ಹಬ್ಬಗಳು – ಜಾತ್ರೆಗಳು

ಆಚರಿಸುವ ಹಬ್ಬಗಳು
ಸಂಕ್ರಾಂತಿ, ದಸರಾ, ಅಮವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ,ನಾಗರಪಂಚಮಿ, ಎಳ್ಳಮವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಗುಡ್ ಫ್ರೆöÊಡೆ, ಕ್ರಿಸ್ಮಸ್, ಹೊಸವರ್ಷವನ್ನು, ಮುಸ್ಲಿಮರ ಪರ‍್ಲ ಹಬ್ಬ ಮತ್ತು ಮೊಹರಂ ಹಬ್ಬ ಆಚರಿಸುತ್ತಾರೆ. ಮೊಹರಂನಂದು ಗೂಗುಡುಗೆ ಹೋಗಿ ಅಲ್ಲಿನ ದೇವರು ಕುಳ್ಳಾಯಿಸ್ವಾಮಿಯನ್ನು ಹೊತ್ತುಕೊಂಡು ಬೆಂಕಿ ತುಳಿಯುತ್ತಾರೆ.
ತೀರಿಹೋಗಿರುವ ಹಿರಿಯರಿಗೆ ಮತ್ತು ಪೂರ್ವಿಕರಿಗೆ ಇಷ್ಟವಾದ ಅಡುಗೆ ಮಾಡಿ ಎಡೆ ಹಾಕಿ ಪೂಜಿಸುವುದನ್ನು ಹಿರಿಯರ ಹಬ್ಬ ಅಥವಾ ಪಿತೃಪಕ್ಷ ಎಂದು ಆಚರಿಸುತ್ತಾರೆ. ಇಟ್ಟ ಎಡೆಯನ್ನು ಬಂದು ಮುಟ್ಟಿವ ಕಾಗೆಗಳನ್ನು ಸತ್ತ ಹಿರಿಯರು ಎಂದು ನಂಬುತ್ತಾರೆ. ಕೆಲವೆಡೆ ದಸರಾದಲ್ಲಿ ಮಾಡುವ ಆಯುಧ ಪೂಜೆಯಲ್ಲಿ ಹಿರೀಕರಿಗೆ ಉಡುದಾರ, ಪುಟುಗೂಸಿ, ಬೀಡಿ, ಸಿಗರೇಟು, ಸಾರಾಯಿ, ಕಾಫಿ, ಬನ್ನು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಕೆಲವರು ಮಹಾಲಯ ಅಮಾವಾಸ್ಯೆಯಂದು ತೀರಿಕೊಂಡವರಿಗೆ ಎಡೆ ಇಟ್ಟು ಪೂಜಿಸಿದರೆ, ಕೆಲವರು ಸಂಕಾಂ್ರತಿ ಹಬ್ಬದಲ್ಲಿ ತೀರಿಹೋದವರಿಗೆ ಎಡೆ ಇಡುತ್ತಾರೆ.
ಕೆಲವರ ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಮಾಡಲು ಬೇವು ತರಲು ಹೋದವರು ಬರಲಿಲ್ಲ ಎಂಬ ಕಾರಣಕ್ಕೆ ಇವತ್ತಿಗೂ ಹಬ್ಬಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗರು ಸಂಕ್ರಾಂತಿ, ದೀಪಾವಳಿ, ದಸರಾ ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ನಾಗ ಪಂಚಮಿ, ಯುಗಾದಿ, ಎಳ್ಳಮಾವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆಗಳನ್ನು ಆಚರಿಸುತ್ತಾರೆ. ಅಲ್ಲದೆ ದಲಿತ ಚಳುವಳಿಯ ಪ್ರಭಾವದಿಂದಾಗಿ ಅಂಬೇಡ್ಕರ್ ದಿನಾಚರಣೆಯನ್ನು ವಿಜೃಂಭಣೆಯಿಂದ ಜಾತ್ರೆ/ಪರಿಷೆಯಷ್ಟೇ ಸಂಭ್ರಮದಿಂದ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುತ್ತಾರೆ. ಹೊಸಬಟ್ಟೆ ತೊಟ್ಟು, ಸಿಹಿ ಅಡುಗೆ ಮಾಡಿ ಉಣ್ಣುತ್ತಾರೆ. ಮತ್ತು ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರಿನಲ್ಲಿ ಮಾಮೂಲಿ ದೊಡ್ಡ ಹಬ್ಬಗಳಲ್ಲದೆ ಸಂಕಷ್ಟಿ, ರಾಮನವಮಿ, ಕಾಮನ ಹಬ್ಬಗಳನ್ನು ಆಚರಿಸುತ್ತಾರೆ. ಚಿತ್ರದುರ್ಗದಲ್ಲಿ ಕಾರ್ತೀಕದಲ್ಲಿ ನೆಂಟರನ್ನು ಕರೆದು ಸಂಭ್ರಮದಿಂದ ಆಚರಿಸಲಾಗುತ್ತದೆ. ಮತ್ತು ಬಸವ ಜಯಂತಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ದಸರಾ ಹಬ್ಬದಲ್ಲಿ ಬನ್ನಿಪೂಜೆ ಮಾಡುತ್ತಾರೆ. ಹೋಳಿಗೆಮ್ಮನ ಹಬ್ಬ (ಅಜ್ಜಿ ಹಬ್ಬ) ಇಲ್ಲಿನ ವಿಶೇಷವಾಗಿದೆ. ಅಜ್ಜಿಹಬ್ಬವೆಂದೂ ಕರೆಯುವ ಹೋಳಿಗೆಮ್ಮನ ಹಬ್ಬವನ್ನು ಮಾಡಿದರೆ ಮಳೆ ಬರುತ್ತೆ ಎಂಬ ನಂಬಿಕೆಯಿದೆ. ಈ ದೇವತೆಯು ಒಂದು ರೀತಿ ಮಾರಮ್ಮನ ಥÀರವೆಂದು ಹೇಳಿದರು. ಎಲ್ಲರ ಮನೆಯಲ್ಲಿ ಹೋಳಿಗೆ ಮಾಡಿ, ಎಲ್ಲರ ಮನೆಯಿಂದ ಎಡೆತೆಗೆದುಕೊಂಡು ಊರಾಚೆಯ ಮರದ ಬಳಿಗೆ ಹೋಗಿ ಇಟ್ಟುಬರುತ್ತಾರೆ.
ಮೈಲಾರಲಿಂಗನ ಜಾತ್ರೆಗೆ ಹೋಳಿಗೆ, ಕಡುಬು, ಅನ್ನ ಸಾರು, ಪಲ್ಯೆ, ಕೋಸಂಬರಿ, ವಡೆ, ಹಪ್ಪಳಮಾಡಿ ದೇವರಿಗೆ ಎಡೆ ಹಾಕುತ್ತಾರೆ.ಇನ್ನೊಂದು ಕಂಚಿನ ದೋಣಿಲಿ ಬಾಳೆಹಣ್ಣು, ಸಕ್ಕರೆ, ತುಪ್ಪ, ಹಾಲು, ಮೊಸರು, ಇಟ್ಟು ಪೂಜೆ ಮಾಡುತ್ತಾರೆ. ಮುದ್ರೆ ಮಾಡಿಸಿಕೊಂಡ ಗ್ವಾರಪ್ಪಗಳು ತ್ರಿಶೂಲ ತೆಗೆದುಕೊಂಡು ಮೂಸಿ ಮುಕ್ಕಾಗಿದೆಯೇ(ಎಂಜಲು)ಅಂತ ನೋಡಿ, ಊಟ ಮಾಡುತ್ತಾರೆ. ಅವರು ಹೋದ ನಂತರ ಮನೆಯವರು ಊಟ ಮಾಡುತ್ತಾರೆ.
ಹೊಸ ವರ್ಷವಾಗಿ ಆಚರಿಸುವ ಯುಗಾದಿ ಹಬ್ಬ ಎಲ್ಲೆಡೆ ಆಚರಿಸುವ ದೊಡ್ಡ ಹಬ್ಬವಾಗಿದೆ. ಅರಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಪೂಜೆ ಮಾಡಿದ ಮೇಲೆ ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸುತ್ತಾರೆ. ನಿಸರ್ಗದಂತೆ ನಮ್ಮ ಬದುಕುಗಳು ಕೂಡ ಹಳೆಯದನ್ನೆಲ್ಲ ಕಳೆದು ಹೊಸವರ್ಷಕ್ಕೆಸಿಹಿ-ಕಹಿಗಳನ್ನು ಸಮವಾಗಿ ಸ್ವೀಕರಿಸಿಕಾಲಿಡುವುದಾಗಿದೆ. ಹೊಸವರ್ಷ ಆರಂಭವಾದ ಮರುದಿನ ಮುಂದೆ ಯಾವ ತೊಡಕು ಬಾರದಂತೆ ಮಾಡುವ ಆಚರಣೆಯೇ ಹೊಸ ತಡುಕು. ಆ ದಿನ ಮಾಂಸದಡುಗೆ ಮಾಡಿ ನೆಂಟರನ್ನು ಕರೆದು ಉಣಬಡಿಸುತ್ತಾರೆ.
ಸಫಾಯಿ ಕರ್ಮಚಾರಿಗಳ ಸಂಸ್ಕöÈತಿಯಲ್ಲಿ ಅನ್ಯಧರ್ಮದ ದೇವರು, ಸಂತರುಗಳಿಗೆ ಶ್ರದ್ಧೆಯಿಂದ ನಡೆದುಕೊಳ್ಳುವುದು ಒಳಗೊಳ್ಳುವ ಪರಂಪರೆಯ ಮತ್ತು ಬಹುತ್ವದ ಸಂಕೇತವೇ ಆಗಿದೆಯಲ್ಲದೇ ಭಾರತದ ಸಂವಿಧಾನದ ಧರ್ಮ ಸಹಿಷ್ಣುತೆಯೇ ಆಗಿದೆ.
ಹಲವೆಡೆ ಸಫಾಯಿ ಕರ್ಮಚಾರಿಗಳು ಮೊಹರಂನಂತಹ ಮುಸ್ಲಿಂ ಹಬ್ಬಗಳನ್ನು ಆಚರಿಸುತ್ತಾರಲ್ಲದೆ ಮುಸ್ಲಿಂ ಸಂತರುಗಳಿಗೆ ನಡೆದುಕೊಳ್ಳುವುದು ವಿಶೇಷವಾದುದು. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮಾಂಸ ದಾನ ಮಾಡುವುದರಲ್ಲಿ ಅಡುಗೆ ಮಾಡಿ ಉಣ್ಣುತ್ತಾರೆ. ಅದು ಯಮನೂರಿನ ಮುಸ್ಲಿಂ ಸಂತನೊಬ್ಬನ ಹೆಸರು. ವಿಜಯಪುರದ ತೊರವಿಯಲ್ಲಿ ಲಾಲ್ ಸಾಬ್ ಎಂಬ ಮುಸ್ಲಿಂ ಸಂತನೊಬ್ಬನ ಜಾತ್ರೆಯನ್ನು ನಡೆಸುವವರು ಅಲ್ಲಿನ ಪರಿಶಿಷ್ಟ ಜಾತಿಯವರಾದ ಮಾದಿಗರು.
ಬಳ್ಳಾರಿಯಲ್ಲಿ ಮಾದಿಗರ ಹಲವಾರು ಮನೆಗಳಲ್ಲಿ, ಮನೆಯ ಆವರಣದಲ್ಲಿ ಮುಸ್ಲಿಂ ದೇವರಾದ ಪೀರ್ಲ ದೇವರನ್ನು ಪೂಜಿಸುತ್ತಾರೆ. ಅವರ ದೇವರುಗಳು ವಾಸ್ತವ ಲೋಕದಲ್ಲಿ ಅವರ ಕಷ್ಟ ಸುಖ ಕೇಳಿಸಿಕೊಳ್ಳುವಷ್ಟು ಹತ್ತಿರದವರಾಗಿದ್ದಾರೆ.
ಒಟ್ಟೊಟ್ಟಿಗೆ ಕ್ರಿಸ್ತನಿಗೂ, ಮೇರಿಯಮ್ಮನಿಗೂ, ಪೀರ್ಲನಿಗೂ, ಗಂಗಮ್ಮನಿಗೂ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.ಗಂಗಾವತಿ, ಬಳ್ಳಾರಿ ಇನ್ನೂ ಹಲವೆಡೆ ಇರುವ ಸಫಾಯಿ ಕರ್ಮಚಾರಿಗಳು ಇಟ್ಟುಕೊಳ್ಳುವ ಹೆಸರುಗಳು ಧಾರ್ಮಿಕ ಭಾವೈಕ್ಯತೆಯೇ ಆಗಿದೆ.ಪೀರ್ಲಪ್ಪ-ಪೀರ್ಲಮ್ಮ, ಹುಸೇನಪ್ಪ-ಹುಸೇನಮ್ಮ, ಸಾಬಪ್ಪ-ಸಾಬಮ್ಮ,ಸಾರಮ್ಮ- ಸಾರಪ್ಪ, ಮೇರಿಯಮ್ಮ-ಮೇರಿಯಪ್ಪ, ಹುಚ್ಚಮ್ಮ-ಹುಚ್ಚಪ್ಪ, ಸಂಕ್ಲಮ್ಮ-ಸಂಕ್ಲಪ್ಪ, ಯಮನೂರಪ್ಪ-ಯಮನೂರಮ್ಮ (ಯಮನೂರಿನಲ್ಲೆ ನೆಲೆಸಿದ್ದ ಮುಸ್ಲಿಂ ಸಂತ) ಹುಸೇನ್ ಬಸವ, ಅಲೈಕ್ಯ, ಮೆರೂನಾ ಹೀಗೆ…
ಕಾಯಿಲೆ ಬಂದಾಗ ಕಣಿಕೇಳಿ ಮುನೇಶ್ವರನಿಗೆ ಪಚ್ಚೆ ಇಡುವಷ್ಟೇ ಶಿಸ್ತಿನಿಂದ, ದರ್ಗಾಗೂ ಹೋಗಿ ಸಕ್ಕರೆ ಮಂತ್ರಿಸಿಕೊಂಡು ಬಂದು ತಿನ್ನುತ್ತಾರೆ. ದರ್ಗಾದ ಸಾಬರಿಂದ ತಾಯತವನ್ನು ಕಟ್ಟಿಸಿಕೊಳ್ಳುತ್ತಾರೆ.
ಹಬ್ಬಗಳು ಭಕ್ತಿ, ಶ್ರದ್ಧೆಗೆ ಕಾರಣವಾಗಿರುವಂತೆಯೇ ನಿತ್ಯದ ಜಂಜಾಟವನ್ನು ಮೀರಿಕೊಂಡು ಸಂಭ್ರಮಿಸುವುದಕ್ಕೂ ಕಾರಣವಾಗಿವೆ. ಕೆಲವರು ನೆಂಟರಿಷ್ಟರನ್ನು ಕರೆಸಿ ವಿಶೇಷ ಅಡುಗೆಗಳನ್ನು ಮಾಡಿ ಉಂಡು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರೆ, ಇನ್ನು ಕೆಲವರ ಮನೆಯಲ್ಲಿ ದೇವರಿಗೊಂದು ಕಡ್ಡಿ ಹಚ್ಚಿ ಇರುವುದನ್ನೇ ಮಾಡಿ ಉಣ್ಣುವುದರೊಂದಿಗೆ ಸಂಭ್ರಮ ಮುಗಿಯುತ್ತದೆ. ಬಡತನವು ಹಬ್ಬವೆಂಬ ಸಂಭ್ರಮಕ್ಕೆ ಧಕ್ಕೆ ತರದು ಎಂಬುದಕ್ಕೆ ಈ ಪ್ರತೀತಿ ಸಾಕ್ಷಿಯಾಗಿದೆ.
ಒಮ್ಮೆ ಬಡವರಾದ ಗಂಗೆ-ಗೌರಿಯರು ದೀವಳಿಗೆ (ಶಿಷ್ಟ ಭಾಷೆಯಲ್ಲಿ ದೀಪಾವಳಿ) ಮಾಡಲು ಸಾಧ್ಯವಾಗದೇ ಇದ್ದುದರಿಂದ ತಿಪ್ಪೆ ಮೇಲಿನ ಬೆರಣಿಯನ್ನು ತಂದು ಅದನ್ನೇ ಕಜ್ಜಾಯದಂತೆ (ಕಜ್ಜಾಯ ದೀಪಾವಳಿಗೆ ಮಾಡುವ ವಿಶೇಷ ತಿನಿಸು)ಇಟ್ಟು, ಆಲದ ಮರದ ಎಲೆಯನ್ನು ವೀಳ್ಯವಾಗಿ, ಆಲದ ಮರದ ಕಾಯಿಯನ್ನು ತೆಂಗಿನಕಾಯಿಯಾಗಿ, ರಾಗಿತೆನೆಯನ್ನು ಊದುಬತ್ತಿಯಾಗಿ, ಅಲದ ಮರದ ತೊಗಟೆಯನ್ನು ನೋಮುದಾರವಾಗಿ (ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಅರಿಶಿನ ಹಚ್ಚಿದ ದಾರ) ಇರಿಸಿ ದೀವಳಿಗೆ ಮಾಡಿದರು ಎಂಬುದು ಕಾಲದಿಂದಲೂ ಬಂದಿರುವ ಕತೆ. ಈ ಕತೆ ಅವರ ಕಡುಬಡತನದ ವಾಸ್ತವವನ್ನು ಮನಗಾಣಿಸುವುದರ ಜೊತೆಯಲ್ಲೇ ಕಷ್ಟದ ಪರಿಸ್ಥಿತಿಯನ್ನು ಮೀರಿಕೊಳ್ಳಲು ದೇವಿಯರಿಗೇ ಬಡತನ ತಪ್ಪಿದ್ದಲ್ಲವೆಂದು ಭಾವಿಸಿಕೊಂಡು ಕಷ್ಟವನ್ನು ಸವಾಲಿನಂತೆ ಸ್ವೀಕರಿಸುವ ಸಂಭ್ರಮಿಸುವ ಚೈತನ್ಯವನ್ನೂ ಮನಗಾಣಿಸುತ್ತದೆ.


ಜಾತ್ರೆಗಳು


ಜಾತ್ರೆಗಳನ್ನು ಊರಬ್ಬಗಳಂತೆ ಆಚರಿಸಲಾಗುತ್ತದೆ. ಊರಿನ ಸಕಲ ಜಾತಿಗಳೂ ಪಾಲ್ಗೊಳ್ಳುವ ಜಾತ್ರೆಯಲ್ಲಿ ಎಲ್ಲ ಜಾತಿಯವರಿಗೂ ಒಂದಲ್ಲ ಒಂದು ಪಾತ್ರವಿರುತ್ತದೆ. ಕೆಲವೆಡೆ ಜಾತ್ರೆಯಲ್ಲಿ ನಡೆಯುವ ದೇವರ ಉತ್ಸವ/ಮೆರವಣಿಗೆಯಲ್ಲಿ ಪರಿಶಿಷ್ಟ ಜಾತಿಯವರು ದೇವರ ಮುಂದೆ ಗರುಡುಗಂಭ ಹಿಡಿದು ನಿಲ್ಲುವುದು, ಶಹನಾಯಿ ಊದುವ ಪರಿಪಾಠವಿದೆ. ಅನಂತಪುರದ ಒಂದು ದೇವರಿಗೆ ಇಲ್ಲಿನ ಪರಿಶಿಷ್ಟ ಜನರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಆ ಊರಿನಲ್ಲಿ ನಡೆಯುವ ಜಾತ್ರೆಯಂದು ಅಲ್ಲಿನ ಮಾದಿಗ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಕೈಲಿ ದೀಪ ಹಿಡಿದು ದೇವರ ಮುಂದೆ ಸಾಗುತ್ತಾನೆ. ಆತ ಸಾಗುವ ದಾರಿಯಲ್ಲಿ ನಡೆಮುಡಿ ಹಾಸಿ ಕರೆದುಕೊಳ್ಳುವುದಲ್ಲದೆ, ಕೈಮುಗಿದು ವಂದಿಸುತ್ತಾರೆ. ಆ ದೀಪವನ್ನು ಮೆರವಣಿಗೆಯ ನಂತರ ದೇವಸ್ಥಾನದ ಮುಂದೆ ಇರುವ ಕಂಭದ ಮೇಲೆ ಇರಿಸಲಾಗುತ್ತದೆ.
ಬೆಂಗಳೂರಿನ ಅಣ್ಣಮ್ಮ ಜಾತ್ರೆ, ಬಳ್ಳಾರಿ ದುರ್ಗಮ್ಮನ ಜಾತ್ರೆ, ಕೋಟೆ ಮಲ್ಲೇಶ್ವರ ಜಾತ್ರೆ, ಸಿಡಿಬಂಡೆ ಜಾತ್ರೆ, ಪೆನ್ನೋಬಳೇಶಸ್ವಾಮಿ ಜಾತ್ರೆ, ವರಬಸಪ್ಪ ಜಾತ್ರೆ, ಗೂಗುಡು ಕುಳ್ಳಾಯಿಸ್ವಾಮಿ ಜಾತ್ರೆ, ಹುಲಿಗೆಮ್ಮ ಜಾತ್ರೆ, ಆಂಧ್ರದ ನರಸಿಂಹಸ್ವಾಮಿ ಜಾತ್ರೆ, ಮುತ್ಯಾಲಮ್ಮನ ಜಾತ್ರೆ, ಹಿಂದೂಪುರ ಚೌಡಮ್ಮನ ಪರಿಷೆ, ಸಿಕೆಪಲ್ಲಿಯಲ್ಲಿಯ ಓಬಳೇಶಸ್ವಾಮಿ ಜಾತ್ರೆ, ಬೆಳಗೊಂಬದ ಮಾರಮ್ಮ, ಪಡಲಮ್ಮ, ನರಸಿಂಹಸ್ವಾಮಿ ಪರಿಷೆ, ನಲ್ಲಮ್ಮ, ವೆಂಕಟರಮಣಸ್ವಾಮಿ ಪರಿಷೆ, ಅನಂತಪುರದ ಚಿತ್ತಲಪಲ್ಲಿಯಲ್ಲಿ ನಡೆಯುವ ಪೆದ್ದಮ್ಮ ಪರಿಷೆ, ದಾದಲೂರು ವಾರದಯ್ಯ ಜಾತ್ರೆ, ಕುಳ್ಳಾಯಿ ಮುತ್ಯಾಲಮ್ಮ ಜಾತ್ರೆ, ಬಂಡ್ಲಪಲ್ಲಿ ದೀಪಾವಳಿ ನಿಡಮಾಡಮ್ಮ, ಆಡುಗೋಡಿ ಜಾತ್ರೆ, ಅನಂತಪುರದ ದಾದಲೂರು ಪೋಪಲಪ್ಪಸ್ವಾಮಿ ಜಾತ್ರೆ, ನಾಗಸಮುದ್ರದ ನಲ್ಲಮ್ಮ, ನರಸಿಂಹಸ್ವಾಮಿ, ರುದ್ದಮಂಡಲ ಗಂಗಮ್ಮ, ಅರೆನ್ ಸೆರುವಿನ ಓಬಳೇಶಸ್ವಾಮಿ ಜಾತ್ರೆ, ಕದ್ರಿ ಜಾತ್ರೆ, ಪೆನುಗೊಂಡದ ಆಂಜನೇಯಸ್ವಾಮಿ ಜಾತ್ರೆ, ಘಾಟಿ ಸುಬ್ಬರಾಯನ ಪರಿಷೆ, ಯುಗಾದಿ ಮುಗಿದು ಒಂಬತ್ತು ದಿನಕ್ಕೆ ನಡೆಯುವ ಸೋಲೂರು ಬಳಿಯ ತಟ್ಟೆಕೆರೆ ಹತ್ತಿರದ ಮಾರಮ್ಮಜಾತ್ರೆ, ಪಾವಗಡದ ಸುಬ್ರಾಯ ಷಷ್ಠಿ, ಪಾವಗಡ ಮದಗಲಮ್ಮ, ಮಾರಮ್ಮನ ಜಾತ್ರೆ, ಹೂಡಿಗಡರೆ ನರಸಿಂಹಸ್ವಾಮಿ, ಕಗ್ಗೆರೆ ಸಿದ್ದಲಿಂಗೇಶ್ವರ, ಮೈಲಾರಲಿಂಗ ಜಾತ್ರೆ, ಬೆಂಗಳೂರು ಕರಗ, ಅಣ್ಣಮ್ಮದೇವಿ, ದೊಡ್ಡಮ್ಮದೇವಿ, ದಾದಲೂರು ಪೋತ್ಲಮ್ಮ, ಹಳವೂರಮ್ಮ ಜಾತ್ರೆ, ದೇವರಸನಹಳ್ಳಿಯ ವೀರಭಧ್ರೇಶ್ವರ, ವನ್ನಾರನಹಳ್ಳಿಯ ಹೊಳೆಚೌಡೇಶ್ವರಿ ಜಾತ್ರೆ, ಕಲಬುರ್ಗಿಯ ಶರಣ ಬಸವ ಜಾತ್ರೆ(ಅಪ್ಪನ ಜಾತ್ರೆ), ಖಾಜಾ ಬಂದೇ ನವಾಜ ದರ್ಗಾ ಜಾತ್ರೆ, ಕೌಟಗಿ ಮರಗಮ್ಮ, ತುಳಜಾಪುರ ಅಂಭಾಭವಾನಿ, ಕಾಳಗಿ ಎಲ್ಲಮ್ಮ ಜಾತ್ರೆ, ಕೋಲಾರದ ವಾನರಾಸಿ ಗಂಗಮ್ಮನಿಗೆ ಮಾಡುವ ದೀಪಗಳ ಜಾತ್ರೆ, ಆವನಿ ಸೀತಮ್ಮ ಜಾತ್ರೆ, ಅಣ್ಣಮ್ಮ ಜಾತ್ರೆ, ಹೊಸಕೋಟೆ ದೀಪೋತ್ಸವ, ಚಿತ್ತೂರಿನ ಗಣೇಶ ಜಾತ್ರೆ, ಮುತ್ಯಾಲಮ್ಮ ಜಾತ್ರೆ, ವೆಂಕಟೇಶ್ವರಲು ಜಾತ್ರೆ, ತಮಿಳುನಾಡಿನ ಸತ್ಯಮಂಗಲದ ಬನ್ನೇರಮ್ಮನ ಜಾತ್ರೆ, ಚಾಮುಂಡಿ ಅಮ್ಮ, ಮಾದೇಶ್ವರ ಜಾತ್ರೆ, ನಂಜನಗೂಡಿನ ಜಾತ್ರೆ, ದೊಡ್ಡಮ್ಮತಾಯಿ ಜಾತ್ರೆ, ಆಂಧÀ್ರದ ನಲ್ಲೂರಿನ ಪೆಂಚಲತಿರುನಾಳ ಜಾತ್ರೆ, ಪಾಂಡುಪುರದ ದೊಡ್ಡಮ್ಮ ಜಾತ್ರೆ. ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೆಸ್ವಾಮಿ ಜಾತ್ರೆ, ಗೌರಸಮುದ್ರ/ಗೌಡಸಂದ್ರ ಮಾರಮ್ಮನ ಜಾತ್ರೆ, ದಾವಣಗೆರೆ ದುರ್ಗಮ್ಮದೇವಿ ಜಾತ್ರೆ, ಗಂಗಮ್ಮ ದೇವರ ಜಾತ್ರೆ, ಗಾನಗಟ್ಟೆ ಮಾಯಮ್ಮ, ಏಕನಾಥೇಶ್ವರಿ, ಸಿಡಿ ಜಾತ್ರೆ, ಕಣಿವೆ ಮಾರಮ್ಮನ ಜಾತ್ರೆ, ಮೈಲಾರ ಲಿಂಗೇಶ್ವರ ಜಾತ್ರೆ/ಹಡಗಲಿ,ರಾಣೆಬೆನ್ನೂರು, ಹರ‍್ಕೆ ರಂಗಪ್ಪನ ಜಾತ್ರ/ನಂದನ ಹೊಸೂರು, ಹೊಳಲ್ಕೆರೆ, ಗೋಚಂದ್ರ ಮಾರಮ್ಮನ ಜಾತ್ರೆ/ಚಳ್ಳಕೆರೆ, ಗುಡ್ಡದ ಹುಚ್ಛೆಂಗಮ್ಮನ ಜಾತ್ರೆ, ಬಸವಪಟ್ಣ ದುರುಗಮ್ಮ, ಕುಕ್ಕಡದಮ್ಮನ ಜಾತ್ರೆ, ಪರ‍್ಲಬ್ಬ, ಮಾರಮ್ಮನ ಜಾತ್ರೆ, ದೋನೋರು ತಿಪ್ಪೆಸ್ವಾಮಿ ಜಾತ್ರೆ, ಏಕನಾಥೇಶ್ವರ ಜಾತ್ರೆ, ಸಿಡಿ ಜಾತ್ರೆಗಳಲ್ಲಿ ಸಫಾಯಿಕರ್ಮಚಾರಿಗಳು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.
ಸಫಾಯಿಕರ್ಮಚಾರಿಗಳ ಜೀವನಕ್ರಮವು ಲೋಕದೃಷ್ಟಿ ಸಮಷ್ಟಿಪ್ರಜ್ಞೆಯ ನೆಲೆಯಿಂದ ಕೂಡಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲವನ್ನೂ ಇವರು ಒಳಗೊಳ್ಳುತ್ತಾರೆ. ಯಾವುದನ್ನೂ ಬಿಡಿ ಬಿಡಿಯಾಗಿ ನೋಡುವ ಕ್ರಮ ಇವರಲ್ಲಿ ಇಲ್ಲ.
ಸರ್ವರ ಹಿತ ಕಾಪಾಡುವ, ಕಾಯಿಲೆ, ಕಷ್ಟಗಳಿಂದ ಪಾರುಮಾಡುವ, ಊರು ಕಾಯುವ,ಕೆಟ್ಟ ಶಕ್ತಿಗಳಿಂದ ಕಾಪಾಡುವ, ಮಕ್ಕಳು, ರಾಸುಗಳನ್ನು ರಕ್ಷಿಸುವ, ಮಳೆ ಬೆಳೆ ನೀಡುವ ಶಕ್ತಿ ದೇವತೆಯರಾದÀ ಎಲ್ಲಮ್ಮ, ಹುಲಿಗೆಮ್ಮ, ಸಂಕ್ಲಮ್ಮ, ಗಾಳೆಮ್ಮ, ಮುತ್ಯಾಲಮ್ಮರನ್ನು, ಪಡಸಲಮ್ಮ, ದೊಡ್ಡಮ್ಮ, ಅಣ್ಣಮ್ಮನನ್ನು ಇತ್ಯಾದಿ ದೇವತೆಗಳು ಇವರು ಪೂಜಿಸುವ ಅಮ್ಮಂದಿರು.ಈ ದೇವರುಗಳು ಒಂದು ಸ್ಪಷ್ಟ ರೂಪವಿಲ್ಲದ ಒಂದು ರೀತಿಯಲ್ಲಿ ಲಿಂಗಾತೀತರೇ ಆಗಿದ್ದಾರೆ. ಅವರು ನಡೆದುಕೊಳ್ಳುವ ಸಾಂಸ್ಕöÈತಿಕ ನಾಯಕ ನಾಯಕಿಯರು ಲೌಕಿಕದಲ್ಲಿಜನಪರ ಕೆಲಸವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಂತಹವರು.
ಒಟ್ಟಾರೆಯಾಗಿ ನೋಡುವಾಗ ಯಾವ ಜನಸಮುದಾಯವೇ ಆಗಲಿ ಹೊಂದಿರುವಂತಹ ಜ್ಞಾನ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳನ್ನು ಸಫಾಯಿ ಕರ್ಮಚಾರಿಗಳು ಕಾಲದಿಂದಲೂ ಹೊಂದಿದ್ದಾರೆ. ಅಲ್ಲದೆ ಅವು ಶ್ರಮ ಮತ್ತು ಪ್ರಕೃತಿಯೊಂದಿಗಿನ ನಿಕಟ ಒಡನಾಟದಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ, ಜೀವಪರ ಪ್ರಜ್ಞೆಯ ಸಂಕೇತಗಳಾಗಿವೆ ಎಂಬುದು ಅರಿವಾಗುತ್ತದೆ.