ಆತ ಬಹುದೊಡ್ಡ ಗುರುವಾಗುತ್ತಾನೆ. ಮಲಬಾಚುವವನನ್ನು ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಸೇರಿಸಿಕೊಂಡದ್ದನ್ನು ವಿರೋಧಿಸಿದ ಹಲವರು ರಾಜನಿಗೆ ದೂರು ನೀಡುತ್ತಾರೆ. ರಾಜ ಪಸೇನದಿ ವಿಚಾರಿಸುವ ಸಲುವಾಗಿ ಬುದ್ಧನ ಆಶ್ರಮಕ್ಕೆ ಹೋಗುತ್ತಾನೆ. ಆಶ್ರಮದಲ್ಲಿ ಭಿಕ್ಕುವೊಬ್ಬ ಉಪದೇಶ ಮಾಡುವುದನ್ನು ಕೇಳಿ ಆಕರ್ಷಿತನಾಗಿ ಅಲ್ಲೇ ನಿಲ್ಲುತ್ತಾನೆ. ಆತನ ಮುಖ ಶಾಂತವಾಗಿದ್ದು, ಕಣ್ಣುಗಳು ದೀಪದಂತೆ ಬೆಳಗುತ್ತಿರುತ್ತವೆ. ನಂತರ ರಾಜ ಬುದ್ಧನಲ್ಲಿಗೆ ಹೋಗಿ ಯಾರು ಆ ಭಿಕ್ಕು ಎಂದು ಕೇಳುತ್ತಾನೆ. ಬುದ್ಧ ‘ಅವನೇ ಸುನೀತ, ಅವನ ಸಾಧನೆ ದೊಡ್ಡದು. ಬಂದ ಕೆಲವೇ ತಿಂಗಳಲ್ಲಿ ಗುರುವಾದ. ಎಲ್ಲರೊಳಗೂ ಅರಿವಿನ ಬೆಳಕು ಇರುತ್ತದೆ. ಅರಿವಿಗೆ ಜಾತಿ ಭೇದಗಳಿಲ್ಲ ಎಲ್ಲರ ರಕ್ತವೂ ಕೆಂಪೇ’ ಎಂದು ಹೇಳುತ್ತಾನೆ. ರಾಜ ಏನೂ ಮಾತನಾಡದೆ ಹಿಂತಿರುಗುತ್ತಾನೆ. (Thich Nhat Hanh: 279:2014)

ರವಿದಾಸ

ರವಿದಾಸರು (೧೫ ಅಥವಾ ೧೬ನೆಯ ಶತಮಾನ) ಉತ್ತರ ಭಾರತದ ಭಕ್ತಿಚಳುವಳಿಯ ಪ್ರಮುಖ ಸಂತ ಕವಿ. ವಾರಣಾಸಿಯ ಅಸ್ಪೃಶ್ಯ ಚಮ್ಮಾರ ಜಾತಿಗೆ ಸೇರಿದವರು. ಇವರ ತಾಯಿ ಕಲ್ಸಾದೇವಿ, ತಂದೆ ಸಂಟೋಕ್ ದಾಸ್. ತನ್ನ ಆಧ್ಯಾತ್ಮಿಕ ಹುಡುಕಾಟವನ್ನು ನಡೆಸುತ್ತ ಹಲವಾರು ವರ್ಷಗಳ ಕಾಲ ಗಂಗಾ ತೀರದಲ್ಲಿ, ಸಾಧು-ಸಂತರು ಹಾಗೂ ಸನ್ಯಾಸಿಗಳ ಸಂಘದಲ್ಲಿ ಕಳೆದರು. ತಮ್ಮದೆ ಒಂದು ಪಂಥವನ್ನು ಹುಟ್ಟುಹಾಕಿದರು. ಅದನ್ನು ರವಿದಾಸೀಯ ಪಂಥವೆಂದು ಕರೆಯಲಾಗುತ್ತದೆ. ತನ್ನ ಹಾಡು/ಕಾವ್ಯ/ತತ್ವಗಳ ಮೂಲಕ ರಾಜಾಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಇನ್ನು ಹಲವೆಡೆ ವ್ಯಾಪಕವಾಗಿ ಸಂಚರಿಸಿದರು. ಹಲವು ಜಾತಿ ಸಮುದಾಯಗಳಿಗೆ ಸೇರಿದ ಜನರು ಇವರ ಮಾರ್ಗದರ್ಶನ ಪಡೆದು ಅನುಯಾಯಿಗಳಾದರು. ಬ್ರಾಹ್ಮಣರೂ ಇವರ ತತ್ವದರ್ಶನ ಮತ್ತು ವ್ಯಕ್ತಿತ್ವಕ್ಕೆ ತಲೆಬಾಗಿದರು, ತಲೆ ದೂಗಿದರು. ಇವರ ೪೧ ಪದ್ಯಗಳನ್ನು ಸಿಖ್ ಧರ್ಮದ ಧರ್ಮಗ್ರಂಥ ‘ಗ್ರಂಥಸಾಹಿಬ್’ನಲ್ಲಿ ಸೇರಿಸಲಾಗಿದೆ. ರವಿದಾಸರು ಸಿಖ್ ಧರ್ಮ ಸ್ಥಾಪಕ ಗುರುನಾನಕ್ ಅವರನ್ನು ಭೇಟಿಯಾಗಿದ್ದರೆಂದು ಹೇಳಲಾಗುತ್ತದೆ.

ರವಿದಾಸರ ಊರಿನಲ್ಲಿ ಅವರ ದೇವಾಲಯವಿದೆ. ಅಲ್ಲಿ ಪ್ರತಿದಿನವೂ ಪೂಜೆ ನಡೆಯುತ್ತದೆ. ಅವರ ಹಾಡುಗಳನ್ನು ಹಾಡಲಾಗುತ್ತದೆ. ಪ್ರತಿ ವರ್ಷ ಅವರ ಜನ್ಮದಿನಾಚರಣೆಯನ್ನು ಉತ್ಸವದಂತೆ ಆಚರಿಸಲಾಗುತ್ತದೆ.

ಜಾತಿಯಿಂದ ಅಸ್ಪೃಶ್ಯನಾದ ರವಿದಾಸರು ತಮ್ಮ ಜಾತೀಯ ಕೀಳು ಸ್ಥಾನವನ್ನೇ ದೈವಿಕವಾಗಿಸಿದವರು. ತನ್ನ ಮತ್ತು ದೇವರೊಂದಿಗಿನ ಸಂಬಂಧವನ್ನು ಅವರು ಹೋಲಿಸುವುದು ರೇಷ್ಮೆಹುಳು ಮತ್ತು ರೇಷ್ಮೆಗೂಡಿನ ಎಳೆಗೆ. ತಾನೊಂದು ಹುಳು ತನ್ನ ಸುತ್ತಿರುವ ರೇಷಿಮೆ ಎಳೆ ದೇವರು ಎನ್ನುವಾಗ ಹುಳುವಿನ ಎಂಜಲಿನಲ್ಲಿ ದೇವರೂಪುಗೊಳ್ಳುತ್ತಾನೆ. ಮತ್ತೊಂದೆಡೆ ತಾನು ನಾರುವ ಅರಳು ಬೀಜವಾದರೆ ದೇವ ಸುಗಂಧ ಸೂಸುವ ಗಂಧವೆನ್ನುತ್ತಾರೆ.

ಇವರ ಹಾಡು ಮತ್ತು ಕಾವ್ಯದಲ್ಲಿ ತಾರತಮ್ಯಗಳಿಗೆ ಪ್ರತಿರೋಧವನ್ನು ಜಾತಿ, ಧರ್ಮ, ಸಮುದಾಯಗಳ ನಡುವಿನ ಬೇಧವನ್ನು ಮೀರಿದ ಸಾಮಾಜಿಕ ಒಗ್ಗಟ್ಟನ್ನು ಸಾಧಿಸುವ ಹುಡುಕಾಟವನ್ನು, ತನ್ನೊಳಗೆ ತನ್ನೊಂದಿಗೆ ನಡೆಸುವ ಹೋರಾಟವನ್ನು ಕಾಣಬಹುದೆಂದು ಪೀಟರ್ ಪ್ರೈಡ್‌ಲ್ಯಾಂಡ್ ಎಂಬ ವಿದ್ವಾಂಸರು ಹೇಳುತ್ತಾರೆ.
(https://www.britannica.com › https://en.wikipedia.org › ).
ದಮನಿತ ಜಾತಿಗೆ ಸೇರಿದವನಾದರೂ ಎಲ್ಲರೂ ಸಮಾನರಾದ ದುಃಖವಿಲ್ಲದೂರಿನ ಕನಸು ಕಂಡ ಸಂತ ಕವಿ ಈತ. ಆತನ ಕನಸು ಇಂದಿನ ಕನಸೂ ಆಗಿದೆ.


೧.ನಗರದ ಓ ನನ್ನ ಜನರೇ, ಎಲ್ಲರಿಗೂ ತಿಳಿದಿದೆ
ನಾನು ಕಸುಬಿನಿಂದ ಚಮ್ಮಾರ, ಜಾತಿಯಿಂದ ಸಮಗಾರ
ಕೀಳು ಜಾತಿಯವ ಆದರೇನು ಎದೆಯೊಳಗೆ ಭಗವಂತನ ಧೇನಿಸುವೆ

೨. ಐಸಿರಿಯ ಲೋಕದಲಿ ವ್ಯಥೆಯ ಹೆಸರಿಲ್ಲ
ಆನಂದಪುರವದು ನೋವಿನ ವಿಳಾಸವಿಲ್ಲ
ಕರವಿಲ್ಲ, ಚಿಂತೆಯಿಲ್ಲ, ಆಸ್ತಿ ಒಡೆತನವಿಲ್ಲ
ತಪ್ಪುಗಳಿಲ್ಲ, ಚಿಂತೆಗಳಿಲ್ಲ, ಭೀತಿ ಕಿರುಕುಳವಿಲ್ಲ
ಓ ನನ್ನ ಬಂಧು ಆ ಲೋಕ ನನ್ನದು
ಆ ದೂರದ ನನ್ನ ಮನೆಯೊಳಗೆ ತಪ್ಪಿನ ಸುಳಿವಿಲ್ಲ
ಸಮೃದ್ಧ, ಸುಭದ್ರ ಸಾಮ್ರಾಜ್ಯದಲಿ
ಎಲ್ಲರೊಂದೆ ಮೂರನೆಯವರಿಲ್ಲ, ಎರಡನೆಯವರಿಲ್ಲ ಎಲ್ಲರೊಂದೇ
ಅಲ್ಲಿನ ಅನ್ನಪಾನಾದಿ ಬಲು ಪ್ರಸಿದ್ಧ, ಅಲ್ಲಿ ನೆಲೆಸಿರುವರೆಲ್ಲರಿಹರು
ಸಂತೃಪ್ತಿ, ಸುಭಿಕ್ಷೆಯಲಿ
ಏನೋ ಮಾಡಿಕೊಂಡು, ಇಷ್ಟಬಂದಲ್ಲಿಗೆ ಹೋಗುತ್ತಾ
ಸವಾಲಿಲ್ಲದ ಅಲೌಕಿಕ ಅರಮನೆಯಲ್ಲಿ ಹೊರಳಾಡುತ್ತಾರೆ
ಹೇಳುತ್ತಾನೆ ರವಿದಾಸ, ಬಿಡುಗಡೆ ಹೊಂದಿದ ಚಮ್ಮಾರ
ನನ್ನ ಆಜು-ಬಾಜಿನಲಿ ತಿರುಗಾಡುವವರೆಲ್ಲ ನನ್ನ ಗೆಳೆಯರು (Gail Omvedt: 104 & 106-107:2008)