ಗಂಗ ಭಾರತ: ಭಾರತ ಗಂಗೆಯ ಭಾರತವೆನ್ನುವ ಪುರಾಣ ಹುಟ್ಟಿರುವುದು ನೀರೇ ಎಲ್ಲದರ ಮೂಲವೆಂಬ ನಂಬಿಕೆಯಲ್ಲಿ. ಮಾದಿಗರ ಮೂಲ ದೇವತೆ ಗಂಗಮ್ಮ. ಮಾದಿಗರ ಉಪಪಂಗಡವಾದ ಮಾಸ್ಟೀಕರು ಗಂಗಭಾರತವನ್ನು ಹೆಚ್ಚಾಗಿ ಹಾಡುತ್ತಾರೆ. ಈ ಪುರಾಣದ ಪ್ರಕಾರ ಜೀವಸಂಕುಲದ ಆದಿಶಕ್ತಿ ಗಂಗಮ್ಮ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿ ಈ ಭೂಮಿಯನ್ನು ನೋಡಿಕೊಳ್ಳುವಂತೆ ಆದೇಶಿಸುತ್ತಾಳೆ. ಈ ಮೂವರೂ ಗಂಗೆಯನ್ನು ಮೂರು ಭಾಗ ಮಾಡಿಕೊಂಡು ಹಂಚಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಗಂಗೆ ಅವರ ಮೇಲೆ ರೇಗಿ, ತರಾಟೆಗೆ ತೆಗೆದುಕೊಂಡು ಅವರನ್ನು ಸರಿದಾರಿಗೆ ತರುತ್ತಾಳೆ. ಇಷ್ಟಾದ ಮೇಲೂ ಮಾದಿಗರು ಗಂಗಮ್ಮನನ್ನು ಬಿಟ್ಟು ಶಿವನ ಆರಾಧನೆ ಮಾಡಲು ಶುರು ಮಾಡಿದಾಗ ಅವಳಿಗೆ ಸಿಟ್ಟು ಬಂದು ಇಡೀ ಸಮುದಾಯ ಕಾಯಿಲೆ ಬೀಳಲೆಂದು ಶಾಪ ಕೊಡುತ್ತಾಳೆ. ದೊಡ್ಡಮ್ಮ ಕಾಯಿಲೆ ರೂಪದಲ್ಲಿ ಸಮುದಾಯದ ಮೇಲೆ ದಾಳಿಮಾಡಲು ಹೊರಡುತ್ತಾಳೆ. ಜನ ಕಾಪಾಡು ಎಂದು ಗಂಗಮ್ಮನನ್ನು ಬೇಡಿಕೊಂಡಾಗ ಚರ್ಮದ ತುಂಡನ್ನು ಅವರ ಕುತ್ತಿಗೆಗೆ ಕಟ್ಟಿ ‘ನಾನು ಚರ್ಮದ ತುಂಡಿನ ರೂಪದಲ್ಲಿ ಎಲ್ಲಿ ಇರುವೆನೋ ಅಲ್ಲಿಗೆ ಬರಬೇಡ’ ಎಂದು ದೊಡ್ಡಮ್ಮನ ಹತ್ತಿರ ಭಾಷೆ ತೆಗೆದುಕೊಳ್ಳುತ್ತಾಳೆ. ಆಗ ಗಂಗಮ್ಮ ನಮ್ಮ ಕಾಯಿಲೆ ವಾಸಿಮಾಡಿದಳು ಎಂದು ಜನ ಆರಾಧಿಸುತ್ತಾರೆ. ತನ್ನ ಸಮುದಾಯದ ಜನರನ್ನು ಒಮ್ಮೆ ಪರೀಕ್ಷೆ ಮಾಡಲು ರೋಗ ಬಂದ ಮುದುಕಿಯ ವೇಷಹಾಕಿಕೊಂಡು ಗಂಗಮ್ಮ ಜನರ ಬಳಿಗೆ ಹೋಗುತ್ತಾಳೆ. ಅವರ ಹತ್ತಿರ ಇರುವ ಗೋವುಗಳನ್ನು ನಾಶ ಮಾಡುತ್ತಾಳೆ. ಮುಟ್ಟಿದರೆ ಸಾಕು ಚರ್ಮ ಉದುರಿ ಬೀಳುವಂಥ ಪರಿಸ್ಥಿತಿಯಲ್ಲಿ ಗಂಗೆ ಇರುತ್ತಾಳೆ. ಅವಳನ್ನು ನಾಶಮಾಡಲು ಹಸು/ಕೋಣದ ವೇಷ ಹಾಕಿಕೊಂಡು ಬರುವ ಶಕ್ತಿಯಿಂದ ತಪ್ಪಿಸಿಕೊಳ್ಳಲು ಗಂಗೆ ಹುತ್ತದಲ್ಲಿ ಸೇರಿಕೊಳ್ಳುತ್ತಾಳೆ. ಕೋಣ ಹುತ್ತವನ್ನು ಗುದ್ದುವಾಗ ಹೊರಗೆ ಬಂದು ಕೋಣವನ್ನೇ ಹುತ್ತಕ್ಕೆ ಸೇರಿಸುತ್ತಾಳೆ. ನಾನು ಊರಿಗೆ ಬಂದಾಗ ಪೂಜೆ ಮಾಡಬೇಕೆಂದು ಹೇಳುವ ಗಂಗಮ್ಮನಿಗೆ ಕೋಣನ ಬಲಿಕೊಟ್ಟು ಪೂಜೆ ಮಾಡುತ್ತಾರೆ. ಗಂಗಮ್ಮನ ಈ ಸಾಹಸಗಳನ್ನು, ಪವಾಡಗಳನ್ನು, ಕತೆ, ಹಾಡಿನ ಮೂಲಕ ಮಾದಿಗರು ಹೇಳುತ್ತಾರೆ. ಆಚರಣೆ ಯಾವುದೇ ಇರಲಿ ಗಂಗಮ್ಮನ ಪೂಜೆ ಈಗಲೂ ಮಾದಿಗ ಸಮುದಾಯದಲ್ಲಿ ಪ್ರಮುಖವಾಗಿದೆ.

ಆದಿ ಜಾಂಬವಪುರಾಣ:
ಸಫಾಯಿ ಕರ್ಮಚಾರಿಗಳ ಪುರಾಣಗಳಲ್ಲಿ ಜಾಂಬವಂತ ಮೂಲ ಪುರುಷನಾಗಿದ್ದಾನೆ. ಭೂಮಿ ಹುಟ್ಟುವ ಆರು ತಿಂಗಳಿಗೆ ಮೊದಲು ಹುಟ್ಟಿದ ಆತನೇ ಸೃಷ್ಟಿಕರ್ತ ಎಂಬುವುದು ಮಾದಿಗ ಕುಲದ ನಂಬಿಕೆಯಾಗಿದೆ. ಆತನನ್ನು ಜಾಂಬವಂತ ತಾತ, ಜಾಂಬವಂತ ಮುನಿ ಎಂದು ಕರೆಯುತ್ತಾರೆ. ಸಮಸ್ತ ಸೃಷ್ಟಿಗೆ ಮೂಲಪುರುಷನಾಗಿ ಜಾಂಬವಂತನೇ ಆದಿಶಕ್ತಿಯೊಂದಿಗೆ ಕೂಡಿ ತ್ರಿಮೂರ್ತಿಗಳಿಗೆ ಜನ್ಮಕೊಟ್ಟಿದ್ದು, ಜಲಮಯವಾಗಿದ್ದಂತಹ ಜಗತ್ತಿನಲ್ಲಿ ಭೂಭಾಗವನ್ನು ರೂಪಿಸಿದ್ದು, ಆಕಾಶÀ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಸೃಷ್ಟಿಸಿದ್ದು ಎಂಬ ನಂಬಿಕೆ ಇದೆ. ತನ್ನ ಮಗ ಬೆಪ್ಪು ಮುನಿಯನ್ನು ಕತ್ತರಿಸಿ ಹರಿದ ನೆತ್ತರಿನಿಂದ ಭೂಮಿಯನ್ನು ಸೃಷ್ಟಿಸಿ ಅವನ ಮೂಳೆಗಳಿಂದ ಆಯುಧ, ಉಪಕರಣಗಳನ್ನು ಮಾಡಿ ವಿವಿಧ ಜಾತಿಗಳಿಗೆ ನೀಡಿದನೆಂದು ಹಾಗೂ ಆದಿಜಾಂಬವ ಮುನಿಯ ಮಗಳಾದ ಮತಂಗಕನ್ಯೆಯ ಬೆನ್ನು ಚರ್ಮವನ್ನು ಸಿಗಿದು ತುಂಡುತುಂಡಾಗಿ ಕತ್ತರಿಸಿ, ಹೊಲೆಯರ ತುಂಡು, ಮಾದಿಗರ ತುಂಡು, ಒಕ್ಕಲಿಗರ ತುಂಡು, ಗಾಣಿಗರ ತುಂಡು, ಬಲಿಜಿಗರ ತುಂಡು, ಬ್ರಾಹ್ಮಣನ ತುಂಡು ಎಂದು ಒಂದೊಂದು ಗುಂಪಿಗೂ ಹಂಚಿ ಕೊನೆಯಲ್ಲಿ ಉಳಿದ ತುಂಡನ್ನು ಮಂಡರ ತುಂಡು ಎಂದು ಹೇಳಿದನಂತೆ. ಮಂಡರು ಎಂಬ ಗುಂಪು ಈಗಲೂ ಇದೆ. ಹೀಗೆ ಜಾಂಬವಂತನು ಬಿಡಿಯನ್ನು ಮತ್ತು ವಿವಿಧತೆಯನ್ನು ವ್ಯಕ್ತಪಡಿಸುವುದರ ಜೊತೆಯಲ್ಲೇ ಮಾತಂಗಿಯ ಚರ್ಮದೊಂದಿಗೆ ಅವರಿಗಿರುವ ಬೆಸುಗೆಯ ಕೊಂಡಿಯ ಮೂಲಕ ದೇಹದ ಪೂರ್ಣತೆಯನ್ನು ಮನುಷ್ಯರಿಗೆ ನೆನಪಿಸುತ್ತದೆ.ಜಗತ್ತಿನ ಸೃಷ್ಟಿಕಾರ್ಯ ನಡೆದದ್ದು ಜಂಬು ನೇರಳೆ ಮರದ ಕೆಳಗೆ ಎಂಬುದನ್ನು ಅವರ ಜನಪದ ಹಾಡುಗಳಲ್ಲಿ ನೋಡಬಹುದು. ಭಾರತವನ್ನು ಜಂಬೂದ್ವೀಪವೆಂದು ಕರೆಯುವುದರ ಹಿಂದೆಯೂ ಈ ನಂಬಿಕೆಯೇ ಕೆಲಸಮಾಡಿದೆ.
ಜಂಬೂನಲ್ಲೆ ಹುಟ್ಟಿ ಜಂಬೂನಲ್ಲೆ ಬೆಳೆದು
ಜಂಬುನೇರಳೆ ಕೆಳಗೆ ಜಗವ ನಿಲ್ಲಿಸಿ
ಅಂಗೈಯಲ್ಲಿ ಹಸು ತುಪ್ಪ ಬತ್ತಿ ಹೊಸೆದು
ಆಕಾಶ ಧರಣಮ್ಮ ನಿನಗೆ ಆರತಿ
ಇಲ್ಲಿಯೂ ಸಹ ತನ್ನ ಅಂಗೈಯನ್ನೇ ದೀಪವಾಗಿಸಿ ಬೆಳಗುವುದು ತನ್ನನ್ನೇ ಪೂಜೆಯ ಸಾಧನವಾಗಿಸಿಕೊಳ್ಳುವ ಮೂಲಕ ನಿಷ್ಠೆ, ಗೌರವ ಸಲ್ಲಿಸುವುದಾಗಿದೆ. ಅವರು ಸೃಷ್ಟಿಗೆ ನೀಡಿರುವ ಪ್ರೀತಿ, ಗೌರವವನ್ನು ತೋರುತ್ತದೆ. ನಂಬಿಕೆ ಬರಿ ಇಷ್ಟಕ್ಕೆ ನಿಲ್ಲದೆ ಇಂದಿಗೂ ಮಾದಿಗರ ಜಂಬು ನೇರಳೆ ಕೊಂಬೆಯನ್ನು ಕಡಿದು ತಂದುಧಾರೆಯ ಮಂಟಪದಲ್ಲಿ ನೆಟ್ಟು ಪೂಜಿಸುವ ಕಂಬಳ ದ್ಯಾವರ ಆಚರಣೆಯ ಮೂಲಕ ಮುಂದುವರೆಯುತ್ತಿದೆ. ಸೃಷ್ಟಿಗೆ ನೆರಳಾದ ನೇರಳೆ ಸಂತಾನಕ್ಕೂ ಮೂಲವಿರುವುದು ಮಾತ್ರವಲ್ಲದೆ ತಮ್ಮ ಜಾಂಬವ ಕುಲಕ್ಕೂ, ಜಂಬೂ ದ್ವೀಪಕ್ಕೂ, ಜಂಬೂ ಮರಕ್ಕೂಇರುವ ಪ್ರಾಚೀನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಆದಿಮ ಸಂಸ್ಕೃತಿಯ ಜೀವಂತ ಲಕ್ಷಣಇದಾಗಿದೆ.ಅಲ್ಲದೆ ಜಾಂಬವಂತನು ಮಾನವ ಕುಲದ ಅನುಭವ ಅಥವಾ ಸ್ಮೃತಿಗು ಮತ್ತು ವಿಕಾಸದ ಕೊಂಡಿಯಾಗಿರುವುದರಿಂದ ಜಾಂಬವಂತನ ಕಲ್ಪನೆಯನ್ನು ಆದಿಕಾಲದ ವಿಕಾಸವಾದ ವಿಜ್ಞಾನವಾಗಿಯೂ ವ್ಯಾಖ್ಯಾನಿಸಬಹುದು.

