ಹೋರಾಟದ ಇತಿಹಾಸ: ಐ.ಪಿ.ಡಿ ಸಾಲಪ್ಪ ವರದಿ

ಕರ್ನಾಟಕದಲ್ಲಿ ಘನತೆಗಾಗಿ ಮತ್ತು ಕಾರ್ಮಿಕರಾಗಿ ತಮ್ಮ ಹಕ್ಕುಗಳಿಗಾಗಿ ನಡೆಸಿರುವ ಹೋರಾಟದ ಮೂಲವಿರುವುದು ಸ್ವಾತಂತ್ರö್ಯ ಬಂದ ಮೂರನೇ ದಶಕದಲ್ಲಿ ಬಂದ ಮಹತ್ವದ ವರದಿಯಲ್ಲಿ.

ಕರ್ನಾಟಕದ ಪೌರಕಾರ್ಮಿಕರ ಹೋರಾಟ ಇತಿಹಾಸದಲ್ಲಿನ ಹೆಗ್ಗುರುತು ಐ.ಪಿ.ಡಿ ಸಾಲಪ್ಪ ವರದಿ
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಶ್ರೀ ಐ.ಪಿ.ಡಿ.ಸಾಲಪ್ಪ ಅವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ಮಾರ್ಚ್ ೩, ೧೯೭೩ರಲ್ಲಿ ಸಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಗೆ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಮತ್ತು ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ಭಾಗವಹಿಸಿದ್ದರು.

ಹೋರಾಟವೇ ಆದ ಸಮಿತಿಯ ಕೆಲಸ
ಸಮಿತಿ ರಚನೆ ೧೯೭೨ರಲ್ಲೇ ಆದರೂ ಸಮಿತಿಯ ಕೆಲಸ ಆರಂಭವಾದದ್ದು ಜನವರಿ, ೧೯೭೪ರಲ್ಲಿ. ಹಲವಾರು ತೊಡಕುಗಳು ಸಮಿತಿಗೆ ಎದುರಾದವು. ಯಾವ ಅಧಿಕಾರಿಯೂ ಬರಲು ಸಿದ್ಧವಿರದ ಕಾರಣಕ್ಕೆ ಕಾರ್ಯದರ್ಶಿಯ ಹುದ್ದೆ ಖಾಲಿ ಉಳಿದಿತ್ತು. ನಿವೃತ್ತ ಅಧಿಕಾರಿಯೊಬ್ಬರು ಒಪ್ಪಿಕೊಂಡರಾದರೂ ಐದು ತಿಂಗಳ ನಂತರ ರಾಜೀನಾಮೆ ನೀಡಿದರು. ನಂತರ ನವೆಂಬರ್‌ನಲ್ಲಿ ನೇಮಕವಾದ ಅಧಿಕಾರಿಯನ್ನು ವರ್ಗಮಾಡಲಾಯಿತು. ಕಚೇರಿ, ಸಿಬ್ಬಂದಿಯಂತಹ ಸೌಲಭ್ಯಗಳು ಸಹ ಸಿಗಲಿಲ್ಲ. ಅಗತ್ಯವಾದ ಹಣಕಾಸನ್ನು ಮಂಜೂರು ಮಾಡಲಿಲ್ಲ. ಸಿಬ್ಬಂದಿಯನ್ನು ನೇಮಕ ಮಾಡಲು ಸಮಿತಿಗೇ ಸೂಚಿಸಿದ್ದರಿಂದ ಆರು ಜನ ಸಿಬ್ಬಂದಿಗಳನ್ನು ನೇಮಕಮಾಡಲಾಯಿತು. ಆದರೆ ಹಣಕಾಸು ಮಂಜೂರಾಗದ ಕಾರಣ ಅವರೆಲ್ಲ ಐದು ತಿಂಗಳಕಾಲ ಸಂಬಳವಿಲ್ಲದೆ ದುಡಿದರು. ಕಚೇರಿಗೆ ಸ್ಥಳವಿಲ್ಲದೆೆ, ಯಾವುದೋ ಕಚೇರಿಯ ಒಂದು ಮೂಲೆಯಲ್ಲಿ ಮೇಜು, ಕುರ್ಚಿಗಳನ್ನು ಬಾಡಿಗೆಗೆ ಪಡೆದುಕೊಂಡು ಸಮಿತಿಯು ತನ್ನ ಮಹತ್ವದ ಕೆಲಸವನ್ನು ಆರಂಭಿಸಿತು.
ಪ್ರಯಾಣ ಭತ್ಯೆ ಮಂಜೂರಾಗದೆ ಜನವರಿ ೧೯೭೪ರವರೆಗೂ ಸದಸ್ಯರು ಪ್ರಯಾಣ ಮಾಡಲಾಗಲಿಲ್ಲ. ಮುಂದೆ ಸಮಿತಿ ಸದಸ್ಯರು ರಾಜ್ಯದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಬಾಂಬೆ, ಡೆಲ್ಲಿ, ಕಲ್ಕತ್ತ ಮತ್ತು ಭುವನೇಶ್ವರಗಳಿಗೆ ಭೇಟಿ ನೀಡಲಾಯಿತು.
ವಿವರವಾದ ಪ್ರಶ್ನಾವಳಿಯನ್ನು ಜುಲೈ ೨೫, ೧೯೭೩ರಲ್ಲಿ ಸಿದ್ಧಪಡಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು, ಸಮಾಜೋ-ಆರ್ಥಿಕ ಸಂಸ್ಥೆಗಳಿಗೆ, ಶಾಸಕರುಗಳಿಗೆ ಕಳುಹಿಸಲಾಯಿತು. ಡಿಸೆಂಬರ್‌ನಲ್ಲಿ ಪ್ರಶ್ನಾವಳಿಗಳು ಬಂದವಾದರೂ ಒಂದೇ ಒಂದನ್ನು ಸಹ ಪೂರ್ತಿವಾಗಿ ಭರ್ತಿಮಾಡಿರಲಿಲ್ಲ. ಜೊತೆಗೆ ಹಲವಾರು ತಪ್ಪುಗಳಿದ್ದವು. ಪಿ. ಕೋದಂಡರಾಮ್ ಅವರು ಮಾತ್ರ ನಿಗದಿತ ಸಮಯದೊಳಗೆ ಮತ್ತು ಉತ್ತಮ ಸಲಹೆಗಳೊಂದಿಗೆ ಕಳುಹಿಸಿದ್ದರು.
ಸಮಿತಿಯು ಬಹಳ ಪ್ರಯತ್ನಪಟ್ಟು ಮೊದಲ ಬಾರಿಗೆ ಪೌರಕಾರ್ಮಿಕರ ಜನಗಣತಿಯನ್ನು ಮಾಡಿತು. ರಾಜ್ಯದ ವಿವಿಧ ಮುನಿಸಿಪಾಲಿಟಿಗಳು ಮತ್ತು ಕಾರ್ಪೊರೇಷನ್‌ಗಳಲ್ಲಿ ಒಟ್ಟು ೧೨೩೫೧ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ೭೦೮೮ ಪುರುಷರು ಮತ್ತು ೫೨೬೩ ಮಹಿಳೆಯರು. ಫ್ಯಾಕ್ಟರಿಗಳಲ್ಲಿ, ರೈಲ್ವೆಯಲ್ಲಿ, ಪೊಲೀಸ್ ಇಲಾಖೆಯಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಮಿಕರನ್ನು ಒಳಗೊಂಡಿರಲಿಲ್ಲ. ಹಣಕಾಸಿನ ತೊಂದರೆಯ ನಡುವೆಯೂ ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಸಮಿತಿ ಕಲೆಹಾಕಿತು. ಮೇಲ್ವಿಚಾರಣೆ ಸಿಬ್ಬಂದಿಗಳು ಮಾಡುವ ಮೌಖಿಕ ನಿಂದನೆ, ಅವಮಾನ, ಸಾರ್ವಜನಿಕರು ಮಾಡುವ ಅವಮಾನ, ವಸತಿಗೆ ಸಂಬಂಧಿಸಿದ ನಿರ್ಬಂಧಗಳು ಹಾಗೂ ಇನ್ನಿತರ ತಾರತಮ್ಯಗಳನ್ನು ವಿವರವಾಗಿ ದಾಖಲಿಸಲಾಯಿತು. ಮಂಡ್ಯದ ಬೆಳ್ಳೂರಿನಲ್ಲಿ ಪೌರಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿರಲಿಲ್ಲ. ಸ್ಮಶಾನದಲ್ಲಿ ಹೆಣ ಹೂಳಲು ಅಥವಾ ಹೆಣ ಸಾಗಿಸಲು ವಾಹನ ನೀಡುವುದಕ್ಕೂ ನಿರ್ಬಂಧ ಹೇರÀಲಾಗಿತ್ತು. ಸರ್ಕಾರದ ವೈಫಲ್ಯಗಳನ್ನು ಸಹ ಗುರುತಿಸಲಾಗಿತ್ತು. ಒಟ್ಟು ೩೨ ಸಭೆಗಳನ್ನು ನಡೆಸಲಾಗಿತ್ತು.
ಸರ್ಕಾರವೇ ನೇಮಿಸಿದ ಸಮಿತಿಯಾಗಿದ್ದರೂ ಸಹ ಸರ್ಕಾರದ ವರದಿಯ ಪರಿಧಿಯನ್ನು ದಾಟಿ, ಸಾಮಾಜಿಕ-ಆರ್ಥಿಕ ಶ್ರೇಣಿಯ ಕಟ್ಟಕಡೆಯಲ್ಲಿರುವವರ ಮೂಲಭೂತ ಹಕ್ಕುಗಳನ್ನು ಖಾತ್ರಿ ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವರದಿಯು ಟೀಕಿಸುತ್ತದೆಯಲ್ಲದೆ ಆಳುವ ವರ್ಗದ ಹಿತಾಸಕ್ತಿಗಿಂತ ಭಿನ್ನವಾದ ದನಿಯನ್ನು ದಾಖಲಿಸುತ್ತದೆ. ಮಾರ್ಕ್ಸ್ವಾದಿ ಚಿಂತಕ ಗ್ರಾಮ್ಶಿಯವರ ಮಾತಿನಲ್ಲಿ ಹೇಳುವುದಾದರೆ ಅಂತಹ ಟೀಕೆಗಳು ‘ಪ್ರತಿ-ಯಾಜಮಾನ್ಯ ಶಕ್ತಿಯನ್ನು ಮತ್ತು ಸಮಾಜದ ಪ್ರಜಾಸತ್ತಾತ್ಮಕ ಪರಿವರ್ತನೆಯ ಬೀಜಗಳನ್ನು ಹೊಂದಿರುತ್ತವೆ’.