ಅಲಿಖಿತ ಜ್ಞಾನ ಪುರಾಣಗಳು

ಸಫಾಯಿ ಕರ್ಮಚಾರಿಗಳಿಗೆ ಮಾಂಸದಡುಗೆ ಇಷ್ಟದ ಅಡುಗೆ. ಈ ಇಷ್ಟವು ಮಾಡಿ ಉಣ್ಣುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರ ಜಾಡು ಹಿಡಿದು ನೋಡಿದಾಗ ಅವರೊಳಗೆ ಜೀವಂತವಾಗಿ ಹರಿದಾಡುತ್ತಿರುವ ಜ್ಞಾನಪರಂಪರೆಯ ಪರಿಚಯವಾಗುತ್ತದೆ.
ಯಾವ ಪ್ರಾಣಿಯನ್ನೂ ಗಬ್ಬಾದಾಗ, ಎಳೆಯದಿರುವಾಗ ಕೊಲ್ಲುವುದಿಲ್ಲ. ಏಡಿ, ಮೀನುಗಳನ್ನು ಸಹಿತ ಅವು ಸಂತತಿ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಹಿಡಿಯುವುದಿಲ್ಲ. ಪಶು, ಪಕ್ಷಿಗಳ ಜೀವನ ಚಕ್ರವನ್ನು ಇವರು ಚೆನ್ನಾಗಿ ಬಲ್ಲರು. ಹಕ್ಕಿ ಗೂಡುಗಳು, ಅವು ಮೊಟ್ಟೆ ಇಡುವ ಕಾಲ, ಮರಿಮಾಡುವ ಕಾಲ, ಏಡಿಗಳ ಮತ್ತು ಇಲಿಗಳ ಬಿಲಗಳ ರಚನೆ, ಅವುಗಳ ಚಲನವಲನ, ಅವುಗಳನ್ನು ಚಾಕಚಕ್ಯತೆಯಿಂದ ಹಿಡಿಯುವ ಕೌಶಲ, ಪ್ರಾಣಿಗಳನ್ನು ಕೊಯ್ಯಲು ಇರಬೇಕಾದ ಕರಾರುವಾಕ್ಕಾದ ಅಂಗರಚನಾ ಶಾಸ್ತ್ರದ ಅರಿವು, ಸಸ್ಯಶಾಸ್ತ್ರದ ಅರಿವನ್ನು ತಿಳಿಸುವ ಹಲವಾರು ರೀತಿಯ ಸಸ್ಯ/ಕಾಯಿ/ಹಣ್ಣುಗಳ ಗುರುತಿಸುವಿಕೆ ಮತ್ತು ಬಳಸುವಿಕೆ ಇವೆಲ್ಲವೂ ಅವರಿಗೆ ಪರಿಸರ ಮತ್ತು ಋತುಮಾನವನ್ನು ಕುರಿತ ಅರಿವನ್ನು ತಿಳಿಸುತ್ತವೆ.
ದನದ ಚರ್ಮವನ್ನು ನಾಜೂಕಾಗಿ ಸುಲಿದು, ಮಾಂಸದ ತುಣುಕುಗಳು, ಕೂದಲನ್ನು ಅಚ್ಚುಕಟ್ಟಾಗಿ ತೆಗೆದು ಸ್ವಚ್ಛಮಾಡಿ, ಸುಣ್ಣ ಸವರಿ, ತಂಗಡಿ ಗಿಡದ ಚಕ್ಕೆಯನ್ನು ಹಾಕಿದ ನೀರಿನಲ್ಲಿ ನೆನಸಿಟ್ಟು ಹದಮಾಡಿ ಬೇಕಾದ ಆಕಾರಕ್ಕೆ ಕೊಯ್ಯುವಂತೆ ಮಾಡಿ ಅದರಲ್ಲಿ ಮೆಟ್ಟು, ಚಾವಟಿ, ಮಿಣಿಗಳಂತಹ ಕೃಷಿ ಉಪಕರಣಗಳನ್ನೂ, ಅದ್ಭುತ ನಾದ ಹೊಮ್ಮಿಸುವ ತಮಟೆ, ಮೃದಂಗ, ತಬಲಾಗಳಂತಹ ವಾದ್ಯಗಳನ್ನೂ ತಯಾರಿಸುವುದರ ಹಿಂದೆ ಜೀವಶಾಸ್ತ್ರ, ನಾದಜ್ಞಾನದ ಜೀವಂತ ಪರಂಪರೆ ಇದೆ.ಖ್ಯಾತ ಕರ್ನಾಟಕ ಸಂಗೀತ ವಿದುಷಿ ಟಿ.ಎಂ.ಕೃಷ್ಣ ಅವರು ಇತ್ತೀಚೆಗೆ ಅಧ್ಯಯನ ನಡೆಸಿ ಪ್ರಕಟಿಸಿರುವ ‘ಸೆಬಾಸ್ಟಿಯನ್ ಅಂಡ್ ಸನ್ಸ್’ ಪುಸ್ತಕವು ಮೃದಂಗ ಮಾಡುವ ಪರಿಶಿಷ್ಟ ಜಾತಿಯವರಿಗಿರುವ ನಾದ ಭಂಡಾರವನ್ನೇ ತೆರೆದಿಡುತ್ತದೆ. ಈ ಪುಸ್ತಕ ಇದೇ ಹೆಸರಿನಲ್ಲಿ ಕನ್ನಡಕ್ಕೂ ಸುಮಂಗಲಾ ಅವರಿಂದ ಅನುವಾದಗೊಂಡಿದೆ.
ಹಾಡು, ಕಥನ ಕಲೆ, ಕುಣಿತಗಳು ಸಹ ಅವರ ಸೃಜನಶೀಲ ಪರಂಪರೆಯ ಧ್ಯೋತಕಗಳಾಗಿವೆ.