ಶ್ರೀ ಬಿ. ಬಸವಲಿಂಗಪ್ಪ

ಶ್ರೀ ಬಿ. ಬಸವಲಿಂಗಪ್ಪನವರು ಜನಿಸಿದ್ದು ೧೯೨೯ ಏಪ್ರಿಲ್ ೨೧ರಂದು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಇವರ ತಂದೆ ಶ್ರೀ ಬಸಪ್ಪನವರು ಊರೂರು ತಿರುಗುತ್ತ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ತಾಯಿ ಶ್ರೀಮತಿ. ಸಿದ್ಧಲಿಂಗಮ್ಮ. ಬಟ್ಟೆ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಕುಟುಂಬವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ, ನಂತರ ಹರಿಹರಕ್ಕೆ ವಲಸೆ ಹೋಗಿ ನೆಲೆಸಿತು.
ಬಸವಲಿಂಗಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹರಿಹರದಲ್ಲಾಯಿತು. ಗಾಂಧೀಜಿಯವರು ಹುಟ್ಟುಹಾಕಿದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಮೂಲೆ ಮೂಲೆಗೂ ಹಬ್ಬಿದ್ದ ಕಾಲವದು. ಚಳುವಳಿಯ ಕಾವು ಚಿತ್ರದುರ್ಗಕ್ಕೂ ಪಸರಿಸಿದಾಗ ಉತ್ಸಾಹಿ ಯುವಕ ಬಸವಲಿಂಗಪ್ಪನವರೂ ಅದರಲ್ಲಿ ಭಾಗಿಯಾದರು. ಮುಂದೆ ಬಿ.ಎ. ಪದವಿಗಾಗಿ ಮೈಸೂರಿಗೆ ಹೋದಾಗ ಅಂಬೇಡ್ಕರ್ ಚಿಂತನೆಯ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರö್ಯವು ಎಲ್ಲರಿಗೂ ತಲುಪಲು ಜಾತಿ ವ್ಯವಸ್ಥೆಯು ಅಡ್ಡಿಯಾಗಿರುವುದನ್ನು ಅರಿತು ಯುವಕರನ್ನು ಸಂಘಟಿಸುವ ಮತ್ತು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸುವ ಕೆಲಸವನ್ನು ಆರಂಭಿಸಿದರು. ದೇಶದ ಕಾನೂನು ಕುರಿತು ಜನರಿಗಿರುವ ಅಜ್ಞಾನವನ್ನು ಹೋಗಲಾಡಿಸಬೇಕೆಂಬ ಇಚ್ಛೆಯಿಂದ ಬೆಳಗಾವಿಗೆ ಹೋಗಿ ಅಲ್ಲಿನ ರಾಜಾ ಲಕ್ಷö್ಮಣ್‌ರಾವ್ ಕಾನೂನು ಕಾಲೇಜಿಗೆ ಸೇರಿಕೊಂಡರು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದರು. ಇವೆಲ್ಲವೂ ಅವರಿಗೆ ಸ್ಪಷ್ಟತೆಯನ್ನು, ನಿರ್ಭೀತಿಯಿಂದ ಅಭಿವ್ಯಕ್ತಿಸುವುದನ್ನು ಕಲಿಸಿತು. ಕಾನೂನು ಶಿಕ್ಷಣ ಪಡೆದುಕೊಂಡು ಹರಿಹರಕ್ಕೆ ಹಿಂತಿರುಗಿದ ಮೇಲೆ ಅಲ್ಲಿನ ಹಳ್ಳಿಗಳಿಗೆ ಸೈಕಲ್ ಮೇಲೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಜನರನ್ನು ಪ್ರೇರೇಪಿಸಿದರು. ಮೊದಲಿಗೆ ಜನರು ಸ್ಪಂದಿಸಲಿಲ್ಲ. ನಂತರ ಅಲ್ಲಿನ ಹಿರಿಯರೊಬ್ಬರು ಬೆಂಬಲಿಸಿದ್ದರಿಂದ ಜನರು ಮಕ್ಕಳನ್ನು ಶಾಲೆಗೆ ಕಳಿಸತೊಡಗಿದರು. ದಲಿತ ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ಆಂದೋಲನದ ರೀತಿಯಲ್ಲಿ ಮಾಡಿದರು. ಆ ಹಿರಿಯರ ಬೆಂಬಲದಿಂದ ಬದಲಾವಣೆಗೆ ದಲಿತರಷ್ಟೇ ಅಲ್ಲ ಬೇರೆ ಜಾತಿಯ ಪ್ರಗತಿಪರ ಮನಸ್ಸುಗಳು ಹೋರಾಟಕ್ಕೆ ಕೈಜೋಡಿಸಬೇಕೆಂಬುದನ್ನು ಅರಿತುಕೊಂಡರು. ಅಲ್ಲಿನ ದಲಿತರಿಗೆ ನಿವೇಶನಗಳು ಸಿಗುವಂತೆ ಮಾಡಿದರು. ಕಿರ್ಲೋಸ್ಕರ್‌ನಂತಹ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟರು. ಮುಂದೆ ಬೆಂಗಳೂರಿನಲ್ಲಿದ್ದ ತಮ್ಮ ತಂಗಿ ನಿಂಗಮ್ಮನವರ ಬಳಿ ಬಂದು ಅಲ್ಲೇ ವಕೀಲಿ ವೃತ್ತಿಯನ್ನು ಆರಂಭಿಸಿ ಹೆಸರುವಾಸಿಯಾದರು.
೧೯೪೯ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯಕ್ಕೆ ಕಾಲಿಟ್ಟರು. ೧೯೫೦ರಲ್ಲಿ ಟೌನ್‌ಹಾಲ್ ವಿಭಾಗದಿಂದ ಬೆಂಗಳೂರು ನಗರಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಪಕ್ಷದಲ್ಲಿ ಭರವಸೆ ಮೂಡಿಸಿದ ಇವರನ್ನು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಲಾಯಿತು. ಆ ಸಂದರ್ಭದಲ್ಲೇ ಅವರು ಪೌರಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಕಾಳಜಿವಹಿಸಿದರು. ೧೯೫೭ರಲ್ಲಿ ವಿಧಾನಸಭಾ ಚುನಾವಣಿಯಲ್ಲಿ ಸ್ಪರ್ಧಿಸಿ ಬಿಜಾಪುರದಿಂದ ಶಾಸಕರಾಗಿ ಆಯ್ಕೆಯಾದರು. ೩೪ನೇ ವಯಸ್ಸಿನಲ್ಲೆ ಗೃಹಖಾತೆ ಸಚಿವರಾದರು. ೧೯೬೨ರಲ್ಲಿ ಸೋಲನ್ನು ಅನುಭವಿಸಿದರೂ ಹೋರಾಟವನ್ನು ಬಿಡಲಿಲ್ಲ. ಮತ್ತೆ ವಕೀಲಿ ವೃತ್ತಿ ಆರಂಭಿಸಿದರು. ಅಂಬೇಡ್ಕರ್ ಅವರು ಹುಟ್ಟುಹಾಕಿದ ‘ಪೀಪಲ್ ಎಜುಕೇಷನ್ ಸೊಸೈಟಿ’ ಟ್ರಸ್ಟಿಯಾಗಿ ನೇಮಕಗೊಂಡರು. ಮುಂದೆ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮೈಸೂರು ಮಹಾರಾಜರು ರಾಜಮಹಲ್ ಬಡಾವಣೆಯಲ್ಲಿ ಅಂಬೇಡ್ಕರ್ ಅವರಿಗೆಂದು ನೀಡಿದ್ದ ಐದು ಎಕರೆ ಜಮೀನು ಅಂಬೇಡ್ಕರ್ ಅವರು ನಿಧಾನರಾದ ಮೇಲೆ ಪಾಳು ಬಿದ್ದಿತ್ತು. ಬಸವಲಿಂಗಪ್ಪನವರು ಆ ಸ್ಥಳವನ್ನು ಪೀಪಲ್ ಎಜುಕೇಶನ್ ಸೊಸೈಟಿಯ ಸ್ವತ್ತನ್ನಾಗಿಸಿ ೧೯೮೪ರಲ್ಲಿ ನಾಗಸೇನಾ ವಿದ್ಯಾಲಯವನ್ನು ಆರಂಭಿಸಿದರು.
೧೯೭೯ರಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ರಚಿಸಿದ ಸರ್ಕಾರದಲ್ಲಿ ಶ್ರೀಬಸವಲಿಂಗಪ್ಪನವರು ಪೌರಾಡಳಿತ ಸಚಿವರಾದರು. ತಲೆಯ ಮೇಲೆ ಮಲ ಹೊರುವಂಥ ಕ್ರೂರ ಹೀನಾಯ ಪದ್ಧತಿಯನ್ನು ಕೊನೆಗಾಣಿಸುವ ಪ್ರಯತ್ನ÷ಕೈಗೊಂಡರು. ಸರ್ಕಾರದೊಂದಿಗೆ ಚರ್ಚಿಸಿ, ನಾಡಿನಾದ್ಯಂತ ವಿವಿಧ ಕ್ಷೇತ್ರದ ಗಣ್ಯರಿಗೆ ಮನಗಾಣಿಸಿ, ಹಲವರ ವಿರೋಧಗಳನ್ನು ಸಮರ್ಥವಾಗಿ ಎದುರಿಸಿ ಮಲಬಾಚುವ ಪದ್ಧತಿ ನಿಷೇಧಿಸುವ ಕಾಯ್ದೆ ಜಾರಿಗೆ ತರುವಂತಹ ಕ್ರಾಂತಿಕಾರಕ ಹೆಜ್ಜೆಗೆ ಮುಂದಾದರು. ಸ್ವತಃ ದಲಿತ ಸಮುದಾಯಕ್ಕೆ ಸೇರಿದ ಶ್ರೀ ಬಸವಲಿಂಗಪ್ಪನವರ ಇಚ್ಛಾಶಕ್ತಿಯಿಂದಾಗಿಯೇ ಭಾರತ ಸರ್ಕಾರವು ೧೯೯೩ರಲ್ಲಿ ನಿಷೇಧಿಸಿದ ಮಲಬಾಚುವಂತಹ ಹೀನಾಯ ಪದ್ಧತಿಯನ್ನು ಅದಕ್ಕೂ ಇಪ್ಪತ್ತು ವರ್ಷಗಳ ಹಿಂದೆ ೧೯೭೩ರಲ್ಲಿಯೇ ಕರ್ನಾಟಕ ಸರ್ಕಾರವು ನಿಷೇಧಿಸಲು ಸಾಧ್ಯವಾಯಿತು. (ಕೃಪೆ: ಕ್ರಾಂತಿಯ ವಸಂತ-ಬಿ.ಬಸವಲಿಂಗಪ್ಪನವರ ಕಥನ, ಲೇ: ಎನ್. ಕೆ ಹನುಮಂತಯ್ಯ, ೨೦೦೮, ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ-೫೮೩೧೧೩, ಕರ್ನಾಟಕ).
ಅಪ್ಪಟ ವೈಚಾರಿಕ ಮನೋಭಾವದ ಬಿ.ಬಸವಲಿಂಗಪ್ಪನವರು ಕರ್ನಾಟಕದ ಇತಿಹಾಸದ ಮತ್ತೊಂದು ಕ್ರಾಂತಿಕಾರಕ ತಿರುವಿಗೂ ಕಾರಣರಾದವರು. ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ೧೯-೧೧-೧೯೭೩ರಲ್ಲಿ ‘ಹೊಸ ಅಲೆಗಳು’ ಎಂಬ ವಿಷಯ ಕುರಿತು ‘ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್’ ಸಂಸ್ಥೆಯು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಆ ಸಂಕಿರಣಕ್ಕೆಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಬಸವಲಿಂಗಪ್ಪನವರು ತಮ್ಮ ಭಾಷಣದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಬೂಸಾ ಬಹಳಷ್ಟು ಇದೆ’ ಎಂದು ಹೇಳಿದ್ದು ಕರ್ನಾಟಕದಲ್ಲಿ ಚಂಡಮಾರುತವನ್ನೇ ಸೃಷ್ಟಿಸಿತು. ಎರಡು ವರ್ಷಗಳ ಕಾಲ ಶ್ರೀಬಸವಲಿಂಗಪ್ಪನವರ ವಿರುದ್ಧ ಪರ-ವಿರೋಧದ ದಂಗೆಗಳು ನಡೆದವು. ಪರ ವಿರೋಧಗಳ ಚರ್ಚೆ, ವಾದ ವಿವಾದಗಳು ನಡೆದು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದಾಗಿ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಾಯಿತು. ಬೂಸಾ ಚಳುವಳಿ ಎಂದೇ ಪ್ರಚಲಿತವಾದ ಈ ಘಟನೆ ಬಗ್ಗೆ ಕನ್ನಡದ ಶ್ರೇಷ್ಠ ಚಿಂತಕ, ಸಾಹಿತಿ, ವಿಮರ್ಶಕ ಕಿ.ರಂ.ನಾಗರಾಜ್ ಅವರು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. “ಬೂಸಾ ಚಳುವಳಿಯ ಅಂತಿಮ ಪರಿಣಾಮ ಏನೇ ಇರಲಿ ಅನೇಕ ಯುವ ಲೇಖಕರಲ್ಲಿ, ಸಂಘಟಕರಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟಿಸಿದ್ದು ಈ ಹೋರಾಟದ ಫಲ. ತಮ್ಮನ್ನು ತಮ್ಮ ಸುತ್ತಣ ವಲಯದ ಸಂವೇದನೆಯನ್ನು, ದಟ್ಟವಾಗಿ, ತೀವ್ರವಾಗಿ ಕಲಾತ್ಮಕವಾಗಿ ಅಭಿವ್ಯಕ್ತಿಸಬೇಕೆಂಬ ಛಲ ಅನೇಕ ಲೇಖಕರಲ್ಲಿ ಇದು ಮೂಡಿಸಿತು. ಕನ್ನಡ ಸಾಹಿತ್ಯದಲ್ಲಿ ಜೊಳ್ಳು ಯಾವುದು ಗಟ್ಟಿ ಯಾವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದ್ದರ ಫಲವಾಗಿ ಡಾ. ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಇವರುಗಳು ಹೆಚ್ಚು ಗಂಭೀರ ನೆಲೆಗಳನ್ನು ಪ್ರವೇಶಿಸಿದರು. ಅದರ ಫಲವೆಂಬಂತೆ ದೇವನೂರ ಮಹದೇವ, ದೇವಯ್ಯ ಹರವೆ, ಗೋವಿಂದಯ್ಯ, ಅರವಿಂದ ಮಾಲಗತ್ತಿ, ಮ.ನ.ಜವರಯ್ಯ, ಬಿ.ಟಿ.ಜಾಹ್ನವಿ, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ರಾಮಯ್ಯ, ಇಂದೂಧರ ಹೊನ್ನಾಪುರ ಇವರುಗಳ ಅಭಿವ್ಯಕ್ತಿ ವಿಚಾರಗಳಿಗೆ ಒಂದು ಗಟ್ಟಿಯಾದ ನೆಲೆ ಪ್ರಾಪ್ತವಾಯಿತು”. ದಲಿತ ಲೇಖಕರು, ಕಲಾವಿದರ ಎಚ್ಚೆತ್ತ ಪ್ರಜ್ಞೆಯು ಒಗ್ಗೂಡಿದ್ದು ಮುಂದೆ ಅದು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯದ ಗಡಿಗಳನ್ನು ವಿಸ್ತರಿಸಿ, ವಿಮರ್ಶಾ ಮಾನದಂಡಗಳನ್ನೇ ಬದಲಾಯಿಸಿದಂತಹ ದಲಿತ ಸಾಹಿತ್ಯವನ್ನು ಸೃಷ್ಟಿಸಿದ್ದು ಹಾಗೂ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಹೊಸ ತಿರುವನ್ನು ನೀಡಿದ್ದು ಕರ್ನಾಟಕ ಇತಿಹಾಸದ ಐತಿಹಾಸಿಕ ಮೈಲಿಗಲ್ಲು.
೧೯೭೭ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಶ್ರೀ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಉಳುವವನೇ ಭೂ ಒಡೆಯನಾಗುವಂತಹ ಭೂಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿದ್ದು ಮತ್ತೊಂದು ಕ್ರಾಂತಿಕಾರಕ ಹೆಜ್ಜೆ.
ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಜಾರಿಗೊಳಿಸಿದ ೭೩ನೇ ಸಂವಿಧಾನದ ತಿದ್ದುಪಡಿಯ ಕಾರಣಕರ್ತರಲ್ಲಿ ಬಿ. ಬಸವಲಿಂಗಪ್ಪನವರು ಪ್ರಮುಖರು. ತಿದ್ದಪಡಿಯ ಪ್ರಥಮ ಆಯೋಗ ಜರುಗಿ ಜಿಲ್ಲಾ ಪಂಚಾಯತ್ ಮಸೂದೆಗೆ ತಿದ್ದುಪಡಿ ತಂದದ್ದು ಕರ್ನಾಟಕ ರಾಜ್ಯದಲ್ಲಿ, ಬಸವಲಿಂಗಪ್ಪನವರ ನೇತೃತ್ವದಲ್ಲಿ. ಇದು ಪರಿಶಿಷ್ಟರಿಗೆ, ಮಹಿಳೆಯರ ರಾಜಕೀಯ ನಾಯಕತ್ವಕ್ಕೆ ಅವಕಾಶ ಮಾಡಿಕೊಟ್ಟಿತು. ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆ ಸಚಿವರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಸ್ವತಃ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದ ಶ್ರೀಬಿ.ಬಸವಲಿಂಗಪ್ಪನವರು, ಬೌದ್ಧ ಧರ್ಮ ಪ್ರಚಾರಕ್ಕಾಗಿ ‘ಕರ್ನಾಟಕ ಬೌದ್ಧ ಧರ್ಮ ಸಮಿತಿ’ಯನ್ನು ಸ್ಥಾಪಿಸಿದರು. ಜುಲೈ ೨, ೧೯೯೨ರಂದು ಬಿಜಾಪುರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಹಲವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮೈಸೂರು, ಕೋಲಾರ, ಧಾರವಾಡ, ಬೆಳಗಾವಿ, ಬಿಜಾಪುರ, ಕಲ್ಬುರ್ಗಿ, ಬೀದರ್ ಹೀಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಬಸವಲಿಂಗಪ್ಪನವರು ವಿಶೇಷ ಸಭೆಗಳನ್ನು ನಡೆಸಿದರು.
ಕರ್ನಾಟಕದಲ್ಲಿ ದಲಿತ ಪ್ರಜ್ಞೆ ಜಾಗೃತಗೊಳ್ಳಲು ಕಾರಣರಾದ, ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ೧೯೯೨ರಲ್ಲಿ ನಿಧನರಾದರು. ಎಚ್ಚೆತ್ತ ದಲಿತ ಪ್ರಜ್ಞೆಯ ಸಂಕೇತವಾಗಿ ದಲಿತ ರಾಜಕಾರಣದಲ್ಲಿ ಅವರು ಅಮರರು.